Advertisement

ಕಮಿಷನ್‌, ರೆಸಾರ್ಟ್‌ ರಾಜಕೀಯದ ಆಡಿಯೋ ವೈರಲ್‌

09:29 PM Jan 21, 2020 | Team Udayavani |

ಹನೂರು: ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲ ಇನ್ನೂ ಬಗೆಹರಿದಿಲ್ಲ, ಆದರೂ ಪಟ್ಟಣ ಪಂಚಾಯ್ತಿಯ ಇಬ್ಬರು ನೂತನ ಸದಸ್ಯರು ದೂರವಾಣಿಯಲ್ಲಿ ಚರ್ಚೆ ಮಾಡಿರುವ ಆಡಿಯೋವೊಂದು ವೈರಲ್‌ ಆಗಿದ್ದು, ಹನೂರು ಪಟ್ಟಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

Advertisement

ಈ ಆಡಿಯೋದಲ್ಲಿ ಮಾತನಾಡಿದವರು 11ನೇ ವಾರ್ಡ್‌ನ ಕಾಂಗ್ರೆಸ್‌ ಪಕ್ಷದ ಸದಸ್ಯ ಸಂಪತ್‌ ಕುಮಾರ್‌ ಮತ್ತು 13ನೇ ವಾರ್ಡ್‌ನ ಜೆಡಿಎಸ್‌ಸದಸ್ಯ ಮಹೇಶ್‌ ಕುಮಾರ್‌ ಎನ್ನಲಾಗಿದೆ. ಈ ಆಡಿಯೋದಲ್ಲಿ ಅಧ್ಯಕ್ಷ ಹುದ್ದೆ ವೇಳೆ ಕೈಗೊಳ್ಳಬೇಕಾದ ನಿರ್ಧಾರ, ವಾರ್ಡ್‌ನಲ್ಲಿ ಕಾಮಗಾರಿ ನಡೆಯುವ ವೇಳೆ ಗುತ್ತಿಗೆದಾರರಿಂದ ತಾವು ಪಡೆಯಬೇಕಿರುವ ಕಮಿಷನ್‌, ರೆಸಾರ್ಟ್‌ ರಾಜಕೀಯಗಳೆಲ್ಲದರ ಬಗ್ಗೆ ಚರ್ಚೆ ನಡೆದಿದೆ. ಸುಮಾರು 20 ನಿಮಿಷಗಳ ಕಾಲ ನಡೆದಿರುವ ಈ ಚರ್ಚೆಯಿಂದ ಸಾರ್ವಜನಿಕರು ನೂತನ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಬದಲಾವಣೆ ಬಗ್ಗೆ ಚರ್ಚೆ: ಹನೂರು ಪಟ್ಟಣ ಪಂಚಾಯ್ತಿ ಮೀಸಲಾತಿ ಹುದ್ದೆಯನ್ನು ಬದಲಾವಣೆ ಮಾಡಲು ಶಾಸಕರ ಕೈಯಲ್ಲಿ ಸಾಧ್ಯವಿದೆ. ಈಗಾಗಲೇ ಈ ಬಗ್ಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಮೂಲಕ ಶಾಸಕರ ಗಮನಕ್ಕೆ ತರಲಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಗೊಂದಲ ಉಂಟಾಗಲಿದ್ದು, ಕೆಲ ಸದಸ್ಯರು ಅಸಮಾಧಾನ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಲು ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ.

ಅಧ್ಯಕ್ಷ ಚುನಾವಣೆ ವೇಳೆ 5 ಲಕ್ಷಕ್ಕೆ ಬೇಡಿಕೆ: ಇದೀಗ ಹನೂರು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೀಸಲಾತಿ ವಿಂಗಡನೆ ನ್ಯಾಯಾಲಯದಲ್ಲಿರುವುದರಿಂದ ಆಡಳಿತ ಮಂಡಳಿಯ ರಚನೆ ಮತ್ತು ಅಧ್ಯಕ್ಷ ಚುನಾವಣೆ ನೆನೆಗುದಿಗೆ ಬಿದ್ದಿದೆ. ಆದರೆ, ಹನೂರು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ 3 ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಪ್ರತಿ ಸದಸ್ಯನಿಗೆ 5 ಲಕ್ಷ ರೂ. ನೀಡುವವರಿಗೆ ಮತ ಚಲಾವಣೆ ಮಾಡಬೇಕು.

