Advertisement

ಸರ್ವೋಚ್ಚ ನ್ಯಾಯಾಕ್ರೋಶ

12:26 PM Jan 13, 2018 | Team Udayavani |

ನವದೆಹಲಿ: ತೀರಾ ಅನಿರೀಕ್ಷಿತ ಬೆಳವಣಿಗೆಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ “ಆಂತರಿಕ ಬಂಡಾಯ’ಕ್ಕೆ ಸಾಕ್ಷಿಯಾಗಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ ಸಿಡಿದೆದ್ದಿರುವ, ಇವರ ನಂತರದ ಹಿರಿಯ ನ್ಯಾಯಮೂರ್ತಿಗಳಾದ ನ್ಯಾ. ಜೆ.ಚಲಮೇಶ್ವರ, ನ್ಯಾ. ರಂಜನ್‌ ಗೊಗೋಯಿ, ನ್ಯಾ.ಎಂ.ಬಿ.ಲೋಕುರ್‌ ಮತ್ತು ನ್ಯಾ. ಕುರಿಯನ್‌ ಜೋಸೆಫ್ ಅವರು, ದೇಶದ ಸರ್ವೋಚ್ಚ ನ್ಯಾಯಾಲಯ ತೀರಾ ಆತಂಕದ ಸನ್ನಿವೇಶದಲ್ಲಿದ್ದು, ಇದು ದೇಶದ ಪ್ರಜಾ ಪ್ರಭುತ್ವವನ್ನೇ ನಾಶ ಮಾಡಿಬಿಡಬಲ್ಲದು ಎಂದು ಎಚ್ಚರಿಕೆ ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳನ್ನು ಮಹಾಭಿಯೋಗಕ್ಕೆ ಗುರಿಪಡಿಸುವುದು “ದೇಶದ ಜನರ ನಿರ್ಧಾರ’ಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.

Advertisement

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳು ಪತ್ರಿಕಾ ಗೋಷ್ಠಿ ಕರೆದು, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾ. ಜೆ.ಚಲಮೇಶ್ವರ ಅವರೇ ಈ ಪತ್ರಿಕಾಗೋಷ್ಠಿಯನ್ನು
“ಅಸಾಧಾರಣ ಘಟನೆ’ ಎಂದು ಕರೆದಿದ್ದು, ಸುಪ್ರೀಂಕೋರ್ಟ್‌ನ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. ಜತೆಗೆ ಕೆಲವು ತಿಂಗಳಿಂದ ಒಪ್ಪಿಕೊಳ್ಳಲು ಅಸಾಧ್ಯವೆನಿಸಿದ ಘಟನೆಗಳು ಜರುಗುತ್ತಿವೆ ಎಂದು ಆರೋಪಿಸಿದ್ದಾರೆ. ಇಂಥ ಪ್ರಕ್ರಿಯೆಗಳಿಂದ ಸುಪ್ರೀಂ 
ಕೋರ್ಟ್‌ ಅನ್ನು ರಕ್ಷಿಸದೇ ಹೋದಲ್ಲಿ, “ಪ್ರಜಾಪ್ರಭುತ್ವ ವನ್ನು ಉಳಿಸುವುದು ಅಸಾಧ್ಯ’ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಸಿಜೆಐ ದೀಪಕ್‌ ಮಿಶ್ರಾ ಅವರನ್ನು ಭೇಟಿ ಮಾಡಿದ ನಾಲ್ವರೂ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಿದರು. ಇದಾದ ಬಳಿಕ ನ್ಯಾ. ಜೆ. ಚಲಮೇಶ್ವರ ನೇತೃತ್ವದಲ್ಲಿ ದಿಢೀರ್‌ ಪತ್ರಿಕಾಗೋಷ್ಠಿ ಕರೆದ ನ್ಯಾಯಮೂರ್ತಿಗಳು, “”ಸುಪ್ರೀಂಕೋರ್ಟ್‌ ಅನ್ನು ರಕ್ಷಿಸದೇ ಹೋದರೆ, ಈ ದೇಶದ ಪ್ರಜಾಪ್ರಭುತ್ವವನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ” ಎಂದರು. ಹಾಗೆಯೇ ಈ ವಿಚಾರ ಸಂಬಂಧ ಪತ್ರಿಕಾಗೋಷ್ಠಿ ಕರೆಯುತ್ತಿರುವುದಕ್ಕೆ “ತೀರಾ
ನೋವಾಗುತ್ತಿದೆ’ ಎಂದು ನ್ಯಾ. ಚಲಮೇಶ್ವರ ಅವರು ವಿಷಾದಿಸಿದರು.

