Advertisement

ನರಸಿಂಹ ದೇವರ ಅವಭೃಥೋತ್ಸವ 

01:30 PM May 02, 2018 | |

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಕುಮಾರಧಾರಾ ನದಿಯ ಅಗ್ರಹಾರ ತೀರ್ಥದಲ್ಲಿ ಶ್ರೀ ದೇವರ ಅವಭೃಥೋತ್ಸವ ಮಂಗಳವಾರ ನಡೆಯಿತು. ಪುಣ್ಯನದಿ ಕುಮಾರಧಾರಾದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವಭೃಥದ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪ್ರಧಾನ ಅರ್ಚಕ ಶ್ರೀಕರ ಉಪಾಧ್ಯಾಯ ಉತ್ಸವದ ವೈದಿಕ ವಿಧಾನ ನೆರವೇರಿಸಿದರು.

Advertisement

ಮಂಗಳವಾರ ಪ್ರಾತಃಕಾಲ ಶ್ರೀ ನರಸಿಂಹ ದೇವರಿಗೆ ಶ್ರೀ ಮಠದಲ್ಲಿ ಕಟ್ಟೆಪೂಜೆ ನಡೆಯಿತು. ಅನಂತರ ಓಕುಳಿ ಪೂಜೆ ಹಾಗೂ ಓಕುಳಿ ಸಂಪ್ರೋಕ್ಷಣೆ ನಡೆಯಿತು. ಭಕ್ತರಿಗೆ ಓಕುಳಿ ವಿತರಿಸಲಾಯಿತು. ದೇವರು ಬಂಡಿ ರಥದಲ್ಲಿ ದೇವಸ್ಥಾನದಿಂದ ಅಗ್ರಹಾರ ಸೋಮನಾಥ ದೇವಾಲಯದ ಸಮೀಪದ ಕುಮಾರಧಾರಾ ನದಿ ತಟದವರೆಗೆ ಸಾಗಿಬಂದರು. ಅಗ್ರಹಾರದ ಪುಣ್ಯತೀರ್ಥದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ದೇವರಿಗೆ ಜಲಾಭಿಷೇಕ, ಶಂಖಾಭಿಷೇಕ ಹಾಗೂ ಸೀಯಾಳಾಭಿಷೇಕ ನೆರವೇರಿಸಿದರು. ಅನಂತರ ದೇವರ ಅವಭೃಥ ಸ್ನಾನ ನೆರವೇರಿತು.

ಭಕ್ತರು ಭಕ್ತಿ, ಶ್ರದ್ಧೆಯಿಂದ ಶ್ರೀ ದೇವರ ಜತೆ ಅವಭೃಥ ಸ್ನಾನ ಮಾಡಿದರು. ಬಳಿಕ ಕಟ್ಟೆಪೂಜೆ ನೆರವೇರಿತು. ಅವಭೃಥೋತ್ಸವದ ಬಳಿಕ ಮಠಕ್ಕೆ ಆಗಮಿಸುವಾಗ ಅಗ್ರಹಾರದಿಂದ ದೇವಸ್ಥಾನದ ವರೆಗೂ ಅಂಗಡಿ ವ್ಯಾಪಾರಸ್ಥರು ಹಾಗೂ ಮನೆಯವರು ಫಲ, ಪುಷ್ಪ ಆರತಿಯನ್ನು ನೀಡಿ ಶ್ರೀ ದೇವರಿಗೆ ಸೇವೆ ಸಲ್ಲಿಸಿದರು. ಅವಭೃಥ ಮುಗಿಸಿ ಶ್ರೀ ಮಠಕ್ಕೆ ಆಗಮಿಸಿದ ನರಸಿಂಹ ದೇವರಿಗೆ ಮಠದಲ್ಲಿ ವಸಂತಪೂಜೆ ನೆರವೇರಿತು. ಮಠದ ದಿವಾನ ಸುದರ್ಶನ ಜೋಯೀಸ್‌, ಕಲಾವಿದ ಯಜ್ನೇಶ್‌ ಆಚಾರ್‌ ಸಹಿತ ಭಕ್ತರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next