Advertisement

ಶ್ರೀಶೈಲದಲ್ಲಿ ಕನ್ನಡಿಗರ ಮೇಲಿನ ದಾಳಿ ಖಂಡನೀಯ

11:54 PM Jun 05, 2022 | Team Udayavani |

ನೆರೆ ರಾಜ್ಯವಾದ ಆಂಧ್ರ ಪ್ರದೇಶದಲ್ಲಿನ ಶ್ರೀಶೈಲ ಕ್ಷೇತ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದಾಳಿ ಸರಿಯಲ್ಲ. ಶುಕ್ರವಾರ ಮಧ್ಯರಾತ್ರಿ ವೇಳೆಗೆ ಕರ್ನಾಟಕ ಸಾರಿಗೆ ಬಸ್‌ನ ಚಾಲಕ ಮತ್ತು ನಿರ್ವಾಹಕನ ಮೇಲೆ ದಾಳಿ ನಡೆಸಲಾಗಿದ್ದು, ಬಸ್‌ಗೂ ಹಾನಿ ಮಾಡಲಾಗಿದೆ. ಶ್ರೀಶೈಲದಲ್ಲಿ ಇಂಥ ಘಟನೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕನ್ನಡಿಗರನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲಾಗಿತ್ತು ಎಂಬುದು ದುರದೃಷ್ಟಕರ.

Advertisement

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ಗಲಾಟೆಯಿಂದಾಗಿ ಇದುವರೆಗೂ ಎರಡು ರಾಜ್ಯಗಳ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿದೆ. ಇನ್ನು ಕಾವೇರಿ ವಿಚಾರದಿಂದಾಗಿ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಸಂಬಂಧವೂ ತಿಕ್ಕಾಟ ಸ್ವರೂಪಿಯಾಗಿಯೇ ಇರುತ್ತದೆ. ಆದರೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜತೆಗೆ ರಾಜ್ಯದ ಗಡಿ ಬಿಕ್ಕಟ್ಟು ಅಷ್ಟೇನೂ ದೊಡ್ಡದಿಲ್ಲ. ಮೊದಲಿನಿಂದಲೂ ಕರ್ನಾಟಕ ಈ ಎರಡು ರಾಜ್ಯಗಳ ಜತೆಗೆ ಭಾವನಾತ್ಮಕ ಸಂಬಂಧವನ್ನೇ ಇರಿಸಿಕೊಂಡಿದೆ. ಅದರಲ್ಲೂ ಆಂಧ್ರ ಪ್ರದೇಶದಲ್ಲಿನ ತೀರ್ಥಕ್ಷೇತ್ರಗಳಾದ ತಿರುಪತಿ, ಶ್ರೀಶೈಲ ಮತ್ತು ಮಂತ್ರಾಲಯಗಳು ಕರ್ನಾಟಕದ ಜನತೆಗೆ ತೀರಾ ಹತ್ತಿರವಾಗಿವೆ.

ಪ್ರತೀ ವರ್ಷವೂ ಈ ಮೂರು ಕ್ಷೇತ್ರಗಳಿಗೆ ಲಕ್ಷಾಂತರ ಕನ್ನಡಿಗರು ಭೇಟಿ ನೀಡುತ್ತಾರೆ. ಅಲ್ಲದೆ, ತಿರುಪತಿ ಮತ್ತು ಶ್ರೀಶೈಲ ದೇವಸ್ಥಾನಗಳು ಕರುನಾಡಿನ ಅನೇಕ ಕುಟುಂಬಗಳಿಗೆ ಮನೆದೇವರಾಗಿದ್ದರೆ, ಮಂತ್ರಾಲಯ ಆರಾಧ್ಯ ದೈವವಾಗಿದೆ.