“”ನಾವು ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಮನವೊಲಿಕೆ ಮಾಡುವಲ್ಲಿ ವಿಫ‌ಲರಾಗಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ಕೆಲವೊಂದು ಸಂಗತಿಗಳು ನಿಯಮಕ್ಕೆ ಅನುಗುಣವಾಗಿ ಇಲ್ಲ. ಹೀಗಾಗಿ ನೀವು ಇದಕ್ಕೆ ಸರಿಯಾದ ಪರಿಹಾರ ಹುಡುಕಬೇಕು ಎಂದೆವು. ಆದರೆ
ನಮ್ಮ ಪ್ರಯತ್ನ ವಿಫ‌ಲವಾಯಿತು” ಎಂದು ನ್ಯಾ. ಚಲಮೇಶ್ವರ ಅವರು ಹೇಳಿದರು. “”ಕಳೆದ ಕೆಲವು ದಿನಗಳಿಂದ
ಸುಪ್ರೀಂಕೋರ್ಟ್‌ನಲ್ಲಿ ಜರುಗಿದ ಘಟನೆಗಳು, ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂಬುದನ್ನು ನಾವು ನಾಲ್ವರೂ ಮನಗಂಡಿದ್ದೇವೆ” ಎಂದು ಅವರು ಸ್ಪಷ್ಟಪಡಿಸಿದರು. ಈ ಪತ್ರಿಕಾಗೋಷ್ಠಿ ಕರೆಯಲು ಕಾರಣವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “”ಸಿಜೆಐ ಅವರು ಪ್ರಕರಣಗಳನ್ನು ಪೀಠಗಳಿಗೆ ನಿಗದಿಪಡಿಸುತ್ತಿರುವುದೇ” ಕಾರಣವಾಗಿದೆ ಎಂದರು. ಅದರಲ್ಲೂ ವಿಶೇಷ 
ಸಿಬಿಐ ಕೋರ್ಟ್‌ನ ನ್ಯಾ. ಬಿ.ಎಚ್‌. ಲೋಯಾ ಅವರ ನಿಗೂಢ ಸಾವಿನ ಕುರಿತ ವಿಚಾರಣೆಯನ್ನು ಪೀಠವೊಂದಕ್ಕೆ ನಿಗದಿಪಡಿಸಿದ್ದೂ ಸೇರಿದೆ ಎಂದರು. 

“ಯಾವುದೇ ದೇಶದ ಇತಿಹಾಸದಲ್ಲೇ ಇದೊಂದು ಅಸಾಧಾರಣ ಘಟನೆಯಾಗಿದ್ದು, ಅದರಲ್ಲೂ ಭಾರತದಂಥ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಅಸಾಮಾನ್ಯ ಘಟನೆ” ಎಂದ ನ್ಯಾ. ಚಲಮೇಶ್ವರ ಅವರು, ನಾವು ಯಾರ ಒತ್ತಡಕ್ಕೂ ಶರಣಾಗಿ ಈ ಪತ್ರಿಕಾಗೋಷ್ಠಿ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸಿಜೆಐ ಅವರಿಗೆ ಬರೆದ ಏಳು ಪುಟಗಳ
ಪತ್ರವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಈ ಪತ್ರದಲ್ಲಿ ಸಿಜೆಐ ಅವರ ಹೊಣೆಗಾರಿಕೆ ಬಗ್ಗೆ ಪ್ರಸ್ತಾಪಿಸಿರುವ ಅವರು, ಈ ದೇಶದಲ್ಲಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಸಮಾನರಲ್ಲಿ ಮೊದಲಿಗರು ಅಷ್ಟೇ- ಇದನ್ನು ಬಿಟ್ಟು ಅವರು ಹೆಚ್ಚಾ ಅಲ್ಲ- ಕಡಿಮೆಯೂ ಅಲ್ಲ ಎಂದು ಉಲ್ಲೇಖೀಸಲಾಗಿದೆ. ನಿಯಮ ಮೀರಿ ಈ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮತ್ತೂಬ್ಬ ನ್ಯಾ. ಗೊಗೋಯಿ ಅವರು, “”ಇಲ್ಲಿ ಯಾರೂ ನಿಯಮ ಮೀರಿಲ್ಲ, ಆದರೆ ನಾವು ಈ ನೆಲದ ಋಣವನ್ನು ತೀರಿಸುತ್ತಿದ್ದೇವೆ” ಅಷ್ಟೇ ಎಂದು ಹೇಳಿದರು. ವಿಶೇಷವೆಂದರೆ ಇದೇ ವರ್ಷದ ಅಕ್ಟೋಬರ್‌ಗೆ ಮುಖ್ಯ
ನ್ಯಾ. ದೀಪಕ್‌ ಮಿಶ್ರಾ ಅವರು ನಿವೃತ್ತಿಯಾಗುತ್ತಿದ್ದು, ಇವರ ಸ್ಥಾನಕ್ಕೆ ನ್ಯಾ. ಗೊಗೋಯಿ ಅವರೇ ನಿಯೋಜನೆಗೊಳ್ಳಲಿದ್ದಾರೆ.

