Advertisement

ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ: ವೈದ್ಯರ ಕೊರತೆ

10:11 PM Aug 02, 2019 | Sriram |

ಬದಿಯಡ್ಕ: ಮಳೆಗಾಲದಲ್ಲಿ ಕಾಯಿಲೆಗಳು ಹೆಚ್ಚು ಹೆಚ್ಚಾಗಿ ಕಾಡುವುದರಿಂದ ಎಲ್ಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕುಟುಂಬ ಆರೋಗ್ಯ ಕೇಂದ್ರಗಳು ಸೇರಿದಂತೆ ಆಸ್ಪತ್ರೆ ಗಳು ಸೂಕ್ತ ರೀತಿಯ ಚಿಕಿತ್ಸೆ ನೀಡಲು ಪೂರ್ವ ತಯಾರಿ ಮಾಡಿಕೊಳ್ಳಬೇಕಾದ ಅಗತ್ಯವಿದೆಯಾದರೂ ಕೆಲವೆಡೆ ನಾನಾ ಕಾರಣಗಳಿಂದ ಜನರಿಗೆ ಸರಿಯಾದ ಚಿಕಿತ್ಸೆ ದೊರಕದಿರುವುದು ವಿಷಾದನೀಯ.

Advertisement

ಡೆಂಗ್ಯೂ ಮೊದಲಾದ ಪ್ರಾಣಹಾನಿಕರ ರೋಗಗಳು ಬಾಧಿಸಿ ಚಿಕಿತ್ಸೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಆಸ್ಪತ್ರೆ ಇದ್ದರೆ ವೈದ್ಯರಿಲ್ಲ, ವೈದ್ಯರಿದ್ದರೆ ವ್ಯವಸ್ಥೆ ಇಲ್ಲ ಎಂಬಂತಾಗಿದೆ. ಇದಕ್ಕೆ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರವೂ ಹೊರತಲ್ಲ. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮೊಟಕುಗೊಂಡಿರುವುದಲ್ಲದೆ ಹೊರ ರೋಗಿ ವಿಭಾಗದಲ್ಲಿಯೂ ಬಡರೋಗಿಗಳು ಚಿಕಿತ್ಸೆಗಾಗಿ ಅದೆಷ್ಟೋ ಹೊತ್ತು ಕ್ಯೂ ನಿಲ್ಲಬೇಕಾಗಿ ಬಂದಿದೆ. ಹವಾಮಾನ ವೈಪರೀತ್ಯದಿಂದ ಅನೇಕ ಮಂದಿಗೆ ಜ್ವರ ಹಾಗೂ ಇನ್ನಿತರ ರೋಗಗಳು ಬಾಧಿಸಿದ್ದು, ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವುಂಟಾಗಿದೆ.

ರೋಗಬಾಧೆಯಿಂದ ನಿತ್ರಾಣದಲ್ಲಿರುವ ರೋಗಿಗಳು ಹಾಗೂ ಪುಟ್ಟ ಮಕ್ಕಳನ್ನು ಕೈಯಲ್ಲಿ ಎತ್ತಿಕೊಂಡು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ತಾಯಂದಿರಿಗೆ ಉಂಟಾಗುತ್ತಿದೆ. ಈ ಆಸ್ಪತ್ರೆಯಲ್ಲಿ 30 ಹಾಸಿಗೆಗಳಿದ್ದು, ಈ ಹಿಂದೆ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ಸೌಕಾರ್ಯವಿತ್ತು. ಸಮೀಪದ ಪಂಚಾಯತ್‌ಗಳಾದ ಕುಂಬಾxಜೆ, ಎಣ್ಮಕಜೆ ಪಂಚಾಯತ್‌ಗಳಲ್ಲಿ ಆರೋಗ್ಯ ಕೇಂದ್ರಗಳಿದ್ದರೂ ರೋಗಿಗಳ ದಾಖಲಾತಿ ಚಿಕಿತ್ಸಾ ಸೌಕರ್ಯವಿಲ್ಲ. ಆದ್ದರಿಂದ ಈ ಭಾಗದ ರೋಗಿಗಳು ಬದಿಯಡ್ಕ ಆರೋಗ್ಯ ಕೇಂದ್ರವನ್ನು ಆಶ್ರಯಿಸುತ್ತಿದ್ದಾರೆ.

