Advertisement

ಆಟೋಮೊಬೈಲ್‌ ಉತ್ತಮ ಪ್ಲಾಟ್‌ಫಾರ್ಮ್

06:25 AM Oct 26, 2018 | Team Udayavani |

ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಎಪ್ಪತ್ತು ವರ್ಷಗಳು ಕಳೆದರೂ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದಕ್ಕೆ ಸಾಧ್ಯವಾಗದೆ ಇರುವುದು ವಿಷಾದನೀಯ ಸಂಗತಿ. ಬಹುಶಃ ಅದಕ್ಕೆ ನಿರುದ್ಯೋಗ ಸಮಸ್ಯೆಯೂ ಒಂದು ಕಾರಣವಾಗಿರಬಹುದೇನೋ. 

Advertisement

ಆರ್ಥಿಕತೆಯಲ್ಲಿನ ಸರಕು ಮತ್ತು ಸೇವೆಗಳ (ಜಿಎಸ್‌ಟಿ) ಮೇಲಿನ ಅಸಮರ್ಪಕವಾದ ಪರಿಣಾಮಕಾರಿ ಬಹುಬೇಡಿಕೆಗಳ ಕೊರತೆಯ ಪರಿಣಾಮದಿಂದಾಗಿ ಉದ್ಯೋಗ ಸಮಸ್ಯೆ ಸಂಭವಿಸುತ್ತದೆ ಎಂದು ಕೇನ್ಸ್‌ನ ಅರ್ಥಶಾಸ್ತ್ರ ಹೇಳುತ್ತದೆ. ಭಾರತವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಈ ಸಮಸ್ಯೆಯೂ ಒಂದು ಎನ್ನುವುದನ್ನು ಎಲ್ಲರೂ ಒಪ್ಪಬೇಕಾಗಿದೆ. ಬಹುಶಃ  ಈ ಕಾರಣದಿಂದಾಗಿಯೇ ಭಾರತದಲ್ಲಿ ಹಲವು ಭಾರಿ ನಿರುದ್ಯೋಗಿಗಳು ಸರ್ಕಾರದ ವಿರುದ್ಧ ದಂಗೆ ಎಬ್ಬಿಸಿದ್ದನ್ನು ನಾವು ನೆನಪಿಗೆ ತಂದುಕೊಳ್ಳಬಹುದು ಮತ್ತು ಉದ್ಯೋಗವನ್ನು ಅರಸಿಕೊಂಡು ವಿದೇಶದತ್ತ ಸಾಗುವುದನ್ನು ನಾವು ಇಂದಿಗೂ ಕಾಣುತ್ತೇವೆ. 
 
ಭಾರತದಂಥ ಯುವಜನಾಂಗ ಹೆಚ್ಚಿರುವ ದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗದೆ ಇದ್ದರೆ ಅದು ಹುಟ್ಟಿ ಹಾಕುವ ಸಮಸ್ಯೆಗಳು ಊಹೆಗೂ ನಿಲುಕದಷ್ಟು ತೀವ್ರವಾಗಿರುತ್ತದೆ ಎಂದು  ಈಗಾಗಲೇ ಆರ್ಥಿಕ ಸಮಸ್ಯೆ ಖಚಿತವಾಗಿ ಸೂಚಿಸಿದೆ. ಈ ಸಮಸ್ಯೆಗಳ ದಿಕ್ಕು-ದೆಸೆಗಳನ್ನು ಗಮನಿಸಿದ ಕೇಂದ್ರ ಸರ್ಕಾರ ಆರ್ಥಿಕ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ದುಡಿಯುವ ಕೈಗಳಿಗೆ ಕೆಲಸ ನೀಡುವುದೇ ದೇಶದ ಆರ್ಥಿಕ ಬೆಳವಣಿಗೆಯ ಮುಖ್ಯ ಗುರಿಯಾಗಬೇಕು ಎನ್ನುವುದನ್ನು ಮನಗಂಡಿದ್ದು ನಿರುದ್ಯೋಗಿಗಳ ಪಾಲಿಗೆ ಸಂತಸ ತಂದಿರುವುದಂತೂ ಸತ್ಯ.  ಜಾಗತೀಕರ‌ಣವಾಗಿ ಬೆಳೆಯುತ್ತಿರುವ ಆಟೋಮೊಬೈಲ್‌ ಉದ್ಯಮ ಕ್ಷೇತ್ರಕ್ಕೆ ಸರ್ಕಾರ ಒತ್ತು ನೀಡುತ್ತಿರುವುದು ಆರ್ಥಿಕ ಬೆಳವಣಿಗೆಯಾಗುದಕ್ಕೆ ಒಳ್ಳೆಯ ಯೋಜನೆಯಾಗಿದೆ.

ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಭಾರತದಲ್ಲಿ ಆಟೋಮೊಬೈಲ್‌ ಅಥವಾ ವಾಹನೋದ್ಯಮ ಕ್ಷೇತ್ರದಲ್ಲಿ ತರಬೇತಿ ನೀಡುವುದಕ್ಕೆ ಮುಂದಾಗಿದ್ದು ಮತ್ತು ಆ ಕುರಿತಾಗಿ ಕಾರ್ಯನಿರ್ವಹಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಇದರ ಪ್ರಮುಖ ಉದ್ದೇಶವೇನೆಂದರೆ, ಉದ್ಯೋಗಾವಕಾಶವನ್ನು ಆಟೋಮೊಬೈಲ್‌ ಮಾರಾಟ, ಸೇವೆ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಸೃಷ್ಟಿಸುವುದಾಗಿದೆ. ಇದು ಭಾರತ ಸರ್ಕಾರದ ಸ್ಕಿಲ್‌ ಇಂಡಿಯಾ ಯೋಜನೆಯಡಿಯಲ್ಲಿ ಮಹತ್ವದ್ದಾಗಿದೆ. ಈ ಸಲುವಾಗಿ ದೇಶದಾದ್ಯಂತ ಕೋರ್ಸ್‌ಗಳನ್ನು ಆಯೋಜಿಸಿದ್ದು, ಮಾತ್ರವಲ್ಲದೆ ಆಟೋಮೊಬೈಲ್‌ ಉದ್ಯಮಕ್ಕೆ ಅಗತ್ಯವಾದ ತರಬೇತಿ ಮಾದರಿಯನ್ನು ರಚಿಸಿದೆ. ಈ ಯೋಜನೆಯಡಿಯಲ್ಲಿ, ವಿತರಿಸಲು ಉದ್ದೇಶಿಸಿದ ವಿವಿಧ ಯೋಜನೆಗಳಲ್ಲಿ ಉತ್ಪಾದನೆ, ಸ್ವಯಂಚಾಲಿತ ಬಾಡಿ ರಿಪೇರಿ, ಆಟೋಮೋಟಿವ್‌ ಸರ್ವೀಸ್‌ ಮತ್ತು ದುರಸ್ತಿ ಹಾಗೂ ರಿಪೇರಿಯಂಥ ಉದ್ಯೋಗಗಳನ್ನೂ ಒಳಗೊಂಡಿದೆ. ಈ ಕೋರ್ಸ್‌ಗಳು ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (ಎನ್‌ಸಿವಿಟಿ) ಅನುಮೋದನೆಯನ್ನು ಪಡೆದಿರುತ್ತದೆ. ಕೋರ್ಸ್‌ ಪೂರ್ಣಗೊಂಡ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಅಥವಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುವುದರೊಂದಿಗೆ ಸೂಕ್ತ ಉದ್ಯೋಗವನ್ನೂ ಕಲ್ಪಸಿಕೊಡುವುದರಲ್ಲೂ ಕೆಲಸವನ್ನೂ ಮಾಡುತ್ತದೆ. 

ಭಾರತದ ವಾಹನೋದ್ಯಮ (ಆಟೋಮೊಬೈಲ್‌) ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ಸ್ಪರ್ಧಾತ್ಮಕ ಉದ್ಯಮವಾಗಿ ಬೆಳೆಯುತ್ತಿದೆ. ಕಳೆದ ವಾರ್ಷಿಕ ಸಾಲಿನಲ್ಲಿ ಸರ್ಕಾರ ಈ ಯೋಜನೆಗೆ ಉತ್ತಮ ಬೆಂಬಲ ನೀಡಿದ್ದು. ದೇಶದ ಒಟ್ಟು ದೇಶಿಯ ಉತ್ಪನ್ನಕ್ಕೆ ಶೇಕಡಾ 7ರಷ್ಟು ಜಿಡಿಪಿಯ ಕೊಡುಗೆಯನ್ನು ನೀಡುತ್ತಿದೆ, ಆಟೋಮೋಟಿವ್‌ ಮಿಷನ್‌ ಪ್ಲಾನ್‌ 2026 ಪ್ರಕಾರ ವಾಹನೋದ್ಯಮದಲ್ಲಿ 65 ಮಿಲಿಯನ್‌ ಹೊಸ ಉದ್ಯೋಗಗಳ ಸೃಷ್ಟಿ ಮಾಡಲಿದ್ದು ಜಿಡಿಪಿಯಲ್ಲಿ ಶೇ. 12ರಷ್ಟು ಪಾಲನ್ನು ಹೊಂದುವ ಗುರಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿ ದೆ ಎಂದು ಹೆವಿ ಇಂಡಸ್ಟ್ರಿಯ ಮಂಡಳಿ ಹೇಳುತ್ತದೆ.

