Advertisement

ರಾಮಜನ್ಮ ಭೂಮಿ ವಿವಾದ: ಹಲವು ಸಂಧಾನ ಪ್ರಯತ್ನಗಳು ವಿಫಲವಾಗಿದ್ದವು

09:47 AM Nov 10, 2019 | Hari Prasad |

ಶತಮಾನಗಳಿಂದ ದೇಶದ ಎರಡು ಧರ್ಮದ ಜನರ ನಡುವೆ ವಿವಾದದ ಕೇಂದ್ರವಾಗಿದ್ದ ಮತ್ತು ದೇಶದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಕಾಲಕಾಲಕ್ಕೆ ಪರಿಣಾಮವನ್ನು ಬೀರುತ್ತಾ ಬಂದಿದ್ದ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸುವಲ್ಲಿ ನ್ಯಾಯಾಲಯದ ಹೊರಗೆ ಹಲವಾರು ಪ್ರಯತ್ನಗಳು ನಡೆದಿತ್ತು.

Advertisement

ಈ ಹಿಂದೆ ಸಾಕಷ್ಟು ಬಾರಿ ವಿವಾದಿತ ಸ್ಥಳವನ್ನು ಮಧ್ಯಸ್ಥಿಕೆ ಅಥವಾ ಮಾತುಕತೆಯ ಮೂಲಕ ಪರಿಹರಸಿಲು ಪ್ರಯತ್ನಗಳು ನಡೆದಿದ್ದವು. ಆದರೆ ಈ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಬಳಿಕ ಇದು ಮಾತುಕತೆಯಿಂದ ಬಗೆ ಹರಿಯುವ ವಿಷಯವಲ್ಲ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್‌ 40 ದಿನಗಳ ಕಾಲ ಪ್ರತೀ ದಿನ ವಿಚಾರಣೆ ನಡೆಸುವ ಮೂಲಕ ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ನೀಡುವಲ್ಲಿ ಸಫಲವಾಗಿದೆ. ರಾಮಜನ್ಮಭೂಮಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವಲ್ಲಿ ಈ ಹಿಂದೆ ಏನೆಲ್ಲಾ ಪ್ರಯತ್ನಗಳು ನಡೆದಿದ್ದವು ಎಂಬ ಮಾಹಿತಿ ಇಲ್ಲಿದೆ.

ಅಲಹಾಬಾದ್‌ ಹೈಕೋರ್ಟ್‌ ಮಧ್ಯಸ್ಥಿಕೆ
1992ರಲ್ಲಿ ವಿವಾದಿತ ಜಾಗದಲ್ಲಿದ್ದ ಬಾಬರಿ ಮಸೀದಿಯನ್ನು ಕೆಡವಿದ ಬಳಿಕ ಈ ಪ್ರಕರಣ ಕಾವು ಪಡೆದುಕೊಳ್ಳತೊಡಗಿತು. ಇದನ್ನು ತಿಳಿಗೊಳಿಸುವ ಸಲುವಾಗಿ ಅಲಹಬಾದ್‌ ಹೈಕೋರ್ಟ್‌ ನಿರ್ದೇಶನದಂತೆ ಲಕ್ನೋದಲ್ಲಿ 2010ರ ಅಕ್ಟೋಬರ್ 03ರಂದು ಸಂಧಾನ ಮಾತುಕತೆಗಳು ನಡೆದಿದ್ದವು.

ಆದರೆ ಎರಡೂ ಪಕ್ಷಗಳ ನಡುವೆ ಸಮನ್ವಯ ಮೂಡದ ಕಾರಣ ಸೆ. 23ರ ಒಳಗೆ ಸಂಧಾನವನ್ನು ಪೂರ್ಣಗೊಳಿಸುವಂತೆ ಹೈಕೋರ್ಟ್‌ಗೆ ಸರ್ವೋಚ್ಚ ನ್ಯಾಯಾಲಯ ನಿರ್ದೆಶನ ನೀಡಿತ್ತು. ಎರಡೂ ಕಡೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಂಧಾನ ಮುರಿದು ಬಿದ್ದಿತ್ತು. ನಿವೃತ್ತ ಅಧಿಕಾರಿ ರಮೇಶ್‌ ಚಂದ್ರ ತ್ರಿಪಾಠಿ ಮಧ್ಯಸ್ಥಿಕೆ ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಮುಖ್ಯನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ಮಧ್ಯಸ್ಥಿಕೆ
ಅಯೋಧ್ಯೆಯ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವಂತೆ ಹೈ ಕೋರ್ಟ್‌ಗೆ ಸಾರ್ವಜನಿಕರಿಂದ ಮನವಿಗಳು ಹೆಚ್ಚಾಗತೊಡಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ಅವರೇ ಸ್ವತಃ ಮಧ್ಯಸ್ಥಿಕೆ ವಹಿಸಲು ಮುಂದಾದರು. ಆದರೆ ಈ ಮಾತುಕತೆಗಳೂ ಫಲ ಕಾಣಲಿಲ್ಲ.

