Advertisement

ನಿಮ್ಮ ಜಾತಕದಲ್ಲೂ ಇಂಥ ಯೋಗಾಯೋಗ ಇರಬಹುದು, ನೋಡಿಕೊಳ್ಳಿ…

06:38 AM May 07, 2016 | |

ಜನ್ಮ ಕುಂಡಲಿಯ ವಿಷಯದಲ್ಲಿ ಒಳ್ಳೆಯದೆಷ್ಟು ಕೆಟ್ಟದು ಎಷ್ಟು ಎಂಬ ಲೆಕ್ಕಾಚಾರ ಜಾತಕದಲ್ಲಿನ ಯೋಗಗಳು  ಯೋಗಗಳ ಶಕ್ತಿ ಯೋಗಗಳನ್ನು ನಿರ್ಮಿಸಿದ ಗ್ರಹಗಳ ಒಟ್ಟೂ ಶಕ್ತಿ ಏನು, ಯಾವಾಗ, ಇಂಥದೊಂದು ಒಳ್ಳೆಯ ಶಕ್ತಿಯನ್ನು ಪಡೆಯುತ್ತವೆ ಇತ್ಯಾದಿ ಇತ್ಯಾದಿ ವಿಚಾರಗಳನ್ನು ಪರಿಶೀಲಿಸಬೇಕು. ಯೋಗಗಳು ಇದ್ದ ಮಾತ್ರಕ್ಕೆ ಎಲ್ಲವೂ ಸರಿಹೋಗುತ್ತದೆ ಎಂದಲ್ಲ. ಆ ಯೋಗದ ಪರಮಾವಧಿ ಶಕ್ತಿ ಏನು, ಎಷ್ಟು ? ಎಂಬುದನ್ನು ತೀರ್ಮಾನಿಸಬೇಕು. ಈ ಯೋಗಗಳ ಸಂದರ್ಭದಲ್ಲಿ ಶನಿಕಾಟಗಳು ಬಾಧಿಸಬಾರದು.

Advertisement

ಗಜಕೇಸರಿ ಯೋಗ
 ಗುರುಗ್ರಹ ಹಾಗೂ ಚಂದ್ರ ಗ್ರಹದ ಸ್ಥಿತಿ ಪೂರ್ವಕ ಜೋಡಣೆ ಈ ಯೋಗಕ್ಕೆ ಮುಖ್ಯ. ಚಂದ್ರನಿಂದ ಗುರುಗ್ರಹ ಕೇಂದ್ರದಲ್ಲಿರಬೇಕು. ಗುರುವಿಗೂ, ಚಂದ್ರನಿಗೂ ಉತ್ತಮ ಶಕ್ತಿ,  ಉತ್ತಮ ಸ್ಥಳಗಳು ಉತ್ತಮ ಅಧಿಪತ್ಯಗಳು ದೊರೆತಿದ್ದಲ್ಲಿ ಗಜಕೇಸರಿ ಯೋಗಕ್ಕೆ ಹೆಚ್ಚಿನ ತೂಕ ಬರುತ್ತದೆ. ನಮ್ಮ ಸಂದರ್ಭದಲ್ಲಿ ಯಶಸ್ಸು ಪಡೆದು ಖ್ಯಾತಿವಂತರಾದ ರಾಹುಲ್‌, ಹೇಮಾ ಮಾಲಿನಿ, ಮಹೇಂದ್ರಸಿಂಗ್‌ ಧೋನಿ, ಕಳೆದ ಶತಮಾನದಲ್ಲಿ ನವ್ಯ ಕಾವ್ಯ ಪರಂಪರೆಗೆ ತೆರೆದುಕೊಂಡು ಹೊಸ ಅಲೆ ಎಬ್ಬಿಸಿದ ನೊಬೆಲ್‌ ಪ್ರ„ಸ್‌ ಪಡೆದ ಎಲಿಯಟ್‌, ನಮ್ಮ ಮಾಜಿ ಪ್ರಧಾನಿ ವಾಜಪೇಯಿ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಮುಂತಾದವರು ಗಜಕೇಸರಿ ಯೋಗ ಹೊಂದಿದ್ದರು. ಇವರೆಲ್ಲರ ಬದುಕಿನ ಏಳುಬೀಳುಗಳನ್ನು ರೂಪಿಸುವಲ್ಲಿ ಗಜಕೇಸರಿ ಯೋಗ ತನ್ನ ಪಾಲನ್ನು ನೀಡಿದೆ ಎಂಬುದು ಗಮನಾರ್ಹ. 

