Advertisement

ಸಹಕಾರಕ್ಕೆ ಬಾಗಲಕೋಟೆ ಕೊಡುಗೆ

12:18 PM Nov 15, 2019 | Suhan S |

ಬಾಗಲಕೋಟೆ: ಮುಳುಗಡೆ ಜಿಲ್ಲೆ ಎಂದು ಕರೆಸಿಕೊಳ್ಳುವ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗುವ 1997ಕ್ಕೂ ಪೂರ್ವ ಅಖಂಡ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಸಹಕಾರ ರಂಗ ಬೆಳೆದಿದೆ. ಇದೀಗ ಪ್ರತ್ಯೇಕ ಜಿಲ್ಲೆಯಾಗಿ 22 ವರ್ಷ ಕಂಡಿರುವ ಬಾಗಲಕೋಟೆ ಸಹಕಾರ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

Advertisement

ಅಖಂಡ ಜಿಲ್ಲೆಯಲ್ಲಿ ಸಹಕಾರ ಚಳವಳಿ ಜಾಗೃತಿ ಆರಂಭಗೊಂಡಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲದಿಂದ. ಅಲ್ಲಿಂದ ಆರಂಭಗೊಂಡ ಸಹಕಾರ ತತ್ವದ ಜಾಗೃತಿ ಅಖಂಡಘಿ ವಿಜಯಪುರ ಜಿಲ್ಲೆ ವ್ಯಾಪಿಸಿಕೊಂಡಿತ್ತು. ಅದರ ಫಲವಾಗಿ ಜಿಲ್ಲೆಯಲ್ಲಿ ಈಗ ಬರೋಬ್ಬರಿ 2096 ಸಹಕಾರಿ ಸಂಘಗಳು (ರಾಷ್ಟ್ರೀಕೃತ ಬ್ಯಾಂಕ್‌ಗಳು ಹೊರತುಪಡಿಸಿ) ತಲೆ ಎತ್ತಿವೆ. ಸಹಕಾರಿಗಳ ಮುಕುಟ ಲಕ್ಷ್ಮೀ-ಬಸವ ಬ್ಯಾಂಕ್‌: ಪಟ್ಟಣ ಸಹಕಾರ ಬ್ಯಾಂಕ್‌ ಗಳಲ್ಲಿ ಜಿಲ್ಲೆಯ ಮೊದಲ ಬ್ಯಾಂಕ್‌ ಎಂಬ ಖ್ಯಾತಿ ಗುಳೇದಗುಡ್ಡದ ಲಕ್ಷ್ಮೀ ಪಟ್ಟಣ ಸಹಕಾರಿ ಬ್ಯಾಂಕ್‌ಗಿದೆ. ಇದು 1913ರಲ್ಲಿ ಆರಂಭಗೊಂಡ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಇದಾದ ಬಳಿಕ 2ನೇ ಸ್ಥಾನ ಇರುವುದು ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕ್‌. 1917, ಫೆಬ್ರವರಿ 3ರಂದು ಆರಂಭಗೊಂಡ ಈ ಬ್ಯಾಂಕ್‌ ಪ್ರಕಾಶ ತಪಶೆಟ್ಟಿ ಅವರ ಮುಂದಾಳತ್ವದಲ್ಲಿ ಸದ್ಯ 27 ಶಾಖೆ ಹೊಂದಿದೆ.

ಅಖಂಡ ಜಿಲ್ಲೆಯ ಸಹಕಾರ ರಂಗ: ಜಿಲ್ಲೆ ಹುಟ್ಟುವ ಮೊದಲೇ ಸಹಕಾರಿ ಸಂಘಗಳು ಹುಟ್ಟಿಕೊಂಡಿದ್ದು, ರಾಜ್ಯದ ಗಮನ ಸೆಳೆಯುವ ಕಾರ್ಯ ಮಾಡಿವೆ. ಅಖಂಡ ವಿಜಯಪುರ ಜಿಲ್ಲೆಯಲ್ಲಿ (ಬಾಗಲಕೋಟೆಯೂ ಒಳಗೊಂಡಿತ್ತು) ಮೊದಲು ಸಹಕಾರ ಸಂಘ ಹುಟ್ಟಿಕೊಂಡಿದ್ದು 1905ರಲ್ಲಿ. ಮುದ್ದೇಬಿಹಾಳ ಪಟ್ಟಣದಲ್ಲಿ ಮುದ್ದೇಬಿಹಾಳ ಕೃಷಿ ಸಾಲ ಸಹಕಾರ ಸಂಘದ ಹೆಸರಿನಲ್ಲಿ ಸ್ಥಾಪನೆಯಾಗಿತ್ತು. ಇದಾದ ಬಳಿಕ ಅಖಂಡ ಜಿಲ್ಲೆಯಲ್ಲಿ ಸಹಕಾರ ತತ್ವದ ಪ್ರಚಾರ, ಜಾಗೃತಿ ಜೋರಾಗಿತ್ತು. 1997ರ ಆ.15ರಂದು ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗುವ ಹೊತ್ತಿಗೆ ಜಿಲ್ಲೆಯಲ್ಲಿ ಸುಮಾರು 788ಕ್ಕೂ ಹೆಚ್ಚು ಸಹಕಾರ ಸಂಘಗಳು ತಲೆ  ಎತ್ತಿದ್ದವು. ಮೊದಲು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶಾಖೆಯಾಗಿದ್ದ ಈಗಿನ ಬಾಗಲಕೋಟೆ ಡಿಸಿಸಿ ಬ್ಯಾಂಕ್‌, 2003ರಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಎಂದು ಪ್ರತ್ಯೇಕಗೊಂಡಿತು.