Advertisement

ಹಲವು ನಾಯಕರ ಮಧ್ಯಸ್ಥಿಕೆ
ಅಯೋಧ್ಯೆ ವಿವಾದ ದೇಶದಲ್ಲಿ ಹಲವು ರಾಜಕೀಯ ಹಾಗೂ ಧಾರ್ಮಿಕ ಚರ್ಚೆಗಳಿಗೆ ಕಾರಣವಾಗಿದೆ. ಬ್ರಿಟಿಷರ ಕಾಲದಲ್ಲೂ ಸಹ ಈ ಸಮಸ್ಯೆ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲಗೊಂಡಿತ್ತು. ನ್ಯಾಯಾಲಯದ‌ ಹೊರಗೂ ಹಿಂದೂ ಮತ್ತು ಮುಸ್ಲಿಂ ನಾಯಕರ ನಡುವೆ ಬಿರುಸಿನ ಸಂಧಾನಗಳು ನಡೆಯುತ್ತಿದ್ದವು.

1990: ದಾವೇದಾರರ ನಡುವೆ ಸಂಧಾನ ನಡೆಸಲು ಮಾಜಿ ಪ್ರಧಾನಿ ಚಂದ್ರಶೇಖರ ಅವರು ಮುಂದೆ ಬಂದಿದ್ದರು. ಉಭಯ ಕಡೆಯ ನಾಯಕರಲ್ಲಿ ಒಮ್ಮತ ಮೂಡದ ಕಾರಣ ಈ ಸಂಧಾನ ವಿಫ‌ಲವಾಗಿತ್ತು.

1992: ಅಯೋಧ್ಯೆಯಲ್ಲಿ ವಿವಾದಿತ ಜಾಗದಲ್ಲಿದ್ದ ಬಾಬರಿ ಮಸೀದಿಯನ್ನು ಕೆಡವಿದ ಬಳಿಕ ಆಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರು ಹಿಂದೂ ಹಾಗೂ ಮುಸ್ಲಿಂ ನಾಯಕರ ಮಧ್ಯೆ ಸಂಧಾನವೊಂದನ್ನು ಏರ್ಪಡಿಸಲು ನಿರ್ಧರಿಸಿ, ಇದಕ್ಕೆ ನಿವೃತ್ತ ನ್ಯಾಯಾಧೀಶ ಎಂ .ಎಸ್‌. ಲಿಬರನ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಆದರೆ ಹಲವಾರು ಕಾರಣಗಳಿಂದ ಈ ಸಂಧಾನ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿತ್ತು.

2001: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರೂ ಸಹ ಈ ವಿವಾದವನ್ನು ಇತ್ಯರ್ಥಗೊಳಿಸಲು  ಪ್ರಯತ್ನಿಸಿದ್ದರು. ಉಭಯ ಪಕ್ಷಗಳ ಮುಖಂಡರನ್ನು ವಾಯಪೇಯಿ ಅವರು ಸ್ವತಃ ತಮ್ಮ ಕಚೇರಿಗೇ ಆಹ್ವಾನಿಸಿ ಮಾತುಕತೆಯ ಮೂಲಕ ಒಮ್ಮತ ಮೂಡಿಸಲು ಪ್ರಯತ್ನಿಸಿದ್ದರೂ ಅವರ ಈ ಪ್ರಯತ್ನ ಫಲ ನೀಡಿರಲಿಲ್ಲ.

2002: ಕಂಚಿ ಮಠಾಧೀಶರಾಗಿದ್ದ ಶ್ರೀ ಜಯೇಂದ್ರ ಸರಸ್ವತಿಯವರೂ ಸಂಧಾನಕ್ಕೆ ಪ್ರಯತ್ನಸಿ ವಿಫಲರಾಗಿದ್ದರು.

2003: ಶಂಕರಾಚಾರ್ಯರು ಉಭಯ ನಾಯಕರ ಮಧ್ಯೆ ಸಮಧಾನಕ್ಕಾಗಿ ವೇದಿಕೆ ಕಲ್ಪಿಸಿದ್ದರು. ಇದರಲ್ಲಿ ‘ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌’ ಕೂಡ ಭಾಗಿಯಾಗಿತ್ತು. ಆದರೆ ಅವರ ಮಾತುಕತೆ ಮುರಿದು ಬಿದ್ದಿತ್ತು.

2004: ಟಿಬೆಟಿಯನ್‌ ಧರ್ಮಗುರು ಹಾಗೂ ನೊಬೆಲ್‌ ಪುರಸ್ಕೃತ ದಾಲಾಯಿ ಲಾಮಾ ಅವರೂ ಪ್ರಯತ್ನಿಸಿದ್ದರೂ ಯಶಸ್ಸು ಕಾಣಲಿಲ್ಲ.