ಶಶಿಮಂಗಳ ಯೋಗ
ಕುಜನೂ, ಚಂದ್ರನೂ ಈ ಯೋಗಕ್ಕೆ ಕಾರಣರಾಗುತ್ತಾರೆ. ಕುಜ ಚಂದ್ರರು ಪರಸ್ಪರ ದೃಷ್ಟಿಸಿದ್ದರೆ ಒಂದೇ ಮನೆಯಲ್ಲಿ ಕೂಡಿದ್ದರೆ ಈ ಯೋಗ ಉಂಟಾಗುತ್ತದೆ. ಅನಿರೀಕ್ಷಿತ ಮೂಲದಿಂದ ಧನ ಸಂಪಾದನೆಗೆ ದೊಡ್ಡ ಮಟ್ಟದಲ್ಲಿ ಸಾಧ್ಯವಾಗುವ ಯೋಗ ಇದು. ಕುಜ ಯಾವಾಗಲೂ ಪಾಪ ಗ್ರಹ. ಹೀಗಾಗಿ ಕುಜನು ದುಷ್ಟ ಪ್ರವೃತ್ತಿಯನ್ನು ವ್ಯಕ್ತಿಯೊಳಗೆ ಕೆಲವು ವಿಷಮ ಸಂದರ್ಭದಲ್ಲಿ ರೂಪಿಸುವುದರಿಂದ ಪಾಪದ ಕೆಲಸಗಳ ಮೂಲಕವೂ ಧನಾರ್ಜನೆಯಾಗುತ್ತದೆ. ಕೆಟ್ಟ ಸ್ಥಳಗಳಲ್ಲಿ ಈ ಯೋಗ ಅಥವಾ ಇನ್ನಷ್ಟು ಕೆಟ್ಟಗ್ರಹಗಳ ಸಾಮೀಪ್ಯದಿಂದಾಗಿ ಈ ಯೋಗ ಒದಗಿ ಬಂದಿದ್ದರೆ ಹಣ ಬಂದಷ್ಟೇ ವೇಗದಲ್ಲಿ ಹರಿದು ಖರ್ಚಾಗಿ ಮೋಸಹೊಂದಿ ಹೊರಟೂ ಹೋಗುತ್ತದೆ. ಬರಬೇಕಾದ ಹಣವೇ ಬಾರದಿರುವ ದಾರುಣತೆ ಕೂಡಾ  ಸಂಭವಿಸಬಹುದು.  

ಈ ಯೋಗವನ್ನು ಹೊಂದಿದ ಜನರಯಾದಿ ನಾನಿಲ್ಲಿ ಕೊಡಹೋಗುವುದಿಲ್ಲ. ಭ್ರಷ್ಟಾಚಾರ ಪಾಪಮೂಲ, ತೋಳ್ಬಲ, ದುಷ್ಟ ಜನಬಲಗಳಿಂದ ಧನ ಸಂಪಾದಿಸಿದ ವಿಚಾರ ಇವರುಗಳ ವಿಚಾರದಲ್ಲಿ ಸ್ಪಷ್ಟವಾಗಿರುವುದರಿಂದ ಉದಾಹರಣೆಗಳನ್ನು ದಯಮಾಡಿ ನಿರೀಕ್ಷಿಸಬೇಡಿ. ಒಳ್ಳೆಯ ರೀತಿಯಲ್ಲಿ ಸಂಪಾದನೆಯಾಗಲಾರದು ಎಂದೇನಲ್ಲ. ಕಟಕ ಲಗ್ನ ಜಾತಕದವನಿಗೆ ವೃಷಭದಲ್ಲಿ ಬಲಾಡ್ಯ ಚಂದ್ರ, ಮಕರದಲ್ಲಿ ಯೋಗಕಾರಕ ಅಂಗಾರಕ ಇದ್ದಲ್ಲಿ ಸನ್ನಡತೆ, ಹಿರಿಯ ಸ್ಥಾನಗಳಿಂದಲೂ ಧನಾರ್ಜನೆಗೆ ನ್ಯಾಯ ಮಾರ್ಗದಲ್ಲೇ ಸಾಧ್ಯತೆ ಹೇರಳ. 

