Advertisement

Asia Cup Cricket Final; ಭಾರತದ ಟ್ರೋಫಿ ಬರಗಾಲ ನೀಗಲಿ

11:17 PM Sep 16, 2023 | Team Udayavani |

ಕೊಲಂಬೊ: ಪ್ರತಿಷ್ಠಿತ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಏಷ್ಯಾದ ಕ್ರಿಕೆಟ್‌ ಕಿಂಗ್‌ ಯಾರು ಎಂಬುದನ್ನು ಇತ್ಯರ್ಥಗೊಳಿಸಲು ರವಿವಾರ ಇಲ್ಲಿನ “ಆರ್‌. ಪ್ರೇಮದಾಸ ಸ್ಟೇಡಿಯಂ’ ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿವೆ. ಮಳೆ ಸಹಕರಿಸಿದರೆ ಇದೊಂದು ಅತ್ಯಂತ ರೋಚಕ ಹೋರಾಟವಾಗಿ ದಾಖಲಾಗುವುದರಲ್ಲಿ ಅನುಮಾನವಿಲ್ಲ. ಇಲ್ಲ ವಾದರೆ ಮೀಸಲು ದಿನವಂತೂ ಇದ್ದೇ ಇದೆ.

Advertisement

ಶ್ರೀಲಂಕಾ ಆತಿಥೇಯ ತಂಡವಾಗಿದ್ದು, ಹಾಲಿ ಚಾಂಪಿಯನ್‌ ಕೂಡ ಆಗಿದೆ. ಈವರೆಗಿನ 16 ಏಷ್ಯಾ ಕಪ್‌ ಪಂದ್ಯಾವಳಿಗಳಲ್ಲಿ ಭಾರತ ಅತ್ಯಧಿಕ 7 ಸಲ ಚಾಂಪಿಯನ್‌ ಆಗಿರುವ ದಾಖಲೆ ಹೊಂದಿದ್ದು, ತನ್ನ ಟ್ರೋಫಿ ಬರಗಾಲ ನೀಗಿಸುವ ಯೋಜನೆಯಲ್ಲಿದೆ. ಶ್ರೀಲಂಕಾ 6 ಸಲ, ಪಾಕಿಸ್ಥಾನ 3 ಸಲ ಏಷ್ಯಾ ಕಪ್‌ ಗೆದ್ದಿದೆ.

ಟ್ರೋಫಿಯೊಂದು ಬೇಕಿದೆ
2018ರಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಏಷ್ಯಾ ಕಪ್‌ ಗೆದ್ದ ಬಳಿಕ ಬಹು ರಾಷ್ಟ್ರಗಳು ಪಾಲ್ಗೊಂಡ ಯಾವುದೇ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್‌ ಆಗಿಲ್ಲ ಎಂಬುದನ್ನು ಗಮನಿಸ ಬೇಕು. 2019ರ ಏಕದಿನ ವಿಶ್ವಕಪ್‌ ಹಾಗೂ 2022ರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಎಡವಿದ್ದ ಭಾರತ, 2019-2021 ಮತ್ತು 2021-2023ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲೂ ಮುಗ್ಗರಿಸಿತ್ತು. ಹೀಗಾಗಿ ತನ್ನದೇ ಆತಿಥ್ಯದಲ್ಲಿ ಸಾಗಲಿರುವ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಭಾರತಕ್ಕೆ ತುರ್ತಾಗಿ ಕ್ರಿಕೆಟ್‌ ಟ್ರೋಫಿಯೊಂದರ ಅಗತ್ಯವಿದೆ.

