Advertisement

ಎಲ್ಲ ಸಮಾಜಗಳ ಬೇಡಿಕೆ ಈಡೇರಿಸಲು ಯತ್ನ

06:25 AM Jan 14, 2019 | Team Udayavani |

ಹರಿಹರ: ಕ್ಷೇತ್ರದ ಜನರು ನನ್ನನ್ನು ಹುಡುಕುವಂತಹ ಸ್ಥಿತಿ ಬರಬಾರದು. ನಾನೇ ಅವರ ಬಳಿ ತೆರಳಬೇಕು ಎಂಬ ಉದ್ದೇಶದಿಂದ ಆಗಾಗ್ಗೆ ಸಾರ್ವಜನಿಕರೊಂದಿಗೆ ಸಭೆ ನಡೆಸುತ್ತಿರುವುದಾಗಿ ಎಂದು ಶಾಸಕ ಎಸ್‌.ರಾಮಪ್ಪ ಹೇಳಿದರು.

Advertisement

ನಗರದ ಕಾಟ್ವೇ ಭವನದಲ್ಲಿ ಭಾನುವಾರ ವಿವಿಧ ಸಮಾಜಗಳ ಮುಖಂಡರೊಡನೆ ಅಬಿವೃದ್ಧಿ ಕಾರ್ಯಗಳ ಚರ್ಚೆ ನಡೆಸಿದ ಅವರು, ವಿವಿಧ ಸಮಾಜಗಳ ಬೇಡಿಕೆಗಳು ವಿಭಿನ್ನವಾಗಿವೆ. ವೈಯಕ್ತಿಕವಾಗಿ ಎಲ್ಲರ ಭೇಟಿ ಅಸಾಧ್ಯವಾಗಿರುವುದರಿಂದ ಆಯಾ ಸಮಾಜದ ಮುಖಂಡರ ಸಭೆ ಕರೆದು ಅವರ ಅನಿಸಿಕೆ, ಅಭಿಪ್ರಾಯ ಕೇಳುತ್ತಿದ್ದೇನೆ, ಅಹವಾಲು ಸ್ವೀಕರಿಸುತ್ತಿದ್ದೇನೆ ಎಂದರು.

ಇತ್ತೀಚೆಗೆ ಮುಸ್ಲಿಂ ಸಮುದಾಯದವರ ಸಭೆ ಕರೆದಾಗ ಸಲ್ಲಿಕೆಯಾಗಿದ್ದ ಬೇಡಿಕೆಗಳಲ್ಲಿ ತುರ್ತು ಅಗತ್ಯವಿದ್ದ ಕಾಮಗಾರಿಗಳಿಗೆ 42 ಲಕ್ಷ ರೂ. ಮಂಜೂರು ಮಾಡಿಸಿದ್ದೇನೆ. ಈಗ ಇತರೆ ಸಮುದಾಯಗಳ ಮುಖಂಡರು ಆಗಬೇಕಿರುವ ಕೆಲಸಗಳ ಪಟ್ಟಿ ನೀಡಿದ್ದೀರಿ. ಇವುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಇಂದಿನಿಂದಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ನಗರೋತ್ಥಾನ ಯೋಜನೆಯಡಿ 8 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ 5 ಕೋಟಿ ಸೇರಿದಂತೆ ಒಟ್ಟು 15 ಕೋ. ರೂ. ಬಿಡುಗಡೆಯಾಗುತ್ತಿದೆ. ನಗರದಲ್ಲಿ ಜಿ ಪ್ಲಸ್‌ ಟು ವಸತಿ ಸಂಕೀರ್ಣ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಕಿಷ್ಕಿಂಧೆಯಾಗಿರುವ ನಗರದ ಶಿವಮೊಗ್ಗ ರಸ್ತೆ ಮೇಲ್ದರ್ಜೆಗೇರಿಸುವ ನಿಮಿತ್ತ ಸ್ಥಳೀಯರೊಂದಿಗೆ ಚರ್ಚಿಸುತ್ತೇನೆ. ಅಗಸನಕಟ್ಟೆ ಕರೆ, ಕೊಮರನಹಳ್ಳಿ ಕೆರೆ ಅಭಿವೃದ್ಧಿಗೆ ಹಾಗೂ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇನೆ ಎಂದರು.

ನನಗೆ ಹಿಂದಿನ ಶಾಸಕರಂತೆ ಗತ್ತು ಮಾಡುವುದು ಗೊತ್ತಿಲ್ಲ. ಯಾವುದೇ ಪಕ್ಷದವರಾಗಿದ್ದರೂ ಕ್ಷೇತ್ರದ ಎಲ್ಲಾ ಜನರು ಸಹೋದರನೆಂದು ತಿಳಿದು ನನ್ನ ಸೇವೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆ ಸದಸ್ಯ ಶಂಕರ್‌ ಖಟಾವಕರ್‌, ಕ್ಷೇತ್ರದ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮವನ್ನು ಯಾವುದೇ ಶಾಸಕರು ನಡೆಸಿಲ್ಲ. ಪಕ್ಷಾತೀತ, ಜಾತ್ಯತೀತವಾದ ರಾಮಪ್ಪರ ಕಳಕಳಿ, ಈ ಕಾರ್ಯಕ್ರಮದ ಮೂಲಕ ಗೊತ್ತಾಗುತ್ತಿದೆ ಎಂದರು.

