Advertisement

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಮಂಡನೆ

10:17 PM Sep 13, 2022 | Team Udayavani |

ಬೆಂಗಳೂರು: ಅನಧಿಕೃತ ಸಾಗುವಳಿ ಮಾಡುತ್ತಿರುವ ಸರಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ನಮೂನೆ-57ರಲ್ಲಿ ಸಲ್ಲಿಸುವ ಕೊನೇ ದಿನಾಂಕವನ್ನು ಮತ್ತೂಂದು ವರ್ಷಕ್ಕೆ ವಿಸ್ತರಿಸಲು ಅವಕಾಶ ಮಾಡಿಕೊಡುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ-2022 ಅನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

Advertisement

ವಿಧೇಯಕ ಮಂಡಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ಅನಧಿಕೃತ ಸಾಗುವಳಿ ವಿಚಾರಕ್ಕೆ ಸಂಬಂಧಿಸಿ 2005ರ ಜ. 1ರ ಹಿಂದಿನಿಂದ ಸಾಗುವಳಿ ಮಾಡಲಾಗುತ್ತಿರುವ, 2018ರ ಮಾ. 17ರಿಂದ 2019ರ ಮಾ. 16ರ ವರೆಗೆ ಅನಧಿಕೃತ ಸಾಗುವಳಿ ಮಾಡುತ್ತಿರುವ ಸರಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ನಮೂನೆ-57ರಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ 2019ರ ಮಾ. 10ರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿರಲಿಲ್ಲ. ಅವಧಿ ವಿಸ್ತರಿಸುವಂತೆ ಶಾಸಕರು ಮತ್ತು ಸಾರ್ವಜನಿಕರಿಂದ ಮನವಿ ಬಂದಿತ್ತು.

ವಿಧಾನಮಂಡಳದ ಅಧಿವೇಶನ ಇಲ್ಲದ ಕಾರಣ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ 2022ರ ಮೇ 26ರಂದು ಆಧ್ಯಾದೇಶ ಹೊರಡಿಸಲಾಗಿತ್ತು. ಈಗ ಪ್ರಸಕ್ತ ಅಧಿವೇಶನದಲ್ಲಿ ಆಧ್ಯಾದೇಶದ ಬದಲಿಗೆ ತಿದ್ದುಪಡಿ ವಿಧೇಯಕ ತರಲಾಗಿದೆ ಎಂದು ಹೇಳಿದರು.

ಇದೇ ವೇಳೆ 2022ನೇ ಸಾಲಿನ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ಮುನಿಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ-2022, ಕರ್ನಾಟಕ ರೇಷ್ಮೆಹುಳು ಬಿತ್ತನೆ ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ನಿಯಮ ವಿಧೇಯಕ 2022 ಅನ್ನು ಮಂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next