Advertisement

ಕೋವಿಡ್  ವಿರುದ್ಧ ಆಯುಷ್‌ ಅಸ್ತ್ರ

01:27 AM Apr 30, 2021 | Team Udayavani |

ಹೊಸದಿಲ್ಲಿ: ಕೋವಿಡ್  ವಿರುದ್ಧ ಪ್ರತಿರೋಧಕ ಹೆಚ್ಚಿಸುವ ನಿಟ್ಟಿನಲ್ಲಿ ಹೋಮ್‌ ಐಸೋಲೇಶನ್‌ನಲ್ಲಿ ಆಯುರ್ವೇದ- ಯುನಾನಿ ಕ್ರಮ ಅನುಸರಿ ಸುತ್ತಿರುವ ಮಧ್ಯಮ ಸೋಂಕಿತರಿಗೆ ಆಯುಷ್‌ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಇದರಲ್ಲೂ ಈ ಹಿಂದೆ ಸಚಿವಾಲಯ ಪರಿಚಯಿಸಿದ್ದ “ಆಯುಷ್‌ಕ್ವಾತ್‌’ ಬಳಕೆಗೆ ಹೆಚ್ಚು ಒತ್ತು ನೀಡಿದೆ.

Advertisement

ತುಳಸಿ, ದಾಲ್ಚಿನಿ, ಶುಂಠಿ, ಕೃಷ್ಣ ಮರಿಚ್‌- ಈ ನಾಲ್ಕು ಗಿಡಮೂಲಿಕ ಪದಾರ್ಥಗಳನ್ನೊಳಗೊಂಡ ಆಯುಷ್‌ ಕ್ವಾತ್‌, ಆ್ಯಂಟಿ ವೈರಲ್‌ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿ ಮತ್ತು ಇತರ ಆರೋಗ್ಯ ಲಾಭಗಳನ್ನು ಹೊಂದಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಅಗತ್ಯಬಿದ್ದರೆ, ಇವುಗಳೊಂದಿಗೆ ವಸಾಕಾ (ಮಲ ಬಾರ್‌ ನಟ್‌), ಯಷ್ಟಿಮಧು, ಗುಡುಚಿ ಪುಡಿಯನ್ನೂ ಸೇರಿಸಬಹುದು. ಅಲ್ಲದೆ ಆಯುಷ್‌ -64, ಅಶ್ವಗಂಧ ಗುಳಿಗೆಗಳನ್ನೂ ಹೋಂ ಐಸೋಲೇಶನ್‌ನಲ್ಲಿರುವವರು ಬಳಸ ಬಹುದು ಎಂದು ಸೂಚಿಸಿದೆ.

“ಹೋಂ ಐಸೋಲೇಶನ್‌ನಲ್ಲಿರುವ ಸೌಮ್ಯ ಲಕ್ಷಣಗಳುಳ್ಳ ಸೋಂಕಿತರಿಗೆ ಸ್ವಆರೈಕೆಗೆ ಅನುಕೂಲ ಕಲ್ಪಿಸಲು ಈ ಮಾರ್ಗಸೂಚಿ ಪ್ರಕಟಿಸಲಾಗಿದೆ. ಸಾಂಪ್ರದಾಯಿಕ ಆಯುರ್ವೇದ ಮತ್ತು ಯುನಾನಿ ಕ್ರಮಗಳ ಕುರಿತ ಸಂಶೋಧನೆಗಳು, ವರದಿ, ಅಂತರ ಶಿಕ್ಷಣ ಸಮಿತಿಯ ಶಿಫಾರಸು ಗಳನ್ನು ಆಧರಿಸಿ ಈ ಸೂಚನೆಗಳನ್ನು ನೀಡಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ಸೌಮ್ಯ ಸೋಂಕಿತರಿಗೆ “ಆಯುಷ್‌ 64′ ಪರಿಣಾಮಕಾರಿ!: ಬಹು ಗಿಡಮೂಲಿಕೆಗಳಿಂದ ಅಭಿವೃದ್ಧಿಪಡಿಸಿದ ಆಯುಷ್‌ 64 ಔಷಧ ಲಕ್ಷಣ ರಹಿತ ಮತ್ತು ಸೌಮ್ಯ ಲಕ್ಷಣಗಳ ಸೋಂಕಿತರಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡ ಬಲ್ಲದು ಎಂದು ಆಯುಷ್‌ ಸಚಿವಾಲಯ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಆಯುರ್ವೇದ ಸಂಶೋಧನ ಕೇಂದ್ರ (ಸಿಸಿಆರ್‌ಎಎಸ್‌) 1980 ರಲ್ಲಿ ಮಲೇರಿಯಾ ನಿಯಂತ್ರಿಸುವ ಸಲುವಾಗಿ ಈ ಔಷಧ ಅಭಿವೃದ್ಧಿಪಡಿಸಿತ್ತು.