ಆದರೆ ಕಳೆದ ಎರಡು ವಾರಗಳಿಂದ ಇಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮೊಟಕುಗೊಂಡಿರುತ್ತದೆ. ವೈದ್ಯರುಗಳ ಹಾಗೂ ಇತರ ಸಿಬ್ಬಂದಿಗಳ ಕೊರತೆಯೇ ಈ ಸ್ಥಿತಿಗೆ ಕಾರಣವೆಂದು ಹೇಳಲಾಗುತ್ತದೆ. ಈ ಆಸ್ಪತ್ರೆಯಲ್ಲಿ 7 ಮಂದಿ ವೈದ್ಯರುಗಳ ಅಗತ್ಯವಿದ್ದು, 3 ತಿಂಗಳ ಹಿಂದೆ ಅವರನ್ನು ನೇಮಕ ಮಾಡಲಾಗಿತ್ತು. ಈ ಪೈಕಿ ಮೂವರು ವೈದ್ಯರುಗಳಿಗೆ ವಾಣಿನಗರ, ಪೆರ್ಲ, ಮುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕರ್ತವ್ಯ ನಿಭಾಯಿಸ ಬೇಕಾಗಿದೆ. ಇದರಿಂದಾಗಿ ಬದಿಯಡ್ಕದ ಆಸ್ಪತ್ರೆಯಲ್ಲಿ ಕೇವಲ ನಾಲ್ಕುಮಂದಿ ವೈದ್ಯರ ಸೇವೆ ಮಾತ್ರವೇ ಲಭ್ಯವಿದೆ. ಲ್ಯಾಬ್‌ ಟೆಕ್ನೀಶಿಯನ್‌ಗಳ ಸಹಿತ ಎಂಟು ಮಂದಿ ದಾದಿಯರ ಅಗತ್ಯವಿದ್ದು ಕೇವಲ 3 ದಾದಿಯರು ಮಾತ್ರ ಕರ್ತವ್ಯದಲ್ಲಿದ್ದಾರೆ. ಇತರ ಅಗತ್ಯಗಳಿಗಾಗಿ ದಿನಗೂಲಿ ನೌಕರರಾಗಿ 4 ಮಂದಿ ಸಹಾಯಕರಿದ್ದಾರೆ.

ಪೆರಡಾಲ ಕೊಲನಿಯ ಜನರೂ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದು ಸೂಕ್ತ ಚಿಕಿತ್ಸೆ ಲಭಿಸದಿದ್ದಲ್ಲಿ ದೂರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಆಸಹಾಯಕರಾದ ಬಡ ಜನರಿಗೆ ಈ ಆಸ್ಪತ್ರೆಯ ಆಲಿಖೀತ ನಿಯಮಗಳು ಸವಾಲಾಗಿವೆ.

Advertisement

ರೋಗಿಗಳ ಪರದಾಟ
ಅಸೌಖ್ಯ ಬಾಧಿಸಿ ಹಲವರು ಆಸ್ಪತ್ರೆಗೆ ಬಂದಾಗ ಇಲ್ಲಿನ ನಾಲ್ಕು ಮಂದಿ ವೈದ್ಯರು ಅಪರಾಹ್ನ 3 ಗಂಟೆ ತನಕ ತಪಾಸಣೆ ನಡೆಸಿ ಮರಳುತ್ತಾರೆ. ಸಂಜೆ 5 ಗಂಟೆಗೆ ದಾದಿಯರ ಸಹಿತ ಎಲ್ಲ ನೌಕರರೂ ಮರಳುತ್ತಿದ್ದು, ಅನಂತರ ಬರುವ ರೋಗಿಗಳಿಗೆ ಚಿಕಿತ್ಸೆ ಲಭಿಸುತ್ತಿಲ್ಲ. ಹಗಲು ಹೊತ್ತಿನಲ್ಲಿ ಬರುವ ರೋಗಿಗಳ ಪೈಕಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದಲ್ಲಿ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ಅಥವಾ ಇತರ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಈ ಭಾಗದ ಬಡ ರೋಗಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತುರ್ತು ಗಮನ ಹರಿಸಿ ಅಗತ್ಯವುಳ್ಳ ವೈದ್ಯರನ್ನು ಹಾಗೂ ಸಿಬಂದಿಯನ್ನು ನೇಮಕಗೊಳಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಮಸ್ಯೆ ಪರಿಹರಿಸಿ
ಬದಿಯಡ್ಕ ಪಂಚಾಯತ್‌ನ ಜನರಿಗೆ ಆಶ್ರಯವಾಗಿ ಇದೊಂದೇ ಆಸ್ಪತ್ರೆಯಿರುವುದು. ಆದರೆ ಸೂಕ್ತ ಚಿಕಿತ್ಸೆ ನೀಡಿ ಜನರಿಗೆ ನೆಮ್ಮದಿ ತರುವಲ್ಲಿ ಇದು ಸೋಲುತ್ತಿರುವುದು ಬೇಸರದ ವಿಷಯ. ನೇಮಕಗೊಂಡ ವೈದ್ಯರು ಹಾಗೂ ದಾದಿಯಂದಿರು ಎರಡೇ ತಿಂಗಳಲ್ಲಿ ವರ್ಗವಾಗಿ ಹೋಗುವುದು ಕಂಡುಬರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸಿ ಜನರಿಗೆ ಸರಿಯಾದ ಚಿಕಿತ್ಸೆ ನೀಡುವಂತಾಗಬೇಕು.
– ನರೇಂದ್ರ.ಬಿ,
ಅಧ್ಯಕ್ಷರು, ಟ್ರೇಡರ್ ವೆಲ್ಫೆರ್‌ ಸೊಸೈಟಿ.

-ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next