Advertisement

ಮಾಡಿದ್ದನ್ನು ಉಣ್ಣಲೇಬೇಕು

01:04 AM May 02, 2021 | Team Udayavani |

ವೃದ್ಧಾಪ್ಯದಲ್ಲಿ ತಮ್ಮ ಮಗ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಭಾವಿಸಿ ದಂಪತಿ ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಾರೆ. ಅನಂತರ ಮಗ ಅಧಿಕಾರಿಯಾಗುತ್ತಾನೆ. ಮಗನಿಗೆ ಮದುವೆ ಮಾಡಿಸುತ್ತಾರೆ. ಮನೆಗೆ ಸೊಸೆ ಬರುತ್ತಾಳೆ. ಮಗನಿಗೂ ಗಂಡು ಮಗುವಾಗುತ್ತದೆ. ಕ್ರಮೇಣ ಮಗ ಹೆಂಡತಿಯ ಗುಲಾಮನಾಗುತ್ತಾನೆ. ದಿನ ಕಳೆದಂತೆ ಮಗ, ಸೊಸೆ ಸೇರಿ ವೃದ್ಧ ದಂಪತಿಯನ್ನು ಮನೆಯ ಮೂಲೆಯೊಂದರಲ್ಲಿ ಕೂಡಿ ಹಾಕಿ ಪ್ರಾಣಿಗಳಂತೆ ನೋಡಲಾರಂಭಿಸುತ್ತಾರೆ. ನಿತ್ಯವೂ ಆ ವೃದ್ಧ ದಂಪತಿಗೆ  ಮೊಮ್ಮಗನ ಮುಖೇನ ಅರೆಬರೆ ಬೆಂದ ಆಹಾರವನ್ನು ಹಳೆಯ ಬಟ್ಟಲಲ್ಲಿ ಕಳುಹಿಸಿ ಕೊಟ್ಟು  ಅವುಗಳಿಗೆ ತಿನ್ನಲು ಹೇಳು ಅನ್ನುತ್ತಿದ್ದಳು ಸೊಸೆ.

Advertisement

ಮೊಮ್ಮಗ ತನ್ನ ಅಜ್ಜ ಅಜ್ಜಿಗೆ ಪ್ರೀತಿಯಿಂದ ಆಹಾರವನ್ನು ನೀಡಿ ಅನಂತರ ಊಟ ಮಾಡಿದ ಬಟ್ಟಲನ್ನು ಚೆನ್ನಾಗಿ ತೊಳೆದು ಮನೆಯೊಳಗಿರುವ ಅಟ್ಟದಲ್ಲಿ ಸುರಕ್ಷಿತವಾಗಿಡುತ್ತಾನೆ.

ಒಮ್ಮೆ ಆ ಹುಡುಗನಿಗೆ ಅವನ ತಂದೆ ತಾಯಿ ಯಾಕೆ ನೀನು ಈ ಹಳೆಯ ಬಟ್ಟಲನ್ನು ಇಷ್ಟೊಂದು ಸುರಕ್ಷತೆಯಿಂದ ಇಡುತ್ತೀಯಾ ಎಂದು ಕೇಳುತ್ತಾರೆ. ಆಗ ಆ ಬಾಲಕ,  ಈ ಹಳೆ ಬಟ್ಟಲು ನೀವು ಅಜ್ಜಅಜ್ಜಿಯಂತಾದಾಗ ಬೇಕಾಗುತ್ತದೆ. ನಿಮಗೂ ಇದೇ ಮೂಲೆಯಲ್ಲಿ ಊಟ ಬಡಿಸಬೇಕಲ್ವ ಎಂದು ಉತ್ತರಿಸುತ್ತಾನೆ. ಅವನ ಮಾತು ಕೇಳಿ ಅವರು ದಿಗ್ಭ್ರಾಂತರಾಗುತ್ತಾರೆ.

