Advertisement

Atal; ಸೋಲೊಪ್ಪದ ಕವಿ ಹೃದಯಿ ಅಟಲ್‌ ಬಿಹಾರಿ ವಾಜಪೇಯಿ

12:24 AM Dec 25, 2023 | Team Udayavani |

ಅಲಹಾಬಾದ್‌ ವಿಶ್ವವಿದ್ಯಾನಿಲಯದಲ್ಲಿ ದೇಶದ ಉತ್ಕೃಷ್ಟ ಭಾಷಣಕಾರರೆಲ್ಲ ಭಾಗವಹಿಸುವ ಪ್ರತಿಷ್ಠಿತ ಒಂದು ಭಾಷಣ ಸ್ಪರ್ಧೆಯದು. ಭಾಷಣ ಸ್ಪರ್ಧೆ ಮುಗಿದು, ಇನ್ನೇನು ವಿಜೇತರ ಹೆಸರನ್ನು ಘೋಷಿಸುವ ಸಮಯ. ಅಷ್ಟರಲ್ಲಿ ತರುಣನೊಬ್ಬ ಓಡಿಬಂದು ವೇದಿಕೆ ಏರಿ ನಿಂತ “ವಿಕ್ಟೋರಿಯಾ ಕಾಲೇಜನ್ನು ಪ್ರತಿನಿಧಿಸಬೇಕಾಗಿದ್ದ ವಿದ್ಯಾರ್ಥಿ ನಾನು. ರೈಲು ತಡವಾಗಿ ಆಗಮಿಸಿದ್ದರಿಂದ ನಾನು ತಲುಪುವುದು ತಡವಾಯಿತು. ದಯವಿಟ್ಟು ನನಗೆ ಮಾತನಾಡಲು ಅವಕಾಶ ನೀಡಿ’ ಎಂದು ಭಿನ್ನವಿಸಿಕೊಂಡ. ಆತನ ಮಾತಿನಲ್ಲಿದ್ದ ಸೌಜನ್ಯ, ವಿನಯದ ಆದ್ರìತೆ, ಕಳಕಳಿಯ ದೈನ್ಯತೆಯನ್ನು ಕಂಡು ಇಡೀ ಸಭೆ ಆ ತರುಣನಿಗೆ ಅವಕಾಶ ನೀಡಬೇಕೆಂದು ಒಕ್ಕೊರಲಿನಿಂದ ಕೂಗಿತು. ಸಂಘಟಕರು ಸಮ್ಮತಿಸಿದರು. ಯುವಕ ಮಾತನಾಡ ಲಾರಂಭಿಸಿದ. ಆ ವಾಣಿಯಲ್ಲಿ ಅದೆಂಥ ಬಿರುಸು, ಸತ್ವ, ಜಾದೂ, ಮೋಹಕತೆ.. ಸಭೆ ಮಂತ್ರಮುಗ್ಧವಾಯಿತು. ತೀರ್ಪು ಗಾರರು ಆತನ ಮಾತಿನ ಓಘಕ್ಕೆ ಆಶ್ಚರ್ಯಚಕಿತರಾದರು. ಆ ತರುಣನೇ ವಿಜೇತನೆಂದು ಘೋಷಿಸಿದಾಗ ಸೇರಿದ್ದ ಪ್ರೇಕ್ಷಕರ ಜತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇತರ ಸ್ಪರ್ಧಿಗಳೂ ಎದ್ದು ನಿಂತು ಚಪ್ಪಾಳೆ ಹೊಡೆದರು. ಆ ಮಾತಿನ ಗಾರುಡಿಗನೇ ಮುಂ ದೆ ಸಮರ್ಥ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಮತ್ತು ರಾಷ್ಟ್ರ ಕಂಡ ಶ್ರೇಷ್ಠ ಮುತ್ಸದ್ದಿ ಅಟಲ್‌ ಬಿಹಾರಿ ವಾಜಪೇಯಿ.

Advertisement

ಶಿಕ್ಷಣದ ಅನಂತರ ವೃತ್ತಿ ಕ್ಷೇತ್ರವನ್ನು ಆಯ್ದುಕೊಳ್ಳದೆ, ತನ್ನ ಜೀವನವೇನಿದ್ದರೂ ರಾಷ್ಟ್ರ ಕಾರ್ಯಕ್ಕಾಗಿ ಎಂದು ದೃಢ ಸಂಕಲ್ಪ ತಳೆದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರ ಟರು. 1951 ಅಕ್ಟೋಬರ್‌ 21ರಂದು ಡಾ| ಶ್ಯಾಮ ಪ್ರಸಾದ್‌ ಮುಖರ್ಜಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ಜನಸಂಘದ ಸ್ಥಾಪನೆಯಾದಾಗ, ಆರೆಸ್ಸೆಸ್‌ನ ಆಗಿನ ಸರಸಂಘ ಚಾಲಕರಾದ ಶ್ರೀಗುರೂಜಿ ಗೋಳವಲ್ಕರ್‌ ಅವರು ದೀನ ದಯಾಳ್‌ ಉಪಾಧ್ಯಾಯ, ಅಟಲ…ರಂತಹ ನಿಸ್ವಾರ್ಥಿ ಹಾಗೂ ದೃಢ ನಿಶ್ಚಯ ಹೊಂದಿರುವ ಸಂಘದ ಕೆಲವು ಕಾರ್ಯಕರ್ತರು ಗಳನ್ನು ಭಾರತೀಯ ಜನಸಂಘಕ್ಕೆ ಕಳುಹಿಸುತ್ತಾರೆ. ಅಲ್ಲಿಂದ ಅಟಲ್ ಜಿಯವರ ರಾಜಕೀಯ ಯಾತ್ರೆ ಪ್ರಾರಂಭವಾಯಿತು.