ತಾವೂ ಕೂಡ ಹಣ ಖರ್ಚು ಮಾಡಿಯೇ ಗೆದ್ದಿದ್ದು, ತಾನು 23 ಲಕ್ಷ ರೂ. ಖರ್ಚು ಮಾಡಿರುವುದಾಗಿ ಜೆಡಿಎಸ್‌ ಸದಸ್ಯ ತಿಳಿಸಿದ್ದಾರೆ. ಅಲ್ಲದೆ, ಕೈ ಮೇಲೆ ಹಣ ಮಾತಿನಂತೆ ಮತ ಎಂಬುವ ನಿರ್ಧಾರ ತೆಗೆದುಕೊಳ್ಳಬೇಕು. ಅಧ್ಯಕ್ಷ ಸ್ಥಾನ ಅಲಂಕರಿಸುವ ಸದಸ್ಯ 40 ಲಕ್ಷ ರೂ. ಖರ್ಚು ಮಾಡಲು ಸಿದ್ಧರಿರಬೇಕು. ಒಂದೊಮ್ಮೆ ಆ ರೀತಿ ನೀಡಿದಲ್ಲಿ ತಾನು ಹಾಕಿರುವ ಬಂಡವಾಳ ವಾಪಸ್ಸಾಗಲಿದೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ.

Advertisement

ಶೇ.5ರಷ್ಟು ಕಮೀಷನ್‌ ಪಡೆಯುವ ಬಗ್ಗೆ ಚರ್ಚೆ: 11ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಸಂಪತ್‌ ಕುಮಾರ್‌ ತನ್ನ ವಾರ್ಡ್‌ನಲ್ಲಿ ಈಗಾಗಲೇ 3.5 ಕೋಟಿ ವೆಚ್ಚದ ಕಾಮಗಾರಿ ನಡೆದರೆ, ಶೇ.5ರಷ್ಟು ಕಮಿಷನ್‌ ಎಂದರೂ 15 ಲಕ್ಷಕ್ಕೂ ಹೆಚ್ಚು ಹಣ ಬರುತ್ತದೆ. ಅಲ್ಲದೆ, ಹನೂರು ಪಟ್ಟಣ ನೂತನವಾಗಿ ತಾಲೂಕಾಗಿರುವುದರಿಂದ 100 ಕೋಟಿ ರೂ. ಅನುದಾನ, ರಸ್ತೆ ಯೋಜನೆ, ಒಳಚರಂಡಿ ಮಂಡಳಿ ಅನುದಾನ ಎಲ್ಲವೂ ಬರಲಿದೆ. ಶೇ.5ರಷ್ಟು ಕಮಿಷನ್‌ ಎಂದರೂ ಓರ್ವ ಶಾಸಕನಿಗೆ ಸರಿ ಸಮನಾಗಿ ಹಣ ಲಭಿಸಲಿದೆ. ಒಂದೊಮ್ಮೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಾಗಿದ ಬಳಿಕ ತಮ್ಮ ಪಾಲಿನ ಶೇ.2ರಷ್ಟು ಕಮಿಷನ್‌ ಕೊಟ್ಟರು ಕೊಡುತ್ತಾರೆ. ಇಲ್ಲವಾದಲ್ಲಿ ಅವರೇ ಪಡೆದುಕೊಳ್ಳುತ್ತಾರೆ. ಆದ್ದರಿಂದ ಮೊದಲೇ ಮಾತುಕತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ.

