Advertisement

Bagalkot: ಆಧಾರ ಗೋಳು ಕೇಳುವವರು ಯಾರು?

06:41 PM Aug 30, 2023 | Team Udayavani |

ಮಿಶ್ರಿಕೋಟಿ: ಸರ್ಕಾರದ ಭಾಗ್ಯಗಳನ್ನು ಪಡೆಯಲು ಆಧಾರ ಕಾರ್ಡ್‌ ಇರಬೇಕು. ಆದರೆ ಆಧಾರ ಕಾರ್ಡ್‌ನಲ್ಲಿ ಚಿಕ್ಕಪುಟ್ಟ ತಿದ್ದುಪಡಿ ಮಾಡಿಸುವುದು ಕಲಘಟಗಿ ತಾಲೂಕಿನ ಜನರಿಗೆ ಅಷ್ಟು ಸುಲಭವಲ್ಲ. ಇಡೀ ತಾಲೂಕಿಗೊಂದೇ ಆಧಾರ ಕೇಂದ್ರವಿದ್ದು, ತಾಲೂಕಿನ ಎಲ್ಲ ಭಾಗದ ಜನತೆ ಕಲಘಟಗಿಯ ತಹಶೀಲ್ದಾರ್‌ ಕಚೇರಿಯಲ್ಲಿರುವ ಎ.ಜೆ.ಎಸ್‌. ಕೆ ಆಧಾರ ಕೇಂದ್ರವನ್ನು ಹುಡುಕಿಕೊಂಡು ಬರುತ್ತಿದ್ದಾರೆ.

Advertisement

ಹೊಸ ಸರ್ಕಾರ ಒಂದೊಂದಾಗಿ ಗ್ಯಾರಂಟಿ ಯೋಜನೆ ಈಡೇರಿಸುತ್ತಿದೆ. ಆದರೆ ಎಲ್ಲ ಗ್ಯಾರಂಟಿ ಭಾಗ್ಯಗಳಿಗೆ ಆಧಾರ ಅಪ್‌ಡೇಟ್‌ ಇರಬೇಕು. ಬ್ಯಾಂಕ್‌ ಖಾತೆಗೆ ಆಧಾರ ಜೋಡಣೆ ಆಗಿರಬೇಕು. ಆಧಾರ ಕಾರ್ಡ್‌ನಲ್ಲಿ ಚಾಲ್ತಿಯಲ್ಲಿರುವ ಮೊಬೈಲ್‌ ನಂಬರ್‌
ಇರಬೇಕು. ಹೀಗೆ ಹತ್ತು ಹಲವು ಆಧಾರ ಸಂಬಂಧಿತ ತಾಂತ್ರಿಕ ಸಮಸ್ಯೆಗಳಿಂದಾಗಿ ಗ್ರಾಮೀಣ ಭಾಗದ ಜನ ಆಧಾರ ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ.

ಬೆಳ್ಳಂಬೆಳಗ್ಗೆಯಿಂದ ಸರತಿ: ಆ.29 ಮಂಗಳವಾರ ಆಧಾರ ನೋಂದಣಿಯ ಟೋಕನ್‌ ಪಡೆದುಕೊಳ್ಳಲು ಜನ ನೂರಾರು ಸಂಖ್ಯೆಯಲ್ಲಿ ಸರದಿಯಲ್ಲಿದ್ದರು. ಅವರೆಲ್ಲ ಬೆಳಗ್ಗೆ 4 ಗಂಟೆಗೂ ಮೊದಲು ತಮ್ಮ ತಮ್ಮ ಗ್ರಾಮಗಳಿಂದ ಬಂದಿದ್ದರು. ಆಧಾರ ಕೇಂದ್ರದ ಸಿಬ್ಬಂದಿ ಬರುವ ಮೊದಲೇ ಜನ ಸ್ವಯಂಪ್ರೇರಣೆಯಿಂದ ಸರತಿ ಸಾಲಿನಲ್ಲಿ ಯಾವುದೇ ಲೋಪದೋಷವಾಗಬಾರದು ಎಂದು ಅನುಕ್ರಮವಾಗಿ ತಾವೇ ಒಂದು ಹಾಳೆಯಲ್ಲಿ ತಮ್ಮ ಹೆಸರುಗಳನ್ನು ಬರೆದುಕೊಳ್ಳುತ್ತಿದ್ದರು! ಶಿವನಾಪುರ, ಸೂಳಿಕಟ್ಟಿ, ಸೋಮನಕೊಪ್ಪ, ಭೋಗೆನಾಗರಕೊಪ್ಪ, ತುಮರಿಕೊಪ್ಪ, ದೇವಿಕೊಪ್ಪ, ದಾಸ್ತಿಕೊಪ್ಪ, ದಿಂಬವಳ್ಳಿ, ಬೇಗೂರು, ಸಂಗೇದೇವರಕೊಪ್ಪ, ಕಲಘಟಗಿ ಪಟ್ಟಣ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳ ಜನ ಬಂದು ಸರತಿಯಲ್ಲಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಚಿಕ್ಕಮಕ್ಕಳ ಪೋಷಕರು ಹೀಗೆ ಎಲ್ಲ ತರಹದ ಜನ ಸೇರಿದ್ದರು.

