Advertisement

ಅಪ್ರತಿಮ ಸಾಹಸಿ ಕಿರಣ್‌ ಬೇಡಿ

08:25 PM Apr 26, 2021 | Team Udayavani |

“ನಾನು ಹುಟ್ಟಿದಾಗ ದೇಶದ ಹೆಣ್ಮಕ್ಕಳ ಸ್ಥಿತಿ ಸುಧಾರಿಸಿರಲಿಲ್ಲ. ಕುಟುಂಬದ ಎಲ್ಲ ಜವಾಬ್ದಾರಿ ನೋಡಿಕೊಳ್ಳುವುದು ಗಂಡು ಮಕ್ಕಳೇ ಆಗಿದ್ದರು. ಹೆಣ್ಣುಮಕ್ಕಳು ಕೇವಲ ಮದುವೆ ಆಗಿ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಜೀವಿಸಬೇಕಿತ್ತು!’

Advertisement

ಹೆಣ್ಣೊಬ್ಬಳ ಇಂತಹ ಅಂತರಾಳದ ನೋವನ್ನು ಹಂಚಿಕೊಂಡವರು ಡಾ| ಕಿರಣ್‌ಬೇಡಿ. ಲೇಡಿ ಸಿಂಗಂ ಎಂದೇ ಕರೆಯಿಸಿಕೊಳ್ಳುವ ಡಾ| ಕಿರಣ್‌ ಬೇಡಿ ಅವರು ದೇಶದ ಪ್ರಥಮ ಮಹಿಳಾ ಐಪಿಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.

ಧೈರ್ಯ, ಸಾಹಸ ಹಾಗೂ ಹೋರಾಟ ಮನೋಭಾವದವರಾಗಿದ್ದ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಐಪಿಎಸ್‌ ಅಧಿಕಾರಿಯಾಗಿ, ಟೆನಿಸ್‌ ಆಟಗಾರ್ತಿ, ಸಾಮಾಜಿಕ ಹೋರಾಟಗಾರ್ತಿ ಮತ್ತು ರಾಜಕಾರಣಿಯಾಗಿ ತಮ್ಮ ಕರ್ತವ್ಯವನ್ನು ನಿಷ್ಠೆ, ಪಾರದರ್ಶಕದಿಂದ ನಿರ್ವಹಿಸಿ ಯುವಜನರ ಮನಸ್ಸನ್ನು ಗೆದ್ದಿದ್ದಾರೆ.

ತಂದೆಯದ್ದೇ ಹೋರಾಟ ಗುಣ
ಕಿರಣ್‌ ಬೇಡಿ ಅವರು 1949ರಲ್ಲಿ ಅಮೃತಸರದ ಪೇಶಾವರದ ವ್ಯಾಪಾರಿ ಕುಟುಂಬದಲ್ಲಿ ಜನಿಸಿದರು. ತಂದೆ ಪ್ರಕಾಶ್‌ ಪೇಶಾವರಿಯಾ, ತಾಯಿ ಪ್ರೇಮಲತಾ. ಪ್ರಕಾಶ್‌ ಅವರದು ಹೋರಾಟ ಬದುಕು. ಜೀವನಕ್ಕಾಗಿ ದಿನವಿಡೀ ಕಷ್ಟ ಪಟ್ಟು ದುಡಿದು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಆಸೆ ಹೊಂದಿದ್ದರು. ಅಂತೆಯೇ ಮಗಳು ಕಿರಣ್‌ ಅವರನ್ನು ಕಾನ್ವೆಂಟ್‌ ಶಾಲೆಗೆ ಸೇರಿಸಿದ್ದರು.

