Advertisement

ಮಂಜೇಶ್ವರದ ರಾಷ್ಟ್ರಕವಿ ಭವನದಲ್ಲಿ ತೆಂಕಣ ಯಕ್ಷಗಾನದ ಮ್ಯೂಸಿಯಂ

11:30 AM Sep 23, 2017 | |

ಮಂಗಳೂರಿನಿಂದ ಕೇರಳಕ್ಕೆ ಬರಬೇಕಾದರೆ ಮಂಜೇಶ್ವರವನ್ನು ದಾಟದೇ ಬರಲಾಗದು. ಮಂಜೇಶ್ವರ ಎಂದಾಗ ಕನ್ನಡ ಸಾಹಿತ್ಯ- ಸಂಸ್ಕೃತಿ ಪ್ರೇಮಿಗಳಿಗೆ ಥಟ್ಟನೆ ನೆನಪಾಗುವ ಹೆಸರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ. ಹದಿನೆಂಟು ಭಾಷೆಗಳನ್ನು ಬಲ್ಲ ಕನ್ನಡದ ಅಭಿಮಾನದ ಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸವೀಗ ಕುಪ್ಪಳ್ಳಿಯ ಕವಿ ಕುವೆಂಪು ನಿವಾಸ ಕವಿಶೈಲದಂತೆಯೇ ಸಾಹಿತ್ಯ- ಸಾಂಸ್ಕೃತಿಕ- ಅಧ್ಯಯನ ಕೇಂದ್ರವಾಗಿ ಮೈದಾಳುವ ಸಿದ್ಧತೆಯಲ್ಲಿದೆ. ಕೇರಳ-ಕರ್ನಾಟಕ ಜಂಟಿ ಸರಕಾರದ  ಅನುದಾನದೊಂದಿಗೆ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ವಿಶೇಷ ಮುತುವರ್ಜಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ `ಗಿಳಿವಿಂಡು’ ಎಂಬ ಹೆಸರಿನಲ್ಲಿ ಜೀರ್ಣೋದ್ಧಾರಗೊಂಡು ನವೀಕರಿಸಲ್ಪಟ್ಟ ಮಂಜೇಶ್ವರದ ಕವಿನಿವಾಸದಲ್ಲೀಗ ತೆಂಕುತಿಟ್ಟು ಯಕ್ಷಗಾನದ ಸುಸಜ್ಜಿತ ಮ್ಯೂಸಿಯಂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದು ಕೇರಳದಲ್ಲಿ ಅನುಷ್ಠಾನಕ್ಕೆ ಬಂದ ಮೊದಲ ಯಕ್ಷಗಾನ ಮ್ಯೂಸಿಯಂ. ತೆಂಕುತಿಟ್ಟು ಯಕ್ಷಗಾನ ಪ್ರಬೇಧ ಉಗಮಗೊಂಡ ಪ್ರದೇಶದಲ್ಲಿ ಯಕ್ಷಗಾನದ ಪ್ರಾಥಮಿಕ ಪರಿಚಯ ನೀಡುವ ಮ್ಯೂಸಿಯಂ ಸಾಕಾರಗೊಂಡಿರುವುದು ಯಕ್ಷಗಾನದ ವಾಲ್ಮೀಕಿಯೆಂದೇ ಕೊಂಡಾಡಲ್ಪಟ್ಟ ಪಾರ್ತಿಸುಬ್ಬನಿಗೆ ಸಲ್ಲುವ ಮನ್ನಣೆಯೂ ಹೌದು.

