Advertisement

ಬಣ್ಣದಾಟಕ್ಕೆ  ಬಾಗಲಕೋಟೆ ಸಜ್ಜು 

09:35 AM Mar 09, 2019 | |

ಬಾಗಲಕೋಟೆ: ಮೂರು ದಿನಗಳ ನಿರಂತರ ಬಣ್ಣದಾಟ ಹಾಗೂ 15 ದಿನ ನಿರಂತರ ಹಲಗೆ ನೀನಾದದ ಮೂಲಕ ದೇಶದಲ್ಲೇ ಹೋಳಿ ಆಚರಣೆಗೆ ವಿಶಿಷ್ಟ ಸ್ಥಾನ ಪಡೆದಿರುವ ಬಾಗಲಕೋಟೆ ನಗರ ಮತ್ತೂಂದು ಬಣ್ಣದಾಟಕ್ಕೆ ಸಜ್ಜಾಗುತ್ತಿದೆ.

Advertisement

ಹೋಳಿ ಹಬ್ಬ ಬಂತೆಂದರೆ ಕೆಲವರು ಪ್ರವಾಸದ ನೆಪದಲ್ಲಿ ಊರು ಬಿಟ್ಟರೆ, ಇನ್ನೂ ಕೆಲವರು ಬೇರೆ ಬೇರೆ ನಗರ-ಪಟ್ಟಣಗಳಲ್ಲಿ ಕೆಲಸಕ್ಕಾಗಿ ಹೋದವರು ಮರಳಿ ಬರುತ್ತಾರೆ. ಮೂರು ದಿನಗಳ ಕಾಲ ನಿರಂತರ ಬಣ್ಣದ ಬಂಡಿಗಳಲ್ಲಿ ಬಣ್ಣದಾಟವಾಡಿ ಸಂಭ್ರಮಿಸುತ್ತಾರೆ. ಬಣ್ಣದಾಟ ಹಾಗೂ ಹೋಳಿ ಹಬ್ಬದ ವಿಶಿಷ್ಟ ಆಚರಣೆಯಲ್ಲಿ ಬಾಗಲಕೋಟೆಗೆ ದೇಶದಲ್ಲೇ 2ನೇ ಸ್ಥಾನವಿದೆ.

ಎಲ್ಲೆಲ್ಲೂ ಹಲಗೆ ನಿನಾದ: ಹೋಳಿ ಹಬ್ಬ ಬಂತೆಂದರೆ, ಹಲಗೆಗಳ ನಾದ ಎಲ್ಲೆಡೆ ಕೇಳಿಸುತ್ತದೆ. ಚಿಕ್ಕವರಿಂದ ಹಿಡಿದು, ದೊಡ್ಡವರೂ ಕೂಡ ಇಲ್ಲಿ ಹಲಗೆ ಬಾರಿಸುತ್ತಾರೆ. ಶಿವರಾತ್ರಿ ಅಮಾವಾಸ್ಯೆ ಮರುದಿನದಿಂದಲೇ ಹಲಗೆ ಸಪ್ಪಳ ಜೋರಾಗುತ್ತದೆ. ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಎಲ್ಲರೂ ಹಲಗೆ ಬಾರಿಸಿ ಸಂತಸ ಪಡುತ್ತಾರೆ.

