Advertisement

ಬದುಕು ಆಗಮನ, ನಿರ್ಗಮನಕ್ಕೆ ವೇಳೆ ನಿಗದಿಸದ ರಂಗಭೂಮಿ

06:46 PM Mar 26, 2021 | Team Udayavani |

ರಂಗಭೂಮಿ ಮಾನವನ ವಿಕಾಸದ ಮೂಲ ನೆಲೆ.  ಪಾತ್ರಗಳು ಭಾವನೆಗಳೊಂದಿಗೆ ಸಂಕಲನಗೊಂಡು, ಒಂದಿಷ್ಟು ಬಣ್ಣದ ಮೆರುಗು ನೀಡಿ, ರಂಗಿನ ಬೆಳಕಿನಲ್ಲಿ ಮುಖವಾಡದ ಹಿಂದಿನ ಬದುಕನ್ನು ಒಂದು ಕ್ಷಣ ಮರೆತು ಸಮಾಜದ ಅವ್ಯವಸ್ಥೆಗೆ ಕನ್ನಡಿ ಹಿಡಿದಂತೆ ಸುಧಾರಣೆಯ ಕುರಿತು ಸಂದೇಶ ಸಾರಿ. ಇದು ಹೇಗಿರಬೇಕಾಗಿತ್ತು, ಹೀಗಾಗಿ ಹೀಗಿದೆ ನೋಡಿ ಎಂದು ಮುಖಕ್ಕೆ ಹೊಡೆದಂತೆ ಹೇಳುವ ಮಾಧ್ಯಮ ರಂಗಭೂಮಿ.

Advertisement

ರಂಗಭೂಮಿ ಜನತೆಯನ್ನು ಒಗ್ಗೂಡಿಸುವ ಮಾಧ್ಯಮ. ಇಲ್ಲಿ ಕಥೆ, ವಾಸ್ತವತೆ, ಬಣ್ಣ, ಮುಖವಾಡ, ಬೆಳಕು ಪ್ರಧಾನ. ಭಾವಾಭಿವ್ಯಕ್ತಿಯೇ ಪಾತ್ರಗಳನ್ನು ಬಿಂಬಿಸುವುದರ ಮೂಲಕ ನಮ್ಮ ಬದುಕಿನ ವಿಕಾಸಕ್ಕೆ ನೂಕುವ ಭಾವ ದೃಶ್ಯ ಮಾಧ್ಯಮ ರಂಗಭೂಮಿ.

ಓದಿ : ‘ಈಗೋ’ ಒಳ್ಳೆಯದೇ… ಎಲ್ಲಿಯ ತನಕವೆಂದರೇ..

ಯಕ್ಷಗಾನದಲ್ಲಿ ತಿಟ್ಟುಗಳಲ್ಲಿನ ವ್ಯತ್ಸಾಸವಿದ್ದ ಹಾಗೆ ರಂಗಭೂಮಿಯಲ್ಲೂ ಇದೆ, ಕಾಲಾಂತರದ ಬೆಳವಣಿಗೆಯಲ್ಲಿ ರಂಗಭೂಮಿ ಬೆಳೆಯುತ್ತಾ ಹೊಸತನವನ್ನು ಸೇರಿಸಿಕೊಳ್ಳುತ್ತಾ ಬಂದಿದೆ. ಮಾನದಂಡಗಳ ಪರಿಧಿಯಿಲ್ಲದೆ ರಂಗಭೂಮಿ ಬೆಳೆದಿದೆ. ಬೆಳೆಯುತ್ತಿದೆ. ಬೆಳೆಯುತ್ತದೆ. ರಂಗಭೂಮಿಗೆ ಮತ್ತು ಬದುಕಿಗೆ ಬಣ್ಣ, ಪರದೆಗಳ ಹೊರತಾಗಿ ಬಹಳವೇನೂ ವ್ಯತ್ಯಾಸಗಳಿಲ್ಲ. ರಂಗಭೂಮಿ ಬದುಕಿನ ಒಂದು ಅಂಗ. ಬದುಕು ರಂಗಭೂಮಿಯ ಒಂದು ಅಂಗ.

ಗ್ರೀಕ್ ರಂಗಭೂಮಿಯಲ್ಲಿ ಬಣ್ಣಗಳ ಬಳಕೆಯಿಲ್ಲದೆ ಒಬ್ಬ ನಟ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿದ್ದ. ಒಂದೊಂದು ಪಾತ್ರಕ್ಕನುಗುಣವಾಗಿ ಮುಖವಾಡಗಳನ್ನು ಧರಿಸುತ್ತಿದ್ದರು. ನಂತರದ ದಿನಗಳಲ್ಲಿ ಮುಖವಾಡದ ಬದಲಿಗೆ ಬಣ್ಣದ ಬಳಕೆ ಆರಂಭವಾಯಿತು. ಇದು ಮುಖದ ಅಭಿವ್ಯಕ್ತಿಗಳನ್ನು ಅರಿಯಲು ಅನುವು ಮಾಡಿಕೊಟ್ಟಿತು. ಇಂದಿಗೂ ರಂಗಭೂಮಿಯಲ್ಲಿ ಬಣ್ಣದ ಪಾತ್ರ ಮಹತ್ವವಾದುದಾಗಿದೆ. ಬಣ್ಣದ ಜೊತೆ ಜೊತೆಗೆ ಪ್ರದರ್ಶನದಲ್ಲಿ ಬಳಸುವ ರಂಗವಿನ್ಯಾಸ, ಬೆಳಕು, ಧ್ವನಿವರ್ಧಕಗಳು ಒಂದು ಕಥೆ ಜನತೆಯ ಮನದಲ್ಲಿ ಅಚ್ಚೊತ್ತುವಂತೆ ಮಾಡುತ್ತದೆ.

