Advertisement

ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಜಾಗೃತಿ ಜಪ

06:54 AM Jan 24, 2019 | |

ಕೊಪ್ಪಳ: ಶ್ರೀಗವಿಸಿದ್ಧೇಶ್ವರ ಜಾತ್ರೆ ಸಾಮಾಜಿಕ, ವೈಚಾರಿಕ ಜಾಗೃತಿಗೆ ಮುನ್ನುಡಿ ಬರೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಾತ್ರೆಯಲ್ಲಿ ತಲೆ ಎತ್ತಿರುವ ಮಿಠಾಯಿ, ಆಟಿಕೆ ಸಾಮಗ್ರಿ ಅಂಗಡಿಗಳ ಮಾಲಿಕರು ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

Advertisement

ಜಾತ್ರೆಯಲ್ಲಿ ಮಿಠಾಯಿ ಅಂಗಡಿಗಳ ಮಾಲಕರು ಜಾಗೃತಿ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಿದ್ದಲ್ಲದೇ, ಅಂಗಡಿಯಲ್ಲಿ ತಿಳಿವಳಿಕೆ ಮೂಡಿಸುವ ಫಲಕಗಳನ್ನು ಹಾಕಿಕೊಂಡಿದ್ದಾರೆ.

“ಓ ಬನ್ನಿ ನನ್ನ ದೇಶಬಾಂಧವರೇ ರೈತ ಸಾಮ್ರಾಜ್ಯ ಕಟ್ಟೋಣ ಬನ್ನಿ’, ಅಂಧರಿಗೆ ನೀಡಿದರೇ ನಿಮ್ಮ ದೃಷ್ಟಿ ಆಗುವುದು ಸುಂದರ ಲೋಕ ಸೃಷ್ಟಿ, ಡಾ| ಸ್ವಾಮಿನಾಥನ್‌ ಆಯೋಗ ಶಿಪಾರಸು ಜಾರಿಗೊಳಿಸಿ’, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ, ವಿಜ್ಞಾನವನ್ನು ಬೆಂಬಲಿಸಿ ಭಾರತವನ್ನು ಬೆಳಗಿಸಿ, ಅಜ್ಞಾನದಿಂದ ಸುಜ್ಞಾನದಡೆಗೆ ನಡೆಸುವ ಕೊಪ್ಪಳ ಗವಿಮಠಕ್ಕೆ ಕೋಟಿ ಕೋಟಿ ನಮಸ್ಕಾರಗಳು, ಹೀಗೆ ಹತ್ತು ಹಲವು ಸಂದೇಶಗಳನ್ನು ಮಿಠಾಯಿ, ಸಿಹಿ ಪದಾರ್ಥಗಳ ಮೂಲಕ ಬರೆದು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮಹತ್ವದ ಸಂದೇಶವನ್ನು ಸಾರುವ ಮೂಲಕ ತಮಗಿರುವ ಜವಾಬ್ದಾರಿಯನ್ನು ಮೆರೆದಿರುವುದು ಜಾತ್ರೆಯಲ್ಲಿ ಆಕರ್ಷಕವೆನಿಸಿದೆ.

ಗವಿಮಠದಿಂದ ಪ್ರತಿ ವರ್ಷ ನಾನಾ ಸಾಮಾಜಿಕ ಜಾಗೃತಿ, ಪರಿವರ್ತನೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ವ್ಯಾಪಾರಿಗಳ ಮೇಲೂ ಪ್ರಭಾವ ಬೀರಿದಂತಿದೆ. ಜನರು ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಸಂದೇಶ ಕಂಡು ತಾವೂ ಬದಲಾಗುತ್ತೇವೆ ಎನ್ನುವ ಶಪಥ ಮಾಡುತ್ತಿದ್ದಾರೆ.

