Advertisement

ಅಟಲ್‌ ಸುರಂಗ ಮಾರ್ಗ ಸರ್ವ ಋತುಗಳಲ್ಲೂ ಸೇವೆಗೆ ಸಿದ್ಧ!

12:01 AM Oct 03, 2020 | mahesh |

ಪ್ರಪಂಚದಲ್ಲೇ ಅತೀದೊಡ್ಡ ಹೆದ್ದಾರಿ ಸುರಂಗ ಮಾರ್ಗ ಎಂಬ ಖ್ಯಾತಿ ಪಡೆದಿರುವ ಅಟಲ್‌ ಸುರಂಗ ಮಾರ್ಗವನ್ನು ಪ್ರಧಾನಮಂತ್ರಿ ಮೋದಿಯವರು ಶನಿವಾರ ಉದ್ಘಾಟಿಸಲಿದ್ದಾರೆ. ಹಿಮಾಚಲ ಪ್ರದೇಶದ ರೊಹ್ತಾಂಗ್‌ ಪಾಸ್‌ನ ಅಡಿಯಲ್ಲಿ ನಿರ್ಮಾಣವಾಗಿರುವ 9.02 ಕಿಲೋಮೀಟರ್‌ ಉದ್ದದ ಅಟಲ್‌ ಟನಲ್‌ ಭಾರತದ ಪಾಲಿಗೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವಪೂರ್ಣವಾಗಿದೆ. ಚಳಿಗಾಲದ ಸಮಯದಲ್ಲಿ ಭಾರತದ ಇತರ ಪ್ರದೇಶದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದ ಪ್ರದೇಶಗಳಿಗೆ ಈ ಸುರಂಗ ಮಾರ್ಗ ಸರ್ವ ಋತುಗಳಲ್ಲೂ ಸಂಚಾರ ಸೇವೆ ಕಲ್ಪಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಲಡಾಖ್‌ನಲ್ಲಿ ನಿಯೋಜಿತವಾಗಿರುವ ಸೈನಿಕರಿಗೆ ತ್ವರಿತವಾಗಿ ಶಸ್ತ್ರಾಸ್ತ್ರ ಮತ್ತು ಆಹಾರ ಸಾಮಗ್ರಿಯನ್ನು ತಲುಪಿಸಲು ಈ ಸುರಂಗ ಮಾರ್ಗ ಬಳಕೆಯಾಗಲಿದೆ…  ಇನ್ನೇನಿದೆ ಅಟಲ್‌ ಟನಲ್‌ ವಿಶೇಷತೆ? ಇಲ್ಲಿದೆ ಮಾಹಿತಿ…

Advertisement

ನಿರ್ಮಾಣಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ!
ಈ ಸುರಂಗ ಮಾರ್ಗವನ್ನು ನಿರ್ಮಿಸಿರುವುದು ರಕ್ಷಣ ಇಲಾಖೆಯ ಪ್ರಮುಖ ಅಂಗಸಂಸ್ಥೆ ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌(ಬಿಆರ್‌ಒ). ಈಗಾಗಲೇ ಗಡಿ ಭಾಗದಲ್ಲಿ ವ್ಯೂಹಾತ್ಮಕ ಜಾಗದಲ್ಲಿ ರಸ್ತೆಗಳನ್ನು ನಿರ್ಮಿಸಿ, ಚೀನದ ನಿದ್ದೆಡಿಸಿರುವುದು ಇದೇ ಸಂಸ್ಥೆಯೇ! ಅಟಲ್‌ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕಾಗಿ ಬಿಆರ್‌ಒ ಸಂಸ್ಥೆಯ ಎಂಜಿನಿಯರ್‌ಗಳು ಹಾಗೂ ಕೆಲಸಗಾರರು ದಶಕದಿಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಚಳಿಗಾಲದಲ್ಲಂತೂ ಈ ಪ್ರದೇಶದ ತಾಪಮಾನ -30 ಡಿಗ್ರಿಯಷ್ಟು ಕುಸಿದುಬಿಡುತ್ತದೆ. ಹಿಮ ವರ್ಷವಾದಾಗಲೆಲ್ಲ ನಿರ್ಮಾಣ ಕಾರ್ಯಕ್ಕೆ ಅತೀದೊಡ್ಡ ಅಡಚಣೆಯಾಗಿ ಬಿಡುತ್ತಿತ್ತು. ಇನ್ನು ಹಿಮ ಕರಗಿದ ಮೇಲೆ, ಆ ನೀರೆಲ್ಲ ನಿರ್ಮಾಣ ಕಾಮಗಾರಿಗೆ ಅಡಚಣೆ ಯಾಗಿ ಪರಿಣಮಿಸುತ್ತಿತ್ತು. 2015ರಲ್ಲೇ ಪೂರ್ಣಗೊಳ್ಳ ಬೇಕಿದ್ದ ಈ ಯೋಜನೆಯ ಪ್ರಗತಿಗೆ ಭೂಮಿ ಮಂಜೂರಾತಿಯಲ್ಲಿನ ವಿಳಂಬ, ಸ್ಥಳೀಯ ಝರಿಗಳು ಹಾಗೂ ಸಡಿಲ ಬಂಡೆಗಳು ಸವಾಲು ಎದುರೊಡ್ಡಿದವು. ಈ ಸವಾಲುಗಳನ್ನೆಲ್ಲ ಬಿಆರ್‌ಒ ಮೆಟ್ಟಿನಿಂತು ಯಶಸ್ವಿಯಾಯಿತು.

