Advertisement

ಬಡವರಿಗೆ ಆಸರೆಯಾಗದ ಆಶ್ರಯ ಯೋಜನೆ

09:02 AM Jul 24, 2020 | Suhan S |

ನವಲಗುಂದ: ಕೋವಿಡ್ ಪ್ರಾರಂಭದಿಂದ ಒಂದಿಲ್ಲೊಂದು ಕಷ್ಟಗಳು ಸಾರ್ವಜನಿಕರ ಮೇಲೆ ಬೀಳುತ್ತಿದೆ. ಅದರಲ್ಲಿಯೂ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಾಜಪೇಯ ವಸತಿ ಯೋಜನೆಯ ಫಲಾನುಭವಿಗಳು ಹೇಳಲಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Advertisement

ವಸತಿ ರಹಿತ ಕುಟುಂಬಗಳಿಗೆ ಆಸರೆಯಾಗಲಿ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿ ಸ್ವಂತ ಜಾಗೆಯುಳ್ಳವರಿಗೆ ವಾಜಪೇಯಿ-ಡಾ| ಬಿ.ಆರ್‌. ಅಂಬೇಡ್ಕರ್‌ ನಿವಾಸ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು 2.70 ಲಕ್ಷ ರೂ. ಹಾಗೂ ಎಸ್‌ಸಿ-ಎಸ್‌ಟಿಯವರಿಗೆ 3.70 ಲಕ್ಷ ರೂ. ಸಹಾಯಧನ ನೀಡುತ್ತದೆ. ಆದರೆ ಇದು ಹೆಸರಿಗೆ ಮಾತ್ರ. ಫಲಾನುಭವಿಗಳು ಹಣ ಮಂಜೂರಾತಿಗೆ ವರ್ಷಪೂರ್ತಿ ಕಾಯುವಂತಾಗಿದೆ.

ಸಾಲವೇ ಶೂಲವಾಯ್ತು: ಪುರಸಭೆ ವ್ಯಾಪ್ತಿಯಲ್ಲಿ 2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಆಯ್ಕೆಯಾದವರು ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಮನೆಯ ಬುನಾದಿಯಿಂದ ಹಂತ ಹಂತವಾಗಿ ಜಿಪಿಎಸ್‌ ಆದ ಮೇಲೆಯೇ ಸರಕಾರ ಅವರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಆದರೆ, ಅಂತಹ ಫಲಾನುಭವಿಗಳಿಗೆ ಈವರೆಗೆ 1.20 ಲಕ್ಷ ರೂ ಮಾತ್ರ ಬಂದಿದೆ. ಇನ್ನುಳಿದ 1.50 ಲಕ್ಷ ರೂ. ಸಹಾಯಧನಕ್ಕಾಗಿ ಫಲಾನುಭವಿಗಳು ಪುರಸಭೆಗೆ ಅಲೆದಾಡುವಂತಾಗಿದೆ. ಇನ್ನು ಎಸ್‌ಸಿ-ಎಸ್‌ ಟಿಯವರಿಗೆ ಮನೆ ಮಂಜೂರಾತಿ ದೊರೆತರೂ 3.70 ಲಕ್ಷ ರೂ. ಪೈಕಿ ನಯಾಪೈಸೆ ಬಂದಿಲ್ಲ. ಸಾಲ ಮಾಡಿಕೊಂಡಿ ಮನೆ ಕಟ್ಟಿಕೊಂಡಿದ್ದು, ಸಾಲ ಮರುಪಾವತಿ ಮಾಡುವುದು ಹೇಗೆ ಎಂಬುದು ತಿಳಿಯುತ್ತಿಲ್ಲ ಎಂದು ನಿಂಗವ್ವ ಕುಳಗೇರಿ ನೋವನ್ನು ತೋಡಿಕೊಂಡರು.

ಇದೊಂದು ರೀತಿಯಾದರೆ ಇನ್ನು 2018-19ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಆಯ್ಕೆಯಾದ 150 ಫಲಾನುಭವಿಗಳ ಯಾದಿ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಮುಂದೆಯೇ ಹೋಗದ ಕಾರಣ ಫಲಾನುಭವಿಗಳು ಕಾಯುತ್ತ ಕೂರುವಂತಾಗಿದೆ. ವಸತಿ ಮುಕ್ತ ರಾಜ್ಯ-ರಾಷ್ಟ್ರವೆಂದು ಸರಕಾರ ಘೋಷಣೆ ಮಾಡುತ್ತದೆ. ಆದರೆ, ನೈಜವಾಗಿ ಪರೀಕ್ಷೆ ಮಾಡಿದರೆ ಬಡವರು ಸೂರಿಗಾಗಿ ಕಚೇರಿಗಳಿಗೆ ಅಲೆದಾಡುವದು ತಪ್ಪಿಲ್ಲ.