ರಾಜಲಕ್ಷಣ ಯೋಗ
ಗುರು, ಶುಕ್ರ, ಬುಧ, ಚಂದ್ರರು ವ್ಯಕ್ತಿಯ ಜಾತಕದಲ್ಲಿ ಲಗ್ನಭಾವದಲ್ಲಾಗಲೀ ಪರಸ್ಪರ ಕೇಂದ್ರಗಳಲ್ಲಾಗಲೀ ಸಂಯೋಜನೆಗೊಂಡಿರಬೇಕು. ಆಕರ್ಷಕ ರೂಪವೂ ರಾಜಯೋಗಗಳು ಕೂಡಿ ಬರುತ್ತದೆ. ಇದು ಈ ಯೋಗದ ಸಿದ್ಧಿ. ಘನತೆ ಹಾಗೂ ಗೌರವಗಳನ್ನು ಒದಗಿಸುತ್ತದೆ. ಬಹುಮಂದಿಯಿಂದ ಶ್ಲಾ ಸಲ್ಪಡುವವರಾಗುತ್ತಾರೆ. 
ಉದಾಹರಣೆಯಾಗಿ ರಾಹುಲ್‌ ದ್ರಾವಿಡ್‌ ಜಾತಕವನ್ನು ಪರೀಕ್ಷಿಸಬಹುದು. ದ್ರಾವಿಡ್‌ ಜಾತಕದಲ್ಲಿ ಚಂದ್ರನಿಗೆ ಶಕ್ತಿಯೇ ಇರದೇ ಹೋಗಿದ್ದಲ್ಲಿ ಇವರ ಜಾತಕಕ್ಕೆ ಯಾವ ತೂಕವೂ ಒದಗಿ ಬರುವ ಸಾಧ್ಯತೆ ಇದ್ದಿರಲಿಲ್ಲ. ಮೇಲಿಂದ ಭಾಗ್ಯಾಧಿಪತಿ ಕುಜ ಶನೈಶ್ಚರನ ಹಾಗೂ ರಾಹುವಿನ ಕರಿನೆರಳಿನ ಹೊರಗುಳಿದು ಬಲಾಡ್ಯತೆ ನೀಡಿದ. ಹೀಗಾಗಿ ಇವರ ಜಾತಕದ ರಾಜಲಕ್ಷಣ ಯೋಗಕ್ಕೆ ದೊಡ್ಡ ಶಕ್ತಿ ಕೂಡಿಬಂತು. ಇಷ್ಟಾದರೂ ದ್ರಾವಿಡ್‌ ಇಂಡಿಯಾದ ತಂಡದಲ್ಲಿ ಸೇರಿದ ಹೊಸದರಲ್ಲಿ ಶನಿಕಾಟವಿದ್ದುದರಿಂದ ಆರಂಭದ ದಿನಗಳಲ್ಲಿ ಒಳ್ಳೆಯ ಯೋಗವಿದ್ದೂ ಪರದಾಡಿದ್ದರು. ಒನ್‌ ಡೇ ಪಂದ್ಯಗಳಿಗೆ ನಾಲಾಯಕ್‌ ಎಂಬ ಟೀಕೆಗಳು ನಾಗರ ಹೆಡೆಯಂತೆ ಎದ್ದು ಅಪ್ಪಳಿಸಿದ್ದವು. ಆದರೆ ಶುಕ್ರ ದಶಾಕಾಲ ಎಷ್ಟರ ಮಟ್ಟಿಗೆ ಎತ್ತಿ ಹಿಡಿಯಿತೆಂದರೆ ದ್ರಾವಿಡ್‌ ರಕ್ಷಣೆಯ ಗೋಡೆಯೆಂದು ಹೆಸರಾದುದು. ಏಕದಿನ ಟೆಸ್ಟ್‌ ಪಂದ್ಯ ಈ ಎರಡೂ ಪ್ರಕಾರಗಳಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ರನ್‌ ಗಳಿಸಿದರು. 