Advertisement

ವಿದೇಶಿ ಸುರಕ್ಷಿತ ತಾಣಗಳತ್ತ ಕೋಟಿಶೂರರು! :

ಭಾರತದಲ್ಲಿ ಆಕ್ಸಿಜನ್‌, ಬೆಡ್‌, ಲಸಿಕೆ ಕೊರತೆ ಹೆಚ್ಚುತ್ತಿ ರುವ ನಡುವೆಯೇ ಬಹುಕೋಟ್ಯಧಿಪತಿಗಳು ತಮ್ಮ ಕುಟುಂಬದೊಂದಿಗೆ ವಿದೇಶಗಳ ಸುರಕ್ಷಿತ ತಾಣಗಳಿಗೆ ಖಾಸಗಿ ಜೆಟ್‌ಗಳ ಮೂಲಕ ವಲಸೆ ಹೋಗುತ್ತಿದ್ದಾರೆ!

ಅದರಲ್ಲೂ ಯುರೋಪ್‌, ಹಿಂದೂ ಮಹಾ ಸಾಗರ, ಮಧ್ಯಪೂರ್ವದ ದ್ವೀಪಗಳಿಗೆ ಲಕ್ಷಾಂತರ ರೂ. ಟಿಕೆಟ್‌ ದರ ನೀಡಿ, ವಲಸೆ ತೆರಳುತ್ತಿದ್ದಾರೆ. ಈಗಾ ಗಲೇ ಇಂಗ್ಲೆಂಡ್‌, ಕೆನಡಾ, ಯುಎಇ, ಹಾಂಕಾಂಗ್‌ ಸೇರಿ 12ಕ್ಕೂ ಅಧಿಕ ರಾಷ್ಟ್ರಗಳು ಭಾರತ ಪ್ರವಾಸಿಗರಿಗೆ ನಿರ್ಬಂಧ ಹೇರಿವೆ. ಆದಾಗ್ಯೂ ನಿರ್ಬಂಧ ಸಡಿಲಿಸಿರುವ ದೇಶಗಳತ್ತ ಈ ಕೋಟಿವೀರರ ಕಣ್ಣು ಬಿದ್ದಿದೆ.