ನಗರಸಭೆ ಸದಸ್ಯ ಬಿ.ರೇವಣಸಿದ್ದಪ್ಪ ಮಾತನಾಡಿ, ಕಾರ್ಮಿಕ, ಕಾರ್ಮಿಕ ಮುಖಂಡ, ನಗರಸಭೆ ಸದಸ್ಯ, ಅಧ್ಯಕ್ಷರಾಗಿ ನಂತರ ಶಾಸಕರಾಗಿರುವ ಎಸ್‌.ರಾಮಪ್ಪರಿಗೆ ಬಡವರ ಸಂಕಷ್ಟದ ಅರಿವಿದೆ ಎಂದರು. ನಗರಸಭೆ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ, ನಗರಸಭೆ ಸದಸ್ಯರಾದ ಕೆ.ಮರಿದೇವ್‌, ಎಸ್‌.ಎಂ. ವಸಂತ್‌, ರತ್ನಮ್ಮ, ಕೃಷ್ಣಸಾ ಭೂತೆ, ಟಿ.ಜೆ. ಮುರಿಗೇಶಪ್ಪ, ಜಿ.ಕೆ. ವಿಠೊಬರಾವ್‌, ಸಿ.ಎನ್‌. ಹುಲಿಗೇಶ್‌, ಎಚ್. ವಿಶ್ವನಾಥಪ್ಪ, ಪರಶುರಾಮ್‌ ಕಾಟ್ವೆ, ಹಂಚಿನ ನಾಗಣ್ಣ, ರುದ್ರಾಚಾರ್‌, ಮಂಜುನಾಥ್‌ ನಿಡಗಲ್‌ ಮತ್ತಿತರರಿದ್ದರು. ಕಾರ್ಯಕ್ರಮದಲ್ಲಿ ಬಂಜಾರಾ ಸಮಾಜ, ನೇಕಾರ ಸಮುದಾಯ, ಭಾವಸಾರ, ಮೇದಾರ, ನಾಯಕ, ವಾಲ್ಮೀಕಿ, ಎಸ್‌.ಎಸ್‌.ಕೆ., ಮರಾಠ, ಛಲವಾದಿ, ಕುರುಹಿನಶೆಟ್ಟಿ, ಆರ್ಯವೈಶ್ಯ, ಕುಂಬಾರ, ಕುರುಬ, ಸ್ವಕುಳಸಾಳಿ, ಪದ್ಮಸಾಲಿ, ಬ್ರಾಹ್ಮಣ, ಭೋವಿ, ಗಂಗಾಮತ, ರೆಡ್ಡಿ ಸಮುದಾಯಗಳ ಮುಖಂಡರು ಅಹವಾಲು ಸಲ್ಲಿಸಿದರು. ಎಲ್ಲ ಸಮಾಜಗಳ ಮುಖಂಡರನ್ನು ಶಾಸಕರು ಸನ್ಮಾನಿಸಿದರು.

ಸಿಂಹ ಕಾಡಿನಲ್ಲಿರಬೇಕು, ನಾಡಿನಲ್ಲಲ್ಲ
ಮಾಜಿ ಶಾಸಕ ಎಚ್.ಎಸ್‌. ಶಿವಶಂಕರ್‌ ಇತ್ತೀಚಿಗೆ ತಮ್ಮ ಜನ್ಮದಿನದಂದು ಸಿಂಹ ಸುಮ್ಮನಿದೆ ಎಂದರೆ ಮಲಗಿದೆ ಎಂದರ್ಥವಲ್ಲ, ಮುಂದಿನ ಹೋರಾಟಕ್ಕೆ ಸಿದ್ಧವಾಗುತ್ತಿದೆ ಎಂದು ಹೇಳಿದ್ದಕ್ಕೆ ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ ಎಸ್‌.ರಾಮಪ್ಪ, ಹುಲಿ, ಸಿಂಹದಂತಹ ಕ್ರೂರ ಮೃಗಗಳು ಕಾಡಿನಲ್ಲಿರಬೇಕೆ ವಿನಃ ನಾಡಿನಲ್ಲಲ್ಲ. ಆದ್ದರಿಂದಲೇ ಮತದಾರರು ಅವರನ್ನು ಮನೆಗೆ ಕಳಿಸಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಶಿವಶಂಕರ್‌ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು. ತಾಲೂಕಿಗೆ 360 ಕೋ.ರೂ. ಅನುದಾನ ತಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಅಷ್ಟೊಂದು ಹಣದಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೋ ಕಾಣುತ್ತಿಲ್ಲ. ವೇದಿಕೆ ಮೇಲೆ ಸುಳ್ಳು ಹೇಳುತ್ತಾ ಹೋದರೆ ಜನರು ನಂಬುವುದಿಲ್ಲ. ಮತ್ತೂಬ್ಬರನ್ನು ಹೀಗಳೆಯುವ ಬದಲು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ನನ್ನನ್ನ ಟೀಕಿಸುವವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next