Advertisement

ಚತುಸ್ಸಾಗರ ಯೋಗ
ಜಾತಕದ ಎಲ್ಲಾ ಕೇಂದ್ರಗಳಲ್ಲೂ ಗ್ರಹಗಳಿದ್ದರೆ ಚತುಸ್ಸಾಗರ ಯೋಗ ಎನ್ನುತ್ತಾರೆ. ಖ್ಯಾತಿ, ಹಣ, ವರ್ಚಸ್ಸು ಒದಗಿ ಬರುತ್ತದೆ. ರಾಜನ ಸಮಾನ ಅಥವಾ ರಾಜನೇ ಆಗುವ ಸಿದ್ಧಿ ಕೂಡಿ ಬರುತ್ತದೆ. ಈ ಯೋಗಕ್ಕೆ ಉದಾಹರಣೆಯಾಗಿ ಭಾರತೀಯ ಕ್ರಿಕೆಟ್‌ನ ಶೈಶವಾವಸ್ಥೆ ದಾಟಿ ಕುಡಿ ಮೀಸೆಯ ಎಳಸು ತಾರುಣ್ಯದ ಅವಸ್ಥೆ ಬಂದಾಗ ಭಾರತೀಯ ಕ್ರಿಕೆಟ್‌ಗೆ ಉತ್ತಮ ಶಕ್ತಿಯನ್ನು ಹಂತಹಂತವಾಗಿ ಒದಗಿಸಿಕೊಟ್ಟ ಮನ್ಸೂರ್‌ ಆಲಿಖಾನ್‌ ಪಟೌಡಿ ಹಾಗೂ ಹಿಂದಿನ ಯುಗದ ಚಲನಚಿತ್ರರಂಗದ ಪ್ರಸಿದ್ಧ ನಾಯಕಿ ಶರ್ಮಿಳಾ ಟ್ಯಾಗೋರ್‌ ಪುತ್ರ ಸೈಫ್ ಆಲಿ ಖಾನ್‌ಗೆ ಚತುಸ್ಸಾಗರ ಯೋಗವಿದೆ. ಬಲಾಡ್ಯನಾದ ಚಂದ್ರ ತಾರುಣ್ಯಾವಸ್ಥೆಯಲ್ಲಿ ಸಂಭವಿಸಿದ ತೀವ್ರ ಅನಾರೋಗ್ಯದಲ್ಲೂ ಇವರನ್ನು ಬದುಕಿಸಿದ. ಇಂದು ಹಿಂದಿ ಚಿತ್ರರಂಗದ ಪ್ರಥಮ ಸಾಲಿನ ತಾರೆ ಸೈಫ್. ರಾಜ ಮನೆತನಕ್ಕೆ ಸೇರಿದ ಪ್ರಸಿದ್ಧ ದಂಪತಿಗಳ ಪುತ್ರ. ನೀಚಶುಕ್ರ ಮೊದಲ ಪತ್ನಿಯಿಂದ ವಿಚ್ಛೇದನಕ್ಕೆ ಕಾರಣನಾದರೂ ಬಾಳ ಸಂಗಾತಿಯ ವಿಷಯದಲ್ಲಿ ಸಮತೋಲನ ತಂದ ಗುರು ಈಗ ಕರೀನಾ ಕಪೂರ್‌ ಜೊತೆಯಲ್ಲಿ ಉತ್ತಮ ಸಂಬಂಧ ಒದಗಿಸಿದ್ದಾನೆ. ಜಾಹೀರಾತು ಪ್ರಪಂಚದಲ್ಲಿ ಮಿಲಿಯನ್‌ ಗಟ್ಟಲೆ ಹಣ ಸಂಪಾದಿಸುತ್ತಿರುವ ಬಾಕ್ಸ್‌ ಆಫೀಸಿನಲ್ಲಿ ತೂಕ ಎತ್ತರಿಸಿಕೊಂಡ ವರ್ಚಸ್ವೀ ವ್ಯಕ್ತಿ ಸೈಫ್. ಪದ್ಮಶ್ರೀ ಪ್ರಶಸ್ತಿ ಕೂಡಾ ಕಿರಿಯ ವಯಸ್ಸಿನಲ್ಲೇ ಒದಗಿ ಬಂತು.

ನಮ್ಮವರಾದ ರಾಮಕೃಷ್ಣ ಹೆಗಡೆಯವರಿಗೆ ಕೂಡಾ ಚತುಸ್ಸಾಗರ ಯೋಗವಿತ್ತು. ಕೇವಲ 28ನೇ ವಯಸ್ಸಿನಲ್ಲೇ ಮೈಸೂರು ರಾಜ್ಯದ ಕಿರಿಯ ಮಂತ್ರಿಗಳಾಗಿದ್ದು ಇವರ ಹೆಗ್ಗಳಿಕೆ ಏಳುಬೀಳುಗಳು ಬಂದರೂ ಹೆಗಡೆಯವರದ್ದು ವರ್ಚಸ್ಸು ಹಾಗೂ ಆಕರ್ಷಣೆಯ ವಿಷಯದಲ್ಲಿ ಎರಡು ಮಾತಿಲ್ಲ. ಪ್ರಧಾನಿಯಾಗುವ ಯೋಗ ಇತ್ತೆಂಬುದು ಬೇರೆ ಮಾತು. ಆಗಿದ್ದರೆ ಅವರಿಗೆ ಯೋಗ್ಯತೆ ಇತ್ತು ಎಂಬುದು ರಾಜಕೀಯ ವ್ಯಾಖ್ಯಾನಕಾರರ ಮಾತು. ಆದರೆ ಒಕ್ಕರಿಸುವ ಶನಿಕಾಟ ಆ ಸಂದರ್ಭದ ಅನಾನುಕೂಲ ಸಂಧಿ ಘಾತಕಗಳು ಮನುಷ್ಯನನ್ನು ಹಿಂದಕ್ಕೆ ಎಳೆಯುತ್ತವೆ. ಎಲ್ಲ ಇದ್ದೂ ಹೆಗಡೆ ಪ್ರಧಾನಿಯಾಗಲಿಲ್ಲ. ಆದರೂ ಹೆಗಡೆ ಇತಿಹಾಸದಲ್ಲಿ ಅಪರೂಪದ ವ್ಯಕ್ತಿಯಾಗಿಯೇ ಉಳಿಯುತ್ತಾರೆ. ಅದರಲ್ಲಿ ಸಂಶಯಲ್ಲ. 
ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next