Advertisement

ಜಿಲ್ಲೆಯಲ್ಲಿ “ಹಿಂದುಳಿದ’ಬಾಲಕಾರ್ಮಿಕರು!

12:41 PM Nov 24, 2018 | Team Udayavani |

ರಾಯಚೂರು: ರಾಯಚೂರಿಗೆ ಬಾಲಕಾರ್ಮಿಕ ಪದ್ಧತಿ ಪೆಡಂಭೂತದಂತೆ ಕಾಡುತ್ತಿದೆ. ಅದರಲ್ಲೂ ಈ ಕೆಟ್ಟ ಪದ್ಧತಿಗೆ ಸಿಲುಕುತ್ತಿರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಹೆಚ್ಚು ಎಂಬ ಅಂಶ ಬಯಲಾಗಿದೆ. ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯಡಿ 20 ದಿನಗಳ ಸಮೀಕ್ಷೆ ನಡೆಸಿದ್ದು, ಜಿಲ್ಲೆಯಲ್ಲಿ 1360 ಬಾಲ ಕಾರ್ಮಿಕರಿದ್ದಾರೆ. ಆದರೆ, ಅದರಲ್ಲೂ 849 ಮಕ್ಕಳು ಎಸ್ಸಿ, ಎಸ್ಟಿಗೆ ಸೇರಿರುವುದು ಗಮನಾರ್ಹ. ಒಟ್ಟಾರೆ ಬಾಲ ಕಾರ್ಮಿಕರಲ್ಲಿ 669 ಬಾಲಕರು ಮತ್ತು 691 ಬಾಲಕಿಯರಿದ್ದಾರೆ. ಅದರಲ್ಲಿ 283 ಬಾಲಕರು, 257 ಬಾಲಕಿಯರು ಸೇರಿ ಒಟ್ಟು 540 ಮಕ್ಕಳು ಪರಿಶಿಷ್ಟ ಜಾತಿಯವರಾಗಿದ್ದಾರೆ. ಇನ್ನೂ 123 ಬಾಲಕರು, 186
ಬಾಲಕಿಯರು ಸೇರಿ 309 ಮಕ್ಕಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಸಮೀಕ್ಷೆಯಲ್ಲಿ ಸಿಕ್ಕ ಮಕ್ಕಳಲ್ಲಿ 8-14 ವರ್ಷದೊಳಗಿನವರೇ ಹೆಚ್ಚು. ಈ ವಯಸ್ಸಿನ 270 ಬಾಲಕರು, 257 ಬಾಲಕಿಯರು ಎಸ್ಸಿಗೆ ಸೇರಿದ್ದಾರೆ. 

Advertisement

ಪರಿಶಿಷ್ಟ ಪಂಗಡಕ್ಕೆ ಸೇರಿದ 8-14 ವರ್ಷದೊಳಗಿನ 102 ಬಾಲಕರು, 155 ಬಾಲಕಿಯರಿದ್ದರೆ, 15-18 ವರ್ಷದೊಳಗಿನ 44 ಎಸ್ಸಿ, 53 ಎಸ್ಟಿ ಸಮಾಜದ ಬಾಲಕಾರ್ಮಿಕರಿದ್ದಾರೆ.

24 ಎನ್‌ಜಿಗಳಿಂದ ಸಮೀಕ್ಷೆ: ಐದು ವರ್ಷದಲ್ಲಿ ಎರಡು ಬಾರಿ ಈ ಸಮೀಕ್ಷೆ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಸೂಚನೆ. ಹೀಗಾಗಿ 24 ಎನ್‌ಜಿಒಗಳ ಮೂಲಕ ನ.1ರಿಂದ 20ರವರೆಗೆ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಶಿಕ್ಷಣ, ಕಂದಾಯ, ಪಂಚಾಯತ್‌ ರಾಜ್‌, ಮಹಿಳಾ ಮತ್ತು ಮಕ್ಕಳ ಇಲಾಖೆ, ನಗರಾಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ, ಸಮಾಜ ಕಲ್ಯಾಣ, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ 11 ಇಲಾಖೆಗಳ ಅಧಿಕಾರಿಗಳು ಮೇಲ್ವಿಚಾರಕರಾಗಿರುತ್ತಾರೆ. ಪ್ರತಿ ಎನ್‌ಜಿಒಗೆ ಒಬ್ಬರನ್ನು ನೋಡಲ್‌ ಅಧಿಕಾರಿಯನ್ನಾಗಿ ನಿಯೋಜಿಸಲಾಗಿತ್ತು.