ಆಗ 5 ಗಂಟೆ, ಈಗ ಕೇವಲ 10 ನಿಮಿಷ!
ಈ ಹಿಂದೆ ಮನಾಲಿ ಕಣಿವೆಯಿಂದ ಲಹೌಲ್‌ ಮತ್ತು ಸ್ಪಿತಿ ಕಣಿವೆಯ ನಡುವಿನ ಪ್ರಯಾಣಕ್ಕೆ 5 ಗಂಟೆ ಹಿಡಿಯುತ್ತಿತ್ತು. ಈಗ ಕೇವಲ 10 ನಿಮಿಷ ಸಾಕು. ವಿಪರೀತ ಹಿಮಪಾತದಿಂದಾಗಿ ಲಹೌಲ್‌ ಮತ್ತು ಸ್ಪಿತಿ ಕಣಿವೆಯ ನಿವಾಸಿಗಳು ಸುಮಾರು ಆರು ತಿಂಗಳುಗಳವರೆಗೆ ತಮ್ಮದೇ ನೆಲದಲ್ಲಿ ಬಂದಿಯಾಗಿಬಿಡುತ್ತಿದ್ದರು. ಇವೆರಡೂ ಪ್ರದೇಶಗ ಳೊಂದಿಗೆ ಭಾರತದ ಉಳಿದ ಭಾಗದ ಸಂಪರ್ಕ ಕಡಿತ ವಾಗಿ ಬಿಡುತ್ತಿತ್ತು. ಇನ್ನು ಮುಂದೆ ಅಟಲ್‌ ಟನಲ್‌ ನಿಂದಾಗಿ ಎಲ್ಲ ಋತುಗಳಲ್ಲಿ ಸಂಚಾರ ಮಾಡಬಹು ದಾಗಿದೆ.ಇನ್ನು ಪ್ರಮುಖ ಪ್ರವಾಸಿ ತಾಣಗಳಾದ ಮನಾಲಿ ಮತ್ತು ಲೇಹ್‌ ನಡುವಿನ ಅಂತರವನ್ನು ಈ ಮಾರ್ಗ 46 ಕಿ.ಮೀ. ಗಳಷ್ಟು ಕಡಿಮೆಗೊಳಿಸುತ್ತದೆ.

ಭಾರತೀಯ ಸೇನೆಗೆ ತುಂಬಲಿದೆ ಬಲ
ಲಡಾಖ್‌ನಲ್ಲಿ ಭಾರತ ಮತ್ತು ಚೀನ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಮಯದಲ್ಲಿ ಈ ಸುರಂಗ ಮಾರ್ಗ ಭಾರತೀಯ ಸೇನೆಗೆ ಅಪಾರ ಸಹಾಯ ಮಾಡಲಿದೆ. ಲಡಾಖ್‌ನಲ್ಲಿರುವ ಸೇನೆಗೆ ಇದುವರೆಗೂ ಜೋಜಿಲಾ ಮಾರ್ಗದ ಮೂಲಕ ಅವಶ್ಯಕ ಶಸ್ತ್ರಾಸ್ತ್ರಗಳನ್ನು, ಪರಿಕರಗಳನ್ನು ಪೂರೈಸಲಾಗುತ್ತಿತ್ತು,. ಹಿಮಪಾತವಾಗಿಬಿಟ್ಟರೆ, ಪೂರೈಕೆ ವ್ಯವಸ್ಥೆಗೆ ಅಡಚಣೆ ಎದುರಾಗುತ್ತಿತ್ತು. ಈಗ ಅಟಲ್‌ ಟನಲ್‌ನ ಮೂಲಕ ಸೈನಿಕರಿಗೆ ಶಸ್ತ್ರಾಸ್ತ್ರ,ಅಗತ್ಯ ವಸ್ತುಗಳನ್ನು ನಿರ್ವಿಘ್ನವಾಗಿ ಪೂರೈಸಬಹುದಾಗಿದೆ.

