Advertisement

ನೀರು ಸರಬರಾಜಿಗೆ ಅಧಿಕಾರಿಗಳು ವಿಫಲ

04:17 PM May 19, 2019 | Suhan S |

ಗುಬ್ಬಿ: ತಾಲೂಕಿನ ಪೆದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಆಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಬೇಸಿಗೆ ಯಲ್ಲಿ ನೀರಿನ ಸಮಸ್ಯೆ ಬರುವ ಬಗ್ಗೆ ತಿಳಿದಿದ್ದರೂ ಚುನಾವಣೆಯನ್ನೇ ಮುಂದಿಟ್ಟು ಮೂಲ ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದಾರೆ ಎಂದು ಮುಖಂಡ ಹರಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಪೆದ್ದನಹಳ್ಳಿ ಗ್ರಾಪಂ ಮುಂಭಾಗ ನೂರಾರು ಗ್ರಾಮಸ್ಥರು ಖಾಲಿ ಕೊಡಗಳನ್ನು ಪ್ರದರ್ಶನ ನಡೆಸಿ, ಪ್ರತಿಭಟನೆ ಮಾಡಿದರು. ಈ ವೇಳೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಮೊದಲ ಗ್ರಾಪಂ ಇದಾಗಿದೆ. ಈ ಬಗ್ಗೆ ತಿಳಿದೂ ಕೂಡ ಪಿಡಿಒ ಮತ್ತು ಚುನಾಯಿತ ಜನಪ್ರತಿ ನಿಧಿಗಳು ನಿರ್ಲಕ್ಷ್ಯವಹಿಸಿದ್ದರ ಪರಿಣಾಮ ಇಂದು ಮನೆ ಬಳಕೆಗೆ ನೀರು ಇಲ್ಲವಾಗಿದೆ ಎಂದು ಆರೋಪಿಸಿದರು.

ಗ್ರಾಪಂ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರ ಟ್ಯಾಂಕರ್‌ ಮೂಲಕ ನೀರು ಕಲ್ಪಿಸಲು ತಿಳಿಸಿದ್ದರೂ ನೀತಿ ಸಂಹಿತೆ ಹೆಸರಿನಲ್ಲಿ ಜನ ಜಾನುವಾರುಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ನೀರು ಒದಗಿಸದ ಗ್ರಾಪಂ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೇಳೆಕಲ್ಲಹಳ್ಳಿ, ಮಂಚಿ ಹಳ್ಳಿ, ಕುಣಾಘಟ್ಟ, ದೇವರಹಟ್ಟಿ, ಕೆ.ಮತ್ತಿಘಟ್ಟ ಕಾಲೋನಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಮನೆಗೆಲಸ ಮತ್ತು ನಿತ್ಯ ಕರ್ಮಗಳಿಗೂ ನೀರಿನ ಅಭಾವ ಉಂಟಾ ಗಿದ್ದು, ನೀರಿಗೆ ಗ್ರಾಮದ ಹೊರವಲಯದ ತೋಟಗಳನ್ನು ಅವಲಂಭಿಸಲಾಗಿದೆ. ಈ ಜತೆಗೆ ದನಕರುಗಳು ನೀರು ಕುಡಿಯಲು ನಿರ್ಮಿಸ ಲಾದ ತೊಟ್ಟಿಗಳಲ್ಲಿ ನೀರು ಶೇಖರಣೆಯಾಗದೇ ಜಾನುವಾರುಗಳು ಪರದಾಡುತ್ತಿವೆ. ದನಕರು ಗಳಿಗೆ ನೀರು ಒದಗಿಸಲು ಸಾಧ್ಯವಾಗದೇ ಜಾನುವಾರುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ರೈತರು ಬಂದಿದ್ದಾರೆ ಎಂದು ದೂರಿದರು.

ಯೋಗ್ಯವಿಲ್ಲದ ನೀರು ಸರಬರಾಜು: ಕಡಬ ಕೆರೆ ಮೂಲಕ ನೀರು ಕಲ್ಪಿಸುವ ಭರವಸೆ ನೀಡಿ, ಪೈಪ್‌ಲೈನ್‌ ಮೂಲಕ ನೀರು ತಂದರೂ ಈ ನೀರು ಬಳಸಲಾಗುತ್ತಿಲ್ಲ. ಕುಡಿಯಲು ಯೋಗ್ಯ ವಿಲ್ಲದೆ ಕೆರೆ ನೀರು ಸ್ನಾನ ಮಾಡಿದರೆ ಮೈಯಲ್ಲಿ ಕಡಿತ ಉಂಟಾಗುತ್ತಿದೆ. ಚರ್ಮ ರೋಗಕ್ಕೆ ಕಾರಣವಾದ ಈ ನೀರು ಸಂಪೂರ್ಣ ಕಲುಷಿತ ವಾಗಿದೆ. ಕುಡಿಯಲು ಸಹ ಬಳಸುವಂತಿಲ್ಲ. ಬೋರ್‌ವೆಲ್ ಕೊರೆಸುವ ಮಾತು ದೂರ ವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ತಾಲೂಕು ಆಡಳಿತದ ಗಮನಕ್ಕೆ ತಂದು ನೀರು ಒದಗಿಸ ಬೇಕಾದ ಪಿಡಿಒ ತಾಲೂಕು ಕಚೇರಿಗೆ ನೀರಿನ ಮನವಿ ಮಾಡಿಲ್ಲ ಎಂದು ಕಿಡಿಕಾರಿದ ಗ್ರಾಮಸ್ಥರು, ಸ್ಥಳಕ್ಕೆ ಜಿಪಂ ಸಿಇಒ ಬರುವಂತೆ ಆಗ್ರಹಿಸಿ ಜತೆಗೆ ಮೇವು ಬ್ಯಾಂಕ್‌ ತೆರವು, ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಮಾಡುವಂತೆ ಒತ್ತಾಯಿಸಿದರು.

ನೀರು ಕಲ್ಪಿಸುವ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ನರಸಿಂಹಯ್ಯ ಮತ್ತು ಗ್ರಾಮೀಣಾ ನೀರು ಸರಬರಾಜು ಇಲಾಖೆ ಎಇಇ ರಮೇಶ್‌ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದರು. ಕೊಳವೆ ಬಾವಿ ಕೊರೆಸಲು ಕಾಲಾವಕಾಶ ಬೇಕಿದೆ. 15 ದಿನದೊಳಗೆ ಬೋರ್‌ ಕೊರೆಸುತ್ತೇವೆ. ಅಲ್ಲಿಯವರೆಗೆ ಪ್ರತಿನಿತ್ಯ 8 ಟ್ಯಾಂಕರ್‌ ನೀರು ಒದಗಿಸುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಂಡ ಗ್ರಾಮ ಸ್ಥರು, ಮೇ 27ರೊಳಗೆ ಕೊಳವೆಬಾವಿ ಕೊರೆಸ ಬೇಕು. ಇಲ್ಲವಾದಲ್ಲಿ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Advertisement

ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯ ರಂಗಸ್ವಾಮಿ, ಲಕ್ಷ್ಮಮ್ಮ, ಹುಚ್ಚಪ್ಪ, ರಂಗಪ್ಪ, ನಂದೀಶ್‌, ಅನಿಲ್ಕುಮಾರ್‌, ರಾಜಣ್ಣ, ತ್ರೀನೇಶ್‌, ಜಯಣ್ಣ ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next