Advertisement

ಆರ್ಟ್ಸ್ ಎಂದರೆ ಕೀಳಲ್ಲ ಸೈನ್ಸ್‌ ಎಂದರೆ ಮೇಲಲ್ಲ !

07:30 AM Sep 29, 2017 | |

ಎಸ್‌ಎಸ್‌ಎಲ್‌ಸಿ ಆದ ಬಳಿಕ ಏನು ಓದುವೆ’ ಎಂದು ಯಾವ ವಿದ್ಯಾರ್ಥಿಯನ್ನು ಕೇಳಿದರೂ ಬಹುತೇಕರ ಉತ್ತರ “‘ ಆಗಿರುತ್ತದೆ. ಏಕೆಂದರೆ ಇಂದು ಸಮಾಜದಲ್ಲಿ ಮಾತ್ರವಲ್ಲದೆ ಓದುವ ವಿಷಯದಲ್ಲೂ ಸೈನ್ಸ್‌ , ಆರ್ಟ್ಸ್ ಮತ್ತು ಕಾಮರ್ಸ್‌ಗಳೆಂಬ ಜಾತಿಗಳು ಹುಟ್ಟಿಕೊಂಡಿವೆ. 

Advertisement

ವಿದ್ಯಾವಂತರಲ್ಲಿ ಈ ರೀತಿಯ ಭಾವನೆಗಳು ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಒಬ್ಬ ವಿದ್ಯಾರ್ಥಿ ಆರ್ಟ್ಸ್ ಓದುತ್ತೇನೆ ಎಂದರೆ ಮೂಗು ಮುರಿಯುವವರೇ ಹೆಚ್ಚು . ಸೈನ್ಸ್‌ ಓದುತ್ತಿರುವ ವಿದ್ಯಾರ್ಥಿ ಎಂದರೆ ವಿದ್ಯಾವಂತ , ಬುದ್ಧಿವಂತ ಎಂಬಂತೆ  ಬಿಂಬಿಸಲಾಗುತ್ತದೆ. ಆರ್ಟ್ಸ್ ಓದಿದರೆ ಭವಿಷ್ಯವಿಲ್ಲ ಎಂಬ ಮಾತುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಸೈನ್ಸ್‌ ವಿಷಯದ ಆಯ್ಕೆಗೆ ಆಸಕ್ತಿ ತೋರುತ್ತಾರೆ. ಕೆಲವೊಮ್ಮೆ ಒತ್ತಾಯ ಪೂರ್ವಕವಾಗಿ  ಮಕ್ಕಳಿಗೆ ಸೈನ್ಸ್‌ ಓದಲು ಒತ್ತಾಯಿಸುತ್ತಾರೆ. ಇದಕ್ಕೆಲ್ಲ  ಕಾರಣ ಪೋಷಕರಲ್ಲಿರುವ ಪೂರ್ವಗ್ರಹಪೀಡಿತ ಮನಸ್ಸುಗಳು ಮತ್ತು ಜ್ಞಾನಿಗಳು ಮಾತ್ರವೇ ವಿಜ್ಞಾನ ಓದುತ್ತಾರೆ ಎಂಬ ತಪ್ಪು ಪರಿಕಲ್ಪನೆ. 

ಕಲಾ ವಿಭಾಗ ಎಂದರೆ ಕೀಳಲ್ಲ . ಸೈನ್ಸ್‌, ಕಾಮರ್ಸ್‌ ಗಳಿಗಿರುವಷ್ಟೇ ಮಹತ್ವ ಕಲಾ ವಿಭಾಗಕ್ಕೂ ಇದೆ. ಇದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು . ಬಿ.ಎ. , ಓದಿದ್ದೇನೆ ನಾನು ಉತ್ತಮ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಕೊಳ್ಳಬೇಡಿ, ಸಾಧನೆಗೆ ಸಾವಿರ ದಾರಿಗಳಿವೆ. ನಾವು ಯಾವ ವಿಭಾಗದಲ್ಲಿ ಓದಿದ್ದರೂ ಸಾಧನೆಗೆ ಅದರ ನೆರವು ಸಿಕ್ಕೀ ಸಿಗುತ್ತದೆ. ಬಿ.ಎ. ನಲ್ಲಿ ಸಮಾಜಶಾಸ್ತ್ರ , ರಾಜಕೀಯಶಾಸ್ತ್ರ , ಅರ್ಥಶಾಸ್ತ್ರ ಮತ್ತು ಕ್ರಿಮಿನಾಲಾಜಿ, ಸೈಕಲಾಜಿ, ಟೂರಿಸಮ್‌, ಪತ್ರಿಕೋದ್ಯಮ, ಇತಿಹಾಸ ವಿಷಯದ ಅಧ್ಯಯನ ಮಾಡಬಹುದು. ಇಂತಹ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಮಾಡಿದರೆ ಒಳ್ಳೆಯ ಕೆಲಸ ಮತ್ತು ಪದವಿ ಪಡೆಯಬಹುದು. ಅಲ್ಲದೇ ಬಿ.ಎ, ಎಂ.ಎ. ಓದಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಸೈನ್ಸ್‌ ಓದಿದ ವಿದ್ಯಾರ್ಥಿಗಳಿಗಿಂತ ಆರ್ಟ್ಸ್ ಓದಿದ ವಿದ್ಯಾರ್ಥಿಗಳು ಸರಳವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಲ್ಲರು. ಕಲಾ ವಿಭಾಗ ಎಂದರೆ ಸಾಗರವಿದ್ದಂತೆ ಇಲ್ಲಿ ಕಲಿತವರು ಎಲ್ಲಿ ಬೇಕಾದರೂ ಜೀವಿಸಬಲ್ಲರು.

