Advertisement

ಆಸ್ಟ್ರೇಲಿಯ ಕ್ರಿಕೆಟ್: ನಿಯಮ ಪಾಲಿಸಿದ ಅಪರೂಪದ ನಿದರ್ಶನ

02:49 AM May 10, 2019 | Sriram |

ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್ ತಂಡ ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೈದಾನದಲ್ಲಿ ನಿಯ ಮ ಉಲ್ಲಂಘಿಸದೆ ಕ್ರಿಕೆಟ್ ಋತು ವನ್ನು ಮುಗಿಸಿದೆ ಎಂದು ‘ಕ್ರಿಕೆಟ್ ಆಸ್ಟ್ರೇಲಿಯ’ ಹೇಳಿದೆ. ಇದಕ್ಕೆಲ್ಲ ಕಾರಣ, ಕಳೆದ ವರ್ಷ ಆಸ್ಟ್ರೇಲಿಯ ತಂಡ ನಡೆಸಿದ ಚೆಂಡುವಿರೂಪ ಹಗರಣ. ಅಲ್ಲಿಂದ ತಂಡದೊಳಗಿನ ವಾತಾವರಣ ಬದಲು ಮಾಡಲು ಆಸ್ಟ್ರೇಲಿಯ ಪಣ ತೊಟ್ಟು, ಇದರಲ್ಲಿ ಧಾರಾಳ ಯಶಸ್ಸು ಕಂಡಿದೆ.

Advertisement

2018ರ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಕ್ಯಾಮರೂನ್‌ ಬಾನ್‌ಕ್ರಾಫ್ಟ್, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದರು. ಅದಾದ ಮೇಲೆ ಬ್ಯಾನ್‌ಕ್ರಾಫ್ಟ್ಗೆ 9 ತಿಂಗಳು, ಉಳಿದಿಬ್ಬರಿಗೆ ತಲಾ ಒಂದು ವರ್ಷ ನಿಷೇಧ ಹೇರ ಲಾಗಿತ್ತು. ಈ ಘಟನೆಯ ಬಳಿಕ ಆಸ್ಟ್ರೇಲಿಯ ತಂಡದೊಳಗಿನ ಆಂತರಿಕ ಸಂಸ್ಕೃತಿ ಸುಧಾರಿಸಲು ‘ಕ್ರಿಕೆಟ್ ಆಸ್ಟ್ರೇಲಿಯ’ ನಿರ್ಧರಿಸಿತ್ತು. ಇದಕ್ಕಾಗಿ ಸಮಿತಿ ರಚನೆ ಮಾಡಿ ತನಿಖೆ ಮಾಡಿಸಲಾಗಿತ್ತು. ಆಗ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದವು.

ಗೆಲ್ಲಲೇಬೇಕೆಂಬ ಏಕೈಕ ಒತ್ತಡ
ಕ್ರಿಕೆಟ್ ಆಸ್ಟ್ರೇಲಿಯದ ಆಟಗಾರರು ವಿಪರೀತ ಅಹಂಕಾರಿಗಳಾಗಿದ್ದರು. ಗೆಲ್ಲಲೇಬೇಕೆಂಬ ಏಕೈಕ ಒತ್ತಡ ಅವರ ಮೇಲಿದ್ದರಿಂದ, ಇದಕ್ಕಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡುವ ಸ್ಥಿತಿಗೆ ತಲುಪಿದ್ದರು. ಸ್ವತಃ ಕ್ರಿಕೆಟ್ ಆಸ್ಟ್ರೇಲಿಯದ ಮಾಜಿ ಮುಖ್ಯಸ್ಥರೇ ಅಂತಹ ಒತ್ತಡವನ್ನು ಹೇರಿದ್ದರು. ಆದ್ದರಿಂದ ಆಸೀಸ್‌ ಆಟಗಾರರು ಅಸಹಾಯಕ ಸ್ಥಿತಿಗೆ ತಲುಪಿದ್ದರು.

