Advertisement

ಅಯೋಧ್ಯೆ: ನವೆಂಬರ್‌ನಲ್ಲಿ ಇತ್ಯರ್ಥ?

12:06 PM Sep 02, 2019 | sudhir |

ಹೊಸದಿಲ್ಲಿ: ಅಯೋಧ್ಯೆ ಭೂವಿವಾದ ಕುರಿತ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಪ್ರತಿ ದಿನವೂ ನಡೆಯುತ್ತಿದ್ದು, ನವೆಂಬರ್‌ನಲ್ಲಿ ತೀರ್ಪು ಹೊರಬೀಳುವ ನಿರೀಕ್ಷೆ ಮೂಡಿದೆ. ಆ.6ರಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಪ್ರಮುಖ ಮೂರು ದಾವೆದಾರರ ಪೈಕಿ ಇಬ್ಬರ ವಾದ ಈಗಾಗಲೇ ಮುಕ್ತಾಯವಾಗಿದೆ. ಇನ್ನು ಸುನ್ನಿ ವಕ್ಫ್ ಮಂಡಳಿ ಮಾತ್ರ ತನ್ನ ವಾದ ಮಂಡಿಸಬೇಕಿದೆ. ವಿಚಾರಣೆ ನಡೆಸುತ್ತಿರುವ ಸಿಜೆಐ ರಂಜನ್‌ ಗೊಗೋಯ್‌ ನವೆಂಬರ್‌ನಲ್ಲಿ ನಿವೃತ್ತರಾಗಲಿದ್ದು, ಅಷ್ಟರೊಳಗೆ ತೀರ್ಪು ನೀಡಲಿದ್ದಾರೆ ಎಂದು ಊಹಿಸಲಾಗಿದೆ.

Advertisement

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ನ್ಯಾ| ಎಸ್‌.ಎ.ಬೊಬೆx, ಡಿ.ವೈ.ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌.ಅಬ್ದುಲ್‌ ನಜೀರ್‌ ಅವರನ್ನೊಳಗೊಂಡ ನ್ಯಾಯಪೀಠ ಈವರೆಗೆ ವಾದ ಆಲಿಸಿದೆ. ರಾಮ್‌ ಲಲ್ಲಾ, ನಿರ್ಮೊಹಿ ಅಖಾಡ, ಅಖೀಲ ಭಾರತ ರಾಮ ಜನ್ಮಸ್ಥಾನ ಪುನರುತ್ಥಾನ ಸಮಿತಿ, ಹಿಂದೂ ಮಹಾಸಭೆಯ ಎರಡು ವಿಭಾಗಗಳು, ಶಿಯಾ ವಕ್ಫ್ ಮಂಡಳಿ, 1951ರಲ್ಲಿ ಮೊದಲ ಬಾರಿಗೆ ದಾವೆ ಹೂಡಿದ ಗೋಪಾಲ್‌ ಸಿಂಗ್‌ ವಿಶಾರದ ಈಗಾಗಲೇ ವಾದ ಮಂಡಿಸಿದ್ದಾರೆ.

ವಿವಾದಿತ 2.77 ಎಕರೆ ಭೂಮಿಯನ್ನು ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ರಾಮ್‌ ಲಲ್ಲಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಸಮಾನವಾಗಿ ಹಂಚಿತ್ತು. ಈ ಪೈಕಿ ರಾಮ್‌ ಲಲ್ಲಾ ಮತ್ತು ನಿರ್ಮೋಹಿ ಅಖಾಡ ವಾದ ಪೂರ್ಣಗೊಳಿಸಿವೆ. ಇನ್ನು ಸುನ್ನಿ ವಕ್ಫ್ ಮಂಡಳಿ ವಾದ ಬಾಕಿ ಇದ್ದು, ಇದರ ಪರ ವಕೀಲ ರಾಜೀವ್‌ ಧವನ್‌ 20 ದಿನಗಳವರೆಗೆ ವಾದ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಷ್ಟಾದರೂ, ನ.17ರಲ್ಲಿ ನಿವೃತ್ತರಾಗಲಿರುವ ನ್ಯಾ.ಗೊಗೋಯ್‌ಗೆ ನಿವೃತ್ತಿಗೂ ಮುನ್ನ ತೀರ್ಪು ನೀಡಲು ಸಾಕಷ್ಟು ಕಾಲಾವಕಾಶ ಇರುತ್ತದೆ. ಹೀಗಾಗಿ ನಿವೃತ್ತಿಗೂ ಮೊದಲು ಈ ತೀರ್ಪು ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next