ಇದು ಭಾರತ-ಶ್ರೀಲಂಕಾ ನಡುವಿನ 8ನೇ ಏಷ್ಯಾ ಕಪ್‌ ಫೈನಲ್‌. ಭಾರತ 4 ಸಲ, ಶ್ರೀಲಂಕಾ 3 ಸಲ ಜಯ ಸಾಧಿಸಿವೆ. ಲೀಗ್‌ ಹಂತದಲ್ಲಿ ರೋಹಿತ್‌ ಪಡೆ ಆತಿಥೇಯ ಶ್ರೀಲಂಕಾ ಎದುರಿನ ಸಣ್ಣ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬದ್ಧ ಎದುರಾಳಿ ಪಾಕಿಸ್ಥಾನವನ್ನು ದಾಖಲೆ ಅಂತರದಿಂದ ಹೊಡೆದುರುಳಿಸಿದೆ. ಬಾಂಗ್ಲಾದೇಶ ವಿರುದ್ಧ 6 ರನ್ನುಗಳಿಂದ ಎಡವಿದರೂ ಭಾರತವಿಲ್ಲಿ ಮೀಸಲು ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸಿತ್ತು ಎಂಬುದನ್ನು ಗಮನಿಸಬೇಕು. ಇಲ್ಲಿ ಶುಭಮನ್‌ ಗಿಲ್‌ ಬಾರಿಸಿದ ಶತಕ ಟೀಮ್‌ ಇಂಡಿಯಾ ಪಾಲಿಗೊಂದು ಪ್ಲಸ್‌ ಪಾಯಿಂಟ್‌.

ಫೈನಲ್‌ ಗೂ ಮುನ್ನ ಎರಡೂ ತಂಡಗಳು ಗಾಯದ ಸಮಸ್ಯೆಗೆ ಸಿಲುಕಿವೆ. ಭಾರತ ಅಕ್ಷರ್‌ ಪಟೇಲ್‌ ಸೇವೆಯಿಂದ ವಂಚಿತವಾದರೆ, ಶ್ರೀಲಂಕಾ ಮಹೀಶ್‌ ತೀಕ್ಷಣ ಸೇವೆಯನ್ನು ಕಳೆದುಕೊಳ್ಳಲಿದೆ.

Advertisement

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಮತ್ತು ಕುಲದೀಪ್‌ ಯಾದವ್‌ ಆಡುವ ಬಳಗಕ್ಕೆ ಮರಳಲಿದ್ದಾರೆ. ಇವರ ಬದಲು ಆಡಿದವರೆಲ್ಲ ತಂಡದಿಂದ ಹೊರಬೀಳಲಿದ್ದಾರೆ. ಆದರೆ ಶಾದೂìಲ್‌ ಠಾಕೂರ್‌ ಬದಲು ಶಮಿಗೆ ಅವಕಾಶ ನೀಡಿದರೆ ಭಾರತದ ಬೌಲಿಂಗ್‌ ವಿಭಾಗ ಹೆಚ್ಚು ಘಾತಕಗೊಳ್ಳಲಿದೆ ಎಂಬುದೊಂದು ಲೆಕ್ಕಾಚಾರ.

ಬ್ಯಾಟಿಂಗ್‌ ವಿಭಾಗದಲ್ಲಿ ಅನುಭವಿಗಳಾದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಕ್ರೀಸ್‌ ಆಕ್ರಮಿಸಿಕೊಂಡು ದೊಡ್ಡ ಮೊತ್ತ ಪೇರಿಸಬೇಕಾದ ಅಗತ್ಯವಿದೆ. ಬಾಂಗ್ಲಾ ವಿರುದ್ಧ ಬಾರಿಸಿದ ಶತಕದಿಂದ ಶುಭಮನ್‌ ಗಿಲ್‌ ಅವರ ಆತ್ಮವಿಶ್ವಾಸದ ಮಟ್ಟ ಖಂಡಿತವಾಗಿಯೂ ಹೆಚ್ಚಿದೆ. ಫೈನಲ್‌ನಲ್ಲೂ ಇವರಿಂದ ಇಂಥದೇ ಆಟ ಹೊರಹೊಮ್ಮಬೇಕಿದೆ. ಮೊದಲು ಬ್ಯಾಟಿಂಗ್‌ ನಡೆಸಿ ದೊಡ್ಡ ಮೊತ್ತ ಪೇರಿಸಿದರೆ ಮೇಲುಗೈ ನಿರೀಕ್ಷೆ ಇರಿಸಿಕೊಳ್ಳಬಹುದು.