ಕಳೆದ 2017 ಮತ್ತು 2018ರ ಸಾಲಿನಲ್ಲಿ ಆಟೋಮೊಬೈಲ್‌ ವಲಯ ಶೇಕಡಾ 13ರಿಂದ 15ರಷ್ಟು ಪ್ರಗತಿ ಸಾಧಿಸಿದ್ದು, 2012ರ ನಂತರ ಇದೇ ಮೊದಲ ಬಾರಿಗೆ ಇಷ್ಟು ಪ್ರಗತಿ ದಾಖಲಾಗಿದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಕೇಂದ್ರ ಸರ್ಕಾರದ ಜಿಎಸ್‌ಟಿ ಜಾರಿಗೆಯಿಂದ ಮುಖ್ಯವಾಗಿ ಇ-ಕಾಮರ್ಸ್‌ನಲ್ಲಿ ಭಾರಿ ಬೆಳವಣಿಗೆ ಕಾಣುತ್ತಿದ್ದು ಇದು ಆಟೋಮೊಬೈಲ್‌ ವಲಯಕ್ಕೆ ವರದಾನವಾಗಿ, ಉದ್ಯೋಗಾ ವಕಾಶ ಸೃಷ್ಟಿಗೂ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. 

Advertisement

ಹೀಗಿದ್ದರೂ ಆಟೊಮೊಬೈಲ್‌ ವಲಯ ದೇಶದಾದ್ಯಂತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಹುಶಃ ಅದಕ್ಕೆ ಸರ್ಕಾರದ ಯೋಜನೆಗಳ ಕಾರ್ಯ ವಿಳಂಬವೂ, ಆ ಯೋಜನೆಯ ಸಮಿತಿಗಳ ನಿರಾಸಕ್ತಿಯೂ ಕಾರಣವಾಗಿರಬಹುದು. 

ಕಾರ್ಮಿಕ ಇಲಾಖೆಯ ಅಂಕಿಅಂಶಗಳ ಪ್ರಕಾರ 2017ರ ಅವಧಿಯಲ್ಲಿ ಪ್ರಮುಖ ಎಂಟು ವಲಯಗಳಲ್ಲಿ 1,36,000 ಹೊಸ ಉದ್ಯೋಗಗಳು ಸೃಷ್ಟಿಯಾಗಿದೆಯಾದರೂ ಈ ವರ್ಷ ಭಾರತದಲ್ಲಿ ಮತ್ತೆ ನಿರುದ್ಯೋಗ ಸಮಸ್ಯೆ ಏರಿಕೆಯಾಗಿದೆ ಎಂದು ತಿಳಿಯಬಹುದಾಗಿದೆ. ಇದು ಸರ್ಕಾರಕ್ಕೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದ್ದಂತು ನೂರಕ್ಕೆ ನೂರು ನಿಜ. ಎಷ್ಟು ಸಾಧ್ಯವೋ ಅಷ್ಟು ಉದ್ಯೋಗಗಳನ್ನು ನೀಡಬೇಕು ಎನ್ನುವ ದೃಷ್ಟಿಯಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ತಂದರೂ ಕೂಡ ಸ್ವಾಭಾವಿಕ ನಿರುದ್ಯೋಗ ಸಮಸ್ಯೆಗಳ ದರವನ್ನು ಮೀರಿ ನಿರುದ್ಯೋಗದ ಪ್ರಮಾಣವನ್ನು ಇಳಿಸುವ ಪ್ರಯತ್ನ ಸಹಜವಾಗಿ ವಿಫ‌ಲವಾಗಿದೆ. ಆದರೂ ದೇಶದಾದ್ಯಂತ  ಆಟೋಮೊಬೈಲ್‌ ಇಂಡಸ್ಟ್ರಿಗಳಲ್ಲಿ ಪರಿಸ್ಥಿತಿ ಆಶಾಕಿರಣವಾಗಿ, ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದನ್ನು ನೋಡಿದರೆ ನಿರುದ್ಯೋಗಿಗಳ ಪಾಲಿಗೆ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಉತ್ತಮ ಪ್ಲಾಟ್‌ಫಾರ್ಮ್ ವಾಹನೋದ್ಯಮ ನೀಡುತ್ತದೆ ಎನ್ನುವುದು ಸತ್ಯ.

– ಶ್ರೀರಾಜ್‌ ಎಸ್‌. ಆಚಾರ್ಯ
ಆಳ್ವಾಸ್‌ ಕಾಲೇಜು, ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next