ಓದಿಗೂ ಸೈ, ಕ್ರೀಡೆಗೂ ಜೈ
ಕಿರಣ್‌ ಬೇಡಿ ಅವರು ಬಹುಮುಖ ಪ್ರತಿಭೆ. ಓದಿನಲ್ಲೂ ಮುಂದೆ, ಕ್ರೀಡೆಯಲ್ಲೂ ಮುಂದೆಯೇ ಇರುತ್ತಿದ್ದರು. ಕಾಲೇಜಿನಲ್ಲಿ ಎನ್‌ಸಿಸಿ ಯಲ್ಲೂ ಉತ್ತಮ ಸಾಧನೆ ಮಾಡಿದ್ದರಲ್ಲದೇ ರಾಷ್ಟ್ರಮಟ್ಟದ ಟೆನ್ನಿಸ್‌ ಆಟಗಾರ್ತಿಯಾಗಿದ್ದರು. ಟೆನ್ನಿಸ್‌ ಆಟವಾಡುವುದೆಂದರೆ ಕಿರಣ್‌ ಅವರಿಗೆ ತುಂಬಾ ಇಷ್ಟ. ಅದಕ್ಕಾಗಿಯೇ ಅವರು ತಮ್ಮ ಕೂದಲನ್ನು ಬಾಬ್‌ ಕಟ್‌ ಮಾಡಿಸುತ್ತಿದ್ದರು.

Advertisement

ಶೌರ್ಯಕ್ಕೆ ಸಂದ ಗರಿಮೆ
ಕಿರಣ್‌ ಬೇಡಿ ಅವರು ಪೊಲೀಸ್‌ ಅಧಿಕಾರಿಯಾಗಿ ಹೊಸದಿಲ್ಲಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕವೇ ಅನೇಕ ಸವಾಲುಗಳು ಎದುರಾದವು. ಅದನ್ನು ಸಮರ್ಥವಾಗಿ ಎದುರಿಸಿದರು. ಹೊಸದಿಲ್ಲಿಯ ರಾಜಕೀಯ ಪ್ರೇರಿತ ಸಂಘರ್ಷಗಳು, ಅಪರಾಧಗಳ ಪ್ರಮಾಣವನ್ನು ಕಡಿಮೆಗೊಳಿಸಿದರು. ಬಹುತೇಕ ಕೈದಿಗಳ ಮನಃಪರಿವರ್ತನೆ ಮಾಡಿ ಅವರಿಗೆ ಹೊಸ ಜೀವನಕ್ಕೆ ನಾಂದಿ ಹಾಡಿದರು. ಅಲ್ಲದೇ 1975ರಲ್ಲಿ ಗಣರಾಜ್ಯೋತ್ಸವ ದಿನದಂದು ಜರಗಿದ ಪರೇಡ್‌ನ್ನು ನಿರ್ವಹಿಸಿ ಸೈ ಎನಿಸಿಕೊಂಡರು. ಹೊಸದಿಲ್ಲಿಯಲ್ಲಿ ಸಿಕ್ಖ್ ಗಲಭೆಯಾದಾಗ ಅದರ ನಿಯಂತ್ರಣಕ್ಕೆ ತೋರಿದ ಧೈರ್ಯ, ಸಾಹಸಕ್ಕೆ ಮೆಚ್ಚಿ 1979ರಲ್ಲಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಯಿತು.

ದೂರು ಪೆಟ್ಟಿಗೆ ಇಟ್ಟ ಧೀರೆ
ಕಿರಣ್‌ ಬೇಡಿ ಅವರನ್ನು 1979ರಲ್ಲಿ ದಿಲ್ಲಿಯ ಪಶ್ಚಿಮ ಜಿಲ್ಲೆಗೆ ನಿಯುಕ್ತಿಗೊಳಿಸಲಾಯಿತು. ಅತೀ ಹೆಚ್ಚು ಅಪರಾಧ ಪ್ರಕರಣಗಳು ನಡೆಯುವ ಸೂಕ್ಷ್ಮ ಪ್ರದೇಶ ಇದಾಗಿತ್ತು. ಇವರು ನಿಯುಕ್ತಿಯಾದ ಬಳಿಕ ಪೊಲೀಸರ ಜತೆಗೆ ಸ್ವಯಂ ಸೇವಕರನ್ನು ನೇಮಿಸಿ ಬೀಟ್‌ ವ್ಯವಸ್ಥೆಗೆ ಬಿಟ್ಟರು. ಅಲ್ಲದೇ ಪ್ರತೀ ವಾರ್ಡ್‌ಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಟ್ಟು, ಜನಸಾಮಾನ್ಯರ ದೂರುಗಳನ್ನು ಕೇಳಿ, ತತ್‌ಕ್ಷಣವೇ ಪರಿಹಾರಕ್ಕೆ ಮುಂದಾದರು. ಇದರ ಬೆನ್ನಲ್ಲೇ ಅಪರಾಧಗಳ ಪ್ರಮಾಣ ಇಳಿಮುಖವಾಯಿತು.