ನಮ್ಮವರು ಆತಿಥೇಯರ ಸ್ಪಿನ್‌ ದಾಳಿಯನ್ನು ನಿಭಾಯಿಸಿ ನಿಲ್ಲುವ ಅಗತ್ಯವಿದೆ. ಸೂಪರ್‌-4 ಪಂದ್ಯದಲ್ಲಿ ದುನಿತ್‌ ವೆಲ್ಲಲಗೆ ಟೀಮ್‌ ಇಂಡಿಯಾ ವನ್ನು ಕಾಡಿದ್ದರು. ಭಾರತದ ಎಲ್ಲ 10 ವಿಕೆಟ್‌ಗಳನ್ನು ಲಂಕಾ ಸ್ಪಿನ್ನರ್ ಬುಟ್ಟಿಗೆ ಹಾಕಿಕೊಂಡಿದ್ದರು. ಫೈನಲ್‌ನಲ್ಲಿ “ಸ್ಪಿನ್‌ ಭೀತಿ’ ತೊಲಗಬೇಕಿದೆ.

ಲಂಕೆಗೆ ತವರಿನ ಲಾಭ
ತವರಲ್ಲಿ ಆಡುವ ಕಾರಣ ಲಂಕೆಗೆ ಹೆಚ್ಚಿನ ಲಾಭ ಲಭಿಸುವ ಸಾಧ್ಯತೆ ಇದೆ. ವೇಗದ ಬೌಲಿಂಗ್‌ ವಿಭಾಗ ದುರ್ಬಲಗೊಂಡಿದೆಯಾದರೂ ಬ್ಯಾಟಿಂಗ್‌ ಮೇಲೆ ನಂಬಿಕೆ ಇರಿಸಬಹುದು. ಪಾಕಿಸ್ಥಾನ ವಿರುದ್ಧದ ದೊಡ್ಡ ಮೊತ್ತವನ್ನು ಚೇಸ್‌ ಮಾಡಿ ಗೆದ್ದದ್ದು ಇದಕ್ಕೊಂದು ಉತ್ತಮ ದೃಷ್ಟಾಂತ. ಮೆಂಡಿಸ್‌, ಅಸಲಂಕ, ಸಮರವಿಕ್ರಮ ಅವರನ್ನೊಳಗೊಂಡ ಮಧ್ಯಮ ಕ್ರಮಾಂಕ ಹೆಚ್ಚು ಬಲಿಷ್ಠ. ಆದರೆ ಆತಿಥೇಯರ ಆರಂಭ ಈವರೆಗೆ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸಿಲ್ಲ.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ಇಶಾನ್‌ ಕಿಶನ್‌/ತಿಲಕ್‌ ವರ್ಮ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಶಾದೂìಲ್‌ ಠಾಕೂರ್‌/ವಾಷಿಂಗ್ಟನ್‌ ಸುಂದರ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ.

ಶ್ರೀಲಂಕಾ: ಕುಸಲ್‌ ಪೆರೆರ, ಪಥುಮ್‌ ನಿಸ್ಸಂಕ, ಕುಸಲ್‌ ಮೆಂಡಿಸ್‌, ಸದೀರ ಸಮರವಿಕ್ರಮ, ಚರಿತ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್‌ ಶಣಕ (ನಾಯಕ), ದುನಿತ್‌ ವೆಲ್ಲಲಗೆ, ದುಶಾನ್‌ ಹೇಮಂತ, ಮತೀಶ ಪತಿರಣ, ಕಸುನ್‌ ರಜಿತ.

8ನೇ ಫೈನಲ್‌
ಭಾರತ ಮತ್ತು ಶ್ರೀಲಂಕಾ
ಏಷ್ಯಾ ಕಪ್‌ನಲ್ಲಿ 8ನೇ ಸಲ ಮುಖಾಮುಖೀ ಆಗುತ್ತಿವೆ. ಹಿಂದಿನ 7 ಫೈನಲ್‌ಗ‌ಳಲ್ಲಿ ಭಾರತ ನಾಲ್ಕರಲ್ಲಿ, ಶ್ರೀಲಂಕಾ ಮೂರರಲ್ಲಿ ಗೆದ್ದು ಚಾಂಪಿಯನ್‌ ಆಗಿವೆ. ಇವುಗಳ ವಿವರ ಇಲ್ಲಿದೆ.