ಇತ್ತೀಚಿನ ವರೆಗೂ ಆಂಧ್ರಪ್ರದೇಶಕ್ಕೆ ತೆರಳುವ ಕನ್ನಡಿಗರಿಗೆ ಯಾವುದೇ ರೀತಿಯ ಸಮಸ್ಯೆಗಳು, ಕಿರುಕುಳಗಳು ಆಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕಂದಕವೊಂದು ಮೂಡಿರುವುದು ಗೊತ್ತಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಶ್ರೀಶೈಲದಲ್ಲಿ ನಡೆದಿರುವ ಎರಡು ಘಟನೆಗಳು.

ಮಾರ್ಚ್‌ನಲ್ಲಿಯೂ ಕನ್ನಡಿಗರನ್ನೇ ಗುರಿಯಾಗಿಸಿಕೊಂಡು, ಅವರ ಅಂಗಡಿ ಮುಂಗಟ್ಟುಗಳನ್ನು ಒಡೆದು ಹಾಕಲಾಗಿತ್ತು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆಂಧ್ರ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಜತೆಗೆ ಮಾತನಾಡಿದ ವೇಳೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.  ಈ ಸುದ್ದಿ ಮರೆಯಾಗುವ ಮುನ್ನವೇ, ಮತ್ತೆ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದು ಸರಿಯಲ್ಲ. ಅದೂ ಅಲ್ಲದೆ, ಶ್ರೀಶೈಲ ಮಲ್ಲಿಕಾರ್ಜನ ದೇವರಿಗೆ ಕರ್ನಾಟಕದಲ್ಲಿ ಭಕ್ತರು ಹೆಚ್ಚು. ಈಗ ಆಗಿರುವ ರೀತಿಯಲ್ಲೇ ದಾಳಿಗಳಾಗುತ್ತಿದ್ದರೆ, ಶ್ರೀಶೈಲಕ್ಕೆ ಕಾಲಿಡಲೂ ಕನ್ನಡಿಗರು ಯೋಚಿಸುವ ಸಂದರ್ಭ ಒದಗಿಬರಬಹುದು.

Advertisement

ಇದಷ್ಟೇ ಅಲ್ಲ, ಯಾವುದೇ ರಾಜ್ಯದ ಧಾರ್ಮಿಕ ಕ್ಷೇತ್ರವಾಗಲಿ ಅಥವಾ ಪ್ರವಾಸಿ ತಾಣವಾಗಲಿ, ಇಂಥ ಕಡೆಗಳಲ್ಲಿ ಸಾಮರಸ್ಯ ಇರಬೇಕಾದದ್ದು ಅತ್ಯವಶ್ಯಕ. ಅಲ್ಲದೆ ಯಾವುದೇ ದೇವರನ್ನು ಕೇವಲ ಒಂದೇ ರಾಜ್ಯಕ್ಕೆ ಸೀಮಿತಗೊಳಿಸುವುದೂ ಸಾಧ್ಯವಿಲ್ಲ. ಕರ್ನಾಟಕದಿಂದ ಶ್ರೀಶೈಲಕ್ಕೆ ಜನ ಭೇಟಿ ನೀಡುತ್ತಾರೆ ಎಂದರೆ ಇದರಿಂದ ಆಂಧ್ರ ಪ್ರದೇಶಕ್ಕೇ ಲಾಭ ಹೆಚ್ಚು. ಅಲ್ಲಿನ ಪ್ರವಾಸೋದ್ಯಮವೂ ಉತ್ತಮವಾಗುತ್ತದೆ. ಇವೆಲ್ಲವನ್ನೂ ಮರೆತು, ಅತಿಥಿ ದೇವೋಭವ ಎಂಬ ಭಾರತದ ಘೋಷವಾಕ್ಯವನ್ನೂ ಬದಿಗೆ ತಳ್ಳಿ, ಪರ ರಾಜ್ಯದವರ ಮೇಲೆ ದಾಳಿ ಮಾಡುವುದು ಅಕ್ಷ್ಯಮ್ಯ. ಯಾವುದೇ ಕಾರಣಕ್ಕೂ, ಇಂಥ ಘಟನೆಗಳಿಗೆ ಸಂಬಂಧಪಟ್ಟ ರಾಜ್ಯಗಳು ಅವಕಾಶ ನೀಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next