Advertisement


ರಾಷ್ಟ್ರಕವಿ ಗೋವಿಂದ ಪೈಗಳು ಯಕ್ಷಗಾನ ಸಾಹಿತ್ಯ ರಚಿಸಿದವರಲ್ಲ. ಆದರೆ ಯಕ್ಷಗಾನದ ವಾತಾವರಣದಲ್ಲಿ ಬೆಳೆದವರು, ಕಲೆಯನ್ನು ಪ್ರೀತಿಸಿದವರು. ಹಿಂದೊಮ್ಮೆ ಕವಿ ಪಾರ್ತಿಸುಬ್ಬ ಕುಂಬಳೆಯವನಲ್ಲ ಎಂಬ ವಾದ-ಸಂವಾದ ನಡೆದಾಗ ಆತ ಕುಂಬಳೆಯವನೆಂದು ಸಾರಲು ಪ್ರಪ್ರಥಮ ಹೋರಾಟಕ್ಕಿಳಿದವರು ಮಂಜೇಶ್ವರ ಗೋವಿಂದ ಪೈಗಳು. ಇಂದೀಗ ಕಾಲವುರುಳಿದೆ. ಸಾಂಸ್ಕೃತಿಕ ಸ್ಥಿತ್ಯಂತರಗಳು ಸಂಭವಿಸಿವೆ. ಗೋವಿಂದ ಪೈಗಳ ಕಾವ್ಯತಪೋಭೂಮಿಯಾದ ಮಂಜೇಶ್ವರದ ಅವರ ಮೂಲಮನೆ `ಗಿಳಿವಿಂಡು’ ಎಂಬ ಹೆಸರಿನಲ್ಲಿ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ನಾಡಿಗೆ ಸಮರ್ಪಣೆಯಾಗಿದೆ. ಕವಿಮನೆಯೊಂದು ಸಾಹಿತ್ಯ-ಸಂಸ್ಕೃತಿಯ ಆರಾಧನೆ ಮತ್ತು ಅಧ್ಯಯನ ಕೇಂದ್ರವಾಗಿ ಪರಿಷ್ಕರಣೆಗೊಳ್ಳುವಾಗ ಅದರೊಳಗೆ ಪ್ರಪ್ರಥಮವಾಗಿ ಅನುಷ್ಠಾನಕ್ಕೆ ಬಂದದ್ದು ಯಕ್ಷಗಾನ ಮ್ಯೂಸಿಯಂ. ಪ್ರಸ್ತುತ ತಿಂಗಳಿಗೊಂದರಂತೆ ಸಾಹಿತ್ಯ-ಸಂಸ್ಕೃತಿ ಕಲಾಪಗಳು ಇಲ್ಲಿ ನಡೆಯತೊಡಗಿವೆ. ಈ ನಿಟ್ಟಿನಲ್ಲಿ ಇಲ್ಲಿಗೆ ಬಂದವರ ಕಣ್ಣರಳಿಸುತ್ತಿದೆ ಈ ಮ್ಯೂಸಿಯಂ. 

`ಯಕ್ಷದೇಗುಲ’ ಎಂಬ ಹೆಸರಿನಲ್ಲಿ ಕವಿಮನೆಯ ಒಂದು ಭಾಗವೇ ಯಕ್ಷಗಾನಕ್ಕಾಗಿ ಮೀಸಲಿರಿಸಲ್ಪಟ್ಟಿದೆ. ಇಲ್ಲಿ ಸ್ವತಃ ಯಕ್ಷಗಾನ ವೇಷಧಾರಿಗಳೇ ವೇಷ ತೊಟ್ಟು ನಿಂತುಕೊಂಡಿರುವಂತಹ ಆಳೆತ್ತರದ 10 ಯಕ್ಷ ಶಿಲ್ಪಗಳು ತೆಂಕುತಿಟ್ಟಿನ ಪ್ರಾತಿನಿಧಿಕ ವೇಷಗಳಾಗಿ ಸರದಿ ಸಾಲಲ್ಲಿ ನಿಂತಿವೆ. ನೈಜ ವೇಷಗಳನ್ನೇ ಹೋಲುವ ಈ ಬೊಂಬೆಗಳು ತೆಂಕಣ ಯಕ್ಷಗಾನದ ಪರಂಪರೆಯನ್ನು ಪ್ರತಿನಿಧಿಸುತ್ತಾ, ಪ್ರತಿಧ್ವನಿಸುತ್ತವೆ. ಈ ಗೊಂಬೆಗಳನ್ನು ನಿರ್ಮಿಸಿದವರು ಉಜಿರೆಯ ಶಿವಕುಮಾರ್‌. ಇದಕ್ಕೆ ಮುಖವರ್ಣಿಕೆ ಮತ್ತು ವೇಷಭೂಷಣಗಳನ್ನು ಒದಗಿಸಿದವರು ಪ್ರಸಾದನ ತಜ್ಞ ದೇವಕಾನ ಕೃಷ್ಣ ಭಟ್‌ ಬಳಗದವರು. ಯಕ್ಷಗಾನದ ಪುಂಡುವೇಷ, ಸ್ತ್ರೀವೇಷ, ಕೇಸರಿತಟ್ಟಿ, ರಾಜವೇಷ, ಭೀಮನಮುಡಿ, ಹೆಣ್ಣುಬಣ್ಣ, ಕಿರಾತ, ಹನೂಮಂತ, ಹಾಸ್ಯ ಸೇರಿದಂತೆ ಎಲ್ಲ ನಮೂನೆಯ ಪ್ರಾತಿನಿಧಿಕ ವೇಷಗಳು ಇಲ್ಲಿವೆ. ಈ ಹಿಂದೆ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಯಕ್ಷಗಾನ ಮ್ಯೂಸಿಯಂ ಸಾಕಾರಗೊಳಿಸಿದ ಅನುಭವದ ಹಿನ್ನೆಲೆಯಲ್ಲಿ ರಂಗನಿರ್ದೇಶಕ ಜೀವನ್‌ ರಾಂ ಸುಳ್ಯ ಅವರ ಮೇಲ್ನೋಟದಲ್ಲಿ ಈ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿದೆ.


