Advertisement

ಅತಿವೃಷ್ಟಿ ಸಂತ್ರಸ್ತರ ನೆರವು ಆಡಳಿತ ಯಂತ್ರ ಚುರುಕಾಗಲಿ 

06:00 AM Jun 13, 2018 | Team Udayavani |

ರಾಜ್ಯದಲ್ಲಿ ವರುಣನ ರುದ್ರನರ್ತನದಿಂದ ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಭಾಗಗಳು ಜಲಾವೃತಗೊಂಡು ಕೋಟ್ಯಂತರ ರೂ. ನಷ್ಟವಷ್ಟೇ ಅಲ್ಲದೆ ಜನ-ಜಾನುವಾರು-ಪ್ರಾಣ ಹಾನಿಯಾಗಿದೆ. ಮೊದಲಿಗೆ ಮಳೆ ಶುಭ ಸೂಚಕ ಎಂದು ಭಾವಿಸಿದ್ದರೂ ಇದೀಗ ಅಪಾಯದ ಹಂತ ತಲುಪುತ್ತಿದೆ. ಚಾರ್ಮಾಡಿ ಘಾಟ್‌ನಲ್ಲಿ ಭೂ ಕುಸಿತ, ಬೆಳಗಾವಿಯಲ್ಲಿ  ಐದು ಕೋಟಿ ರೂ. ವೆಚ್ಚದಲ್ಲಿ ಐದು ತಿಂಗಳ ಹಿಂದೆಯಷ್ಟೇ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್‌ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವುದು, ರಸ್ತೆಗಳು ನೀರಿನಿಂದ ಜಲಾವೃತವಾಗಿರುವುದು, ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಗದ್ದೆಗಳು ಕೆರೆಗಳಂತಾಗಿರುವುದು ಇದಕ್ಕೆ ಸಾಕ್ಷಿ. ಒಂದೆಡೆ ಸಂಚಾರ ಅಸ್ತವ್ಯಸ್ತ ಮತ್ತೂಂದೆಡೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

Advertisement

ಸೋಮವಾರವಷ್ಟೇ ನೂತನ ಕಂದಾಯ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಸಭೆ ನಡೆಸಿ ಅತಿವೃಷ್ಟಿಯಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಪುನರ್‌ವಸತಿ, ಪರಿಹಾರದ ಬಗ್ಗೆ ಹೆಚ್ಚು ಗಮನ ನೀಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲೂ 180.6 ಕೋಟಿ ರೂ.ವರೆಗೂ ಇರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ರಾಜ್ಯ ತುರ್ತು ನಿರ್ವಹಣಾ ಕೇಂದ್ರ ಮತ್ತು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನೊಳಗೊಂಡ ವಾಟ್ಸ್‌Õಆ್ಯಪ್‌ ಗ್ರೂಪ್‌ ತೆರೆದು ಪರಿಸ್ಥಿತಿ ಅವಲೋಕನ ಮಾಡಲಾಗುತ್ತಿದ್ದು, ಹವಾಮಾನ ಮುನ್ಸೂಚನೆಗಳನ್ನು ಕಾಲಕಾಲಕ್ಕೆ ಸಂಬಂಧಿಸಿದವರಿಗೆ ರವಾನಿಸಲಾಗುತ್ತಿದೆ ಎಂದೂ ಹೇಳಿದ್ದಾರೆ. ಈ ಕಾರ್ಯ ಚುರುಕಾಗಬೇಕು. ಮುಂಗಾರು ಆರಂಭವಾದ ಮೇಲೆ ಜೂ. 1ರಿಂದ10ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ. 73ರಷ್ಟು ಹೆಚ್ಚು ಮಳೆಯಾಗಿದೆ. ಇನ್ನೂ ಮೂರು ದಿನ ದಕ್ಷಿಣ ಒಳನಾಡು, ಮಧ್ಯ ಕರ್ನಾಟಕದಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆೆ. ಹೀಗಾಗಿ, ಪ್ರವಾಹ ಭೀತಿ ಎದುರಾಗಿದೆ.