ಈ ಕಥೆ ಇಲ್ಲಿಗೆ ಮುಗಿಯುತ್ತದೆ. ಆದರೆ ಅದರ ಸಾರ ಎಲ್ಲರೂ ನೆನಪಿನ ಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ತಂದೆತಾಯಿ ವೃದ್ಧರಾದರೆಂದು ಅವರನ್ನು ಮೂಲೆಗುಂಪು ಮಾಡುವ, ವೃದ್ಧಾಶ್ರಮಕ್ಕೆ ಸೇರಿಸುವ ಪ್ರತಿಯೊಬ್ಬ ಮಕ್ಕಳಿಗೂ ಇದೊಂದು ಪಾಠವಾಗಿದೆ. ವಯಸ್ಸಾಯಿತೆಂದು ನಾವು ಅವರನ್ನು ತಿರಸ್ಕರಿಸಿದರೆ ನಾಳೆ ನಮಗೂ ವಯಸ್ಸಾಗುತ್ತದೆ. ಆಗ ನಮ್ಮ ಮಕ್ಕಳೂ ನಮ್ಮನ್ನು ಬಿಟ್ಟುಬಿಡುತ್ತಾರೆ ಎನ್ನುವ ಯೋಚನೆ ಮನದಲ್ಲಿ ಇರಬೇಕು. ಆಗ ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಿದೆ.

 ಶಾರದಾ ಆನಂದ ಮಡಿವಾಳ, ಕಸ್ತೂರ್ಬಾ ನಗರ, ಉಡುಪಿ

Advertisement

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ

ಹುಟ್ಟುತ್ತಲೆ ಯಾರೂ ಮೇಧಾವಿಗಳಾಗಿರುವುದಿಲ್ಲ. ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಬರುವುದಿಲ್ಲ. ಸತತ ಸಾಧನೆ, ಪ್ರಯತ್ನದ ಫ‌ಲವಾಗಿ ಅಂದುಕೊಂಡಿದ್ದನ್ನು ಸಾಧಿಸುವುದು ಸಾಧ್ಯ. ಇಚ್ಛಾ ಶಕ್ತಿ ಮತ್ತು ಅದಕ್ಕೆ ಅನುಗುಣವಾದ ಕಾಯಕದ ಶ್ರದ್ಧೆ ಇದ್ದರೆ ಕೊರಡಿನಂಥ ಜೀವನ ಕೊನರುವುದರಲ್ಲಿ ಅನುಮಾನವಿಲ್ಲ. ಬಡವ ಬಡವನಾಗಿ, ದಡ್ಡ ದಡ್ಡನಾಗಿಯೇ ಸಾಯಬೇಕಿಲ್ಲ. ಶ್ರೀಮಂತನಾಗಿಯೇ ಬದುಕಬೇಕಿಲ್ಲ. ಅವರವರ ಬದುಕಿನ ವಿಧಾನ ಅವರನ್ನು ಮೇಲೆತ್ತಲು ಇಲ್ಲವೇ ಹಳ್ಳಕ್ಕೆ ತಳ್ಳಲು ಸಾಧ್ಯ. ನಮ್ಮ ಯಶಸ್ಸಿನ ಉದ್ಧಾರದ ಶಿಲ್ಪಿಗಳೇ ನಾವೇ! ಮಾತು ಮುತ್ತಿನಂತಿರಬೇಕು, ಮಾತಿನ ಮಹಿಮೆ ಅಪಾರ. ಎಲುಬಿಲ್ಲದ ನಾಲಗೆ ಏನನ್ನಾದರೂ ಮಾತನಾಡಿದರೆ ಹೋಯಿತು. ಮಾತೇ ಮಾಣಿಕ್ಯವಾಗಿರಬೇಕು.  ಭಕ್ತಿ ಶಕ್ತಿಯನ್ನು ಕೊಡುತ್ತದೆ. ಮಧುರತೆ ಸ್ಪಷ್ಟತೆ ಮುಖ್ಯ. ತುಳಿಯುವ ಹಾದಿ ಎಂಥದ್ದಾದರೂ ಅಧಃಪತನಕ್ಕೆ ಹೋಗದೆ ಏಳಿಗೆಯ ಕಡೆಗೆ ಸಾಗಿದರೆ ಬಲಿಷ್ಠತೆಯನ್ನು ಸಾಧಿಸಲು ಖಂಡಿತಾ ಸಾಧ್ಯ.