ಇದೀಗ ಜಿಲ್ಲೆಯ ಸಹಕಾರಿ ವಲಯದ ಹಿರಿಯಣ್ಣನಂತೆ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಡಿಸಿಸಿ ಬ್ಯಾಂಕ್‌ 47 ಶಾಖೆ, 256 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಹೊಂದಿದೆ. ಜಿಲ್ಲೆಯಲ್ಲಿ 324 ವ್ಯವಸಾಯೇತರ ಪತ್ತಿನ ಸಹಕಾರಿ ಸಂಘ, ವ್ಯವಸಾಯೇತರ-324, ಪತ್ಯೇತರ ರಂಗದ ಮಾರುಕಟ್ಟೆ ಸಹಕಾರ ಸಂಘಗಳು 6, ಪಿಎಲ್‌ಡಿ ಬ್ಯಾಂಕ್‌-6, ಗೃಹ ನಿರ್ಮಾಣ ಸಹಕಾರ ಸಂಘಗಳು 35, ಹಾಲು ಉತ್ಪಾದಕರ ಸಹಕಾರ ಸಂಘಗಳು 332, ಇತರೆ ವಿವಿಧೋದ್ದೇಶಗಳ ಸಹಕಾರ ಸಂಘಗಳು 1090 ಸೇರಿದಂತೆ ಒಟ್ಟು 2,096 ಸಹಕಾರ ಸಂಘಗಳು ಜಿಲ್ಲೆಯಲ್ಲಿವೆ.

ಆಲಮೇಲದ ದೇಶಮುಖರ ಕೊಡುಗೆ: ಮುದ್ದೇಬಿಹಾಳದಲ್ಲಿ ಅಖಂಡ ಜಿಲ್ಲೆಯ ಮೊದಲ ಸಹಕಾರಿ ಸಂಘ 1904ರಲ್ಲಿ ಸ್ಥಾಪನೆಯಾಯಿತು. ಆಲಮೇಲದ ದಿ.ದಿವಾನ್‌ ಬಹದ್ದೂರ್‌ ಎಸ್‌.ಜೆ. ದೇಶಮುಖರು ಅಖಂಡ ಜಿಲ್ಲೆಯಲ್ಲಿ ಸಂಚರಿಸಿ ಸಹಕಾರ ರಂಗದ ಮಹತ್ವ, ಲಾಭ ತಿಳಿಸುವಲ್ಲಿ ಪ್ರಮುಖರಾಗಿದ್ದರು. ಇವರ ಬಳಿಕ ಸಹಕಾರ ಕ್ಷೇತ್ರವನ್ನು ಬಲಿಷ್ಠ ಹಾಗೂ ಶ್ರೀಮಂತಗೊಳಿಸಿದವರಲ್ಲಿ ಹಲವರಿದ್ದಾರೆ.

Advertisement

1912ಬಳಿಕ ಚಳವಳಿಗೆ ವೇಗ: ಸಹಕಾರಿ ಚಳವಳಿ ಆರಂಭದ ಇತಿಹಾಸವನ್ನು ಎರಡು ಹಂತದಲ್ಲಿ ವಿಶ್ಲೇಷಿಸಬಹುದಾಗಿದೆ.1904ರಿಂದ 1912ರ ಅವಧಿಯಲ್ಲಿ ಅಪರಿಮಿತ ಹೊಣೆಗಾರಿಕೆ ಆಧಾರದ ಮೇಲೆ  ಸಹಕಾರ ಸಂಘಗಳು ಆರಂಭಗೊಂಡಿದ್ದವು. 1912ರ ಬಳಿಕ ಪರಿಮಿತ ಹೊಣೆಗಾರಿಕೆ ಮೇಲೆ ಸಂಘಗಳು ಸ್ಥಾಪನೆಗೊಂಡಿವೆ. 1912ರವರೆಗೆ ಸಹಕಾರ ಸಂಘಗಳ ಸ್ಥಾಪನೆ ನಿಧಾನಗತಿಯಾಗಿತ್ತು. ಬಳಿಕ ಸಹಕಾರ ಚಳವಳಿಯಲ್ಲಿ ತೀವ್ರ ಬದಲಾವಣೆ ಕಂಡಿವೆ.

