Advertisement

ಆಟಿಡೊಂಜಿ ದಿನ ಶೂಟಿಂಗ್‌ ಮತ್ತೆ ಶುರು!

11:08 PM May 15, 2019 | Sriram |

ತುಳು ಸಿನೆಮಾ “ಆಟಿಡೊಂಜಿ ದಿನ’ ಶೂಟಿಂಗ್‌ ಕಾಣುವ ಹಂತದಲ್ಲಿಯೇ ಕೋಸ್ಟಲ್‌ವುಡ್‌ನ‌ ಭರವಸೆಯ ನಿರ್ದೇಶಕ ಆರ್‌. ಹಾರೀಸ್‌ ಕೊಣಾಜೆಕಲ್‌ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಸಿನೆಮಾ ಪೂರ್ಣ ಶೂಟಿಂಗ್‌ ಕಾಣಲು ಸಾಧ್ಯವಾಗಿರಲಿಲ್ಲ. ಆದರೆ, ಶೇ. 80ರಷ್ಟು ಪೂರ್ಣವಾದ ಸಿನೆಮಾವನ್ನು ಅಲ್ಲಿಗೆ ಬಿಡಲು ಒಪ್ಪದ ಕಲಾವಿದರು ಬಾಕಿ ಉಳಿದ ಶೂಟಿಂಗ್‌ ಮಾಡಲು ನಿರ್ಧರಿಸಿದ್ದು, ಮೇ 10ರಿಂದ ಶೂಟಿಂಗ್‌ ಶುರುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಸಿನೆಮಾದ ಮುಖ್ಯ ನಟ ಪೃಥ್ವಿ ಅಂಬರ್‌ ಈ ಹಿಂದೆ “ಕುಡ್ಲ ಟಾಕೀಸ್‌’ ಜತೆಗೆ ಮಾತನಾಡಿ, “ತುಳು ಚಿತ್ರದ ಸಮರ್ಥ ನಿರ್ದೇಶಕನಾಗಬೇಕು ಎಂಬುದು ಹಾರೀಸ್‌ ಅವರಿಗಿದ್ದ ಬಹುದೊಡ್ಡ ಕನಸು.

ಈ ನಿಟ್ಟಿನಲ್ಲಿ ಕೈಯಲ್ಲಿ ಕಥೆ ಹಿಡಿದುಕೊಂಡು ಮೂರು ವರ್ಷದಿಂದ ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದರು. ಈ ಎಳೆ ವಯಸ್ಸಿಗೆ ಚಿತ್ರ ನಿರ್ದೇಶನ ಬೇಡ ಎಂದೂ ಕೆಲವರು ಹೇಳಿದ್ದೂ ಇದೆ. ಆದರೆ, ಹಠಕ್ಕೆ ಬಿದ್ದು ನಿರ್ಮಾಪಕರನ್ನು ಹುಡುಕಿ, “ಆಟಿಡೊಂಜಿ ದಿನ’ ಎಂಬ ತುಳು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು.

ಶೇ. 80ರಷ್ಟು ಚಿತ್ರೀಕರಣ ಮುಗಿಸಿ, ಇನ್ನೇನು ಕನಸು ಈಡೇರಿತು ಎನ್ನುವಷ್ಟರಲ್ಲಿ ವಿಧಿಯಾಟಕ್ಕೆ ಬಲಿಯಾದರು ಎನ್ನುವುದನ್ನು ನಂಬುವುದಕ್ಕೆ ಕಷ್ಟವಾಗುತ್ತಿದೆ. ಆತನ ಕನಸನ್ನು ಪೂರ್ಣಮಾಡುವುದು ಈಗ ನಮ್ಮ ಮುಂದಿರುವ ಜವಾಬ್ದಾರಿ. ಹೀಗಾಗಿ ಶೇ.20ರಷ್ಟು ಬಾಕಿ ಇರುವ ಸಿನೆಮಾದ ಶೂಟಿಂಗ್‌ ಮತ್ತೆ ಮುಂದುವರಿಯಲಿದೆ ಎಂದಿದ್ದರು.

ಸದ್ಯದ ಮಾಹಿತಿ ಪ್ರಕಾರ, 2 ಹಾಡಿನ ಹಾಗೂ 3 ಫೈಟ್‌ ದೃಶ್ಯಗಳ ಚಿತ್ರೀಕರಣ ನಡೆಯಬೇಕಿದೆ. ಜತೆಗೆ 2- 3 ಕಥೆಯ ದೃಶ್ಯಗಳ ಶೂಟಿಂಗ್‌ ನಡೆಯಲು ಬಾಕಿಯಿದೆ. ಅಂದಹಾಗೆ, ಸಿನೆಮಾದಲ್ಲಿ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಪೃಥ್ವಿ ಅಂಬರ್‌, ನಿರೀûಾ ಶೆಟ್ಟಿ, ದೀಪಕ್‌ ರೈ, ಸೂರಜ್‌ ಸಾಲ್ಯಾನ್‌, ಶ್ರದ್ಧಾ ಸಾಲ್ಯಾನ್‌, ಪೃಥ್ವಿರಾಜ್‌ ಮೂಡುಬಿದಿರೆ ಇದ್ದಾರೆ. ಆಕಾಶ್‌ ಹಾಸನ ಕಾರ್ಯಕಾರಿ ನಿರ್ಮಾಪಕ ಹಾಗೂ ಸಹನಿರ್ದೇಶನ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next