ಮುಂಗಾರು ಪೂರ್ವ ಮತ್ತು ನಂತರದ ಮಳೆ ವೇಳೆ ಒಟ್ಟು 104 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಸಿಡಿಲು ಬಡಿದು ಮೃತಪಟ್ಟವರೇ 94 ಮಂದಿ. ಉಳಿದ 10 ಜೀವಹಾನಿಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದರಿಂದ  ಸಂಭವಿಸಿದೆ. ಸಿಡಿಲು ಬಡಿದು ಇಷ್ಟೊಂದು ಪ್ರಮಾಣದಲ್ಲಿ ಮಾನವ ಜೀವಹಾನಿಯಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ.

ಹೀಗಾಗಿ, ಪ್ರಾಣಹಾನಿ ತಡೆಗಟ್ಟಲು, ಸಂಕಷ್ಟದಲ್ಲಿರುವವರಿಗೆ ನೆರವಾಗಲು ಸರಕಾರ ಅದರಲ್ಲೂ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಸಹಕಾರ, ಪಶು ಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳ ಸಮನ್ವಯತೆಯಿಂದ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಬೇಕು. ರಾಜ್ಯ ವಿಕೋಪ ಪರಿಹಾರ ನಿಧಿಯಡಿ ಸಂತ್ರಸ್ತ್ರರಿಗೆ ಪರಿಹಾರ ಕಲ್ಪಿಸಲು ಸಮರೋಪಾದಿಯಲ್ಲಿ ಮುಂದಾಗಬೇಕು. ಅಗತ್ಯ ಬಿದ್ದರೆ ನೆರವಿಗಾಗಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಮನವಿ ಮಾಡಬೇಕು.

ಮಳೆಯಿಂದಾಗಿ ಕೆಲವೆಡೆ ಆರೋಗ್ಯ ಸಮಸ್ಯೆ ಉದ್ಭವಿಸಲಿದ್ದು ಆ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳು ಎಚ್ಚೆತ್ತುಕೊಂಡು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರು, ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಸ್ವತ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ದನ-ಕರುಗಳಿಗೆ ಮೇವು, ಜನರಿಗೆ ಕುಡಿಯುವ  ನೀರು ಪೂರೈಕೆಗೆ ತುರ್ತು ಕ್ರಮಕ್ಕೆ ಮುಂದಾಗಬೇಕು. ಪರಿಹಾರ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ ಹಂತದಲ್ಲಿ ಸಮರ್ಪಕ ಕಾರ್ಯನಿರ್ವಹಣೆಯಾಗಬೇಕು. ಕೆಲವೆಡೆ ನಿಯಮ ಪಾಲನೆ ಕಷ್ಟವಾಗಬಹುದು. ಆದರೆ, ಮಾನವೀಯತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು. ಇದನ್ನೇ ಕಂದಾಯ ಸಚಿವರೂ ಅಧಿಕಾರಿಗಳ ಸಭೆಯಲ್ಲಿ ಒತ್ತಿ ಹೇಳಿದ್ದಾರೆ.  ಒಟ್ಟಾರೆ, ಅತಿವೃಷ್ಟಿ ವಿಚಾರದಲ್ಲಿ ಪಕ್ಷ, ರಾಜಕೀಯ ಬಿಟ್ಟು ಎಲ್ಲ ಜನಪ್ರತಿನಿಧಿಗಳು ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ಧಾವಿಸಬೇಕು. ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ಖಾತೆ ಹಂಚಿಕೆ ಆಗಿದೆಯಾದರೂ ಇನ್ನೂ ಜಿಲ್ಲಾ ಉಸ್ತುವಾರಿಗಳ ನೇಮಕವಾಗಿಲ್ಲ. 

Advertisement

ಜಿಲ್ಲಾ ಉಸ್ತುವಾರಿ ಸಚಿವರು ನೇಮಕವಾದರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಜತೆಗೂಡಿ ಜಿಲ್ಲಾ ಮಟ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಲು ಸಹಕಾರಿಯಾಗಲಿದೆ.  ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ತಕ್ಷಣ ಕ್ರಮಕ್ಕೆ ಮುಂದಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next