 ಎ. ಕೃಷ್ಣಾನಂದ ಶೆಟ್ಟಿ, ಐಕಳ

ಯಾರು, ಯಾವುದೂ  ಇಲ್ಲಿ ಶಾಶ್ವತವಲ್ಲ

ಎಲೆಗಳ ಮೇಲೆ ಕುಳಿತ ನೀರಿನ ಹನಿಗಳಿಗೆ ಗೊತ್ತಿರಲಿಲ್ಲ. ಸೂರ್ಯ ಬರುವ ತನಕ ಮಾತ್ರ ತನ್ನ ಸೊಬಗು ಅಂತ. ಹನಿಯನ್ನು ಹೊತ್ತ ಎಲೆಗೂ ಗೊತ್ತಿಲ್ಲ ನೀರು ಮುಗಿಯುವ ತನಕ ನನ್ನ ಬದುಕು ಅಂತ. ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ, ಯಾರೂ ಶಾಶ್ವತವಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಈ ಸಂದೇಶ ಈಗಿನ ಪರಿಸ್ಥಿತಿಗೆ ಪೂರಕ ಎನ್ನುವಂತಿದೆ. ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೂ ನಾವು ನಾಳೆಯ ನಿರೀಕ್ಷೆ ಇಟ್ಟುಕೊಂಡು ಬದುಕುತ್ತೇವೆ.

ಬದುಕಲು ಕೆಲವರಿಗೆ ಇದು ಅನಿವಾರ್ಯವೂ ಹೌದು. ಆದರೆ ಹೇಗೆ ಬದುಕಬೇಕು ಎನ್ನುವುದೇ ಹೆಚ್ಚಿನವರಿಗೆ ಗೊತ್ತಿಲ್ಲ. ಇಲ್ಲಿರುವ ಪ್ರತಿಯೊಂದು ವಸ್ತುಗಳ ಮೇಲೂ ತನ್ನ ಹಕ್ಕು ಇದೆ ಎಂದುಕೊಂಡು ಕೆಲವರು ಬದುಕಿದರೆ, ಇನ್ನು ಕೆಲವರು ಇಲ್ಲಿರುವ ಎಲ್ಲವೂ ತನಗೆ ಸೇರಿದ್ದು ಎಂದುಕೊಂಡಿದ್ದಾರೆ. ಹೀಗಾಗಿಯೇ ಪ್ರಕೃತಿಯಲ್ಲಿ ಇಂದು ವೈಪರೀತ್ಯ ಕಾಣಿಸಿಕೊಂಡಿದೆ ಎಂಬುದನ್ನು ಪ್ರತಿಯೊಬ್ಬರು ಅರ್ಥೈಸುವಂತೆ ಮಾಡುತ್ತದೆ ಈ ಸಂದೇಶ.

–  ಶಾರದಾ, ಕಾರ್ಕಳ

ಬದುಕಿನ ಉದ್ದೇಶವೇ ಶಾಂತಿ, ನೆಮ್ಮದಿ

ಭಾವನೆಗಳಿಗೆ ನಿರಂತರವಾಗಿ ಪೆಟ್ಟು ಬಿದ್ದಾಗ ಮಾತು ಮೌನವಾಗುತ್ತದೆ. ಹೌದಲ್ಲ ! ಮನುಷ್ಯನೊಬ್ಬನ ಎಲ್ಲ ವರ್ತನೆಗಳು ನಿಂತಿರುವುದು ಅವನ ಭಾವನೆಯ ಮೇಲೆ. ಈ ಭಾವನೆ ಅವನ ಅನುಭವವನ್ನು ಅವಲಂಬಿಸಿದೆ. ಭಾವನೆ ಹೇಗಿರುತ್ತದೋ ಹಾಗೆ ಆತ ಕಾರ್ಯೋನ್ಮುಖನಾಗುತ್ತಾನೆ. ಈ ನಿಟ್ಟಿನಲ್ಲಿ ಭಾವನೆಗೂ ಕಾರ್ಯಕ್ಕೂ ಸಹಸಂಬಂಧವಿದೆ ಎನ್ನುವುದು ನಿಜ ವಿಚಾರ. ಈ ಎಲ್ಲ ವಿಷಯಗಳ ಚಿಂತನೆಯ ಹಿನ್ನೆಲೆಯಲ್ಲಿ ವ್ಯಕ್ತಿಯ ಭಾವನೆಯನ್ನು ಅರ್ಥ ಮಾಡಿಕೊಳ್ಳದ ಪರಿಸರ ಅವನಿಗೆ ಎದುರಾದಾಗ ( ಮನೆ, ಸಮುದಾಯ, ಕಾರ್ಯಕ್ಷೇತ್ರಗಳಲ್ಲಿ), ಅವನ ಮಾತಿಗೆ ಬೆಲೆ ಇಲ್ಲ ದಾಗ ಅನಿವಾರ್ಯವಾಗಿ ಮೌನದ ಹಾದಿ ಹಿಡಿಯುತ್ತಾನೆ. ನೆಮ್ಮದಿಯ ಮಾರ್ಗವನ್ನು ಕಂಡುಕೊಳ್ಳುತ್ತಾನೆ. ಇದರಲ್ಲಿ ತಪ್ಪೇನಿದೆ? ಕೊನೆಗೂ  ಮಾನವನ ಬದುಕಿನ ಉದ್ದೇಶ ಶಾಂತಿ, ನೆಮ್ಮದಿ, ತೃಪ್ತಿ, ಸಮಾಧಾನಗಳಲ್ಲವೆ?.