Advertisement

ಅಟಾರ್ನಿ ಜನರಲ್‌ ಜತೆ ಸಿಜೆಐ ಚರ್ಚೆ: ನಾಲ್ವರು ಹಿರಿಯ ನ್ಯಾಯ ಮೂರ್ತಿಗಳ ಪತ್ರಿಕಾಗೋಷ್ಠಿ ನಂತರ, ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರನ್ನು ಕರೆಸಿಕೊಂಡ ಮುಖ್ಯ ನ್ಯಾ. ದೀಪಕ್‌ ಮಿಶ್ರಾ ಅವರು, ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಸುಪ್ರೀಂಕೋರ್ಟ್‌ನ ಬಾರ್‌ ಆ್ಯಂಡ್‌ ಬೆಂಚ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೆ.ಕೆ. ವೇಣುಗೋಪಾಲ್‌
ಅವರನ್ನು ಈ ವಿಷಯದ ಬಗ್ಗೆ ಮಾತನಾಡಲು ಸಿಜೆಐ ಅವರು ಕರೆಸಿಕೊಂಡಿರಲಿಲ್ಲ ಎಂದಿದೆ. ಈ ಬಗ್ಗೆ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದಿರುವ ಅದು, ನ್ಯಾ. ದೀಪಕ್‌ ಮಿಶ್ರಾ ಅವರು ಎಂದಿನಂತೆ ಬೇರೆ ಬೇರೆ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದರು ಎಂದಿದೆ. 

ರಾಜಕೀಯ ಸಂಚು?
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದು ಅತ್ಯಂತ ದುರದೃಷ್ಟಕರ ಸಂಗತಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಸ್ವತಂತ್ರ ಮತ್ತು ಹೆಚ್ಚು ಶಕ್ತಿಯುತ ವಾಗಿದೆ ಎಂದು ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ ಅಭಿಪ್ರಾಯ  ಪಟ್ಟಿದ್ದಾರೆ. ಬೇರೆ ದಾರಿ ಇಲ್ಲದೆ ಮಾಧ್ಯಮಗಳ ಮುಂದೆ ಬರಬೇಕಾಯಿತು ಎಂದು ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯ ಮೂರ್ತಿಗಳು ಹೇಳಿದ್ದಾರೆ. ಆದರೆ, ಅದಕ್ಕೆ ಮುನ್ನ ಸಿಪಿಎಂ ನಾಯಕ ಡಿ.ರಾಜಾ ಅವರು ನ್ಯಾ.ಚಲಮೇಶ್ವರ್‌ ಅವರನ್ನು ಭೇಟಿಯಾ ಗಿದ್ದು, ಅವರ ಭೇಟಿಗೆ ನ್ಯಾಯಮೂರ್ತಿಗಳು ಅವಕಾಶ ಮಾಡಿಕೊಟ್ಟಿದ್ದು, ಇದರ ಹಿಂದೆ ಪ್ರತಿಪಕ್ಷಗಳ ಸಂಚಿದೆಯೇ ಎಂಬ ಶಂಕೆ ಹುಟ್ಟುಹಾಕಿದೆ ಎಂದಿದ್ದಾರೆ. ಅಷ್ಟೆ ಅಲ್ಲ, ಡಿ.ರಾಜಾ ಮತ್ತು ನ್ಯಾ.ಚಲಮೇಶ್ವರ್‌ ಭೇಟಿಯು ಕೇಂದ್ರ ಹಾಗೂ ಸಿಜೆಐ ವಿರುದ್ಧ ಕಾಂಗ್ರೆಸ್‌, ಎಡಪಕ್ಷಗಳು ಸೇರಿ ಹುನ್ನಾರ ನಡೆಸು ತ್ತಿದೆಯೇ ಎಂಬ ಅನುಮಾನ ಹುಟ್ಟು ಹಾಕುವುದು ಸಹಜ ಎಂದು ಹೇಳಿದ್ದಾರೆ.