ಕಲಾ ವಿಭಾಗದಲ್ಲಿ ಓದುವುದಕ್ಕೆ ಹೆಮ್ಮೆಪಡಬೇಕು. ಇತಿಹಾಸದ ವಿಷಯವಿಲ್ಲದಿದ್ದರೆ ನಮ್ಮ ನಾಡು- ನುಡಿಯ ಪರಿಚಯವೇ ನಮಗೆ ತಿಳಿಯುತ್ತಿರಲಿಲ್ಲ ಅಲ್ಲವೆ? ವಿಜ್ಞಾನಕ್ಕೆ ಸೀಮಿತ ಪ್ರಯೋಗಲಯವಿದೆ. ಆದರೆ ಕಲಾ ವಿಭಾಗಕ್ಕೆ ಸಮಾಜವೇ ಪ್ರಯೋಗಾಲಯವಾಗಿದೆ. ಯಾವ ದೃಷ್ಟಿಯಿಂದ ನೋಡಿದರೂ ಕಲಾ ವಿಭಾಗ ಕೀಳಲ್ಲ.

ಓದುವ ವಿಷಯದಲ್ಲಿ ಯಾವುದೂ ಕೀಳಲ್ಲ , ಇಲ್ಲಿಯವರೆಗೂ ನಮ್ಮ ದೇಶದ ಪ್ರಧಾನಿಯಾಗಿರುವ ಬಹುತೇಕರೆಲ್ಲರು ಕಲಾ ವಿಭಾಗದಲ್ಲಿ ಓದಿದವರೇ ಅನ್ನುವುವನ್ನು ನೆನಪಿನಲ್ಲಿಡಿ. ಕಲಾ ವಿಭಾಗದಲ್ಲಿ ಓದಿದವರು ಪ್ರಧಾನಿಯಾಗುವುದಾದರೆ ಸಾಧನೆಗೆ ಇದಕ್ಕಿಂತ ಓದುವ ವಿಷಯ ಬೇಕೆ ! ಓದುವುದು ಜ್ಞಾನ ವೃದ್ಧಿಗಾಗಿ, ನಮ್ಮ ಶ್ರಮ, ಪರಿಶ್ರಮವಿಲ್ಲದೆ ಸಾಧನೆ, ಯಶಸ್ಸು ಅಸಾಧ್ಯ. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ. ಪ್ರತಿಷ್ಠೆಗಾಗಿ ಸೈನ್ಸ್‌ ಓದಿ ಕಲಾ ವಿಭಾಗದವರನ್ನು ಕೀಳಾಗಿ ಕಾಣಬೇಡಿ. ಉತ್ತಮ ಸಮಾಜಕ್ಕೆ ಎಲ್ಲಾ ವಿಷಯ ಕಲಿತವರ ಅಗತ್ಯವಿದೆ. ಈ ಸಮಾಜಕ್ಕೆ ಇಂಜಿನಿಯರ್‌, ಡಾಕ್ಟರ್‌ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಒಬ್ಬ ಅರ್ಥಶಾಸ್ತ್ರಜ್ಞ , ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ ಕೂಡ.

Advertisement

– ಕಾವ್ಯಾ ಎಚ್‌. ಎನ್‌.
ಸರಕಾರಿ ಕಾಲೇಜು, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next