ಪಟನಾ: ಸುಪ್ರೀಂ ಕೋರ್ಟ್ನಲ್ಲಿ ಅಯೋಧ್ಯೆಯ ರಾಮಮಂದಿರ ಕುರಿತಾದ ಪ್ರಕರಣದ ವಿಚಾರಣೆ ವಿಳಂಬ ಆಗುತ್ತಿರುವುದಕ್ಕೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಬರಿಮಲೆ ದೇಗುಲ, ಅಕ್ರಮ ಸಂಬಂಧ ಸಹಿತ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದ ವೇಗದಲ್ಲೇ ಇದೂ ನಿರ್ಧಾರ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನು ನಾನು ಕಾನೂನು ಸಚಿವನಾಗಿ ಹೇಳುತ್ತಿಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಿಗದಿಯಾಗಿದ್ದ ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠದಲ್ಲಿನ ಓರ್ವ ನ್ಯಾಯಮೂರ್ತಿ ಲಭ್ಯವಿಲ್ಲ ಎಂಬ ಕಾರಣಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಸಚಿವ ಪ್ರಸಾದ್ ಈ ಹೇಳಿಕೆ ನೀಡಿದ್ದಾರೆ.
ಶಬರಿಮಲೆ ಪ್ರಕರಣ, ನಗರ ನಕ್ಸಲರ ಪ್ರಕರಣ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಸರಕಾರ ರಚನೆ ಅವಕಾಶ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತ್ವರಿತವಾಗಿ ಕಾರ್ಯನಿರ್ವಹಿಸಿದೆ. ಆದರೆ ಅಯೋಧ್ಯೆ ಪ್ರಕರಣದಲ್ಲಿ ಕೋರ್ಟ್ ವಿಳಂಬ ನೀತಿ ಅನುಸರಿಸುತ್ತಿದೆ ಎಂದಿದ್ದಾರೆ. ಅಯೋಧ್ಯೆ ವಿಚಾರಣೆ ವಿಳಂಬಕ್ಕೆ ವಿವಿಧ ಬಿಜೆಪಿ ನಾಯಕರು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವೇ ದಿನಗಳ ಹಿಂದೆ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ ಕೂಡ ಮಾತನಾಡಿದ್ದರು. ನಮಗೆ ಅವಕಾಶ ನೀಡಿದರೆ 24 ಗಂಟೆಗಳಲ್ಲಿ ವಿವಾದ ಪರಿಹರಿಸುತ್ತೇವೆ ಎಂದು ಅವರು ಹೇಳಿದ್ದರು.
ತೀರ್ಪು ವಿಳಂಬಕ್ಕೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆಕ್ಷೇಪ
70 ವರ್ಷಗಳಿಂದ ಬಾಕಿ ಇರುವ ಪ್ರಕರಣ