ಜೋಧ್ಪುರ : “ಆಸಾರಾಂ ಬಾಪು ರೇಪ್ ಅಪರಾಧಿ ಎಂದು ಕೋರ್ಟ್ ಘೋಷಿಸಿ ಆತನಿಗೆ ಜೀವಾವಧಿ ಕಾರಾಗೃಹ ವಾಸದ ಶಿಕ್ಷೆಯನ್ನು ಪ್ರಕಟಿಸಿದೆ. ಅಂತೆಯೇ ನಮಗೆ ನ್ಯಾಯ ಸಿಕ್ಕಿದೆ. ಈ ಹೋರಾಟದಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಬಯಸುತ್ತೇನೆ. ಆಸಾರಾಂ ಗೆ ಈಗಿನ್ನು ಕಠಿನ ಶಿಕ್ಷೆ ಆಗುವುದೆಂದು ನಾನು ಹಾರೈಸುತ್ತೇನೆ. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಮತ್ತು ಅಪಹರಣಕ್ಕೆ ಗುರಿಯಾದ ಸಾಕ್ಷಿದಾರರಿಗೆ ಕೂಡ ನ್ಯಾಯ ಸಿಗುವುದೆಂದು ನಾನು ಹಾರೈಸುತ್ತೇನೆ” ಎಂದು ರೇಪ್ ಸಂತ್ರಸ್ತೆಯ ತಂದೆ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತಾ ಹೇಳಿದ್ದಾರೆ.
ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಆಸಾರಾಂ ಅಪರಾಧಿ ಎಂದು ಕೋರ್ಟ್ ಘೋಷಿಸುವ ಮೂಲಕ ಆತನಿಗೆ ಜೀವಾವಧಿ ಕಾರಾಗೃಹ ವಾಸದ ಶಿಕ್ಷೆಯನ್ನು ಪ್ರಕಟಿಸಿದೆ. ಕೊನೆಗೂ ನಮಗೆ ನ್ಯಾಯ ಸಿಕ್ಕಂತಾಗಿದೆ ಎಂದವರು ತೃಪ್ತಿಯಿಂದ ಹೇಳಿದ್ದಾರೆ.
2013ರಲ್ಲಿ ಆಸಾರಾಂ ಮಧ್ಯಪ್ರದೇಶದ ಛಿಂದ್ವಾರಾದಲ್ಲಿನ ತನ್ನ ಆಶ್ರಮದಲ್ಲಿ ಬಾಲಕಿಯನ್ನು ರೇಪ್ ಮಾಡಿದ್ದ. ರೇಪ್ ಗೆ ಒಳಗಾಗಿದ್ದ ಉತ್ತರ ಪ್ರದೇಶದ ಶಹಜಹಾನ್ಪುರದ ಹದಿಹರೆಯದ ಬಾಲಕಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಳು. ಸ್ವಯಂ ಘೋಷಿತ ದೇವಮಾನವ ಆಸಾರಾಂ ತನ್ನ ವಿರುದ್ಧದ ಈ ಆರೋಪವನ್ನು ಅಲ್ಲಗಳೆದಿದ್ದ.
2013ರ ನವೆಂಬರ್ 6ರಂದು ಪೊಲೀಸರು ಆಸಾರಾಂ ಮತ್ತು ಆತನ ನಾಲ್ವರು ಸಹವರ್ತಿಗಳಾದ ಶಿವ, ಶಿಲ್ಪಿ, ಶರದ್ ಮತ್ತು ಪ್ರಕಾಶ್ ಎಂಬವರನ್ನು ಸಹ-ಆರೋಪಿಗಳನ್ನಾಗಿ ಹೆಸರಿಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಇಂದು ನ್ಯಾಯಾಲಯವು ಆಸಾರಾಂ ಜತೆಗೆ ಶರದ್ ಮತ್ತು ಶಿಲ್ಪಿಯನ್ನು ಅಪರಾಧಿ ಎಂದು ಘೋಷಿಸಿದೆ. ಶಿವ ಮತ್ತು ಪ್ರಕಾಶ್ ರನ್ನು ಖುಲಾಸೆಗೊಳಿಸಿದೆ.
77ರ ಹರೆಯದ ಆಸಾರಾಂ, 1970ರ ದಶಕದಲ್ಲಿ ಸಾಬರಮತಿ ನದೀ ತೀರದಲ್ಲಿ ಒಂದು ಸಣ್ಣ ಗುಡಿಸಲಿನ ರೂಪದ ಆಶ್ರಮವನ್ನು ಆರಂಭಿಸಿದ ಬಳಿಕ ಕಳೆದ ನಾಲ್ಕು ದಶಕಗಳಲ್ಲಿ ದೇಶ ವಿದೇಶಗಳಲ್ಲಿ ಒಟ್ಟು 400ಕ್ಕೂ ಅಧಿಕ ಐಶಾರಾಮಿ ಆಶ್ರಮಗಳನ್ನು ಸ್ಥಾಪಿಸಿದ್ದು 10,000 ಕೋಟಿ ರೂ. ಮೌಲ್ಯದ ಸಾಮಾಜ್ಯವನ್ನು ಸ್ಥಾಪಿಸಿಕೊಂಡಿದ್ದ.