ಅಟಲ್‌ ಅನುಮತಿ, ಸೋನಿಯಾರಿಂದ ಶಂಕುಸ್ಥಾಪನೆ
1990: ಯೋಜನೆಗೆ ಅಧ್ಯಯನ ಆರಂಭ.
2003: ಅಟಲ್‌ ಆಡಳಿತಾವಧಿಯಲ್ಲಿ ಯೋಜನೆಗೆ ಅನುಮತಿ.
2010: ಸೋನಿಯಾರಿಂದ ಶಂಕುಸ್ಥಾಪನೆ. ನಿರ್ಮಾಣ ಆರಂಭ
2012-13: ಹಿಮಪಾತ, ನೀರಿನ ಹರಿವಿನಿಂದ ನಿರ್ಮಾಣಕ್ಕೆ ಅಡಚಣೆ
2017: ಸಂಧಿಸಿದ ಎರಡೂ ಬದಿಯ ಮಾರ್ಗಗಳು.
2018: ಲಹೌಲ್‌ನಲ್ಲಿ ಸಿಲುಕಿದವ‌ರ ರಕ್ಷಣೆಗೆ ಸುರಂಗ ಬಳಕೆ
ಡಿ.2019: ರೋಹ್ತಾ¤ಂಗ ಸುರಂಗಮಾರ್ಗಕ್ಕೆ, ಅಟಲ್‌ ಟನಲ್‌ ಎಂದು ಮರುನಾಮಕರಣ.

Advertisement

ಸ್ಥಳೀಯರಿಗೆ ಉದ್ಯೋಗಾವಕಾಶ, ಪ್ರವಾಸೋದ್ಯಮಕ್ಕೆ ಬಲ
ಲಹೌಲ್‌ ಮತ್ತು ಸ್ಪಿತಿ ಕಣಿವೆಗಳು ಅತ್ಯಂತ ಸುಂದರ ತಾಣಗಳಾಗಿದ್ದು, ಈ ಸುರಂಗ ಮಾರ್ಗ
ಆ ಭಾಗಗಳಲ್ಲಿ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಕೊಡುಗೆ ನೀಡಲಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ, ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ತೆರೆದುಕೊಳ್ಳುತ್ತವೆ. ಇನ್ನು ಮನಾಲಿ ಮತ್ತು ಲೇಹ್‌ ನಡುವಿನ ಪ್ರಯಾಣದ ಅವಧಿ 7 ಗಂಟೆ ಕಡಿಮೆಯಾಗಲಿರುವುದರಿಂದ, ಪ್ರವಾಸಿಗರು ಇನ್ನು ಮುಂದೆ ಈ ಎರಡೂ ತಾಣಗಳಿಗೂ ಸುಲಭವಾಗಿ ಸಂಚರಿಸಬಹುದಾಗಿದೆ.

ವಿಶೇಷತೆಗಳೇನು?
ಈ ಸುರಂಗ ಮಾರ್ಗ ಹಲವು ವಿಶೇಷತೆಗಳನ್ನು ಹೊಂದಿದೆ. ಇದು ಸಾಗುವ ಜಾಗಗಳಲ್ಲಿ ಹಲವು ನದಿಗಳೂ ಹರಿಯುತ್ತವೆ. ಆ ನದಿಗಳನ್ನು ದಾಟಲು ಸೇತುವೆಗಳಿದ್ದು, ಈ ಸೇತುವೆಗಳನ್ನೆಲ್ಲ ಈ ಮಾರ್ಗಕ್ಕೆ ಬೆಸೆಯಲಾಗಿರುವುದು ವಿಶೇಷ.

