Advertisement

ರಾಹುಲ್ ಗಾಂಧಿ ಮೇಲೆ ಆಜಾದ್ ವೈಯಕ್ತಿಕ ದಾಳಿ ಖಂಡನೀಯ: ಸಿದ್ದರಾಮಯ್ಯ

04:33 PM Aug 27, 2022 | Team Udayavani |

ಬೆಂಗಳೂರು: ”ರಾಹುಲ್ ಗಾಂಧಿಯವರು ತಾವು ಸಚಿವರಾಗದೆ, ಹಿರಿಯರಾದ ಗುಲಾಂ ನಬಿ ಆಜಾದ್ ಅವರಂತಹವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದರು. ಈಗ ಆಜಾದ್ ಅವರು ರಾಹುಲ್ ಗಾಂಧಿಯವರ ಮೇಲೆ ವೈಯಕ್ತಿಕ ಮಟ್ಟದ ದಾಳಿಗಿಳಿದಿರುವುದು ಖಂಡನೀಯ” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Advertisement

ಗುಲಾಂ ನಬಿ ಆಜಾದ್ ರಾಜೀನಾಮಗೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ತೊರೆದು ಅವರ ಪಾಡಿಗೆ ಅವರು ಹೋಗಿ ಬಿಟ್ಟಿದ್ದರೆ ಅವರಿಗೆ ಶುಭಕೋರಿ ಬೀಳ್ಕೊಡಬಹುದಿತ್ತೇನೋ? ಆದರೆ ರಾಹುಲ್ ಗಾಂಧಿ ವಿರುದ್ದ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದಲ್ಲಿರುವ ಯಾರೂ ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ.

2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದಾಗ ಸೋನಿಯಾಗಾಂಧಿಯವರು ಮನಸ್ಸು ಮಾಡಿದ್ದರೆ ಸುಲಭದಲ್ಲಿ ಪ್ರಧಾನಿಯಾಗಬಹುದಿತ್ತು. ಆದರೆ ಅವರು ಮನೆ ಬಾಗಿಲಿಗೆ ಬಂದಿದ್ದ ಅವಕಾಶವನ್ನು ತ್ಯಾಗ ಮಾಡಿ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಮಾತ್ರವಲ್ಲ ವಿಶ್ವದ ಇತಿಹಾಸದಲ್ಲಿಯೇ ಅಪರೂಪದ ಘಟನೆ ಎಂದರು.

2004ರಲ್ಲಿಯೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದ ರಾಹುಲ್ ಗಾಂಧಿಯವರು ಇಚ್ಚೆ ಪಟ್ಟಿದ್ದರೆ ಕೇಂದ್ರದಲ್ಲಿ ಸಚಿವರಾಗಬಹುದಿತ್ತು. ಅವರನ್ನು ಯಾರೂ ಬೇಡ ಎಂದು ಹೇಳುತ್ತಿರಲಿಲ್ಲ. ಆದರೆ ಅಧಿಕಾರಕ್ಕಾಗಿ ಆಸೆ ಪಡದೆ ಪಕ್ಷಕ್ಕಾಗಿ ದುಡಿಯುವ ನಿರ್ಧಾರ ಕೈಗೊಂಡ ರಾಹುಲ್ ಅವರು ಹತ್ತು ವರ್ಷಗಳ ಯುಪಿಎ ಸರ್ಕಾರದ ಕಾಲದಲ್ಲಿ ಸಚಿವರಾಗದೆ ಪಕ್ಷದ ಬಲವರ್ಧನೆಗೆ ದುಡಿದದ್ದನ್ನು ದೇಶ ನೋಡಿದೆ ಎಂದಿದ್ದಾರೆ.

Success has many fathers and Failures is orphan ಎನ್ನುವ ಮಾತಿದೆ. ಗೆಲುವಿಗೆ ಹಲವಾರು ತಂದೆಗಳಿರುತ್ತಾರೆ, ಸೋಲು ಅನಾಥ. ಕಾಂಗ್ರೆಸ್ ಪಕ್ಷ ಗೆಲುವಿನ ಹಾದಿಯಲ್ಲಿರುವಾಗ ಸರ್ಕಾರ ಮತ್ತು ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿದ್ದ ಆಜಾದ್ ಅವರು ಈಗ ಪಕ್ಷ ಕಷ್ಟದಲ್ಲಿರುವಾಗ ಅದರ ದೂಷಣೆಗೆ ಇಳಿದಿರುವುದು ಅವರ ವಯಸ್ಸು ಮತ್ತು ಅನುಭವಕ್ಕೆ ತಕ್ಕುದಾದ ನಡೆ ಅಲ್ಲ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next