ಮ್ಯೂಸಿಯಂನೊಳಗೆ ವೇಷಗಳಷ್ಟೇ ಅಲ್ಲ. ಯಕ್ಷಗಾನದಲ್ಲಿ ವೇಷವೊಂದು ಧರಿಸುವ ಎಲ್ಲ ಆಭರಣಗಳು, ಧರಿಸುವ ಜವುಳಿಗಳನ್ನು ಜೋಡಿಸಿಟ್ಟು, ಅದರ ಕುರಿತು ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಾಥಮಿಕ ವಿವರಣೆ ನೀಡಲಾಗಿದೆ. ಯಕ್ಷಗಾನದಲ್ಲಿ ಈ ಹಿಂದೆ ಆಗಿಹೋದ, ಧ್ರುವತಾರೆ ಗಳೆಂದು ಕರೆಸಿಕೊಂಡ ಹಿರಿಯ, ಜನಪ್ರಿಯ ಕಲಾವಿದರ ಭಾವಚಿತ್ರಗಳು ಅವರ ಹೆಸರಿನೊಂದಿಗೆ ಇಲ್ಲಿ ಜೋಡಿಸಿಡಲ್ಪಟ್ಟಿವೆ. ಅಲ್ಲದೆ ಯಕ್ಷಲೋಕವನ್ನಾಳಿದ ಹಳೆಯ ತಲೆಮಾರಿನ ಪ್ರಸಿದ್ಧ ಕಲಾವಿದರ ಪ್ರಾತಿನಿಧಿಕ ವೇಷಗಳ ಚಿತ್ರಗಳೂ ಇಲ್ಲಿ ಅಲಂಕರಿಸಲ್ಪಟ್ಟಿವೆ. ಅಲ್ಲದೇ ಯಕ್ಷಗಾನದಲ್ಲಿ ಕಾಣಬರುವ ಪ್ರತಿಯೊಂದು ವೇಷಗಳ ಮುಖವರ್ಣಿಕೆಗಳ ವಿನ್ಯಾಸದ ಪ್ರತಿಕೃತಿ, ಯಕ್ಷಗಾನ ಬಯಲಾಟ ನಡೆಯುವ ಜಾಗದಲ್ಲಿ ಕಾಣುವ ರಂಗಸ್ಥಳ ಮತ್ತು ಕಲಾವಿದರು ಪಾತ್ರಧಾರಿಗಳಾಗಿ ಸಜ್ಜಾಗುವ ಚೌಕಿಯ ಕ್ರಮಗಳನ್ನು ಯಥಾವತ್‌ ಹೋಲುವ ಪ್ರತಿಕೃತಿಗಳೂ ಇಲ್ಲಿವೆ. ಪ್ರಾತಿನಿಧಿಕವಾಗಿ ಬಡಗುತಿಟ್ಟಿನ ಒಂದು ವೇಷವನ್ನೂ ಇಲ್ಲಿ ಅಳವಡಿಸಲಾಗಿದೆ.

