Advertisement

ಶೌಚಾಲಯ ಬಳಕೆ ಜಾಗೃತಿ ಮೂಡಿಸಿ

11:07 AM Nov 17, 2019 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ನಿರ್ಮಿಸಿದ ವೈಯಕ್ತಿಕ ಹಾಗೂ ಸಮೂಹ ಶೌಚಾಲಯಗಳ ಬಳಕೆಯಾಗುತ್ತಿಲ್ಲ. ಈ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಶೌಚಾಲಯಗಳನ್ನು ಕಡ್ಡಾಯವಾಗಿ ಬಳಸುವಂತೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಸೂಚಿಸಿದರು.

Advertisement

ಜಿಪಂ ಸಭಾ ಭವನದಲ್ಲಿ ಶನಿವಾರ ನಡೆದ ಪ್ರಸಕ್ತ ಸಾಲಿನ ತ್ತೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಚ್ಛ ಭಾರತ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 10,764 ಗುರಿ ಇದ್ದು, ಈ ಪೈಕಿ 3631 ನಿರ್ಮಿಸಲಾಗಿದೆ. 7,133 ಬಾಕಿ ಉಳಿದಿದೆ. 689.78 ಲಕ್ಷ ಅನುದಾನದ ಪೈಕಿ 466.85 ಲಕ್ಷ ಖರ್ಚು ಮಾಡಲಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ವಿ.ಎಸ್‌. ಹಿರೇಮಠ ತಿಳಿಸಿದರು. ಶೌಚಾಲಯ ನಿರ್ಮಿಸಿಕೊಂಡವರು ಸಂಪೂರ್ಣವಾಗಿ ಬಳಕೆಯಾಗುವಂತೆ ಮಾಡಬೇಕು. ಸಮುದಾಯ ಶೌಚಾಲಯ ನಿರ್ಮಿಸಿದಲ್ಲಿ ಅವುಗಳ ನಿರ್ವಹಣೆಯಾಗಬೇಕು. ಪಂಚಾಯತಿ ಹಂತದಲ್ಲಿ ಪ್ರತಿಯೊಂದು ಮನೆಗಳಲ್ಲಿ ಶೌಚಾಲಯಗಳ ಇದ್ದ ಬಗ್ಗೆ ಹಾಗೂ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಗದ್ದಿಗೌಡರ ತಿಳಿಸಿದರು.

ಸರಕಾರ ದೇಶದ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸಿದ್ದು, ಆ ಯೋಜನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬರದೇ ಇದ್ದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಂದು ಯೋಜನೆಗಳ ಲಾಭ ಫಲಾನುಭವಿಗಳಿಗೆ ದೊರೆತಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಲು ತಿಳಿಸಿದರು.

ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ, ಸಮುದಾಯ ಶೌಚಾಲಯಕ್ಕೆ ನೀರು ಹಾಗೂ ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದರೆ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ಸಭೆಗೆ ತಿಳಿಸಿದಾಗ ಪ್ರತಿಯೊಬ್ಬ ಸಭೆಯಲ್ಲಿ ಉಪಸ್ಥಿತರಿದ್ದ ತಾಪಂ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಶೌಚಾಲಯಗಳಿಲ್ಲದ ಮನೆಗಳಿಗೆ ಶೌಚಾಲಯ ನಿರ್ಮಿಸುವುದು. ಪ್ರತಿ ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವುದು, ಗುಂಪು ಶೌಚಾಲಯಗಳನ್ನು ಕಡ್ಡಾಯವಾಗಿ ಬಳಕೆಯಾಗುವಂತೆ ಮಾಡಿ ಮಾದರಿ ಸದಸ್ಯರಾದಲ್ಲಿ ಸಹಕಾರ ನೀಡಲಾಗುವುದು ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

Advertisement

ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಶ್ರಯ ವಸತಿ ಯೋಜನೆಯಡಿ 9226 ಮನೆಗಳ ಪೈಕಿ 3797 ಪೂರ್ಣಗೊಂಡಿದ್ದು, 2676 ಮನೆಗಳು ಇನ್ನು ಆರಂಭಿಸಿಲ್ಲ. ಶೀಘ್ರವೇ ಪೂರ್ಣಗೊಳಿಸಲು ಸಂಸದ ಗದ್ದಿಗೌಡರ ಸೂಚಿಸಿದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿಗೆ 3097 ಹೆಕ್ಟೇರ್‌ ಪ್ರದೇಶಕ್ಕೆ ಅಳವಡಿಸಲಾಗಿ ಶೇ. 41 ಪ್ರಗತಿ ಸಾಧಿಸಲಾಗಿದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಯಡಿ ಈಗಾಗಲೇ ಸಹಾಯಧನ ರೈತರ ಖಾತೆಗಳಿಗೆ ಜಮಾ ಆಗುತ್ತಿದೆ. ವಿವಿಧ ಬೆಳೆಗಳಿಗೆ ವಿಮೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 28,437 ರೈತರು ವಿಮೆಗೆ ನೋಂದಣಿ ಮಾಡಿಸಿದ್ದಾರೆ ಎಂದು ಜಂಟಿ ಕೃಷಿ ನಿದೇರ್ಶಕಿ ಚೇತನಾ ಪಾಟೀಲ ಸಭೆಗೆ ತಿಳಿಸಿದರು.

ಆಹಾರ ಇಲಾಖೆಯಡಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 1,06,486 ಕುಟುಂಬಗಳಿಗೆ ಅನಿಲ ಸಂಪರ್ಕ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 36,625 ಎಎವೈ, 3,71,451 ಬಿಪಿಎಲ್‌ ಹಾಗೂ 53,869 ಎಪಿಎಲ್‌ ಸೇರಿ ಒಟ್ಟು 4,61,945 ಪಡಿತರ ಚೀಟಿ ನೀಡಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 4,08,076 ಪಡಿತರ ಚೀಟಿಗಳಿಗೆ ಶೇ. 100 ಆಧಾರ ಸೀಡಿಂಗ್‌ ಪೂರ್ಣಗೊಳಿಸಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ತಿಳಿಸಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next