Advertisement

ಕಠಿಣ ಪರಿಶ್ರಮದಿಂದ ಗುರಿ ಸಾಧ್ಯ: ಅರುಣ್‌ ರಂಗರಾಜನ್‌

03:12 PM Oct 11, 2018 | Team Udayavani |

ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿ ದೆಸೆಯಲ್ಲಿ ಕನಸು ಕಾಣಬೇಕು. ಕೇವಲ ಪಠ್ಯಗಳಿಗಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಎಸ್ಪಿ ಅರುಣ್‌ ರಂಗರಾಜನ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಪಟ್ಟಣದ ಸಮುದಾಯ ಭವನದಲ್ಲಿ ಜಿಲ್ಲಾ ಪ್ರಗತಿಪರ ಚಿಂತಕರ ಒಕ್ಕೂಟದ ವತಿಯಿಂದ ಡಾ| ಕೆ.ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಕವಿಗೋಷ್ಠಿ, ಸಾಕ್ಷಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಗತಿಪರ ಚಿಂತನೆಗಳನ್ನು ಮೂಡಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ. ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ಉನ್ನತವಾದ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರಗತಿಪರ ಚಿಂತನೆಗಳು ಅಗತ್ಯ. ಮೌಡ್ಯ ಮತ್ತು ಕಂದಾಚಾರಗಳಿಂದ ಸಮಾಜದ ಸ್ವಾಸ್ಥ ಹದೆಗೆಡುತ್ತದೆ. ಮೆದುಳಿನ ಹಸಿವಿಗೆ ವಿದ್ಯೆ ಎಂಬುವ ಊಟವನ್ನು ಹಾಕಬೇಕು. ಪೋಷಕರು ಮಕ್ಕಳ ಸೊಂಬೇರಿತನವನ್ನು ಬಡಿದೋಡಿಸಿ
ವಿದ್ಯಾವಂತರನ್ನಾಗಿ ಮಾಡಬೇಕು. ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದರು.

ಪ್ರಗತಿಪರ ಚಿಂತಕರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್‌.ಬಿ.ಚಂದ್ರಶೇಖರ್‌ ಮಾತನಾಡಿ, ಖಾಸಗೀಕರಣ, ಜಾಗತೀಕರಣ ಜಗತ್ತಿನ ಎಲ್ಲಾ ನೆಲದ ಭಾಷೆಯನ್ನು ನಾಶ ಮಾಡುವ ಕಾರ್ಯಸೂಚಿಯನ್ನು ಹೊಂದಿದೆ. ಈ ಅಪಾಯದಿಂದ ತಪ್ಪಿಸಿಕೊಳ್ಳಲು ಜಾಗೃತರಾಗಬೇಕಿದೆ. ಖಾಸಗೀಕರಣದ ಬಹು ದೊಡ್ಡ ಸವಾಲುಗಳನ್ನು ಎದುರಿಸಲು ಸರಕಾರಗಳು ವಿಫಲವಾಗಿವೆ. ಜಾಗತೀಕರಣ, ಉದಾರೀಕರಣದ ನೀತಿಗಳಿಂದ ದೇಶದಲ್ಲಿ ಖಾಸಗಿ ರಂಗದ ಪ್ರಭಾವ ಹೆಚ್ಚಾಗುತ್ತಿದೆ. ದೇಶದ ಸಂಸ್ಕೃತಿ ಉಳಿಸಲು ಹಳೇ ಸಂಪ್ರದಾಯಗಳನ್ನು ಮೆಲುಕು ಹಾಕುವ ಜೊತೆಗೆ ಜಾರಿಗೊಳಿಸುವ ಅಗತ್ಯವಿದೆ. ಉನ್ನತ ಶಿಕ್ಷಣ ದುಭಾರಿಯಾಗುತ್ತಿದ್ದು ಬಡ ವಿದ್ಯಾರ್ಥಿಗಳ ಶಿಕ್ಷಣ ಅರ್ಧದಲ್ಲಿಯೇ ಕುಂಠಿತಗೊಳ್ಳುತ್ತಿರುವುದು ವಿಷಾದನೀಯ. ಖಾಸಗೀಕರಣ, ಜಾಗತೀಕರಣದ ಪ್ರಭಾವದಿಂದಾಗಿ ಶಿಕ್ಷಣ ವ್ಯಾಪಾರಿಕರಣಗೊಳ್ಳುತ್ತಿದೆ. ಗುಣಮಟ್ಟದ ಶಿಕ್ಷಣ ಕುಸಿಯುತ್ತಿದ್ದು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಡಾ| ಅಕ್ಕಿ ಬಸವೇಶ ಮಾತನಾಡಿ, ಜಾನಪದ ಎನ್ನುವುದು ಸಂಪ್ರದಾಯ, ಸಂಸ್ಕೃತಿ ಬಿಂಬಿಸುವ ಮೂಲ. ಚಿಂತನೆ ಕುರಿತಾದ ಕಾರ್ಯಕ್ರಮಗಳ ಲಾಭವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಉಪನ್ಯಾಸ ಕೇಳುಗರ ಕೊರತೆ ಹೆಚ್ಚಾಗುತ್ತಿದ್ದು, ಆಡಂಬರ, ಫ್ಯಾಶನ್‌ ಕಾರ್ಯಕ್ರಮಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗುತ್ತಿರುವುದು ಅವನತಿಯ ಸಂದೇಶವಾಗಿದೆ. ವಿದ್ಯಾರ್ಥಿಗಳು ನಿರಂತರ ಓದಿನತ್ತ ಚಿತ್ತಹರಿಸಬೇಕು ಎಂದರು.

Advertisement

ಬರಹಗಾರ ಹುರುಕಡ್ಲಿ ಶಿವಕುಮಾರ್‌ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆಸಿದ ಕವನ ವಾಚನ ಗಮನ ಸೆಳೆಯಿತು. ನಂತರ ಕಾರಂತರ ಚೋಮನದುಡಿ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಪುರಸಭೆ ಸದಸ್ಯ ಡಾ|.ಎಂ.ಎ.ಸುರೇಶ್‌ಕುಮಾರ್‌, ಅಂಬಾಡಿ ನಾಗರಾಜ, ಡಾ| ಸತ್ಯನಾರಾಯಣ, ಶಿಕ್ಷಕ ಎ.ಎಂ.ಎ.ಶಿವಪ್ರಕಾಶ್‌, ಗುರುಪ್ರಸಾದ್‌, ಎಸ್‌. ಶಿವಕುಮಾರ್‌, ಶಿವಮೂರ್ತಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next