ಮಾರ್ಗ ನಿರ್ಮಾಣಕ್ಕೆ 14,508 ಮೆಟ್ರಿಕ್‌ ಟನ್‌ಗಳಷ್ಟು ಸ್ಟೀಲ್‌, 2,37,596 ಮೆಟ್ರಿಕ್‌ ಟನ್‌ಗಳಷ್ಟು ಸಿಮೆಂಟ್‌ ಅನ್ನು ಬಳಸಲಾಗಿದೆ. ನಿರ್ಮಾಣ ಸಮಯದಲ್ಲಿ 14 ಲಕ್ಷ ಕ್ಯೂಬಿಕ್‌ ಮೀಟರ್‌ಗಳಷ್ಟು ಮಣ್ಣು, ಕಲ್ಲುಗಳನ್ನು ಹೊರತೆಗೆಯಲಾಗಿದೆ.
ಹಿಮಾಲಯದ ಪೀರ್‌ ಪಂಜಾಲ್‌ ಪರ್ವತ ಶ್ರೇಣಿಯ ಮೇಲೆ ನಿರ್ಮಾಣವಾಗಿರುವ ಈ ಸುರಂಗ ಮಾರ್ಗ ಸಮುದ್ರಮಟ್ಟದಿಂದ ಸುಮಾರು 10,171 ಅಡಿ ಎತ್ತರದಲ್ಲಿದ್ದು, ಕುದುರೆ ಲಾಳದ ರೂಪದಲ್ಲಿ ಇದನ್ನು ಕೊರೆಯಲಾಗಿದೆ. ಇದರ ನಿರ್ಮಾಣಕ್ಕಾಗಿ ಸುಮಾರು 3,300 ಕೋಟಿ ರೂಪಾಯಿ ಖರ್ಚಾಗಿದೆ.

ಹಿಮ ಗ್ಯಾಲರಿಗಳು: ಹಿಮಪಾತದ ವಲಯದಲ್ಲಿರುವ ರಸ್ತೆಗಳು, ರೈಲು ಹಳಿಗಳು ಅಥವಾ ಹೆದ್ದಾರಿಗಳು ಚಳಿಗಾಲದಲ್ಲಿ ಹಿಮಾವೃತವಾಗಿಬಿಡುತ್ತವೆ. ಅಂಥ ಸ್ಥಳಗಳನ್ನು ಈ ಸುರಂಗ ಮಾರ್ಗ ಬೈಪಾಸ್‌ ಮಾಡುವ ಮೂಲಕ ಹಿಮಪಾತದ ಪರಿಣಾಮಗಳಿಂದ ರಕ್ಷಣೆ ನೀಡುತ್ತದೆ. ಡಿಆರ್‌ಡಿಒ ಸಂಸ್ಥೆಯ ಮಾರ್ಗದರ್ಶನದಲ್ಲಿ ಸ್ನೋ ಗ್ಯಾಲರಿಗಳ ನಿರ್ಮಾಣವಾಗಿದೆ.

ಈ ಸುರಂಗ ಮಾರ್ಗದಲ್ಲಿ ಪ್ರತೀ 500 ಮೀಟರ್‌ಗಳಿಗೆ ತುರ್ತು ನಿರ್ಗಮನ ಮಾರ್ಗ ಇರುವುದು ವಿಶೇಷ. ಮುಖ್ಯ ಸುರಂಗ ಮಾರ್ಗದಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಅಥವಾ ಅದನ್ನು ಬಳಸಲು ಸಾಧ್ಯವಾಗದಿದ್ದರೆ ಇದನ್ನು ಬಳಸಬಹುದು.

ಪ್ರತೀ 1 ಕಿಲೋಮೀಟರ್‌ಗೆ ವಾಯುಗುಣಮಟ್ಟ ಮಾಪಕ ಯಂತ್ರಗಳನ್ನು ಅಳವಡಿಸಲಾಗಿದ್ದು, ಮಾಲಿನ್ಯ ಹೆಚ್ಚಾದರೆ ಪತ್ತೆಹಚ್ಚಿ, ಸ್ವತ್ಛ ಗಾಳಿಯನ್ನು ಒಳಕ್ಕೆ ಹರಿಯ ಬಿಡುವ ಡಿಜಿಟಲ್‌ ತಂತ್ರಜ್ಞಾನವಿದೆ.