ಜನಪ್ರತಿನಿಧಿಗಳೇ, ಬಡವರಿಗೆ ಸ್ಪಂದಿಸಿ :  ಸರಕಾರದ ವಸತಿ ಯೋಜನೆ ಪ್ರಯೋಜನ ಪಡೆಯುವ ಫಲಾನುಭವಿಗಳು ಅತೀ ಬಡ ಕುಟುಂಬಗಳಾಗಿವೆ. ಕೂಲಿ ಕಾರ್ಮಿಕರಾಗಿದ್ದು, ಕೊರೊನಾದಿಂದ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಕಷ್ಟದಾಯಕವಾಗಿದೆ. ಸರಕಾರ ವಸತಿ ಯೋಜನೆಗೆ ಮೀಸಲಿಟ್ಟ ಹಣವನ್ನು ವಸತಿ ಯೋಜನೆಯ ಫಲಾನುಭವಿಗಳಿಗೆ ಬಳಕೆ ಮಾಡದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಸ್ಥಳೀಯ ಜನಪ್ರತಿನಿಧಿ ಗಳು ಸರಕಾರದ ಗಮನಕ್ಕೆ ತಂದು ಮುತುವರ್ಜಿ ವಹಿಸಿ ಬಡವರ ಬಾಳಿಗೆ ಆಶಾಕಿರಣವಾಗಬೇಕಿದೆ.

Advertisement

ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ :  2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಮನೆ ಕಟ್ಟಲು ಆದೇಶ ಬಂದಿತ್ತು. ಆದರೆ ಇನ್ನೂ 1.50 ಲಕ್ಷ ರೂ. ಬರಬೇಕಾಗಿದೆ. ಸರಕಾರ ನೀಡುವ ಹಣ ಬರಬಹುದೆಂಬ ಆಸೆಯಿಂದ ಸಾಲ ಮಾಡಿ ಮನೆ ಪೂರ್ತಿಗೊಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದ್ದೇನೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದೇನೆ. ಯಾರಿಂದಲೂ ಸ್ಪಂದನೆ ಇಲ್ಲ. ಪುರಸಭೆ ಅಧಿಕಾರಿಗಳು ಮಂಜೂರಾದ ಹಣವನ್ನು ನೀಡಿದ್ದೇವೆ, ಉಳಿದ ಹಣವನ್ನು ಸರಕಾರದಿಂದ ಮಂಜೂರಾದ ಮೇಲೆ ಕೊಡಲಾಗುವುದೆಂದು ಹೇಳಿದ್ದಾರೆ. ನಾನೊಬ್ಬ ಕಾರ್ಮಿಕನಾಗಿದ್ದು, ಇತ್ತ ಕೊರೊನಾದಿಂದ ದುಡಿಯಲು ಕೆಲಸವಿಲ್ಲ. ಮನೆಗಾಗಿ ಮಾಡಿದ ಸಾಲಕ್ಕೆ ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆಶ್ರಯ ಪ್ಲಾಟ್‌ ಫಲಾನುಭವಿ ಲಕ್ಷ್ಮಣ ಹನಮಂತಪ್ಪ ಶಿಂಧೆ ಅಳಲು ತೋಡಿಕೊಂಡರು.

2017-18ರಿಂದ ವಸತಿ ಯೋಜನೆಯಲ್ಲಿ ಮಂಜೂರಾತಿ ನೀಡಿದವರಿಗೆ ಅತಿವೃಷ್ಟಿ, ಕೋವಿಡ್ ದಿಂದ ಸರಕಾರದಿಂದ ಅನುದಾನ ಮಂಜೂರಾಗಿಲ್ಲ. ಸರಕಾರದಿಂದ ಅನುದಾನ ಬರುವವರಿಗೂ ಫಲಾನುಭವಿಗಳು ಕಾಯಬೇಕು.  ಎನ್‌.ಎಚ್‌. ಖುಂದಾನವರ, ಪುರಸಭೆ ಮುಖ್ಯಾಧಿಕಾರಿ

2019ರಲ್ಲಿ ಆಯ್ಕೆಯಾದ 150 ಬಡ ಕುಟುಂಬದ ಫಲಾನುಭವಿಗಳಿಗೆ ಒಂದು ವರ್ಷವಾದರೂ ಮಂಜೂರಾತಿ ದೊರೆತಿಲ್ಲ. ಸರಕಾರ ವಸತಿ ಯೋಜನೆಯಲ್ಲಿ ಕಷ್ಟಪಡುತ್ತಿರುವ ಬಡವರನ್ನು ನೋಡುತ್ತಿಲ್ಲ. ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಂಡವರು ಅನುದಾನ ಬರದೆ ತೊಂದರೆ ಅನುಭವಿಸುತ್ತಿದ್ದಾರೆ.  ಮಂಜು ಜಾಧವ,  ಪುರಸಭೆ ಸದಸ್ಯ

 

ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next