ಮಾಲ್ಡೀವ್ಸ್‌ ಫೇವರಿಟ್‌: ಬಾಲಿವುಡ್‌ನ‌ ಹಲವು ಜೋಡಿಗಳು ಮಾಲ್ಡೀವ್ಸ್‌ನತ್ತ ಮುಖ ಮಾಡಿದ್ದಾರೆ. ಭಾರತೀಯ ಪ್ರಯಾಣಿಕರಿಗೆ ಮಾಲ್ಡೀವ್ಸ್‌ ನಿರ್ಬಂಧ ಹೇರಿದೆಯಾದರೂ, ಕೆಲವು ದ್ವೀಪಗಳ ರೆಸಾರ್ಟ್‌ ಪ್ರಯಾಣಕ್ಕೆ ಅನುಮತಿಸಿದೆ. ಹೀಗಾಗಿ ಕೋಟ್ಯಧಿ ಪತಿಗಳು ಮುಗಿಬಿದ್ದು ಇಲ್ಲಿಗೆ ದೌಡಾಯಿ ಸುತ್ತಿದ್ದಾರೆ. ಮತ್ತೆ ಕೆಲವರು, ಹೊಸದಿಲ್ಲಿಯಿಂದ ದುಬಾೖಗೆ ಒನ್‌ ವೇ ಫ್ಲೈಟ್‌ ಪಡೆದು ವಲಸೆ ಆರಂಭಿಸಿದ್ದಾರೆ. ದುಬಾೖಗೆ ಏಕಪ್ರಯಾಣ ವೆಚ್ಚ ಬರೋಬ್ಬರಿ 15 ಲಕ್ಷ ರೂ.! ಅಂದಹಾಗೆ, ಪ್ರಯಾಣಿಕ ವಿಮಾನಕ್ಕಿಂತ ಪ್ರೈವೇಟ್‌ ಜೆಟ್‌ನ ಟಿಕೆಟ್‌ ದರ 10 ಪಟ್ಟು ಅಧಿಕ ಎನ್ನುವುದೂ ಇಲ್ಲಿ ಗಮನಾರ್ಹ. ಇದೇ ವೇಳೆ, ಯುಕೆ, ಅಮೆರಿಕದಲ್ಲಿ ಸಿಲುಕಿದ್ದ ಉದ್ಯಮಿ ಕುಟುಂಬಗಳು ಪ್ರೈವೇಟ್‌ ಜೆಟ್‌ ಹಿಡಿದು ಸ್ವದೇಶಕ್ಕೆ ಮರಳುತ್ತಿರುವ ಪ್ರಸಂಗಗಳೂ ನಡೆಯುತ್ತಿವೆ.

ಫ್ಯಾಮಿಲಿ ಜತೆ ಸ್ವದೇಶದಲ್ಲೇ ಇರುವ ಉದ್ಯಮಿಗಳು :

ಹೆಚ್ಚುತ್ತಿರುವ ಕೊರೊನಾ ಕಾರಣ, ಮುಕೇಶ್‌ ಅಂಬಾನಿ ಕುಟುಂಬ ಮುಂಬಯಿಯಿಂದ ಜಾಮ್‌ನಗರಕ್ಕೆ ಶಿಫ್ಟ್ ಆಗಿದೆ. ಆದಾಗ್ಯೂ ಆಕ್ಸಿಜನ್‌ ಪೂರೈಕೆ, ಆಸ್ಪತ್ರೆ- ವೆಂಟಿಲೇಟರ್‌ ಸೌಲಭ್ಯ ಇತ್ಯಾದಿ ಸೇವೆಯಲ್ಲಿ ರಿಲಯನ್ಸ್‌ ಪ್ರೈ. ಲಿ. ಮುಂಚೂಣಿಯಲ್ಲಿದೆ. ಉಳಿದಂತೆ, ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿ ಅಹ್ಮದಾಬಾದ್‌ ಹೊರವಲಯದ ತಮ್ಮ ಮನೆಯಲ್ಲಿ ಕುಟುಂಬದ ಜತೆಗಿದ್ದಾರೆ. ಇನ್ಫೋಸಿಸ್‌ ಸಹಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್‌, ನಂದನ್‌ ನಿಲೇಕಣಿ ಕೂಡ ಬೆಂಗಳೂರಿನಲ್ಲಿ ಸುರಕ್ಷಿತರಾಗಿದ್ದಾರೆ. ಬೈಜೂಸ್‌ ಆ್ಯಪ್‌ ದಿಗ್ಗಜ ಬೈಜು ರವೀಂದ್ರನ್‌ ಕೂಡ, “ಕೌಟುಂಬಿಕ ಸಂಬಂಧಗಳು ಗಾಢವಾಗಿವೆ, ಹೊರಗಿನ ಸಂಪರ್ಕ ಕಡಿತವಾಗಿದೆ’ ಎಂದಿದ್ದಾರೆ.

