Advertisement

ಹೊಸ ರೋಟಾ ವೈರಸ್‌ ಲಸಿಕೆ ಅರಿವು ಅಗತ್ಯ

10:05 AM Jul 22, 2019 | Suhan S |

ಬಾಗಲಕೋಟೆ: ಮಕ್ಕಳಲ್ಲಿ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಲ್ಲಿ ರೋಟಾ ವೈರಸ್‌ ಎನ್ನುವ ಹೊಸ ಲಸಿಕೆಯನ್ನು ಮುಂಬರುವ ದಿನಗಳಿಂದ ನೀಡಲಾಗುತ್ತಿದ್ದು, ಈ ಲಸಿಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಜರುಗಿದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಹೊಸ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಚಾರಂದೋಲನ ಕಾರ್ಯಕ್ರಮ, ಭಿತ್ತಿಪತ್ರ, ಕರಪತ್ರ ಹಾಗೂ ಬ್ಯಾನರ್‌ಗಳ ಮೂಲಕ ಆಕರ್ಷಕವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮುದ್ರಿಸಿ ವಿತರಿಸಲು ಸೂಚಿಸಿದರು.

ಡಬ್ಲುಎಚ್ಒ ಸಂಸ್ಥೆಯ ಎಸ್‌ಎಂಒ ಡಾ| ಮುಕುಂದ ಗಲಗಲಿ, ಪರಿಷ್ಕೃತ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ವಯೋಮಾನಕ್ಕನುಗುಣವಾಗಿ ಮಕ್ಕಳಿಗೆ ನೀಡಲಾಗುವ ಲಸಿಕೆಗಳ ಬಗ್ಗೆ ವಿವರಿಸಿದರು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಪ್ರಾರಂಭವಾದ ಲಸಿಕೆಯನ್ನು 10 ಮತ್ತು 16ನೇ ವಯಸ್ಸಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡಲಾಗುತ್ತಿದೆ. 2014 ರಿಂದ 2019ವರೆಗೆ ಒಟ್ಟು 116 ಸಂಶಯಾಸ್ಪದ ಡಿಪ್ತೀರಿಯಾ (ಗಂಟಲುಮಾರಿ) ಪ್ರಕರಣಗಳು ವರದಿಯಾಗಿವೆ ಎಂದರು.

ಕಳೆದ ಸಾಲಿನಲ್ಲಿ 48 ಪ್ರಕರಣಗಳು ವರದಿಯಾದ ಹಿನ್ನ್ನೆಲೆಯಲ್ಲಿ ಮಕ್ಕಳಿಗೆ ಬರುವ ಗಂಟಲು ಮಾರಿ ರೋಗವನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಮಾರಕವಾದ ಡಿಪ್ತೀರಿಯಾ ರೋಗವನ್ನು ತಡೆಗಟ್ಟಲು ಮತ್ತು ಮಕ್ಕಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಟಿಡಿ ಲಸಿಕೆಯನ್ನು ನೀಡುವ ಕಾರ್ಯ ಪ್ರಾರಂಭಿಸಲಾಯಿತು. ಇದರಿಂದ 2019ನೇ ಸಾಲಿನಲ್ಲಿ ಇಲ್ಲಿಯವರೆಗೆ 15 ಪ್ರಕರಣಗಳು ಮಾತ್ರ ವರದಿಯಾಗಿರುತ್ತವೆ ಎಂದು ತಿಳಿಸಿದರು.

