Advertisement

ರಾಜ್ಯದೆಲ್ಲೆಡೆ ಆಡಿಯೋ ಅಬ್ಬರ

12:30 AM Feb 11, 2019 | Team Udayavani |

ಆಪರೇಷನ್‌ ಕಮಲ ವಿಷಯವಾಗಿ ದೇವದುರ್ಗದಲ್ಲಿ ಮಾತನಾಡಿದ್ದು ನಾನೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೀಡಿರುವ ಹೇಳಿಕೆಯಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌
ನಾಯಕರಿಗೆ ಪ್ರಮುಖ ಅಸ್ತ್ರ  ಸಿಕ್ಕಂತಾಗಿದೆ. “ಯಡಿಯೂರಪ್ಪ ತಾವೇ ಹೇಳಿದಂತೆ ಈಗ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ
ಆಗ್ರಹಿಸಿದರೆ, “ಸಿಎಂ ಕುಮಾರಸ್ವಾಮಿ ಥರ್ಡ್‌ ಗ್ರೇಡ್‌ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ’ ಎಂದು ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಈ ನಡುವೆ, ಆಡಿಯೋದಲ್ಲಿ ಉಲ್ಲೇಖೀಸಲಾಗಿರುವ
ವಿಚಾರಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿರುವುದು ಬಿಸಿ ಚರ್ಚೆಗೆ ಕಾರಣವಾಗಿದೆ.

Advertisement

ಆಪರೇಷನ್‌ ಕಮಲಕ್ಕೆ ಪ್ರಧಾನಿ ಉತ್ತರಿಸಲಿ

ಬೆಂಗಳೂರು: “ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಆಪರೇಷನ್‌ ಕಮಲಕ್ಕೆ ಪ್ರತಿಕ್ರಿಯಿಸಿ, ಶಾಸಕರ ಖರೀದಿಗೆ 200 ಕೋಟಿ ರೂ.ಹಣ ರಾಜ್ಯ ಬಿಜೆಪಿ ನಾಯಕರಿಗೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಉತ್ತರ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸಿ ಸುಳ್ಳು ಭಾಷಣ ಮಾಡಿ ಹೋಗುವುದನ್ನು ಕೇಳಲು ನಾವು ಸಿದ್ಧರಿಲ್ಲ.

ರಾಜ್ಯದಲ್ಲಿ ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ ಆಪರೇಷನ್‌ ಕಮಲ ಮಾಡಲು ಕೋಟಿ ಕೋಟಿ ಹಣದ ಭರವಸೆ ನೀಡಿರುವುದು ಆಡಿಯೋ ಮೂಲಕ ಬಹಿರಂಗವಾಗಿದೆ. ಅಲ್ಲದೇ ಆಡಿಯೋದಲ್ಲಿರುವುದು ಯಡಿಯೂರಪ್ಪ ಅವರದೇ ಧ್ವನಿ ಎನ್ನುವುದೂ ಸ್ವಷ್ಟವಾಗಿದೆ. ಪ್ರತಿಯೊಬ್ಬ ಶಾಸಕರಿಗೆ ಮಂತ್ರಿ ಸ್ಥಾನ ಹಾಗೂ ಚುನಾವಣೆಗೆ 10 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ಅಷ್ಟೊಂದು ಹಣ ಬಿಜೆಪಿ ನಾಯಕರಿಗೆ ಎಲ್ಲಿಂದ ಬರುತ್ತಿದೆ. ಕೇಂದ್ರ ಸರ್ಕಾರ ನೀಡಿದೆಯೇ ಅಥವಾ ಉದ್ಯಮಿಗಳಿಂದ ಕೊಡಿಸಿದ್ದೀರಾ ಎಂದು ಪ್ರಧಾನಿ ಉತ್ತರಿಸುವಂತೆ ಆಗ್ರಹಿಸಿದರು. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪ್ರಧಾನಿ ಮೋದಿಯವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗಳನ್ನು ನೋಡಿಕೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. ಹೀಗಾಗಿ ಪ್ರಧಾನಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು
ಎಂದರು.

ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿಯ ಆಮಿಷಕ್ಕೆ ಬಲಿಯಾಗುತ್ತಿರುವ ಬಗ್ಗೆ ಬೇಸರವಿದೆ.
ಈಗಲೂ ಅವರು ಮನಸ್ಸು ಬದಲಾಯಿಸಿಕೊಂಡು ಬಂದು ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ
ಮಾಡಬಹುದು

● ದಿನೇಶ್‌ ಗುಂಡೂರಾವ್‌

Advertisement

ಬಿಎಸ್‌ವೈ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ’