ವ. ಉಮೇಶ್‌ ಕಾರಂತ, ಮಂಗಳೂರು

ನಾಳೆ ಏನಾಗಲಿದ್ದೀರಿ ಎನ್ನುವುದೇ ಮುಖ್ಯ

ಪ್ರತೀ ಅದ್ಭುತ ಕಟ್ಟಡವೂ ಹಿಂದೆ ನಕ್ಷೆಯಾಗಿತ್ತು, ಪ್ರತೀ ರಾಜನೂ ಹಿಂದೆ ಅಳುವ ಕೂಸಾಗಿದ್ದ, ನೀವೀಗ ಎಲ್ಲಿ ಇದ್ದೀರಿ ಎನ್ನುವುದು ಮುಖ್ಯವಲ್ಲ, ನಾಳೆ ಏನಾಗಲಿದ್ದೀರಿ ಎನ್ನುವುದೇ ಮುಖ್ಯ. ಫೇಸ್‌ಬುಕ್‌ ವಾಲ್‌ನಲ್ಲಿ ನೋಡಿದ್ದ ಈ ಸಂದೇಶ ಮನತಟ್ಟಿತು. ಎಲ್ಲರ ಜೀವನ ಒಂದೇ ಅಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಆಯ್ಕೆಗಳು, ಹೊಸ ಅವಕಾಶಗಳು ಬಂದೇ ಬರುತ್ತವೆ. ಆದರೆ ಅದನ್ನು ನಾವು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ಎಂಬುದು ಅತೀ ಅಗತ್ಯ. ಜೀವನದಲ್ಲಿ ಇವತ್ತು ನಾವು ಏನೇ ಆಗಿರಬಹುದು. ಆದರೆ ನಾಳೆಯೂ ಇದೇ ರೀತಿ ಇರುವುದು ಸಾಧ್ಯವಿಲ್ಲ. ಯಾಕೆಂದರೆ ಕಾಲ ಬದಲಾಗುತ್ತಿರುತ್ತದೆ. ಮೇಲಿದ್ದವರು ಕೆಳಗೆ ಬೀಳುವಂತೆ, ಕೆಳಗಿದ್ದವರು ಎತ್ತರಕ್ಕೆ ಏರಲೇಬೇಕು. ಆದರೆ ಅವುಗಳೆಲ್ಲ ನಮ್ಮ ಶ್ರಮದ ಹಿಂದಿರುತ್ತದೆ. ನನ್ನಿಂದ ಏನೂ ಸಾಧ್ಯವಿಲ್ಲ ಎಂದುಕೊಂಡರೆ ಯಾವುದನ್ನೂ ಮಾಡಲಾಗದು. ಆದರೆ ಪ್ರಯತ್ನಪಟ್ಟು ಮುನ್ನಡೆದರೆ ಒಂದೆರಡು ಸೋಲುಗಳು ಎದುರಾಗಬಹುದು. ಆದರೆ ಆ ಸೋಲಿನಿಂದ ಕಲಿತ ಅನುಭವವನ್ನು ಬಳಸಿಕೊಂಡು ಮುನ್ನಡೆದರೆ ಜಯ ಸಿಕ್ಕೇಸಿಗುತ್ತದೆ.

 – ರಾಜಶ್ರೀ,  ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next