1956ಕ್ಕೂ ಮುಂಚೆ ಬಾಗಲಕೋಟೆ ಒಳಗೊಂಡ ವಿಜಯಪುರ ಜಿಲ್ಲೆ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು. ಹೀಗಾಗಿ ಮುಂಬೈ ಸರ್ಕಾರದ ಸರ್ಕಾರಿ ಧೋರಣೆಗಳು, ನಮ್ಮ ಸಹಕಾರಿ ಚಳವಳಿಯಲ್ಲಿ ಕಾಣುತ್ತವೆ. 1916ರ ಪೂರ್ವದಲ್ಲಿ ಸಹಕಾರ ಸಂಘಗಳು, ಮುಂಬೈ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ 1916ರ ಬಳಿಕ ಧಾರವಾಡದಲ್ಲಿ ಸ್ಥಾಪನೆಯಾದ ಕರ್ನಾಟಕ ಸೆಂಟ್ರಲ್‌ ಸಹಕಾರ ಬ್ಯಾಂಕ್‌ ನಿಂದ ಸಾಲ ಪಡೆಯುತ್ತಿದ್ದವು.

ನೇಕಾರರಿಗೆ ಇರುವ ಮೊದಲ ಸಹಕಾರಿ ಗಿರಣಿ: ಜಿಲ್ಲೆಯಲ್ಲಿ ಕೃಷಿ ಜತೆ ನೇಕಾರಿಕೆಯೂ ದೊಡ್ಡ ಉದ್ಯಮವಾಗಿ ಬೆಳೆದಿದೆ. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸಹಕಾರಿ ನೂಲಿನ ಗಿರಣಿಯನ್ನು ಬನಹಟ್ಟಿಯಲ್ಲಿ ಸ್ಥಾಪಿಸಿದ್ದು, ಇದು ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಾವಿರಾರು ನೇಕಾರ ಸದಸ್ಯರನ್ನು ಹೊಂದಿದೆ. ನೇಕಾರ ಸಹಕಾರ ಸಂಘದ ಜತೆಗೆ ಜಿಲ್ಲೆಯಲ್ಲಿ ಒಂದು  ಸಹಕಾರ ಒಡೆತನದ ಸಕ್ಕರೆ ಕಾರ್ಖಾನೆ (ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ) ಕೂಡ ಇದೆ.

1913ರಿಂದ 19021ರ ಅವಧಿಯಲ್ಲಿ ಅರ್ಬನ್‌ (ಪಟ್ಟಣ) ಸಹಕಾರಿ ಬ್ಯಾಂಕ್‌ ಗಳ ಸ್ಥಾಪನೆಯಾಗಿವೆ. 1913ರಲ್ಲಿ ಲಕ್ಷ್ಮೀ ಸಹಕಾರಿ ಬ್ಯಾಂಕ್‌, 1917ರಲ್ಲಿ ಬಸವೇಶ್ವರ ಸಹಕಾರ ಬ್ಯಾಂಕ್‌, 1921ರಲ್ಲಿ ಬಾಗಲಕೋಟೆ ಪಟ್ಟಣ ಸಹಕಾರಿ ಬ್ಯಾಂಕ್‌ ಸ್ಥಾಪನೆಗೊಂಡಿವೆ. ಸ್ವಾತಂತ್ರ ನಂತರ (1950ರ ಬಳಿಕ ) ಜಮಖಂಡಿ ಅರ್ಬನ್‌ ಬ್ಯಾಂಕ್‌, ಮುಧೋಳ, ರಬಕವಿ ಬ್ಯಾಂಕ್‌ಗಳು, 1960ರ ನಂತರ ಹುನಗುಂದ, ಇಳಕಲ್ಲ, ಮಹಾಲಿಂಗಪುರ, ಬಾದಾಮಿಯಲ್ಲಿ ಪಟ್ಟಣ ಸಹಕಾರ ಸಂಘಗಳು ಹುಟ್ಟಿಕೊಂಡಿದ್ದು, ಅವು ಇಂದಿಗೂ ಆರ್ಥಿಕ ಸಬಲತೆಯೊಂದಿಗೆ, ಜನರ ಆರ್ಥಿಕ ಸಮಸ್ಯೆ ನಿವಾರಣೆಗೂ ಶ್ರಮಿಸುತ್ತಿವೆ.