ನಗರದ ಕಿಲ್ಲಾ, ಹಳಪೇಟ, ಹೊಸಪೇಟ, ಜೈನಪೇಟ ಮತ್ತು ವೆಂಕಟಪೇಟ ಮುಂತಾದ ಬಡಾವಣೆಗಳಲ್ಲಿ ಪ್ರತಿದಿನ ಸಂಜೆ ಹೊತ್ತು, ಯುವಕರು ಗುಂಪು ಗುಂಪಾಗಿ ಸೇರಿ ತರಹೇವಾರಿ ಶಬ್ದಗಳಲ್ಲಿ ಹಲಗೆ ಬಾರಿಸುತ್ತಾರೆ. ಹೋಳಿ ಹಬ್ಬ ಮುಗಿದು ಬಣ್ಣದಾಟ ಸಂಪನ್ನಗೊಳ್ಳುವವರೆಗೂ ಹಳೆಯ ನಗರ, ವಿದ್ಯಾಗಿರಿ, ನವನಗರ ಸಹಿತ ವಿವಿಧ ಏರಿಯಾಗಳಲ್ಲಿ ಯುವಕರು ಗುಂಪು ಗುಂಪಾಗಿ ನಿಂತು ನಿತ್ಯವೂ ಹಲಗೆ ಬಾರಿಸುವುದರಲ್ಲಿ ತಲ್ಲೀನರಾಗಿರುತ್ತಾರೆ. ಒಟ್ಟು ಐದು ಶಬ್ದಗಳಲ್ಲಿ (ಐದು ರೀತಿ) ಹಲಗೆ ವಾದನ ಎಲ್ಲರ ಗಮನ ಸೆಳೆಯುತ್ತದೆ. ಈ ವಿಶಿಷ್ಟ ಹಲಗೆ ವಾದನ ಇಡೀ ದೇಶದಲ್ಲೇ ಗಮನ ಸೆಳೆದ ಕೀರ್ತಿಯೂ ಇದೆ.

ಹಲಗೆ ಮೇಳ: ಭಾರತೀಯರ ಪ್ರಾಚೀನ ಹಬ್ಬ, ಹರಿದಿನಗಳು, ಸಂಸ್ಕೃತಿ-ಪರಂಪರೆ ಉಳಿಯುವ ನಿಟ್ಟಿನಲ್ಲಿ ಹಲವು ಚಟುವಟಿಕೆ ನಡೆಸಲಾಗುತ್ತಿದೆ. ಹೋಳಿ ಹಬ್ಬ ಹಾಗೂ ಹಲಗೆ ವಾದನಕ್ಕೆ ಉತ್ತೇಜನ ಕೊಡುವ ಜತೆಗೆ ಹಬ್ಬಕ್ಕೆ ಸಂಭ್ರಮ ತರಲು, ಒಂದು ವಾರಗಳ ಕಾಲ ನಗರದ ವಿವಿಧೆಡೆ ಹಲಗೆ ಮೇಳ ಆಯೋಜಿಸಲಾಗುತ್ತದೆ.

Advertisement

ಒಂದೊಂದು ಏರಿಯಾದ ಯುವಕರೂ, ಆ ಓಣಿಯ ಹೆಸರಿನಲ್ಲಿ ಹಲಗೆ ಮೇಳ ನಡೆಸುತ್ತಾರೆ. ಈ ಹಲಗೆ ಮೇಳದಲ್ಲಿ ತಾಳಬದ್ಧವಾಗಿ ಹಲಗೆ ಬಾರಿಸುವ ತಂಡಕ್ಕೆ ನಗದು ಬಹುಮಾನ ನೀಡಲಾಗುತ್ತದೆ. ಈ ಸಂಭ್ರಮ ಕಳೆದ ಹಲವು ವರ್ಷಗಳಿಂದ ಬಾಗಲಕೋಟೆಯಲ್ಲಿ ನಡೆದುಕೊಂಡು ಬಂದಿದೆ. ಹಲವು ಬಡಾವಣೆಗಳಲ್ಲಿ ಈ ಬಾರಿಯೂ ಹಲಗೆ ಮೇಳ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಹಲಗೆ ಮೇಳ ನಡೆಸುವ ಜತೆಗೆ ಹೋಳಿ ಹಬ್ಬದ ಕಾಮದಹನದ ಹಿಂದಿನ ದಿನ ನಗರದ ವಲ್ಲಭಬಾಯಿ ವೃತ್ತದಲ್ಲಿ ಹೋಳಿ ಆಚರಣೆ ಸಮಿತಿಯಿಂದ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ.