ಬಾಲ ಕಾರ್ಮಿಕ ಸಮಸ್ಯೆ ಹೆಚ್ಚಾಗಿರುವ ಪ್ರದೇಶ, ಕೊಳೆಗೇರಿ ಶಿಕ್ಷಣದಿಂದ ಹಿಂದುಳಿದ ಪ್ರದೇಶಗಳು, ಸೌಲಭ್ಯ ಕಾಣದ ಹಳ್ಳಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಆದರೆ, 2015-16ರಲ್ಲಿ ನಡೆದ ಸಮೀಕ್ಷೆಯಲ್ಲಿ 4,256 ಬಾಲ ಕಾರ್ಮಿಕರಿದ್ದರು. ಈಗ ಆ ಸಂಖ್ಯೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ.

ವ್ಯವಸ್ಥಿತ ಜಾಲ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಹಿಂದೆ ವ್ಯವಸ್ಥಿತ ಜಾಲವಿದೆ. ಮಕ್ಕಳನ್ನು ಒಂದು ಊರಿನಿಂದ ಮತ್ತೂಂದು ಊರಿಗೆ ಹೊಲದ ಕೆಲಸಕ್ಕೆ ಕರೆದೊಯ್ಯಲಾಗುತ್ತದೆ. ಅದಕ್ಕೆ ಆಟೋ ಚಾಲಕರಿಗೆ ಮಧ್ಯವರ್ತಿಗಳು ಕಮಿಷನ್‌ ನೀಡುತ್ತಾರೆ. ಆದರೆ, ಅನಕ್ಷರಸ್ಥ ಪಾಲಕರು ಹಣದಾಸೆಗೆ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗಗಳ ಮಕ್ಕಳೇ ಹೆಚ್ಚು ಎನ್ನುವುದು ಆತಂಕಕಾರಿ ಬೆಳವಣಿಗೆ.

Advertisement

ಸಮೀಕ್ಷೆ ಅಪೂರ್ಣ? ಈಗ ಸಿಕ್ಕಿರುವ ಮಕ್ಕಳ ಸಂಖ್ಯೆಗೂ ಜಿಲ್ಲೆಯಲ್ಲಿರುವ ಈ ಸಮಸ್ಯೆಗೂ ತಾಳೆಯಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಇದಕ್ಕಿಂತ ಗಂಭೀರವಾಗಿದೆ. ಆದರೆ, ಆಯ್ದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿರುವುದರಿಂದ ಸಂಖ್ಯೆ ಕಡಿಮೆಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂಬುದು ಸ್ಥಳೀಯರ ಒತ್ತಾಯ.

ಸಮೀಕ್ಷೆಯಲ್ಲಿ ಸಿಕ್ಕಿರುವ ಮಕ್ಕಳಲ್ಲಿ 336 ಮಕ್ಕಳನ್ನು ಬಾಲಕಾರ್ಮಿಕ ಕೇಂದ್ರಗಳಲ್ಲಿ ದಾಖಲಿಸಲಾಗಿದೆ. ಶಿಕ್ಷಣ
ಇಲಾಖೆಯಿಂದ ಶಾಲೆ ಬಿಟ್ಟ ಮಕ್ಕಳ ವಿವರ ಸಂಗ್ರಹಿಸಲಾಗುತ್ತಿದೆ. ಎಸ್ಸಿ, ಎಸ್ಟಿ ಮಕ್ಕಳು ಹೆಚ್ಚಾಗಿರುವ ಕಾರಣ ಕೊಳಗೇರಿಗಳು, ಹಿಂದುಳಿದ ವರ್ಗಗಳ ಜನ ವಾಸಿಸುವ ಕಡೆ ಜಾಗೃತಿ ಮೂಡಿಸಲಾಗುತ್ತಿದೆ. ಸಿಕ್ಕಿರುವ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿತಿಗೆ ತರಲಾಗುವುದು.
 ಮಂಜುನಾಥ ರೆಡ್ಡಿ, ಬಾಲಕಾರ್ಮಿಕ ಯೋಜನಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next