ಹಣ, ಹೆಂಡ , ಹೆಣ್ಣು ಕೊಡಬೇಕು: ಚರ್ಚೆಯಲ್ಲಿ ಜೆಡಿಎಸ್‌ ಸದಸ್ಯ ಮಹೇಶ್‌ಕುಮಾರ್‌ ತಮ್ಮ ಪಕ್ಷದಿಂದ 6 ಸದಸ್ಯರನ್ನೂ ಚುನಾವಣೆ ದಿನಾಂಕ ನಿಗದಿಯಾದ ಮೇಲೆ ಬೇರೆಡೆಗೆ ಕರೆದೊಯ್ದು, ಚುನಾವಣೆ ದಿನ ವಾಪಸ್ಸು ಕರೆತರುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬುದರ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೆ ತನ್ನ ಕಷ್ಟದ ಬಗ್ಗೆ ಆ ದಿನಕ್ಕೆ ತಿಳಿಸುತ್ತೇನೆ. ತಾನು ಎಲ್ಲಿಯೂ ಬರುವುದಿಲ್ಲ ಎಂಬುದರ ಬಗ್ಗೆ ಅಭಿಪ್ರಾಯ ತಿಳಿಸಿದ್ದೇನೆ ಎಂಬುದಾಗಿ ಚರ್ಚಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಸದಸ್ಯ ಸಂಪತ್‌ಕುಮಾರ್‌, ಇದನ್ನು ಎಲ್ಲಾ ಪಕ್ಷದಲ್ಲಿ ಮಾಡುತ್ತಾರೆ. ನಮ್ಮನ್ನು ಕಿಡ್ನಾಪ್‌ ಮಾಡಿ ಕರೆದೊಯ್ದರೆ ಕುಡಿಯಲು, ತಿನ್ನಲು, ಲಾಡ್ಜ್, ಅಗತ್ಯವಿದ್ದರೆ ಹೆಣ್ಣನ್ನೂ ಸಹ ನೀಡಲಿದ್ದಾರೆ. ನಿನಗೆ ರೆಸಾರ್ಟ್‌ ರಾಜಕೀಯ ತಿಳಿದಿಲ್ಲವೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರು, ಕೆಲ ಸದಸ್ಯರ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಒಟ್ಟಾರೆ ಈ ಆಡಿಯೋ ಹನೂರು ಪಟ್ಟಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮುಂದೆ ಯಾವ ಸ್ವರೂಪ ಪಡೆಯಲಿದೆ ಕಾದು ನೋಡಬೇಕಿದೆ.

ಸದಸ್ಯತ್ವ ವಜಾಗೊಳಿಸಲು ಹೋರಾಟಕ್ಕೆ ತೀರ್ಮಾನ: ಪಟ್ಟಣ ಪಂಚಾಯ್ತಿ ನೂತನ ಸದಸ್ಯರು ದೂರವಾಣಿಯಲ್ಲಿ ಚುನಾವಣೆಯ ಬಗ್ಗೆ ಚರ್ಚೆ ಮಾಡಿರುವ ಧ್ವನಿ ಮುದ್ರಿಕೆ ವೈರಲ್‌ ಆಗಿದೆ. ಚುನಾವಣೆಯಲ್ಲಿ ಯಾವ ರೀತಿ ಗೆದ್ದು ಬಂದಿದ್ದಾರೆ. ಮುಂದೆ ಯಾವ ರೀತಿಯಲ್ಲಿ ಹಣ ಸಂಪಾದನೆ ಮಾಡಬೇಕು ಎಂಬುದರ ಬಗ್ಗೆ ಅವರ ಚರ್ಚೆ ನಡೆಸಿದ್ದಾರೆ. ಒಟ್ಟಾರೆ ಈ ಧ್ವನಿ ಮುದ್ರಿಕೆಯಿಂದ ಜನಪ್ರತಿನಿಧಿಗಳ ಮಾನ ಬೀದಿಗೆ ಬಂದಂತಾಗಿದೆ. ಈ ಧ್ವನಿ ಮುದ್ರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ, ದೂರು ದಾಖಲಿಸಿ ಅವರ ಸದಸ್ಯತ್ವವನ್ನು ವಜಾಗೊಳಿಸುವವರೆಗೂ ಹೋರಾಟ ಮಾಡಲು ನಿರ್ಧರಿಸಿದ್ದೇನೆ ಎಂದು ಪಪಂ ಮಾಜಿ ಸದಸ್ಯರೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next