ತಾಪಮಾನ -15 ಡಿಗ್ರಿ ತಲುಪಿದರೂ ಸ್ವಿಚ್‌ಬೋರ್ಡ್‌ಗಳು ಕಠಿನ ವಾತಾವರಣವನ್ನು ಎದುರಿಸುವಂತೆ ಸಿದ್ಧಪಡಿಸಲಾಗಿದೆ. ಯಾವುದಾದರೂ ತಾಂತ್ರಿಕ ದೋಷಗಳಾದರೆ, ಅಟೊಮೆಟಿಕ್‌ ಸಿಂಕ್ರನೈಸೇಷನ್‌ ವ್ಯವಸ್ಥೆಯು ಅದನ್ನು ಸರಿಪಡಿಸುತ್ತದೆ. ಸರಿಪಡಿಸಲಾಗದಿದ್ದರೆ, ಕೂಡಲೇ ಸಂಬಂಧ ಪಟ್ಟ ನಿರ್ವಾಹಕರಿಗೆ ಸಂದೇಶ ಕಳುಹಿಸುತ್ತದೆ. ಅಟಲ್‌ ಟನಲ್‌ನಲ್ಲಿನ ವೆಂಟಿಲೇಷನ್‌, ವಿದ್ಯುತ್‌ ಮತ್ತು ಅಗ್ನಿ ಸುರಕ್ಷತ ವ್ಯವಸ್ಥೆಗಳು ಸ್ವಯಂಚಾಲಿತವಾಗಿದ್ದು, ಅತ್ಯಂತ ಸುರಕ್ಷಿತವಾಗಿ ಹಾಗೂ ಸಕ್ಷಮವಾಗಿ ಅವುಗಳ ನಿರ್ವಹಣೆಯಾಗಲಿದೆ.

ಪ್ರತೀ 150 ಮೀಟರ್‌ ಅಂತರದಲ್ಲಿ ಒಂದು ಟೆಲಿಫೋನ್‌
ಪ್ರತೀ 250 ಮೀಟರ್‌ ದೂರದಲ್ಲಿ ಸಿಸಿಟಿವಿ ಕೆಮರಾಗಳಿದ್ದು, ಇದರಲ್ಲಿರುವ ಇನ್‌ಸಿಡೆಂಟ್‌ ಡಿಟೆಕ್ಟಿವ್‌ ಸಿಸ್ಟಂ ಅವಘಡ ಸಂಭವಿಸಿದರೆ, ತತ್‌ಕ್ಷಣ ಕೇಂದ್ರ ಘಟಕಕ್ಕೆ ಸಂದೇಶ ಕಳುಹಿಸುತ್ತದೆ.
ಪ್ರತೀ 60 ಮೀಟರ್‌ಗೆ ಅಗ್ನಿಶಾಮಕ ಉಪಕರಣಗಳನ್ನು ಅಳವಡಿಸಲಾಗಿದೆ.
ಪ್ರತೀ 500 ಮೀಟರ್‌ಗೆ ತುರ್ತು ನಿರ್ಗಮನ ವ್ಯವಸ್ಥೆ.
ಪ್ರತೀ 1 ಕಿ.ಮೀ.ಗೆ ವಾಯುಗುಣ ಮಟ್ಟವನ್ನು ಪತ್ತೆ ಹಚ್ಚುವ ಸಾಧನ.
ಬಿಆರ್‌ಒ ಅಧಿಕಾರಿಗಳ ಪ್ರಕಾರ ವಾಹನಗಳ ಗರಿಷ್ಠ ಮಿತಿ
ಪ್ರತೀ ಗಂಟೆಗೆ 80 ಕಿಲೋ ಮೀಟರ್‌ ಇರಲಿದೆ.
ನಿತ್ಯವೂ 1,500ಕ್ಕೂ ಅಧಿಕ ಟ್ರಕ್‌ಗಳು, 3,000ಕ್ಕೂ ಅಧಿಕ ಕಾರುಗಳು ಸುರಂಗ ಮಾರ್ಗವನ್ನು ಬಳಸುವ ನಿರೀಕ್ಷೆ.

 

Advertisement

Udayavani is now on Telegram. Click here to join our channel and stay updated with the latest news.

Next