ಪಂ.ದೀನದಯಾಳರ ಮರಣಾನಂತರ ಭಾರತೀಯ ಜನ ಸಂಘದ ನಾಯಕತ್ವ ಅಟಲ್ ಜಿ ಹೆಗಲಿಗೆ ಬಿತ್ತು. 1968ರಲ್ಲಿ ಅವರು ಜನಸಂಘದ ಅಧ್ಯಕ್ಷರಾದರು. ದೀನದಯಾಳರ ಸ್ಮರಣೆ ಯಲ್ಲಿ ಜನಸಂಘವನ್ನು ಮುನ್ನಡೆಸುವ ದೀಕ್ಷೆ ತೊಟ್ಟರು. ಅವರ ಕಾರ್ಯವೈಖರಿ, “ದೀನದಯಾಳರ ಅನಂತರ ಮುಂದೇನು?’ ಎಂಬ ಕಾರ್ಯಕರ್ತರ ಚಿಂತೆಯನ್ನು ದೂರಮಾಡಿ ಹೊಸ ಹುಮ್ಮಸ್ಸನ್ನು ಮೂಡಿಸಿತು.
1977ರ ಚುನಾವಣೆ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವಪೂರ್ಣ ಹಾಗೂ ಐತಿಹಾಸಿಕ ಚುನಾವಣೆ. ಭಾರತೀಯ ಜನಸಂಘ ಜನತಾ ಪಕ್ಷದೊಂದಿಗೆ ವಿಲೀನವಾಗಿ ಚುನಾವಣೆ ಯನ್ನು ಎದುರಿಸಿತು. ಕಾಂಗ್ರೆಸ್‌ ಹಿಂದೆಂದೂ ಕಂಡು ಕೇಳರಿಯ ದಂತಹ ಸೋಲನ್ನು ಅನುಭವಿಸಿತು. ಸ್ವತಃ ಇಂದಿರಾ ಸೋತು ಹೋದರು. ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿತು. ಅಟಲ್‌ ಬಿಹಾರಿ ವಾಜಪೇಯಿ ಯವರು ಆ ನೂತನ ಸರಕಾರದಲ್ಲಿ ವಿದೇಶಾಂಗ ಸಚಿವ ರಾದರು. 1980 ಎಪ್ರಿಲ್‌ 5ರಂದು ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತು. ಪ್ರಥಮ ಅಧ್ಯಕ್ಷರಾಗಿ ಅಟಲ್ ಜಿ ಸರ್ವಾನು ಮತದಿಂದ ಆಯ್ಕೆಯಾದರು.

1992ರಲ್ಲಿ ಪಿ.ವಿ.ನರಸಿಂಹರಾವ್‌ ಅವರ ಸರಕಾರ ವಾಜಪೇಯಿಯವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಆ ಸಮಾರಂಭದಲ್ಲಿ ತಮ್ಮ ಊಂಚಾಯೀ ಕವನದ ಪಂಕ್ತಿಯೊಂದನ್ನು ವಾಚಿಸುತ್ತಾರೆ.. “ಹೇ ಈಶ್ವರಾ.. ಪರರನ್ನು ಆಲಂಗಿಸಲಾರದಷ್ಟು ಎತ್ತರಕ್ಕೆ ನನ್ನ ಏರಿಸ ಬೇಡ’, ಎನ್ನುತ್ತಾ, ಎಲ್ಲರೂ ಏರಲು ಹಪಹಪಿಸುವ ಆ ಎತ್ತರವನ್ನು ಶವಪೆಟ್ಟಿಗೆ ಮತ್ತು ಸಾವಿಗೆ ಹೋಲಿಸಿದ್ದರು, ಆ ಕವಿ ಹೃದಯದ ವೇದಾಂತಿ.
1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಾಜ ಪೇಯಿ ಅವರು ಗಾಂಧೀನಗರ ಹಾಗೂ ಲಕ್ನೋ ಕ್ಷೇತ್ರಗಳಿಂದ ಸ್ಪರ್ಧಿಸಿ, ಭರ್ಜರಿ ವಿಜಯ ಸಾಧಿಸಿದರು. ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ 161 ಸ್ಥಾನಗಳನ್ನು ಪಡೆದು ಸಂಸತ್ತಿನಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಭಾಜಪದ ಸಂಸದೀಯ ನಾಯಕನಾಗಿ ಆಯ್ಕೆಗೊಂಡ ಅಟಲ್ ಜಿ 1996 ಮೇ 16ರಂದು ಭಾರತದ ಪ್ರಧಾನಮಂತ್ರಿಯಾದರು. ಕೇಂದ್ರದಲ್ಲಿ ಮೊಟ್ಟಮೊದಲ ಸಂಪೂರ್ಣ ಕಾಂಗ್ರೆಸೇತರ ಸರಕಾರವೊಂದು ಅಸ್ತಿತ್ವಕ್ಕೆ ಬಂದಿತ್ತು.

ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಜಾರಿ ಗೊಳಿಸುವ ಮೊದಲ ಹೆಜ್ಜೆಯಾಗಿ ಇಂದಿನಿಂದ ಮೂವತ್ತು ದಿನಗಳ ಒಳಗಾಗಿ ನನ್ನ ಸಚಿವ ಸಂಪುಟದ ಎಲ್ಲ ಸದಸ್ಯರ ಆದಾ ಯ ಹಾಗೂ ಆಸ್ತಿಗಳನ್ನು ಘೋಷಣೆ ಮಾಡುವುದಾಗಿ ಹೇಳಿಕೆ ನೀಡಿದರು. ಆದರೆ ವಿಶ್ವಾಸ ಮತಯಾಚನೆಯಲ್ಲಿ ವಿಫ‌ಲರಾಗಿ ಕೇವಲ ಹದಿಮೂರೇ ದಿನಕ್ಕೆ ರಾಜೀನಾಮೆ ನೀಡಿ “ಹಾರ್‌ ನಹೀ ಮಾನೂಂಗಾ, ರಾರ್‌ ನಹೀ ಠಾನೂಂಗಾ, ಕಾಲ್‌ ಕೆ ಕಪಾಲ್‌ ಪರ್‌ ಲಿಖ್‌ತಾ ಮಿಟಾತಾ ಹೂಂ, ಗೀತ್‌ ನಯಾ ಗಾತಾ ಹೂಂ’ ಎಂದು ಭವಿಷ್ಯ ನುಡಿದು ಹೊರಬಂದರು. 1998ರ ಮಾರ್ಚ್‌ ತಿಂಗಳಿನಲ್ಲಿ ಭಾರತ ಮತ್ತೂಂದು ಲೋಕಸಭಾ ಚುನಾವಣೆಗೆ ಸಿದ್ಧವಾಗಿ ನಿಂತಿತು. “ಸಮರ್ಥ ನಾಯಕ ಸುಸ್ಥಿರ ಸರಕಾರ’ ಎಂಬ ಧ್ಯೇಯವಾಕ್ಯದಡಿ ಭಾಜಪ ಚುನಾವಣ ಕಣಕ್ಕೆ ಧುಮುಕಿತು. ವಾಜಪೇಯಿ ಎರಡನೇ ಬಾರಿ ಭಾರತದ ಪ್ರಧಾನಿಯಾದರು.

Advertisement

ದೇಶದ ಪ್ರಧಾನಿಯಾದರೂ ಅಟಲ್‌ ಜೀಗೆ ಸ್ವಂತ ಮನೆ ಎಂಬುದು ಇರಲಿಲ್ಲ. ಗ್ವಾಲಿಯರ್‌ನಲ್ಲಿದ್ದ ತನ್ನ ತಂದೆಯ ಮನೆ ಯನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ನೀಡಿ ಪಕ್ಷದ ಕಚೇರಿಯಲ್ಲಿ ಮಲಗುತ್ತಿದ್ದ ವಾಜಪೇಯಿ ಅಕ್ಷರಶಃ ಅನಿಕೇತನರು. ಅವರ ಪರಿವಾರದ ಯಾವೊಬ್ಬ ಸದಸ್ಯನೂ ಪಕ್ಷದ ಜವಾಬ್ದಾರಿ ಅಥವಾ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಲಿಲ್ಲ. ತಾವು ಶಾಸಕ, ಸಂಸದ, ಸಚಿವರಾಗುವುದೇ ತನ್ನ ಕುಟುಂಬ, ಜಾತಿಯ ಏಳ್ಗೆಗಾಗಿ ಎನ್ನುವ ಸ್ವಾರ್ಥಿ ರಾಜಕಾರಣಿಗಳಿಗೆ ಅಟಲ್ ಜಿ ರಾಜಕೀಯ ಜೀವನ ದಾರಿದೀಪ.

ಪ್ರಕಾಶ್ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next