Advertisement

ಪ್ರಧಾನಿ ಆಗಮನ ಹಿನ್ನೆಲೆ: ಸ್ವಚ್ಛಗೊಳ್ಳುತ್ತಿರುವ ಎನ್‌ಎಚ್‌-66

11:44 AM Aug 25, 2022 | Team Udayavani |

ಪಣಂಬೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆ. 2ರಂದು ಪಣಂಬೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಸ್ತೆಗಳ ದುರಸ್ತಿ ಹಾಗೂ ಸ್ವಚ್ಛತೆಗೆ ಹೆದ್ದಾರಿ ಇಲಾಖೆ ಮುಂದಾಗಿದೆ. ಕಳೆದ ಎರಡು ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೆದ್ದಾರಿ 66ರ ಕೂಳೂರು, ಪಣಂಬೂರು, ಬೈಕಂಪಾಡಿ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೊಂಡ, ಡಿವೈಡರ್‌ಗಳಲ್ಲಿ ಹುಲ್ಲು ಬೆಳೆದಿದ್ದು, ಸ್ವಚ್ಛತೆ ಕಾರ್ಯ ಆರಂಭಿಸಲಾಗಿದೆ.

Advertisement

ಬುಧವಾರ ಕೂಳೂರಿನಿಂದ ಪಣಂಬೂರು ಹೆದ್ದಾರಿ ಮಧ್ಯೆ ಇರುವ ಡಿವೈಡರ್‌ಗಳ ಹುಲ್ಲು ತೆಗೆಯುವ ಕೆಲಸ ಆರಂಭಿಸಲಾಗಿದೆ. ಜೇಸಿಬಿ ಮೂಲಕ ಹೆದ್ದಾರಿ ಬದಿ ಸಂಗ್ರಹವಾಗಿರುವ ಕೆಸರು ಮಣ್ಣು ತೆಗೆಯಲಾಗುತ್ತಿದೆ. ಎನ್‌ಎಂಪಿಎ ಮುಂಭಾಗ ಕೆಟ್ಟು ಹೋದ ರಸ್ತೆ ಹಾಗೂ ಇಕ್ಕೆಲಗಳಲ್ಲೂ ಸುಂದರಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಬುಧವಾರ ಬೆಳಗ್ಗಿನಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೊಂಡ ಮುಚ್ಚುವ ಕಾಮಗಾರಿಗೆ ಹಿನ್ನಡೆಯಾಗಿದೆ. ಒಂದು ವಾರದೊಳಗಾಗಿ ರಸ್ತೆಯ ದುರಸ್ತಿ ನಡೆಸಲು ಸಮಯವಕಾಶವಿದ್ದರೂ ಮಳೆಯ ನಡುವೆ ಕಾಮಗಾರಿ ನಡೆಸುವುದು ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಗುತ್ತಿಗೆ ಪಡೆದ ಕಂಪೆನಿ ಹೆದ್ದಾರಿ ಬೀದಿ ದೀಪ, ಡಿವೈಡರ್‌ ಸ್ವಚ್ಛತೆ ಕಾರ್ಯವನ್ನು ಮಾಡುವ ಗುತ್ತಿಗೆ ಪಡೆದಿದ್ದರೂ ಹಲವೆಡೆ ಬೀದಿ ದೀಪದ ದುರಸ್ತಿ ನಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next