ತೆಂಕುತಿಟ್ಟು ಯಕ್ಷಗಾನದ ಬಗ್ಗೆ ಅರಿಯದ  ಅರಿಯದ ಸಂಶೋಧಕರು, ಬರಹಗಾರರು, ವಿದ್ಯಾರ್ಥಿಗಳು ನಾಡಿನ ನಾನಾ ಕಡೆಯಿಂದ ಮಂಜೇಶ್ವರದ ಕವಿನಿವಾಸಕ್ಕೆ ಆಗಮಿಸಿದರೆ ಅವರಿಗೆ ಈ ನೆಲದ ಮಣ್ಣಿನ ಕಲೆಯ ಬಗ್ಗೆ ಪ್ರಾಥಮಿಕ ಪರಿಚಯ ನೀಡುವ ಉದ್ದೇಶದಿಂದ ಇಲ್ಲಿ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ ನೂರಾರು ಪ್ರಸಿದ್ಧರು ಈ ಮ್ಯೂಸಿಯಂಗೆ ಭೇಟಿ ಇತ್ತು, ಮಣ್ಣಿನ ಕಲೆಯನ್ನು ಕಾಪಾಡುವ ಕಾಳಜಿಗೆ ಪ್ರಶಂಸೆಯ ನುಡಿಗಳನ್ನಾಡಿದ್ದಾರೆ. `ಯಕ್ಷದೇಗುಲ’ ಎಂಬ ಹೆಸರಿನಲ್ಲಿ ಯಕ್ಷಗಾನದ ಹಿಮ್ಮೇಳ ಪರಿಕರ ಮತ್ತು ಮುಖಚಿತ್ರವನ್ನೊಳಗೊಂಡ ದ್ವಾರದಲ್ಲಿ ಮ್ಯೂಸಿಯಂನ ಒಳಗೆ ಬಂದೊಡ ನೆಯೇ ಹವಾನಿಯಂತ್ರಿತ ವಾತಾವರಣದಲ್ಲಿ ಯಕ್ಷಗಾನದ ಹಿಮ್ಮೇಳ, ಪದ್ಯ ಗಳನ್ನಾಲಿಸುತ್ತಾ ಮ್ಯೂಸಿಯಂ ನೋಡಬಹುದು, ಮಾಹಿತಿಗಳನ್ನು ಪಡೆಯ ಬಹುದು. ಪ್ರಸ್ತುತ ಮ್ಯೂಸಿಯಂ ಹೊಂದಿಕೊಂಡು ಕವಿಮನೆಯ ಒಳ ಅಂಗಳ ದಲ್ಲೊಂದು ವೇದಿಕೆ ಇದೆ. ಇದಕ್ಕೆ `ಪಾರ್ತಿಸುಬ್ಬ ಮಂಟಪ’ ಎಂದು ಹೆಸರು. ಕನಿಷ್ಟ 50 ಮಂದಿ ಕುಳಿತುಕೊಳ್ಳುವ ಸೌಕರ್ಯವಿದ್ದು, ಇದು ಕಲೆಯ ಕುರಿತು ಪ್ರಾತ್ಯಕ್ಷಿಕೆ-ಸಂವಾದ-ಅಧ್ಯಯನಕ್ಕೆ ಅವಕಾಶ ಒದಗಿಸುವ ಉದ್ದೇಶ ಹೊಂದಿದೆ.

Advertisement

ತೆಂಕುತಿಟ್ಟು ಯಕ್ಷಗಾನ ಉಗಮಗೊಂಡು ವಿಕಸಿಸಿದ ನಾಡಿನಲ್ಲಿ ಈ ಕಲೆಯನ್ನು ಇನ್ನಿತರರಿಗೆ ಪರಿಚಯಿಸುವ ಆಶಯದ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿರುವುದು ರಾಷ್ಟ್ರಕವಿ ಗೋವಿಂದ ಪೈಗಳ ನಿವಾಸಕ್ಕೊಂದು ಅಲಂಕಾರವಾಗಿದೆ. ಯಕ್ಷಗಾನದಲ್ಲಿ ತೆಂಕು-ಬಡಗು-ಬಡಾಬಡಗು ಮತ್ತು ಮೂಡಲ ಪಾಯ -ಪಡುವಲಪಾಯ ಮತ್ತಿತರ ಪ್ರಬೇಧಗಳಿದ್ದರೂ ಅವುಗಳನ್ನು ಸಮಗ್ರ ಜನರಿಗೆ ಪರಿಚಯಿಸುವ ಮತ್ತು ಪರಂಪರೆಯನ್ನು ಕಾಪಿಡುವ ದೃಷ್ಟಿಯಲ್ಲಿ ಮ್ಯೂಸಿಯಂಗಳು ಅಸ್ತಿತ್ವಕ್ಕೆ ಬಂದಿರುವುದು ವಿರಳ. ಕಲಾ ವಿಸ್ತರಣೆಯ ದೃಷ್ಟಿ ಯಲ್ಲಿ ಇದು ಕಾಲಘಟ್ಟದ ಅಗತ್ಯ. ಪ್ರಸ್ತುತ ಮಂಜೇಶ್ವರದ ರಾಷ್ಟ್ರಕವಿ ನಿವಾಸಕ್ಕೆ ದೇಶದ ಯಾವುದೇ ಮೂಲೆಯಿಂದ ಯಾರೇ ಬರಲಿ, ಅವರು ತೆಂಕುತಿಟ್ಟು ಯಕ್ಷಗಾನದ ಬಗ್ಗೆ ಸಮಗ್ರವಾದ ಪ್ರಾಥಮಿಕ ಅರಿವನ್ನು ಹೊಂದಿ, ಅದರ ಸೌಂದರ್ಯವನ್ನು ಸವಿದು ಹೋಗುವಂತೆ ಈ ಮ್ಯೂಸಿಯಂ ಪ್ರಚೋದಿಸುತ್ತದೆ ಎಂದರದು ಉತ್ಪ್ರೇಕ್ಷೆಯಲ್ಲ.

ಎಂ.ನಾ. ಚಂಬಲ್ತಿಮಾರ್‌

Advertisement

Udayavani is now on Telegram. Click here to join our channel and stay updated with the latest news.

Next