ಮಧುಗಿರಿ: ರಾಸಾಯನಿಕ ಗುಣಗಳಿಂದ ಕೂಡಿದ ಚಿಕಿತ್ಸಾ ವಿಧಾನಕ್ಕಿಂತ ಆಯುರ್ವೇದ ಚಿಕಿತ್ಸೆ ಬಡವರಿಗೆ ಉಚಿತವಾಗಿ ಸಿಗಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಹಳೆಯ ಪುರಭವನದಲ್ಲಿ ರಾಜ್ಯ ಆಯುಷ್ ಇಲಾಖೆ ಹಾಗೂ ಜಿಪಂ ಸಹಯೋಗದಿಂದ ನಡೆದ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಚಿಕಿತ್ಸೆಯಲ್ಲಿ ಮಾರಣಾಂತಿಕ ಕಾಯಿಲೆಗಳಿಗೆ ಔಷಧವಿದ್ದು, ಇದು ನಿಧಾನಗತಿಯಾದರೂ ಶಾಶ್ವತ ಪರಿಹಾರ ನೀಡುತ್ತದೆ. ಪಂಚಕರ್ಮ ಚಿಕಿತ್ಸೆ ಶ್ರೀಮಂತರಿಗಷ್ಟೇ ಲಭ್ಯವಿದ್ದು, ಈಗ ಮಧುಗಿರಿಯ ಬಡವರಿಗೂ ಲಭ್ಯವಾಗಲಿದೆ. ಆಯುಷ್ ಆಸ್ಪತ್ರೆ ಮೇಲ್ದರ್ಜೆಗೇರಿಸಲು 50 ಲಕ್ಷ ರೂ. ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ತಾಲೂಕಿನ ಬಡವರಿಗೆ ವರದಾನವಾಗದೆ. ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುವಂತೆ ವೈದ್ಯರು ಕ್ರಮವಹಿಸಬೇಕಿದೆ. ಉಳಿದಂತೆ ಎಲ್ಲ ಸೌಕರ್ಯ ಸರ್ಕಾರದಿಂದ ಕಲ್ಪಿಸಲಾಗುವುದು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಜೀವಮೂರ್ತಿ ಮಾತನಾಡಿ, ಆಸ್ಪತ್ರೆಯಲ್ಲಿ ಎಲ್ಲ ಬಡವರಿಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಆರ್ಯುವೇದದಿಂದ ಕಾಯಿಲೆಗೆ ಶಾಶ್ವತ ಪರಿಹಾರ ಸಿಗಲಿದೆ. ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಜನರಿಗೆ ಅನುಕೂಲ ಕಲ್ಪಿಸಲು ಆಯುಷ್ ಇಲಾಖೆ ಆರೋಗ್ಯ ಇಲಾಖೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಸುಸ್ಥಿತಿಯ ಆರೋಗ್ಯ ಪೂರ್ಣ ಸಮಾಜ ನಿರ್ಮಿಸುವ ಗುರಿ ಹೊಂದಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಎಂ.ಎಲ್.ಗಂಗರಾಜು ಮಾತನಾಡಿ, ಬೇರೆಡೆಗೆ ಮಂಜೂರಾಗಿದ್ದ ಈ ಯೋಜನೆ ಶಾಸಕರು ತಾಲೂಕಿಗೆ ತಂದಿದ್ದಾರೆ. ಹಿಂದೆ ಸಣ್ಣ ಕೊಠಡಿಯಲ್ಲಿದ್ದ ಇಲಾಖೆಯನ್ನು ಈ ಬೃಹತ್ ಕಟ್ಟಡದಲ್ಲಿ ಪ್ರಾರಂಭಿಕವಾಗಿ 10 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮಾರ್ಪಡಿಸಿದ್ದಾರೆ. ಈ ಕಾರ್ಯದಿಂದ ತಾಲೂಕಿನ ಜನತೆಗೆ ಉತ್ತಮ ಯೋಜನೆ ನೀಡಿದಂತಾಗಿದೆ ಎಂದರು.
ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್, ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರಬಾಬು, ನಾರಾಯಣ್, ನರಸಿಂಹಮೂರ್ತಿ, ಚಂದ್ರಶೇಖರ್, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕೇಬಲ್ ಸುಬ್ಬು, ಇಲಾಖೆ ವೈದ್ಯರಾದ ಗುರುಪ್ರಸಾದ್, ಪ್ರಭಾಕರ್, ಜಯಶ್ರೀ, ಭವ್ಯ, ಕಾಮರಾಜ್, ಅತೀಕ್ ಅಹ್ಮದ್, ವಸಂತ, ಶೋಭಾದೇವಿ, ಶೇಖರಯ್ಯ ಮಠಪತಿ, ಸಯೀದ ಪರ್ವೀನ್, ನಿಧಿ, ಮಾರುತಿ ನವಿಲೆ, ಇತರರು ಇದ್ದರು.
ಪಂಚಕರ್ಮದಂತ ದುಬಾರಿ ಚಿಕಿತ್ಸೆ ಮಧುಗಿರಿಯಲ್ಲಿ ಲಭ್ಯವಾಗಲಿದ್ದು, ಬಡವರಿಗೆ ದೇಸಿ ಪರಂಪರೆಯ ಆಸ್ಪತ್ರೆ ನೀಡಿದ ತೃಪ್ತಿಯಿದೆ. ಮುಂದೆ ಆಸ್ಪತ್ರೆ ಆಧುನೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಎಂ.ವಿ.ವೀರಭದ್ರಯ್ಯ, ಶಾಸಕ