ಜ್ಞಾನ ಪೀಠ ಪ್ರಶಸ್ತಿ ಪಡೆದ 8 ಜನ ಸಾಹಿತಿಗಳ ಭಾವಚಿತ್ರಗಳನ್ನು ಬಿಡಿಸುವ ಮೂಲಕ ಕನ್ನಡ ಸಾಹಿತ್ಯದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳ ಈ ಹೊಸ ಪ್ರಯತ್ನ ಜಾತ್ರೆಯಲ್ಲಿ ಎಲ್ಲರನ್ನೂ ಮೆಚ್ಚುವಂತಿದೆ.

Advertisement

ಬಳೆ ಅಂಗಡಿಗಳು: ಜಾಗೃತಿ ಸಂದೇಶಗಳ ಜತೆ ಜಾತ್ರೆಯಲ್ಲಿ ಮಹಿಳೆಯರ ಬಳೆ ಅಂಗಡಿಗಳು ರಾರಾಜಿಸುತ್ತಿವೆ. ಬಳೆ ಅಂಗಡಿಗಳಿಗೆ ಪ್ರತ್ಯೇಕ ಮಳಿಗೆ ನಿರ್ಮಾಣ ಮಾಡಲಾಗಿದೆ. ಈ ಅಂಗಡಿಗಳಲ್ಲೂ ನಾನಾ ಬರಹಗಳ ಫಲಕ ನೇತು ಹಾಕಲಾಗಿದೆ. ಮಕ್ಕಳ ಆಟವಾಡಲು ಪ್ರತ್ಯೇಕವಾದ ಸ್ಥಳವಿದ್ದು, ಜೋಕಾಲಿ, ಮಕ್ಕಳ ಸಣ್ಣ ಬೋಟಿಂಗ್‌ ಕೂಡ ಬಂದಿದೆ.

ಪ್ರತಿ ವರ್ಷ ಸಿಹಿ ಪದಾರ್ಥದೊಂದಿಗೆ ಸಂದೇಶ ಬರೆಸಿ ಹಾಕುತ್ತೇವೆ. ಕಾರಣ ನಾವು ಗ್ರಾಹಕರನ್ನು ಸೆಳೆಯುವುದಕ್ಕಾಗಿ ಅಲ್ಲ. ಈ ಮೂಲಕ ಜನರಲ್ಲಿ ಜನ ಜಾಗೃತಿ ಮೂಡಿಸುವ ಉದ್ದೇಶವಾಗಿದೆ. ಸುಮಾರು 20 ವರ್ಷಗಳಿಂದ ಅಂಗಡಿ ಹಾಕುತ್ತಿದ್ದೇವೆ. ಪ್ರತಿವರ್ಷ ಹೊಸ ಜಾಗೃತಿ ಸಂದೇಶ ಬರೆಯಿಸಿರುತ್ತೇವೆ.
ವಜೀರ ಹಂಚಿನಾಳ, ಮಿಠಾಯಿ ಅಂಗಡಿ ಮಾಲಿಕ

ಶ್ರೀಗವಿಸಿದ್ಧೇಶ್ವರ ಜಾತ್ರೆ ಒಂದಿಲ್ಲೊಂದು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಈ ಮೂಲಕ ಜಾತ್ರೆ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕೇವಲ ಧಾರ್ಮಿಕ ಆಚರಣೆಯಾಗದೆ ಸಾಮಾಜಿಕ ಪ್ರಜ್ಞೆ ಸಾಂಸ್ಕೃತಿಕ ಮೆರಗನ್ನು ಮೈಗೂಡಿಸಿಕೊಂಡಿದೆ. ಹೀಗಾಗಿ ಜಾತ್ರೆಯ ಖ್ಯಾತಿ ಎಲ್ಲಡೆ ಪಸರಿಸಿ, ಎಲ್ಲರಿಗೂ ಅಚ್ಚುಮೆಚ್ಚು ಎನಿಸಿದೆ.
ಶರಣು ಅಳ್ಳೊಳ್ಳಿ, ಕಟಗಿಹಳ್ಳಿ ಯುವಕ

Advertisement

Udayavani is now on Telegram. Click here to join our channel and stay updated with the latest news.

Next