ಮಧ್ಯ ಪ್ರವೇಶ ಮಾಡುವುದಿಲ್ಲ
ಈ ಬೆಳವಣಿಗೆಗಳ ಬಗ್ಗೆ ತೀರಾ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, “”ಇದು ಸಂಪೂರ್ಣವಾಗಿ ಕೋರ್ಟ್‌ನ ಆಂತರಿಕ ವಿಚಾರ. ಅವರೇ ಪರಿ ಹರಿಸಿಕೊಳ್ಳುತ್ತಾರೆ” ಎಂದು ಹೇಳಿದೆ. ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಮಧ್ಯೆಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಈ ನಾಲ್ವರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ತೀವ್ರ ಕಳವಳಕಾರಿ ವಿದ್ಯಮಾನ
ಕಾಂಗ್ರೆಸ್‌ ಕೂಡ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದು, ಪ್ರಜಾಪ್ರಭುತ್ವ ಅಪಾಯ ದಲ್ಲಿದೆ ಎಂದಿದೆ. ಶುಕ್ರವಾರ ಸಂಜೆ 5 ಗಂಟೆಯ ವೇಳೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಕಾನೂನು ತಜ್ಞರೂ ಆಗಿರುವ ಪಿ.ಚಿದಂಬರಂ, ಸಲ್ಮಾನ್‌ ಖುರ್ಷಿದ್‌ ಮತ್ತು ಮನೀಶ್‌ ತಿವಾರಿ ಚರ್ಚೆ ನಡೆಸಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್‌ ಗಾಂಧಿ, ನ್ಯಾ ಲೋಯಾ ರಹಸ್ಯ ಸಾವಿನ ಬಗ್ಗೆ ಪಾರದರ್ಶಕವಾಗಿ ವಿಚಾರಣೆ ನಡೆಯಲಿದೆ ಎಂದು ನಾವು ಭಾವಿಸಿದ್ದೇವೆ ಎಂದಿದ್ದಾರೆ.

ನಾಲ್ವರ ಸಿಟ್ಟಿಗೆ ಕಾರಣವಾದ ಐದಂಶಗಳು

1. ಪ್ರಮುಖ ಪ್ರಕರಣಗಳನ್ನು ಮುಖ್ಯ ನ್ಯಾಯ ಮೂರ್ತಿ ನೇತೃತ್ವದ ಪೀಠದಲ್ಲೇ ವಿಚಾರಣೆ. ಹಿರಿಯ ನ್ಯಾಯಮೂರ್ತಿಗಳಿಗೆ ಯಾವುದೇ ಮಹತ್ವದ ಪ್ರಕರಣ ನೀಡುವುದಿಲ್ಲ.  

2. ಯಾವುದೇ ಪ್ರಕರಣಗಳನ್ನು ವಿಚಾರ ಆಧರಿಸಿ ನೀಡಬೇಕೇ ಹೊರತು, ಆಯ್ಕೆ ಮಾಡಿ ನೀಡ ಬಾರದು. ಆದರೆ ತಮ್ಮ ಆದ್ಯತೆಗೆ ಅನುಗುಣವಾಗಿ “ಆಯ್ಕೆ’ ಮಾಡಿ ನೀಡುವ ಪರಿಪಾಠ ಬೆಳೆಯುತ್ತಿದೆ. 

3. ಸಾರ್ವಜನಿಕ ಹಿತಾಸಕ್ತಿ ಇರುವ ನ್ಯಾ.ಬಿ.ಎಚ್‌.ಲೋಯಾ ನಿಗೂಢ ಸಾವು ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ನಂ.10ಕ್ಕೆ ನೀಡಲಾಗಿದೆ. ಆದರೆ, ಸಿಜೆಐ ಬಿಟ್ಟು ಉಳಿದ ನಾಲ್ವರ ಪ್ರಮುಖ ಪೀಠಗಳಿಗೆ ನೀಡಲಾಗಿಲ್ಲ.

4. ಹೈಕೋರ್ಟ್‌ನ ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಮೆಡಿಕಲ್‌ ಕಾಲೇಜು ಅಡ್ಮಿಶನ್‌ ಹಗರಣವನ್ನು
ನ್ಯಾ.ಚಲಮೇಶ್ವರ ಅವರ ಪೀಠವು, ಸಿಜೆಐ ಅವರನ್ನೊಳಗೊಂಡ ಪಂಚಪೀಠಕ್ಕೆ ವರ್ಗಾಯಿಸಿತ್ತು. ಆದರೆ ನಂತರ ಇದನ್ನು ಕೋರ್ಟ್‌ ನಂ.7ಕ್ಕೆ ವರ್ಗಾಯಿಸಲಾಯಿತು.