ಆಮ್ಲಜನಕ ಉಪಕರಣ ಆಮದಿಗೆ ಗ್ರೀನ್‌ ಸಿಗ್ನಲ್‌ :

ಮುಂದಿನ ಮೂರು ತಿಂಗಳಿಗೆ ಅನ್ವಯವಾಗುವಂತೆ ಕೇಂದ್ರ ಸರಕಾರ‌ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ 17 ವಸ್ತುಗಳ ಆಮದಿಗೆ ಅನುಮತಿ ನೀಡಿದೆ. ನೆಬ್ಯುಲೈಸರ್‌, ಆಕ್ಸಿಜನ್‌ ಕಾನ್ಸಂಟ್ರೇಟರ್‌, ಆಕ್ಸಿಜನ್‌ ಕಾನ್ನಿಸ್ಟರ್‌, ಆಕ್ಸಿಜನ್‌ ಸಿಲಿಂಡರ್‌, ವೆಂಟಿಲೇಟರ್‌, ಆಕ್ಸಿಜನ್‌ ಉತ್ಪಾದಿಸುವ ಘಟಕಗಳನ್ನು ಆಮದು ಮಾಡಿಕೊಳ್ಳಲು ಸರಕಾರ‌ ಸಮ್ಮತಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಆಹಾರ ಸಚಿವ ಪಿಯೂಷ್‌ ಗೋಯಲ್‌, ಸೋಂಕು ಪೀಡಿತರಿಗೆ ಆಮ್ಲಜನಕ ಮತ್ತಿ ತರ ಸೇವೆಗಳನ್ನು ತ್ವರಿತವಾಗಿ ಪೂರೈಸಲು ಸಾಧ್ಯವಾಗಲಿದೆ. ಬಿಗುವಿನ

ಪರಿಸ್ಥಿತಿ ಎದುರಿಸಿ ನಿವಾರಿಸಲು ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ. ಇಂಥ ಉಪಕರಣಗಳನ್ನು ಆಮದು ಮಾಡಿಕೊಳ್ಳುವವರು ರಾಜ್ಯಗಳಲ್ಲಿರುವ ಕಾನೂನು ಮಾಪನಶಾಸ್ತ್ರ ನಿರ್ದೇಶಕರು ಮತ್ತು ನಿಯಂತ್ರಕರಿಗೆ ಕಡ್ಡಾಯವಾಗಿ ಉತ್ಪನ್ನಗಳ ವಿವರ ಮತ್ತು ಗುಣಮಟ್ಟದ ಮಾಹಿತಿ ನೀಡಬೇಕು.

ಮೆಡಿಕಲ್‌ O2….. ಪ್ರಾಮುಖ್ಯ, ಮಹತ್ವ  :

ಕಳೆದ ಕೆಲವು ದಿನಗಳಿಂದ ಭಾರತ ಆಮ್ಲಜನಕ ಕೊರತೆಯಿಂದ ನಲುಗಿದೆ. ಎ. 1ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ದಿನಕ್ಕೆ 2,264 ಮೆಟ್ರಿಕ್‌ ಟನ್‌ಗಳಷ್ಟಿದ್ದ ಆಮ್ಲಜನಕದ ಬೇಡಿಕೆ, ಈಗ 6,600 ಮೆಟ್ರಿಕ್‌ ಟನ್‌ಗಳಿಗೆ ಏರಿಕೆಯಾಗಿದೆ. ಈ ದೈತ್ಯ ಮಟ್ಟದ ಅಭಾವನನ್ನು ನೀಗಿಸಲು ಸರಕಾರ‌ ಹಾಗೂ ಖಾಸಗಿ ಸಂಸ್ಥೆಗಳ ಮಟ್ಟದಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ಸಾಗಿವೆ. ಆದರೆ ಜನಸಾಮಾನ್ಯರಲ್ಲಿ ವೈದ್ಯಕೀಯ ಆಮ್ಲಜನಕ ಎಂದರೇನು, ಅದರ ಬಳಕೆ ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಮೆಡಿಕಲ್‌ ಆಕ್ಸಿಜನ್‌ ಬಳಕೆ  ಎಲ್ಲಿ, ಏಕೆ?  :