ಇದೆಲ್ಲದರ ಪರಿಣಾಮ ಮೈದಾನದಲ್ಲಿ ಅವರ ವರ್ತನೆ ಹದಗೆಟ್ಟಿತು. ಪ್ರತೀ ಬಾರಿಯೂ ನಿಯಮ ಉಲ್ಲಂಘನೆಯಾದ ಆರೋಪ ಕೇಳಿಬರುತ್ತಿತ್ತು. ಈ ಬಾರಿ ಆಟಗಾರ ವರ್ತನೆಯಲ್ಲಿ ಸುಧಾರಣೆಯಲ್ಲಿ ಬದಲಾವಣೆ ತರಲು ಮಂಡಳಿ ಪ್ರಯತ್ನಿಸಿದೆ. ಬರೀ ಗೆಲುವೊಂದೇ ಮಾನದಂಡವಲ್ಲ, ನಮ್ಮ ವರ್ತನೆಯಿಂದಲೂ ಎದುರಾಳಿಗಳನ್ನು ಗೆಲ್ಲಬೇಕೆಂಬ ಸಂದೇಶವನ್ನು ನೀಡಲು ಕ್ರಿಕೆಟ್ ಆಸ್ಟ್ರೇಲಿಯ ಯಶಸ್ವಿಯಾಗಿದೆ. ಇದನ್ನು ಆಟಗಾರರು ಒಪ್ಪಿಕೊಂಡಿದ್ದರಿಂದ ವಾತಾವರಣದಲ್ಲಿ ಸಂಪೂರ್ಣ ಬದಲಾವಣೆಯಾಗಿದೆ.

ಸಂದಿಗ್ಧ ಘಟ್ಟದಲ್ಲಿ ಕಾಂಗರೂ ಕ್ರಿಕೆಟ್

ತನ್ನ ಕ್ರಿಕೆಟ್ ಇತಿಹಾಸದಲ್ಲೇ ಆಸ್ಟ್ರೇಲಿಯ ಕ್ರಿಕೆಟ್ ತಂಡ ಅತ್ಯಂತ ಸಂದಿಗ್ಧ ಘಟ್ಟದಲ್ಲಿದೆ. 5 ಬಾರಿ ಏಕದಿನ ವಿಶ್ವಕಪ್‌ ಗೆದ್ದಿರುವ ಅದು ಈ ಬಾರಿ ನೆಚ್ಚಿನ ತಂಡ ಎನ್ನುವ ಹಣೆಪಟ್ಟಿ ಪಡೆಯಲೂ ಪರದಾಡುತ್ತಿದೆ. ಚೆಂಡು ವಿರೂಪ ಪ್ರಕರಣದ ಬಳಿಕ ದುರ್ಬಲ ತಂಡಗಳ ವಿರುದ್ಧವೂ ಮುಗ್ಗರಿಸಿದೆ. ಹೀನಾಯ ಸರಣಿ ಸೋಲುಗಳನ್ನು ಅನುಭವಿಸಿದೆ. ಕಳೆದೆರಡು ತಿಂಗಳ ಹಿಂದೆ ಭಾರತಕ್ಕೆ ಬಂದ ಅನಂತರ ಆಸೀಸ್‌ ಕ್ರಿಕೆಟ್ ಸ್ಥಿತಿ ಸುಧಾರಿಸಿಕೊಂಡಿದೆ. ಗೆಲುವು ಕಾಣಲಾರಂಭಿಸಿದೆ. ಇದೇ ಸಂದರ್ಭದಲ್ಲಿ ನಿಷೇಧ ಮುಗಿಸಿ ಭರ್ಜರಿ ಲಯದೊಂದಿಗೆ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ವಾಪಸಾಗಿದ್ದು ಆಸೀಸ್‌ ಆತ್ಮವಿಶ್ವಾಸ ಹೆಚ್ಚಿದೆ.
Advertisement

Udayavani is now on Telegram. Click here to join our channel and stay updated with the latest news.

Next