ಬಾಗಲಕೋಟೆ: ‘ಆಪರೇಷನ್‌ ಕಮಲ ವಿಷಯವಾಗಿ ದೇವದುರ್ಗದಲ್ಲಿ ಮಾತನಾಡಿದ್ದು ನಾನೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಪ್ಪಿಕೊಂಡಿದ್ದು, ತಾವೇ ಹೇಳಿದಂತೆ ಈಗ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ಅಷ್ಟೇ ಅಲ್ಲ, ರಾಜಕಾರಣದಿಂದಲೇ ದೂರ ಇರುವುದಾಗಿ ಯಡಿಯೂರಪ್ಪ ಹೇಳಿಕೊಂಡಿದ್ದರು. ಹೀಗಾಗಿ ಈಗ ಅವರು ಶಾಸಕ ಸ್ಥಾನ ಬಿಡುವ ಜತೆಗೆ ರಾಜಕೀಯ ತೊರೆದು ಮನೆಗೆ ಹೋಗಬೇಕು. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದರು. ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗೆ ವಿಷಯ ತಿಳಿಸಿಲ್ಲ. ಅವರಿಗೆ ಪ್ರೋಟೋಕಾಲ್‌ ಬಗ್ಗೆ ಗೊತ್ತಿಲ್ಲ. ರಾಜಕೀಯ ಭಾಷಣ ಮಾಡಲು ಇಲ್ಲಿಗೆ ಬಂದಿದ್ದಾರೆ. ನಾವು ರಾಜಕೀಯವಾಗಿ ಎದುರಿಸುತ್ತೇವೆ ಎಂದರು.

ಇಂದು ಸದನದಲ್ಲಿ ಪ್ರಸ್ತಾಪ

ರಾಯಚೂರು: ಆಪರೇಷನ್‌ ಕಮಲದಲ್ಲಿ ನನ್ನ ಹೆಸರು ತಳುಕು ಹಾಕಿಕೊಂಡಿರುವ ಬಗ್ಗೆ ಸದನದಲ್ಲಿಯೇ ಪ್ರಸ್ತಾಪಿಸುತ್ತೇನೆ. ಹೊರಗಡೆ ಮಾತನಾಡಿ ತಪ್ಪು ಮಾಡಲಾರೆ. ನಾನೇನು ಹಿಟ್ಲರ್‌ ಅಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತೇನೆ ಎಂದು ವಿಧಾನಸಭೆ ಸ್ಪೀಕರ್‌ ರಮೇಶಕುಮಾರ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಪರೇಷನ್‌ ಕಮಲ ಕುರಿತಂತೆ ಮುಖ್ಯಮಂತ್ರಿಗಳು ನನಗೆ ಪತ್ರ ಬರೆದಿದ್ದಾರೆ. ಆಡಿಯೋವನ್ನು ಕೇಳಿದ್ದೇನೆ. ಆಡಿಯೋ ಕುರಿತಂತೆ ಸೋಮವಾರ ಸದನದಲ್ಲಿ ಚರ್ಚಿಸುತ್ತೇನೆ. ಜವಾಬ್ದಾರಿ ಸ್ಥಾನದಲ್ಲಿರುವ ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮನ್ನು ನೋಡಿ ಜನ ಪಕ್ಕಕ್ಕೆ ಉಗಿದು ಹೋಗಬಾರದು. ಇದಕ್ಕಿಂತ ಕಠಿಣವಾಗಿ ಮಾತನಾಡಲು ನನಗೆ ಬರುವುದಿಲ್ಲ ಎಂದರು. ಆಪರೇಷನ್‌ ಕಮಲದಲ್ಲಿ ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ನನಗೆ ಗೊತ್ತಿಲ್ಲ. ಆಪರೇಷನ್‌ ಕಮಲದ ಕುರಿತು ನನ್ನನ್ನು ಏನೂ ಪ್ರಶ್ನಿಸಬೇಡಿ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕೇಳಿ ಎಂದರು.

ಸಿಎಂ, ಶರಣಗೌಡ ವಿರುದ್ಧ ದೂರು
ಬೆಂಗಳೂರು: “ಆಪರೇಷನ್‌ ಕಮಲ’ಕ್ಕೆ ಸಂಬಂಧಿಸಿದ್ದು ಎನ್ನಲಾದ ಸಿಎಂ ಕುಮಾರಸ್ವಾಮಿ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ ಆಡಿಯೋ ಸಂಪೂರ್ಣವಾಗಿ ತಿರುಚಲಾದ ಮತ್ತು ನಕಲಿಯಾಗಿದೆ ಎಂದು ಆರೋಪಿಸಿ ಎಂ.ಬಿ.ಮರಮಕಲ್‌ ಅವರು ಭಾನುವಾರ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಗುರುಮಿಠಕಲ್‌ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮರಮಕಲ್‌ ಕೋರಿದ್ದಾರೆ. ಪ್ರಾಥಮಿಕ ತನಿಖೆಯ ಸಲುವಾಗಿ ದೂರನ್ನು ಸ್ವೀಕರಿಸಿದೆ ಎಂದು ವಿಧಾನಸೌಧ ಪೊಲೀಸ್‌ ಠಾಣಾಧಿಕಾರಿ ಹಿಂಬರಹ ನೀಡಿದ್ದಾರೆ. ಆದರೆ ದೂರು ಸ್ವೀಕಾರ ದಿನಾಂಕ ವನ್ನು 10- 02- 2018 ಎಂಬುದಾಗಿ ಹಿಂಬರದಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next