5. ಮೊದಲು ಪಂಚ ಪೀಠದಲ್ಲಿ ಆಗಿದ್ದ ಪ್ರಕರಣವೊಂದರ ವಿಚಾರಣೆ, ನಂತರದಲ್ಲಿ ಸಣ್ಣ ಪೀಠಕ್ಕೆ ವಾಪಸ್‌ ಬರುವಾಗ ಇದಕ್ಕೆ ಸಿಜೆಐ ಅವರೇ ನೇತೃತ್ವ ವಹಿಸುವುದು ತಪ್ಪು.

ಇಡೀ ವಿಶ್ವದಲ್ಲೇ ನಮ್ಮ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಗೌರವ ಹೊಂದಿದೆ. ಅದು ಸ್ವತಂತ್ರವಾಗಿದ್ದು, ತನ್ನೊಳಗಿನ ಸಮಸ್ಯೆಗಳನ್ನು ತಾನೇ ಬಗೆಹರಿಸಿ  ಕೊಳ್ಳುವಲ್ಲಿ ಶಕ್ತವಾಗಿದೆ.
 ●ಪಿ.ಪಿ.ಚೌಧರಿ, ಕಾನೂನು ಸಹಾಯಕ ಸಚಿವ

ಇಡೀ ಬೆಳವಣಿಗೆಯನ್ನು ತಪ್ಪಿಸಬಹುದಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲಾ ನ್ಯಾಯಮೂರ್ತಿಗಳು ತಮ್ಮೊಳಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳು ತ್ತಾರೆ ಎಂಬ ವಿಶ್ವಾಸವಿದೆ.
 ●ಕೆ.ಕೆ.ವೇಣುಗೋಪಾಲ್‌, ಅಟಾರ್ನಿ ಜನರಲ್‌

ನನಗಂತೂ ಬಹಳ ಬೇಸರ ವಾಗಿದೆ. ಸುಪ್ರೀಂ ಕೋರ್ಟ್‌ನ ನಾಲ್ವರು ಜಡ್ಜ್ಗಳು ಹೀಗೆ ಮಾಡ ಬಾರದಿತ್ತು. ಇದು ನ್ಯಾಯಾಂಗದ
ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.
 ●ಸೋಲಿ ಸೊರಾಬ್ಜಿ, ನಿವೃತ್ತ ಅಟಾರ್ನಿ ಜನರಲ್‌

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ, ಅದು ನ್ಯಾಯಾಂಗದ ಆಂತರಿಕ ವಿಷಯ. ನಾನೂ ಕಾನೂನು ಸಚಿವನಾಗಿದ್ದವನು. ಈ ಬಗ್ಗೆ ಮಾತನಾಡುವುದು ಸಮಂಜಸವಲ್ಲ.
ಎಂ. ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಕಾನೂನು ಸಚಿವರು

ತಕ್ಷಣ ಕೇಂದ್ರ ಸರ್ಕಾರ ಅಥವಾ ರಾಷ್ಟ್ರಪತಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದೊಂದು ಆತಂಕದ ವಿಚಾರವಾಗಿದ್ದು ಪ್ರಾರಂಭಿಕ ಹಂತದಲ್ಲೇ ಇದನ್ನು ಮೊಟಕುಗೊಳಿಸಬೇಕು. ಇಲ್ಲದಿದ್ದರೆ ಬಡವರಿಗೆ ನ್ಯಾಯಾಲಯದಲ್ಲಿ ಅನುಕೂಲ ಆಗಲ್ಲ, ಶ್ರೀಮಂತರಿಗಷ್ಟೇ ಎಂಬ ಭಾವನೆ ಬರುತ್ತದೆ.
 ● ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಇದರ ಹಿಂದೆ ನೇರವಾಗಿ ಅಮಿತ್‌ ಶಾ ಮತ್ತು ಪ್ರಧಾನಿ ಮೋದಿ ಇದ್ದಾರೆ. ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ತಕ್ಷಣ ರಾಜೀನಾಮೆ ನೀಡಬೇಕು. ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್‌ ಇದರ ಜವಾಬ್ದಾರಿ ಹೊರಬೇಕು.
 ● ಪ್ರೊ. ಕೆ.ಇ. ರಾಧಾಕೃಷ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next