ಸಹಕಾರಿ ಯೂನಿಯನ್‌: ಜಿಲ್ಲೆಯ 2096 ಸಹಕಾರ ಸಂಘಗಳಿಗೆ ಸಹಕಾರಿ ತತ್ವ, ಸಹಕಾರಿ ಶಿಕ್ಷಣದ ಮಾರ್ಗದರ್ಶನ ನೀಡಲು ಜಿಲ್ಲಾ ಸಹಕಾರಿ ಯೂನಿಯನ್‌ ಕಾರ್ಯ ನಿರ್ವಹಿಸುತ್ತಿದೆ. ಯೂನಿಯನ್‌ ಅಧ್ಯಕ್ಷ ಕಾಶೀನಾಥ ಹುಡೇದ ನೇತೃತ್ವದ ತಂಡ ಸಹಕಾರಿ ಸಂಘಗಳ ಬಲವರ್ಧನೆ, ಕಾನೂನು ಪಾಲನೆ ಹಾಗೂ ಸದಸ್ಯ ಗ್ರಾಹಕರಿಗೆ ಸಮಯೋಚಿತ ಸ್ಪಂದನೆ ನೀಡುವ ಮಾರ್ಗಗಳ ಕುರಿತು ಸಲಹೆ- ಮಾರ್ಗದರ್ಶನ, ಶಿಕ್ಷಣ ಕೊಡುತ್ತಿದೆ.

ಬ್ಯಾಂಕ್‌ಗಳಲ್ಲೇ ಹಿರಿಯ ಲಕ್ಷ್ಮೀ ಸಹಕಾರಿ ಬ್ಯಾಂಕ್‌ : ಜಿಲ್ಲೆಯ ಸಹಕಾರಿ ಕ್ಷೇತ್ರದ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಹಿರಿಯ ಸ್ಥಾನ ಗುಳೇದಗುಡ್ಡದ ಲಕ್ಷ್ಮೀ ಸಹಕಾರಿ ಬ್ಯಾಂಕ್‌ಗಿದೆ. 5-2-1913ರಂದು ವಿರೂಪಾಕ್ಷಪ್ಪ ಭಾವಿ ಸಮಾನ ಮನಸ್ಕರೊಂದಿಗೆ ಹುಟ್ಟು ಹಾಕಿದ ಈ ಸಂಘ, 1961ರಲ್ಲಿ ಕೈಗಾರಿಕೆ ಕೋ-ಆಪ್‌ ಬ್ಯಾಂಕ್‌ ಆಗಿ, 1974ರಲ್ಲಿ ದಿ.ಗುಳೇದಗುಡ್ಡ ಲಕ್ಷ್ಮೀ ಅರ್ಬನ್‌ ಕೋ ಆಪ್‌ ಬ್ಯಾಂಕ್‌ ಆಗಿ ರೂಪಾಂತರಗೊಂಡು ಇದೀಗ ಲಕ್ಷ್ಮೀ ಸಹಕಾರಿ ಬ್ಯಾಂಕ್‌ ಎಂಬ ಹೆಸರಿನೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇದಾದ ನಂತರದ ಹಿರಿಯ ಸಹಕಾರಿ ಬ್ಯಾಂಕ್‌ ಎಂಬ ಖ್ಯಾತಿ ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕ್‌ಗಿದೆ.

ತರಿಗಾಗಿ ರೈತರಿಂದಲೇ ನಡೆಯುವ ಡಿಸಿಸಿ ಬ್ಯಾಂಕ್‌ ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡಾಗ ಇದು ಬಹಳ ದಿನ ನಡೆಯಲ್ಲ ಎಂಬ ವಾದವಿತ್ತು. ಆದರೀಗ 47 ಶಾಖೆಗಳು, 256 ಕೃಷಿ ಪತ್ತಿನ ಸಹಕಾರಿ ಸಂಘಗಳ ಜತೆಗೆ ಜಿಲ್ಲೆಯ ಅತಿ ದೊಡ್ಡ ಸಹಕಾರಿ ಸಂಘವಾಗಿ ಮುನ್ನಡೆಯುತ್ತಿದೆ. ರೈತರ ಹಿತರಕ್ಷಣೆ ಜತೆಗೆ ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ಉದ್ಯಮ ಸ್ಥಾಪನೆಗೂ ಡಿಸಿಸಿ ಬ್ಯಾಂಕ್‌ ನೆರವು ನೀಡುತ್ತಿದೆ. ಅಜಯಕುಮಾರ ಸರನಾಯಕ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next