Advertisement

ರೋಟಾ ವೈರಸ್‌ ಬೇಧಿಯಂತಹ ಮಕ್ಕಳಲ್ಲಿ ಮರಣ ಸಂಭವಿಸುವ ಸಾಧ್ಯತೆ ಅಧಿಕ ಪ್ರಮಾಣದಲ್ಲಿದ್ದು, ಇದನ್ನು ತಡೆಗಟ್ಟಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ 6, 10 ಮತ್ತು 14ನೇ ವಾರದಲ್ಲಿ ಜನಿಸಿದ ಎಲ್ಲ ಮಕ್ಕಳಿಗೆ ರೋಟಾ ವೈರಸ್‌ ಲಸಿಕೆಯನ್ನು ಬಾಯಿ ಮೂಲಕ ಪ್ರತಿ ಮಗುವಿಗೆ ಒಂದು ಡೋಜ್‌ ನೀಡಲಾಗುವುದು. ರೋಟಾ ವೈರಸ್‌ ಲಸಿಕೆ ನೀಡುವ ಕುರಿತು ಆರೋಗ್ಯ ಇಲಾಖೆಯಲ್ಲಿರುವ ಎಲ್ಲ ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹಂತ ಹಂತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಕ್ಷಯರೋಗ ಪತ್ತೆ; ಚಿಕಿತ್ಸೆ ಆಂದೋಲನ: ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನವು ಜುಲೈ 15ರಿಂದಲೇ ಪ್ರಾರಂಭಿಸಲಾಗಿದ್ದು, ಈ ಆಂದೋಲನ 27ರವರೆಗೆ ನಡೆಯಲಿದೆ. ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕ್ಷಯ ರೋಗದ ಸಮೀಕ್ಷೆಯಲ್ಲಿ ಕ್ಷಯ ರೋಗ ಪತ್ತೆ ಮಾಡುತ್ತಿದ್ದಾರೆ. ಇದರ ಜೊತೆಗೆ ಕ್ಷಯ ರೋಗದ ಚಿಕಿತ್ಸೆಯನ್ನು ಉಚಿತವಾಗಿ ದೊರೆಯುವ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಈ ರೋಗದ ನಿಯಂತ್ರಣಕ್ಕಾಗಿ ಬಾಗಲಕೋಟೆ ತಾಲೂಕಿನಲ್ಲಿ 344, ಹುನಗುಂದ 193, ಜಮಖಂಡಿ 245, ಮುಧೋಳ 299, ಬಾದಾಮಿ 187 ಹಾಗೂ ಬೀಳಗಿ 74 ಸೇರಿ ಒಟ್ಟು 1342 ರೋಗಿಗಳಿಒಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅನಂತ ದೇಸಾಯಿ ಸಭೆಗೆ ತಿಳಿಸಿದರು.

ತಾಯಂದಿರ ಮರಣ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 5 ಜನ ಮಹಿಳೆಯರು ಮರಣ ಹೊಂದಿರುವುದಾಗಿ ಸಭೆಗೆ ತಿಳಿಸಿದಾಗ ಈ ಕುರಿತು ಜಿಲ್ಲಾಧಿಕಾರಿಗಳು ತಾಯಿ ಮರಣ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೇ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ತಾಯಿ ಮರಣ ಸೊನ್ನೆಗೆ ತರಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಕೀಟ ಜನ್ಯ ರೋಗಗಳ ನಿಯಂತ್ರಣ:ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಈಗಾಗಲೇ ಜನವರಿಯಿಂದ ಜೂನ್‌-2019ರವರೆಗೆ ಒಟ್ಟು 2,27,074 ಜನರ ರಕ್ತ ಪರೀಕ್ಷೆ ಮಾಡಿದ್ದು, ಅದರಲ್ಲಿ 14 ಜನರಿಗೆ ಮಲೇರಿಯಾ ಖಚಿತ ಪ್ರಕರಣಗಳು ಕಂಡು ಬಂದಿವೆ. ಅವರಿಗೆ ಚಿಕಿತ್ಸೆ ನೀಡಲಾಗಿ ಸಂಪೂರ್ಣ ಗುಣಪಡಿಸಲಾಗಿದೆ. 320 ಜನರ ರಕ್ತ ಪರೀಕ್ಷೆ ಮಾಡಲಾಗಿ ಅದರಲ್ಲಿ 34 ಜನರಿಗೆ ಖಚಿತವಾಗಿದೆ. ಮತ್ತು ಚಿಕುನ್‌ ಗುನ್ಯಾಗೆ ಸಂಬಂಧಿಸಿದಂತೆ 238 ಜನರನ್ನು ಪರೀಕ್ಷಿಸಲಾಗಿ ಅದರಲ್ಲಿ 49 ಜನರಿಗೆ ಖಚಿತವಾಗಿ ಪ್ರಕರಣಗಳಾಗಿವೆ. ಫೈಲೇರಿಯಾಗೆ ಒಟ್ಟು 54109 ಜನರ ರಕ್ತ ಪರೀಕ್ಷೆಯಲ್ಲಿ 4 ಜನರಿಗೆ ಆನೇಕಾಲು ರೋಗ ಖಚಿತಪಟ್ಟ ಬಗ್ಗೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಜಯಶ್ರೀ ಎಮ್ಮಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಗರಿಮಾ ಪಂವಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ, ಜಿಲ್ಲಾ ಟಿಬಿ ನಿಯಂತ್ರಣಾಧಿಕಾರಿ ಡಾ|ಪಿ.ಎ.ಹಿಟ್ನಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಕುಸುಮಾ ಮಾಗಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪವಾಡೆಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next