Advertisement

ರಂಗಭೂಮಿಯ ಪ್ರದರ್ಶನಗಳು ಯಾವುದೇ ಸಿನೆಮಾಗಳಿಗೆ ಕಡಿಮೆಯಿಲ್ಲ. ಸಿನೆಮಾದ ದೃಶ್ಯದಲ್ಲಿ ಏನಾದರೂ ಲೋಪದೋಷವಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದೆ. ಆದರೆ ರಂಗಭೂಮಿಯಲ್ಲಿ ಹಾಗಲ್ಲ, ಅದೆಷ್ಟೋ ದಿನಗಳು ರಾತ್ರಿ ಹಗಲೆನ್ನದೆ ತಯಾರಿ ಮಾಡಿ ಪ್ರದರ್ಶನ ದಿನದಂದು ಯಾವುದೇ ರೀತಿಯ ತಿದ್ದುಪಡಿಗೆ ಅವಕಾಶವಿಲ್ಲದೆ ಸವಾಲು ಎದುರಿಸಿದಂತೆ ರಂಗವನ್ನಾಳುವ ಕಲೆ. ರಂಗಭೂಮಿ ಇತರ ಯಾವುದೇ ಕಲೆಗಳಿಗಿಂತ ಕಡಿಮೆ ಇಲ್ಲ ಎಂಬಂತೆ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಬೆಳೆದು ನಿಂತಿದೆ. ಬದುಕು ಬದಲಾದಂತೆ. ಬದುಕಿನ ಶೈಲಿ ಬದಲಾದಂತೆ.

ರಂಗಭೂಮಿ ಪ್ರಾದೇಶಿಕವಾಗಿ ಪ್ರಸ್ತುತತೆ ಹೊಂದಿದ್ದು, ಒಂದು ಪ್ರದೇಶದಲ್ಲಿರುವ ರಂಗಕಲೆ ಆ ಪ್ರದೇಶದ ಜನ ಜೀವನದ ಮೇಲೆ ಆಳವಾಗಿ ಪ್ರಭಾವ ಬೀರುತ್ತದೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ರಂಗಭೂಮಿ ಬಹು ಪೂಜ್ಯನೀಯವಾಗಿದ್ದು ಅಲ್ಲಿನ ಭಾಷೆ, ಸಂಸ್ಕೃತಿ, ಆಚಾರ – ವಿಚಾರಗಳ ಬೆಳೆವಣಿಗೆ ಮಹತ್ತರವಾದ ಕೊಡುಗೆ ನೀಡುತ್ತದೆ.

ರಂಗಭೂಮಿ ಪ್ರಚಲಿತ ವಿದ್ಯಮಾನವಾಗಿದ್ದು, ಇದು ಜನತೆಯ ಅನ್ಯೋನ್ಯತೆ, ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಲು, ಸಮಾಜದ ಅಭಿವೃದ್ಧಿಗೆ ವಾಸ್ತವತೆಯ ಅರಿವು ಮೂಡಿಸುವಲ್ಲಿ ಸಹಕಾರಿ. ರಂಗಭೂಮಿ ಹಾಗೆಯೇ ಬದುಕನ್ನು ಕಟ್ಟುತ್ತದೆ. ಬದುಕೊಂದು ರಂಗಭೂಮಿ. ಆಗಮನ, ನಿರ್ಗಮನಕ್ಕೆ ವೇಳೆ ನಿಗದಿಸದ ರಂಗಭೂಮಿ. ಪ್ರತಿ ಕ್ಷಣಗಳಿಲ್ಲಿ ಒಂದೊಂದು ಸನ್ನಿವೇಶ. ತಿರುವುಗಳಿಲ್ಲಿ ಹೊಸ ತಿರುವು ಕೊಡುವ ರೋಚಕತೆ. ರಂಗಭೂಮಿ ಬದುಕನ್ನು ದರ್ಶಿಸುತ್ತದೆ. ಯಾಕೆಂದರೇ, ಇದು ನಮ್ಮೊಳಗಿನ, ನಮ್ಮದೇ ಭಾವಾಭಿವ್ಯಕ್ತಿಯ ಅನುರೂಪ. ಹಾಗಾಗಿ ಮನುಷ್ಯನಿಗೆ ರಂಗಭೂಮಿಯನ್ನು ಹೊರತಾಗಿ ಬದುಕನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

ನಳಿನಿ ಎಸ್ ಸುವರ್ಣ
ಆಳ್ವಾಸ್ ಕಾಲೇಜು ಮೂಡುಬಿದಿರೆ.

ಓದಿ :   ನಾಳೆ ರಾಮ್ ಚರಣ್ ಹುಟ್ಟುಹಬ್ಬ : ಅಡ್ವಾನ್ಸ್ ಗಿಫ್ಟ್ ಕೊಟ್ಟ RRR ತಂಡ

Advertisement

Udayavani is now on Telegram. Click here to join our channel and stay updated with the latest news.

Next