ಗಾಯಾಳು ಅಕ್ಷರ್‌
ಬದಲು ವಾಷಿಂಗ್ಟನ್‌
ಬಾಂಗ್ಲಾದೇಶ ವಿರುದ್ಧದ ಸೂಪರ್‌-4 ಪಂದ್ಯದ ವೇಳೆ ಗಾಯಾಳಾದ ಅಕ್ಷರ್‌ ಪಟೇಲ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ರವಿವಾರದ ಫೈನಲ್‌ ಪಂದ್ಯಕ್ಕೆ ವಾಷಿಂಗ್ಟನ್‌ ಆಯ್ಕೆಗೆ ಲಭ್ಯ ರಿರುತ್ತಾರೆ ಎಂಬುದಾಗಿ ಬಿಸಿಸಿಐ ತಿಳಿಸಿದೆ.

“ಅಕ್ಷರ್‌ ಪಟೇಲ್‌ ಬಹಳಷ್ಟು ಸಮಸ್ಯೆಗಳಿಗೆ ಸಿಲುಕಿದ್ದಾರೆ. ಕಿರು ಬೆರಳಿನ ನೋವು, ತೋಳಿಗೆ ಬಿದ್ದ ಏಟು, ಸ್ನಾಯು ಸೆಳೆತಕ್ಕೊಳಗಾಗಿದ್ದಾರೆ. ಹೀಗಾಗಿ ವಾಷಿಂಗ್ಟನ್‌ ಸುಂದರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ’ ಎಂಬು ಬಿಸಿಸಿಐ ಶನಿವಾರ ತಿಳಿಸಿದೆ.

ಬಾಂಗ್ಲಾ ವಿರುದ್ಧದ ಚೇಸಿಂಗ್‌ ವೇಳೆ ಅಕ್ಷರ್‌ ಪಟೇಲ್‌ ನಿರಂತರ ನೋವಿಗೊಳಗಾಗುತ್ತಲೇ ಹೋದರು. ವೈದ್ಯರು ಅನೇಕ ಸಲ ಅಂಗಳಕ್ಕೆ ಧಾವಿಸಿ ಅಕ್ಷರ್‌ಗೆ ಚಿಕಿತ್ಸೆ ನೀಡಿದರು. ಅವರ ತೋಳಿನ ಭಾಗ ಊದಿಕೊಂಡಿದೆ.
ವಿಶ್ವಕಪ್‌ಗೆ ಕೇವಲ 3 ವಾರ ಉಳಿದಿರುವಾಗ ಅಕ್ಷರ್‌ಗೆ ಎದುರಾಗಿರುವ ಈ ಸಮಸ್ಯೆ ಚಿಂತೆಗೆ ಕಾರಣವಾಗಿದೆ.

ವಾಷಿಂಗ್ಟನ್‌ ಆಫ್ಸ್ಪಿನ್‌ ಬೌಲರ್‌ ಆಗಿದ್ದು, ನ್ಯೂಜಿಲ್ಯಾಂಡ್‌ ವಿರುದ್ಧ ಜನವರಿಯಲ್ಲಿ ಕೊನೆಯ ಸಲ ಏಕದಿನ ಪಂದ್ಯ ಆಡಿದ್ದರು.

ಮಹೀಶ್‌ ತೀಕ್ಷಣ ಔಟ್‌
ಇದೇ ವೇಳೆ ಶ್ರೀಲಂಕಾದ ಸ್ಪಿನ್ನರ್‌ ಮಹೀಶ್‌ ತೀಕ್ಷಣ ಕೂಡ ಫೈನಲ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಪಾಕಿಸ್ಥಾನ ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುತ್ತಿದ್ದಾಗ ತೀಕ್ಷಣ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು ಎಂಬುದಾಗಿ ಲಂಕಾ ನಾಯಕ ದಸುನ್‌ ಶಣಕ ಹೇಳಿದರು. ಇವರ ಬದಲು ಅಗ್ರ ಕ್ರಮಾಂಕದ ಬ್ಯಾಟರ್‌ ಸಹಾನ್‌ ಅರಚಿಗೆ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next