ನೋಂದಣಿ ಸಮಸ್ಯೆ: ಈ ಮೊದಲು ಪ್ರತಿದಿನ ಆಧಾರ ನೋಂದಣಿ ಟೋಕನ್‌ ಪ್ರತಿ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಜನಸಂದಣಿ ಹೆಚ್ಚಿದಂತೆ ಒಂದೇ ದಿನ ಎಷ್ಟು ಜನ ಇರುತ್ತಾರೋ ಎಲ್ಲರಿಗೂ ಪ್ರತಿದಿನಕ್ಕೆ 20 ಅಥವಾ 25ರಂತೆ ಎರಡು ವಾರಗಳ ಮುಂಗಡ ಟೋಕನ್‌ ನೀಡುತ್ತಿದ್ದಾರೆ. ಕಳೆದ ಬಾರಿ ಆ.9ರಿಂದ ಆ.28ರ ವರೆಗೆ ಇಪ್ಪತ್ತೊಂದು ದಿನಗಳ ಟೋಕನ್‌ ನೀಡಿದ್ದು, ಹೊಸ ಟೋಕನ್‌ ಆ.29ರಂದು ನಿಗದಿ ಮಾಡಲಾಗಿತ್ತು.

ಯಾಕೆ ತಿದ್ದುಪಡಿ ಬೇಕು?
ಸರ್ಕಾರದ ವಿವಿಧ ಯೋಜನೆಗಳಿಗೆ, ಶಾಲಾ ದಾಖಲಾತಿ, ಬಡ ಮಕ್ಕಳ ವಿದ್ಯಾರ್ಥಿವೇತನ, ಮೊಬೈಲ್‌ ನಂಬರ ಜೋಡಣೆ, ತಂದೆಯ ಹೆಸರು ತಿದ್ದುಪಡಿ, ನಿಯತಕಾಲಿಕ ಆಧಾರ ಅಪ್‌ಡೇಟ್‌, ಬಾಲಆಧಾರ, ಹೆಸರು ತಿದ್ದುಪಡಿ, ಅಂಚೆ ವಿಳಾಸ ಬದಲಾವಣೆ ಹೀಗೆ ಎಲ್ಲದಕ್ಕೂ ಆಧಾರ ಕೇಂದ್ರಕ್ಕೆ ಹೋಗಿ ತಿದ್ದುಪಡಿ ಮಾಡಿಸಲೇಬೇಕು.

Advertisement

ಕಲಘಟಗಿ ತಾಲೂಕು ಸುಮಾರು 87 ಕಂದಾಯ ಗ್ರಾಮಗಳು, 27 ಗ್ರಾಪಂ‌ಳು, 3 ಹೋಬಳಿ ಕೇಂದ್ರ, 684 ಚಕಿಮೀ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಬೃಹತ್‌ ತಾಲೂಕು ಆಗಿದೆ. ಆದರೂ ಆಧಾರ ಸೇವಾ ಕೇಂದ್ರ ಕಲಘಟಗಿಯ ತಹಶೀಲ್ದಾರ್‌ ಕಚೇರಿಯಲ್ಲಿ ಮಾತ್ರ ಇದೆ. ದುಮ್ಮವಾಡ ಮತ್ತು ತಬಕದಹೊನ್ನಳ್ಳಿಯ ನಾಡಕಚೇರಿಯಲ್ಲಿ ಆಧಾರ ಕೇಂದ್ರಗಳು ಇಲ್ಲ. ಮಂಗಳವಾರ (ಆ.29) ಬಂದಿದ್ದ ಜನರಿಗೆ ಅನುಗುಣವಾಗಿ ಮುಂದಿನ ತಿಂಗಳ 26ರ ವರೆಗೆ ಟೋಕನ್‌ ನೀಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈಗಿರುವ ಜನಸಂದಣಿ ನೋಡಿಕೊಂಡು ಹೋಬಳಿ ಮಟ್ಟದಲ್ಲಾದರೂ ಸ್ಥಳೀಯ ಆಡಳಿತವು ಒಂದು ಆಧಾರ ಕೇಂದ್ರಗಳನ್ನು ಒದಗಿಸಿಕೊಡಬೇಕೆಂಬುದು ತಾಲೂಕಿನ ಜನರ ಬೇಡಿಕೆಯಾಗಿದೆ.

ಇತ್ತೀಚೆಗೆ ಆಧಾರ ನೋಂದಣಿ ಮತ್ತು ತಿದ್ದುಪಡಿ ಪ್ರಕ್ರಿಯೆ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ಒಂದೇ ಆಧಾರ ಕೇಂದ್ರ ಇರುವುದರಿಂದ ಜನಸಂದಣಿಯಾಗುತ್ತಿದ್ದು, ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ.
*ಯಲ್ಲಪ್ಪ ಗೋಣೆಣ್ಣವರ, ತಹಶೀಲ್ದಾರ್‌

ಮೊಮ್ಮಕ್ಕಳ ಪರವಾಗಿ ನಾನು ಸರತಿ ಸಾಲಿನಲ್ಲಿ ನಿಂತಿದ್ದೇನೆ. ಶಾಲಾ ದಾಖಲಾತಿಗಾಗಿ ಆಧಾರ ಕಾರ್ಡ್‌ ತಿದ್ದುಪಡಿಯಾಗಬೇಕಿದೆ. ಜನರ ಒತ್ತಡ ಹೆಚ್ಚಿರುವುದರಿಂದ ಕಾಯುವಿಕೆ ತಪ್ಪುತ್ತಿಲ್ಲ. ಈಗ ಸರ್ಕಾರದ ಪ್ರತಿಯೊಂದು ಯೋಜನೆಗೂ ಆಧಾರ ಕಾರ್ಡ್‌ ಬೇಕು. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಇನ್ನೊಂದು ಕೇಂದ್ರ ಆರಂಭಿಸಬೇಕು.
*ಹಜರೇಸಾಬ ಕಲಘಟಗಿ

*ಗಿರೀಶ ಮುಕ್ಕಲ್ಲ

Advertisement

Udayavani is now on Telegram. Click here to join our channel and stay updated with the latest news.

Next