ಬಣ್ಣ ಈಗ ಮೂರು ದಿನಕ್ಕೆ ಸೀಮಿತ: ಹಿಂದೆ ಏಳು ದಿನ, ಬಳಿಕ ಐದು ದಿನಗಳವರೆಗೆ ನಡೆಯುತ್ತಿದ್ದ ಬಾಗಲಕೋಟೆಯ ಬಣ್ಣದಾಟ, ಕಳೆದ ಹಲವು ವರ್ಷಗಳಿಂದ ಮೂರು ದಿನಕ್ಕೆ ಸಿಮೀತಗೊಳಿಸಲಾಗಿದೆ. ಒಂದೊಂದು ದಿನ, ಒಂದೊಂದು ಏರಿಯಾಗಳ ಬಣ್ಣದ ಬಂಡಿಗಳು (ಎತ್ತಿನ ಬಂಡಿ, ಟ್ಯಾಕ್ಟರ್‌ಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೇಲ್‌ ಇಟ್ಟು, ಬಣ್ಣ ಎರಚುತ್ತ ಸಾಗುತ್ತಾರೆ), ಇಡೀ ಬಾಗಲಕೋಟೆಯನ್ನು ಬಣ್ಣದ ನಗರವನ್ನಾಗಿ ಮಾಡುತ್ತವೆ. ಮಾರ್ಚ್‌ 20ರಂದು ರಾತ್ರಿ ಕಾಮದಹನ ಬಳಿಕ ಬಣ್ಣದಾಟಕ್ಕೆ ಚಾಲನೆ ದೊರೆಯುತ್ತದೆ. ಮಾ.21ರಿಂದ 23ರವರೆಗೆ ನಗರದಲ್ಲಿ ಬಣ್ಣದ ಬಂಡಿಗಳ ಸಂಭ್ರಮ ಜೋರಾಗಿ ನಡೆಯಲಿದೆ.

ಪ್ರತಿವರ್ಷ ಹೋಳಿ ಹಬ್ಬವನ್ನು ವಿಶಿಷ್ಟ ಹಾಗೂ ಸುಂದರವಾಗಿ ಆಚರಿಸುವುದು ಬಾಗಲಕೋಟೆಯ ಹೆಮ್ಮೆ. ಇದಕ್ಕಾಗಿಯೇ ಸಮಿತಿ ಇದ್ದು, ಈಗಾಗಲೇ ಸಮಿತಿ ಸಭೆ ನಡೆಸಿ, ಚರ್ಚಿಸಿದೆ. ನಗರದ ಐದು ಓಣಿಗಳ ತುರಾಯಿ ಹಲಗೆ ಮೇಳ ಮತ್ತು ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ. ನಗರದ ಎಲ್ಲ ಬಂಧುಗಳು, ಹೋಳಿ ಹಬ್ಬವನ್ನು ಶಾಂತ ಹಾಗೂ ಸಂಭ್ರಮದಿಂದ ಆಚರಿಸಬೇಕು.
ಕಳಕಪ್ಪ ಬಾದವಾಡಗಿ,
ಅಧ್ಯಕ್ಷ, ಹೋಳಿ ಆಚರಣೆ ಸಮಿತಿ

ಹೋಳಿ ಹಬ್ಬದ ಪ್ರಯುಕ್ತ ನಡೆಯುವ ಮೂರು ದಿನಗಳ ಬಣ್ಣದಾಟದ ವೇಳೆ, ನಗರದ ವ್ಯಾಪಾರ ವಹಿವಾಟು ಸ್ವಯಂ ಪ್ರೇರಿತ ಬಂದ್‌ ಆಗಿರುತ್ತದೆ. ಹೀಗಾಗಿ ಬಹುತೇಕ ವ್ಯಾಪಾರಸ್ಥರು, ಆ ಮೂರು ದಿನಗಳ ಕಾಲ ಪ್ರವಾಸದ ನೆಪದಲ್ಲಿ ಊರು ಬಿಡುತ್ತಾರೆ. ವ್ಯಾಪಾರಸ್ಥರು, ಯುವಕರು ಊರು ಬಿಡದೇ, ನಗರದಲ್ಲೇ ಇದ್ದುಕೊಂಡು ಬಣ್ಣದಾಟದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು.
 ಶಿವಾನಂದ, ನಗರದ ಯುವಕ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next