2014: ಮೊಹಮ್ಮದ್‌ ಹಶೀಮ್‌ ಆನ್ಸಾರಿ ಅವರು ಪ್ರರಣಕ್ಕೆ ತಾರ್ಕಿಕ ಅಂತ್ಯ ಹಾಡುವ ಸಲುವಾಗಿ ‘ಎ ಫ್ರೆಶ್‌ ಸ್ಟಾರ್ಟ್‌’ ಹೆಸರಿನಲ್ಲಿ ಹೊಸದಾಗಿ ಮಾತುಕತೆಯ ಮುಂದಾಳತ್ವವನ್ನು ವಹಿಸಿದ್ದರು. ಅನ್ಸಾರಿ ಅವರು ಈ ಪ್ರಕರಣದಲ್ಲಿ ಭಾಗಿದಾರರು ಹಾಗೂ ದಾವೆದಾರರು ಹೌದು. ಆದರೆ ಅನ್ಸಾರಿ ಅವರ ಪ್ರಯತ್ನವೂ ಫಲಕಾರಿಯಾಗಿರಲಿಲ್ಲ. ತನ್ನ ಇಳಿ ವಯಸ್ಸಿನಲೂ ಮಾತುಕತೆಗೆ ಹಲವು ಬಾರಿ ಮುಂದಾಗಿದ್ದರು. 96ನೇ ವಯಸ್ಸಿನಲ್ಲಿ ಅನ್ಸಾರಿ ಅವರು ನಿಧನ ಹೊಂದುವವರೆಗೂ ಇವರು ಈ ಸಮಸ್ಯೆಯನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತಲೇ ಇದ್ದರು.

2017: ಪ್ರಸಿದ್ಧ ಅಧ್ಯಾತ್ಮ ಗುರು ರವಿಶಂಕರ ಗುರೂಜಿ ಅವರು 3 ಅಂಶ ಸೂತ್ರದ ಮೂಲಕ ಅಯೋಧ್ಯೆ ಪ್ರಕರಣಕ್ಕೆ ಮಧ್ಯಸ್ಥಿಕೆ ವಹಿಸಲು ನಿರ್ಧರಿಸಿದ್ದರು. ಆದರೆ ಅವರ ಪರಿಹಾರ ಸೂತ್ರವನ್ನು ಉಭಯ ಸಮುದಾಯಗಳು ಒಪ್ಪದೇ ಇದ್ದ ಕಾರಣಕ್ಕೆ ಈ ಮಾತುಕತೆ ಅರ್ಧದಲ್ಲೇ ಮುರಿದುಬಿದ್ದಿತ್ತು.

2018: ಕಾನೂನಿನ ಚೌಕಟ್ಟಿನ ಹೊರಗೆ ಮಾತುಕತೆಯ ಮೂಲಕ ಜನ್ಮಭೂಮಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಸ್ತಾವನೆಯನ್ನು ಆಲ್‌ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೌಲಾನ ಸಲ್ಮಾನ್‌ ಅವರು ಮುಂದಿಟ್ಟಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಅವರು ರವಿಶಂಕರ ಗುರೂಜಿ ಅವರನ್ನೂ ಸಹ ಭೇಟಿಯಾಗಿದ್ದರು. ಅದರೆ ಸಮನ್ವಯ ಕೊರತೆಯಿಂದಾಗಿ ಈ ಮಾತುಕತೆಗಳು ನಡೆಯಲೇ ಇಲ್ಲ.

2019: ದೀರ್ಘಕಾಲದಿಂದ ಬಗೆಹರಿಯದೇ ಉಳಿದಿದ್ದ ಈ ಸೂಕ್ಷ್ಮ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಮೂರ್ತಿ ಕಲೀಫುಲ್ಲಾ, ಅಧ್ಯಾತ್ಮ ಗುರು ರವಿಶಂಕರ್‌ ಮತ್ತು ಹಿರಿಯ ವಕೀಲ ಶ್ರೀರಾಮ್‌ ಪಂಚು ಮೊದಲಾದವರನ್ನು ಒಳಗೊಂಡ ಮೂರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರಿಂ ಕೋರ್ಟ್‌ ರಚಿಸಿತ್ತು. ಆದರೆ ಇವರಿಂದಲೂ ಈ ಪ್ರಕರಣವನ್ನು ಸೌಹಾರ್ಧ ಮಾತುಕತೆಯ ಮೂಲಕ ಬಗೆಹರಿಸಲು ಸಾಧ್ಯವಾಗಿರಲಿಲ್ಲ.

ಆ ಬಳಿಕವಷ್ಟೇ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಅಯೋಧ್ಯೆ ಪ್ರಕರಣವನ್ನು ಪ್ರತೀದಿನ ವಿಚಾರಣೆ ನಡೆಸುವ ತೀರ್ಮಾನಕ್ಕೆ ಬಂದಿತ್ತು. ಹೀಗೆ ಒಟ್ಟು 40 ದಿನಗಳ ಕಾಲ ಸುದೀರ್ಘ ವಿಚಾರಣೆಯನ್ನು ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಪಂಚ ಸದಸ್ಯ ಪೀಠ ಇಂದು ಸರ್ವಾನುಮತದಿಂದ ತನ್ನ ಐತಿಹಾಸಿಕ ತೀರ್ಪನ್ನು ಪ್ರಕಟಿಸಿ ದಶಕಗಳ ಕಾಲದ ಈ ವಿವಾದಕ್ಕೊಂದು ತಾರ್ಕಿಕ ಅಂತ್ಯವನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next