ಐಪಿಎಸ್‌ ಅಧಿಕಾರಿಯಾಗಿ
ಹಲವು ಪ್ರಯತ್ನಗಳ ಬಳಿಕ ಕಿರಣ್‌ ಬೇಡಿ ಅವರು 1972ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಅವರು ಐಪಿಎಸ್‌ ಪರೀಕ್ಷೆ ಯಲ್ಲಿ ಉತ್ತೀರ್ಣರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರಿಗಿದೆ. ಮುಂದೆ ತರಬೇತಿಯಲ್ಲಿ ಸುಮಾರು 80 ಪುರುಷರಲ್ಲಿ ಏಕೈಕ ಮಹಿಳೆ ಕಿರಣ್‌ ಅವರಾಗಿದ್ದರು. ಬಳಿಕ ಇವರು ಹೊಸದಿಲ್ಲಿಗೆ ಐಪಿಎಸ್‌ ಅಧಿಕಾರಿಯಾಗಿ ನಿಯುಕ್ತರಾದರು.

ಕ್ರೇನ್‌ – ಬೇಡಿ; 1981ರಲ್ಲಿ ಕಿರಣ್‌ ಅವರನ್ನು ಟ್ರಾಫಿಕ್‌ ವಿಭಾಗಕ್ಕೆ ವರ್ಗಾಯಿಸಿದರು. ಅಲ್ಲಿ ಕೂಡ ಅವರು ಪರಿಣಾಮತ್ಮಾ¾ಕ ಬದಲಾವಣೆ ತಂದರು. ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಕ್ರೇನ್‌ ಮೂಲಕ ಎತ್ತಿಕೊಂಡೊಯ್ಯುತ್ತಿದ್ದರು. ಇದರಿಂದ ಇವರಿಗೆ ಕ್ರೇನ್‌-ಬೇಡಿ ಎಂಬ ಖ್ಯಾತಿ ಗಳಿಸಿದ್ದರು. ಸಂಚಾರ ವ್ಯವಸ್ಥೆಯಲ್ಲಿ ಇವರ ತಂದ ಅಮೂಲಾಗ್ರ ಬದಲಾವಣೆಯನ್ನು ಗುರುತಿಸಿ ಏಶಿಯನ್‌ ಜ್ಯೋತಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಿಹಾರ್‌ ಜೈಲಿನ ಅಧಿಕಾರಿಯಾಗಿ; 1992ರಲ್ಲಿ ತಿಹಾರ್‌ ಜೈಲಿನ ಐಜಿ ಹುದ್ದೆಗೆ ಕಿರಣ್‌ ತೆರಳಿದರು. 2,500 ಸಾಮರ್ಥ್ಯದ ಜೈಲಿನಲ್ಲಿ 9,500 ಕೈದಿಗಳಿದ್ದರು. ಅಲ್ಲಿನ ಅಕ್ರಮ ಡ್ರಗ್‌, ಗಲಭೆ, ಅಕ್ರಮ ಚಟುವಟಿಕೆಗಳ ಮೇಲೆ ಪೋಲೀಸರಿಗೆ ನಿಯಂತ್ರಣವಿರಲಿಲ್ಲ. ಬೇಡಿ ನಟೋರಿಯಸ್‌ ಕೈದಿಗಳನ್ನು ಪ್ರತ್ಯೇಕ ಬ್ಯಾಚ್‌ ಮಾಡಿದರು. ಉಳಿದ ಕೈದಿಗಳನ್ನು ವಿಶ್ವಾಸಕ್ಕೆ ತಂದು ಎನ್‌ಜಿಒ ಗಳ ನೆರವಿನಿಂದ ಬದುಕಲು ಬೇಕಾದ ನೈಪುಣ್ಯ ಕಲಿಸಿದರು. ಧ್ಯಾನ, ಯೋಗ ಕಲಿಯುವ, ದೂರ ಶಿಕ್ಷಣ ಕೇಂದ್ರದ ಮೂಲಕ ಪದವಿ ಓದುವ ವ್ಯವಸ್ಥೆ ಮಾಡಿದರು. ಬ್ಯಾಂಕ್‌, ಬೇಕರಿಗಳನ್ನೂ ಜೈಲಿನಲ್ಲೇ ಸ್ಥಾಪಿಸಿದರು. ತಿಹಾರ್‌ಎಷ್ಟು ಸುಧಾರಿಸಿತೆಂದರೆ ಅವರು ಅಲ್ಲಿಂದ ವರ್ಗವಾಗುವ ಹೊತ್ತಿಗೆ ಜೈಲು ಆಶ್ರಮದಂತಾಯಿತು. ಮುಂದೆ ಕಿರಣ್‌ ಬೇಡಿ ಅವರನ್ನು ತಿಹಾರ್‌ ಜೈಲಿನಿಂದ ವರ್ಗಾವಣೆ ಮಾಡಿದಾಗ ಇದನ್ನು ವಿರೋಧಿಸಿ ಕೈದಿಗಳು ಉಪವಾಸ ಸತ್ಯಾಗ್ರಹ ಮಾಡಿದರು.

