Advertisement

ಸಮಸ್ಯೆಗಳ ಆಗರವಾದ ವಸತಿ ನಿಲಯ

10:24 AM Aug 19, 2019 | Team Udayavani |

ಔರಾದ: ಪಟ್ಟಣದ ಅಲ್ಪ ಸಂಖ್ಯಾತರ ವಸತಿ ನಿಲಯದಲ್ಲಿನ ಸಮಸ್ಯೆಗಳ ಕುರಿತು ಅಲ್ಲಿನ 30 ವಿದ್ಯಾರ್ಥಿನಿಯರು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷರು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು.

Advertisement

ವಸತಿ ನಿಲಯದ ವಾರ್ಡನ್‌ ಕಚೇರಿಯಲ್ಲಿ ನಿತ್ಯ ತಡರಾತ್ರಿಯಲ್ಲಿ ಪಾರ್ಟಿ ಹಾಗೂ ಮೋಜು ಮಸ್ತಿ ನಡೆಯುತ್ತಿದೆ. ಇದರಿಂದ ನಮಗೆ ಹಲವು ತೊಂದರೆಯಾಗುತ್ತಿವೆ. ಹೆಣ್ಣು ಮಕ್ಕಳ ವಸತಿನಿಲಯಕ್ಕೆ ಯುವಕರು ಬರಬಾರದೆಂದು ನಿಯಮ ಇದ್ದರೂ ದಿನ ರಾತ್ರಿಯಲ್ಲಿ ಯಾವಾಗಲೂ ಇಲ್ಲಿಗೆ ಯುವಕರರು ಬರುತ್ತಿದ್ದಾರೆ. ದಯವಿಟ್ಟು ಪತ್ರ ತಲುಪಿದ ತಕ್ಷಣ ನಮ್ಮ ರಕ್ಷಣೆ ಧಾವಿಸಬೇಕು ಎಂದು ವಿದ್ಯಾರ್ಥಿನಿಯರು ಪತ್ರದಲ್ಲಿ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಅವರು ಭೇಟಿ ನೀಡಿ ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಆಲಿಸಿ, ವಿದ್ಯಾರ್ಥಿನಿಯರ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿ ಧೈರ್ಯ ತುಂಬಿದರು.

ವಿದ್ಯಾರ್ಥಿನಿಯರಿಗಷ್ಟೆ ಅಲ್ಲ ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೂ ವಾರ್ಡನ್‌ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಪ್ರತಿನಿತ್ಯ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುವಂತೆ ಹೇಳುತ್ತಾರೆ. ಮಾತು ಕೇಳದಿದ್ದರೆ ಹೊಡೆಯಲು ಬರುತ್ತಾರೆ ಎಂದು ವಸತಿ ನಿಲಯದ ಸಿಬ್ಬಂದಿಯೊಬ್ಬರು ಅಳುತ್ತ ಅಳಲು ತೋಡಿಕೊಂಡರು.

ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಪಾಲಕರು ಕಾಲೇಜು ಶಿಕ್ಷಣಕ್ಕೆ ಕಳಿಸುವುದಿಲ್ಲ. ಆದರೆ ನಮ್ಮ ಪಾಲಕರು ನಮ್ಮ ಮೇಲೆ ನಂಬಿಕೆ ಇಟ್ಟು ಶಿಕ್ಷಣಕ್ಕೆ ಕಳಿಸಿದ್ದಾರೆ. ಆದರೆ ಇಲ್ಲಿ ಸಮಸ್ಯೆಗಳಿದ್ದು, ಸೌರ್ಯಗಳೂ ನಮ್ಮಿಂದ ದೂರವಾಗಿವೆ. ಸರ್ಕಾರದ ನಿಯಮದಂತೆ ಸೌಕರ್ಯ ನೀಡಿ ಅಂದರೆ ವಸತಿ ನಿಲಯದಿಂದ ಹೊರಗೆ ಹಾಕುತ್ತಾರೆ ಎಂದು ಜಿಪಂ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಮುಂದೆ ವಿದ್ಯಾರ್ಥಿ ನಿಯರು ದೂರಿದರು.

ಅಧಿಕಾರಿಗಳ ತರಾಟೆ: ವಸತಿ ನಿಲಯದಲ್ಲಿನ ದುಸ್ಥಿತಿ ಹಾಗೂ ವಾರ್ಡನ್‌ ಮಾಡುತ್ತಿರುವ ಅನಾಚಾರಗಳನ್ನು ಆಲಿಸುವ ಮನಸ್ಸು ನಿಮಗೆ ಯಾಕೆ ಇಲ್ಲದಂತಾಗಿದೆ. ಸರ್ಕಾರ ನಿಮಗೆ ವೇತನ ಕೋಡುತ್ತಿರುವುದು ವಿದ್ಯಾರ್ಥಿಗಳನ್ನು ಪಾಲಕರಂತೆ ಪಾಲನೆ ಪೋಷಣೆ ಮಾಡಲು ಹೊರತು ತಮ್ಮ ಮನಬಂದತೆ ಕೆಲಸ ಮಾಡಿಸಿಕೊಳ್ಳಲು ಅಲ್ಲ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು. ಪಟ್ಟಣದ ಜನರು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಈ ಬಗ್ಗೆ ನಿಮ್ಮ ಗಮನಕ್ಕೆ ತಂದರೂ ಯಾಕೆ ಕಣ್ಣಿದ್ದೂ ಕುರುಡರಂತೆ ಕುಳಿತಿದ್ದೀರಿ ಎಂದು ಜಿಪಂ ಅಧ್ಯಕ್ಷರು ವಾಗ್ಧಾಳಿ ನಡೆಸಿದರು.