ನಾವು ಉಸಿರಾಡುವ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕೇವಲ ಶೇ. 21ರಷ್ಟಿರುತ್ತದೆ. ಸಾರಜನಕ ಶೇ. 78 ಹಾಗೂ ಉಳಿದ ಅನಿಲಗಳು ಶೇ. 1ರಷ್ಟಿರುತ್ತವೆ. ನಮ್ಮ ಶ್ವಾಸಕೋಶಗಳಲ್ಲಿನ ಅಲ್ವಿಯೋಲೈ ಎಂಬ ಜೀವಾಣುಗಳು ಆಮ್ಲಜನಕವನ್ನು ಮಾತ್ರ ಹೀರಿಕೊಂಡು ರಕ್ತಕ್ಕೆ ಸೇರಿಸುವ ಕೆಲಸವನ್ನು ಅವಿರತ ಮಾಡುತ್ತವೆ. ಕೊರೊನಾ ಸೋಂಕಿನಿಂದಾಗಿ ಇತರ ಅನಿಲಗಳಿಂದ ಆಮ್ಲಜನಕವನ್ನಷ್ಟೇ ಹೀರಿಕೊಳ್ಳುವ ಶಕ್ತಿಯನ್ನು ಅಲ್ವಿಲೊಯ್‌ಗಳು ಕಳೆದುಕೊಳ್ಳುತ್ತವೆ. ಹಾಗಾಗಿ, ಸೋಂಕಿನಿಂದ ಗಂಭೀರ ಸ್ಥಿತಿಗೆ ತಲುಪಿದವರಿಗೆ ಶೇ. 100ರಷ್ಟು ಶುದ್ಧ ಆಮ್ಲಜನಕವನ್ನು ಕೊಡಬೇಕಾಗುತ್ತದೆ. ಇದೇ ವೈದ್ಯಕೀಯ ಆಮ್ಲಜನಕ.

ಆಮ್ಲಜನಕ ಎಷ್ಟು ಬೇಕು? :

ಆರೋಗ್ಯವಂತರಿಗೆ  :

ಕೆಂಪುರಕ್ತ ಕಣದಲ್ಲಿರುವ ಹಿಮೋಗ್ಲೋಬಿನ್‌ 1.34 ಮಿ.ಲೀ.ನಷ್ಟು ಆಮ್ಲಜನಕ ಹೀರುತ್ತದೆ. ಆಕ್ಸಿಜನ್‌ ರಕ್ತದಲ್ಲಿ ಬೆರೆಯುವ ಪ್ರಮಾಣ ಶೇ.97ರಷ್ಟಿದ್ದಾಗ 100 ಮಿ.ಲೀ. ರಕ್ತಕ್ಕೆ 200 ಮಿ.ಲೀ. ಆಕ್ಸಿ ಬೇಕು.  ವಿಶ್ರಾಂತಿ ವೇಳೆಯಲ್ಲಿ ಆಮ್ಲಜನಕದ ಹೀರುವಿಕೆಯ ಪ್ರಮಾಣ ಪ್ರತೀ ನಿಮಿಷಕ್ಕೆ 250 ಮಿ.ಲೀ. ಇರುತ್ತದೆ.

ಕೋವಿಡ್  ಸೋಂಕಿತರಿಗೆ : ಸೋಂಕಿತರಿಗೆ ಪ್ರತೀ ನಿಮಿಷಕ್ಕೆ 4ರಿಂದ 5 ಲೀಟರ್‌ ಆಮ್ಲಜನಕ ಬೇಕು.  ಐಸಿಯುನಲ್ಲಿನ ಸೋಂಕಿತರಿಗೆ  ಪ್ರತೀ ನಿಮಿಷಕ್ಕೆ 30ರಿಂದ 80 ಲೀಟರ್‌ ಆಮ್ಲಜನಕ ಬೇಕು.

ಆಸ್ಪತ್ರೆಗಳಿಗೆ? :

100 ಬೆಡ್‌ಗಳ ಆಸ್ಪತ್ರೆಗೆ ಪ್ರತೀ ದಿನಕ್ಕೆ 150 ಜಂಬೋ ಸಿಲಿಂಡರ್‌ಗಳಷ್ಟು ಆಮ್ಲಜನಕೆ ಬೇಕು. ಅಂದರೆ ಪ್ರತೀ ದಿನ 1,050 ಕ್ಯು.ಮೀ.ನಷ್ಟು  ಅಥವಾ 10.50 ಲಕ್ಷ ಲೀ. ಆಮ್ಲಜನಕ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next