ವ್ಯವಸ್ಥೆಯೊಂದಿಗಿನ ಅವಿರತ ಹೋರಾಟ: ಕಿರಣ್‌ ಬೇಡಿ ಅವರು ಎಂದಿಗೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಅದಕ್ಕಾಗಿ ವರ್ಗಾವಣೆಯ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೂ ಇದ್ಯಾವು ದಕ್ಕೆ ಬೆದರದ ಅವರು ವ್ಯವಸ್ಥೆಯೊಂದಿಗೆ ನಿರಂತರವಾಗಿ ಹೋರಾಡಿದರು. ಜನಸಾಮಾನ್ಯರಿಗೆ ನೆರವಾದರು. ಇವರ ಜನಪರ ಕಾಳಜಿಗೆ ರಾಮನ್‌ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಂದೆ…! : ಐಪಿಎಸ್‌ ವೃತ್ತಿಯಲ್ಲಿ ರಾಜಕೀಯ ಒತ್ತಡ, ಕಿರುಕುಳವನ್ನು ಸಹಿಸಿಕೊಂಡು 35 ವರ್ಷಗಳ ಸೇವೆ ಮಾಡಿದ ಕಿರಣ್‌ ಅವರು 2011ರಲ್ಲಿ ಸ್ವಯಂ ನಿವೃತ್ತಿ ಪಡೆದು ಎನ್‌ಜಿಒಗಳ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡರು. ಅದೇ ಸಮಯಕ್ಕೆ ಕೇಜ್ರಿವಾಲರ ಕೋರಿಕೆಯಂತೆ, ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ‘ಜನ ಲೋಕಪಾಲ್‌ ಕಾಯ್ದೆ’ಗಾಗಿನ ಹೋರಾಟದಲ್ಲಿ ತೊಡಗಿಸಿಕೊಂಡರು. ಬಳಿಕ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟರು. ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ಕಿರಣ್‌ ಬೇಡಿ ಅವರು ಮುಂದೆ ದಿಲ್ಲಿ ಚುನಾವಣೆಯಲ್ಲಿ ಸೋತರು. ಬಳಿಕ ಅವರನ್ನು ಪುದುಚೇರಿಯ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಗೌರವಾನ್ವಿತ ರಾಜ್ಯಪಾಲರ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ಎಲ್ಲರ ಮುಂದೆ ಸೈ ಎನಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next