Advertisement

ಸ್ಥಳಕ್ಕೆ ಬಂದ ಜಿಪಂ ಸಿಇಒ: ವಸತಿ ನಿಲಯ ಸ್ಥಿತಿಗತಿಯ ಬಗ್ಗೆ ಜಿಪಂ ಅಧ್ಯಕ್ಷರು ಸಿಇಒ ಮಹಾಂತೇ ಬೀಳಗಿ ಅವರಿಗೆ ತಿಳಿಸಿದ ಕೂಡಲೆ ಸ್ಥಳಕ್ಕೆ ಬಂದು ವಿದ್ಯಾರ್ಥಿನಿಯರಿಂದ ಸಮಸ್ಯೆ ಆಲಿಸಿ, ಸಿಬ್ಬಂದಿಗಳೊಂದಿಗೂ ಮಾತನಾಡಿದರು. ಬಳಿಕ ವಾರ್ಡನ್‌ರನ್ನು ಕೂಡಲೆ ಬೇರೆ ಕಡೆಗೆ ಕಳುಹಿಸಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ನಿಮ್ಮೊಂದಿಗೆ ಜಿಲ್ಲಾಡಳಿತವಿದೆ. ಇಂಥ ಸಮಸ್ಯೆಗಳನ್ನು ಇನ್ನು ಮುಂದೆ ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಉತ್ತಮ ಶಿಕ್ಷಣ ಪಡೆದುಕೊಂಡು ಸರ್ಕಾರಕ್ಕೆ ಮತ್ತು ವಸತಿ ನಿಲಯಕ್ಕೂ ಗೌರವ ತಂದುವಕೊಡುವಂತೆ ಜಿಪಂ ಸಿಇಒ ಮಹಾಂತೇಶ ಭರವಸೆ ನೀಡಿದರು. ಅಲ್ಪಸಂಖ್ಯಾತರ ತಾಲೂಕು ಅಧಿಕಾರಿ ಹಾಗೂ ವಸತಿ ನಿಲಯ ವಾರ್ಡನ್‌ ಮೀನಾಕ್ಷಿ ಎಂಬುವವರೇ ಆಗಿದ್ದಾರೆ. ಹೀಗಾಗಿ ಸಮಸ್ಯೆಗೆ ಜಾಸ್ತಿಯಾಗುತ್ತಿದೆ. ಹಲವು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ ಎಂದು ಇಲಾಖೆಯಲ್ಲಿ ನಡೆದ ಪ್ರತಿಯೊಂದು ಕೆಲಸಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ವಾರ್ಡನ್‌ರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಜಿಪಂ ಅಧ್ಯಕ್ಷರು ಸಿಇಒಗೆ ತಿಳಿಸಿದರು.

ಎಬಿವಿಪಿ ಮುಖಂಡರ ವಿರುದ್ಧ ಗರಂ: ವಸತಿ ನಿಲಯಕ್ಕೆ ಜಿಪಂ ಸಿಇಒ ಹಾಗೂ ಜಿಪಂ ಅಧ್ಯಕ್ಷರು ಬಂದ ಬಳಿಕ, ಎಬಿವಿಪಿ ಪ್ರಮುಖ ಅಂಬಾದಾಶ ನೆಳಗೆ ಅಲ್ಪಸಂಖ್ಯಾತರ ನಿಲಯಕ್ಕೆ ಬಂದು, ಇಲ್ಲಿ ಸಮಸ್ಯೆಯಿದೆ ಬಗೆ ಹರಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಆಗ ಜಿಪಂ ಅಧ್ಯಕ್ಷರು, ಅವರ ಕಷ್ಟಕ್ಕೆ ಬಾರದಿರುವ ಸಂಘಟನೆಯ ಮುಖಂಡರನ್ನು ನಾನು ಗುರುತಿಸಲ್ಲ ಎಂದು ಎಬಿವಿಪಿ ಪ್ರಮುಖರ ವಿರುದ್ಧ ಗರಂ ಆದರು.

ವಾರ್ಡನ್‌ ಗೈರು: ವಸತಿ ನಿಲಯದ ವಾರ್ಡನ್‌ ಆಗಿರುವ ಮೀನಾಕ್ಷಿ ಅವರು, ಜಿಪಂ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಮತ್ತು ಔರಾದ ಸಿಪಿಐ ರಮೇಶ ಕುಮಾರ ಮೈಲುರಕರ್‌ ಬಂದಾಗ ಹಾಜರಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next