Advertisement

ವೇಶ್ಯಾವಾಟಿಕೆಗೆ ನಿರಾಕರಿಸಿದ್ದಕ್ಕೆ ಹಲ್ಲೆ

11:27 AM Jul 22, 2018 | Team Udayavani |

ಬೆಂಗಳೂರು: ಆನ್‌ಲೈನ್‌ ಜಾಹೀರಾತು ನೋಡಿ ಮಸಾಜ್‌ ಮಾಡಿಸಿಕೊಳ್ಳಲು ಹೋದ ವ್ಯಕ್ತಿಯನ್ನು ವೇಶ್ಯಾವಾಟಿಕೆಗೆ ಸೆಳೆಯಲು ಯತ್ನಿಸಿದ್ದಲ್ಲದೆ, ಆತ ಒಪ್ಪದಿದ್ದಾಗ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ನಂದಗುಡಿಯ ಪರಮೇಶ್‌ ಹಲ್ಲೆಗೊಳಗಾದವರು. 10 ದಿನಗಳ ಹಿಂದೆ ಘಟನೆ ನಡೆದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪರಮೇಶ್‌, ಇದೀಗ ನಂದಗುಡಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಆನ್‌ಲೈನ್‌ನಲ್ಲಿ ಬಾಡಿ ಮಸಾಜ್‌ ಮಾಡುವುದಾಗಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿದ ಪರಮೇಶ್‌, ಬಾಣಸವಾಡಿಯ ಬಿಬಿಎಂಪಿ ಕಚೇರಿ ಬಳಿಯ ಕಟ್ಟಡಕ್ಕೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಕಂಡು ಒಪ್ಪದೆ ಸ್ಥಳದಿಂದ ವಾಪಸ್‌ ಹೊರಟಿದ್ದಾರೆ. ಆದರೆ, ಹೊರಗಡೆ ಹೋಗಲು ಬಿಡದ ದುಷ್ಕರ್ಮಿಗಳು ಹಲ್ಲೆ ನಡೆಸಿ ಮೊಬೈಲ್‌ ಮತ್ತು ಹಣ ಕಸಿದುಕೊಂಡು ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಪರಮೇಶ್‌ರನ್ನು ಹಿಂಬಾಲಿಸಿದ ಆರೋಪಿಗಳು, ಹೊಸಕೋಟೆಯ ಶಿವನಾಪುರ ಗೇಟ್‌ ಬಳಿ ಅಪಹರಿಸಿ ಮತ್ತೆ ಬಾಣಸವಾಡಿಯ ಮನೆಗೆ ಕರೆತಂದು ಯುವತಿಯರ ಜತೆ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದ್ದಾರೆ. 

ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪರಮೇಶ್‌ ದೂರು ನೀಡಿರುವುದಾಗಿ ನಂದಗುಡಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next