Advertisement

ಯಾರನ್ನು, ಹೇಗೆ ನಂಬಬೇಕು?

06:56 PM Apr 22, 2019 | mahesh |

ಆಕಸ್ಮಿಕವಾಗಿ ಪರಿಚಯ ಆಗುತ್ತೆ. ನಾವು ಅವರನ್ನು ವಿನಾಕಾರಣ ತುಂಬಾ ಹಚ್ಚಿಕೊಳ್ತೀವಿ. ಅವರು ಬಿಟ್ಟು ಹೋದಾಗ, ತುಂಬಾ ದುಃಖ ಆಗುತ್ತೆ. ಆದರೆ, ಆ ದುಃಖದಲ್ಲಿ ಅವರಿಗಿಂತಲೂ ಹೆಚ್ಚು ನಮ್ಮದೇ ಪಾಲಿದೆ ಎಂಬುದು ಮಾತ್ರ ಆ ಕ್ಷಣಕ್ಕೆ ಯಾರಿಗೂ ಗೊತ್ತಾಗಲ್ಲ…

Advertisement

ಕೆಲವೊಂದು ನಂಟೇ ಹಾಗೆ. ಆಕಸ್ಮಿಕವಾಗಿ ಪರಿಚಯ ಆಗುತ್ತೆ, ಬಹುಬೇಗನೆ ಆಪ್ತರಾಗ್ತಾರೆ, ಅಷ್ಟೇ ಬೇಗ ದೂರ ಆಗ್ತಾರೆ. ಅಲ್ಲಿಯವರೆಗೂ ಅವರೇ ನಮಗೆಲ್ಲಾ ಎಂದು ಅಂದುಕೊಂಡ ಭಾವನೆಗಳೆಲ್ಲವೂ ಕಣ್ಣೀರಿನ ಅಲೆಯಲ್ಲಿ ಕೊಚ್ಚಿ ಹೋಗುತ್ತವೆ. ಪ್ರತಿಯೊಬ್ಬರಿಗೂ ಇದು ಅನುಭವಕ್ಕೆ ಬಂದಿರುತ್ತೆ. ಅವರು ಬಿಟ್ಟುಹೋದಾಗ, ತುಂಬಾ ದುಃಖ ಆಗುತ್ತೆ. ಆದರೆ, ಆ ದುಃಖದಲ್ಲಿ ಅವರಿಗಿಂತಲೂ ಹೆಚ್ಚು ನಮ್ಮದೇ ಪಾಲಿದೆ ಎಂಬುದು ಮಾತ್ರ ಆ ಕ್ಷಣಕ್ಕೆ ಯಾರಿಗೂ ಗೊತ್ತಾಗಲ್ಲ.

ಅತಿಯಾಗಿ ನೆಚ್ಚಿಕೊಳ್ಳದಿರಿ…
ಆಕಸ್ಮಿಕವಾಗಿ ಪರಿಚಯವಾದ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದಿರಿ. ಜೀವನವೆಂಬ ಪಯಣದಲ್ಲಿ ಹಲವರು ಬರುತ್ತಾರೆ, ಬಂದಷ್ಟೇ ವೇಗದಲ್ಲಿ ಹಿಂದಿರುಗುತ್ತಾರೆ. ಬಾಳ ಪಯಣದಲ್ಲಿ ನಮ್ಮೊಂದಿಗೆ ಕೊನೆಯವರೆಗೂ ಇಂಥವರೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ, ಯಾರನ್ನೇ ಆದರೂ ಅತಿಯಾಗಿ ನೆಚ್ಚಿಕೊಳ್ಳಬಾರದು. ಅವರವರ ನಿಲ್ದಾಣಗಳು ಬಂದಾಗ ಅವರಿಳಿದು ಅವರ ಪಾಡಿಗೆ ಹೋಗುತ್ತಾರಷ್ಟೇ.

ತುಂಬಾ ಅವಲಂಬಿಸದಿರಿ…
ಯಾವುದೇ ವ್ಯಕ್ತಿಯನ್ನಾದರೂ ಸರಿ, ನಮಗವರು ತುಂಬಾ ಅಚ್ಚುಮೆಚ್ಚು ಎಂಬ ಕಾರಣಕ್ಕಾಗಿ ಎಲ್ಲದಕ್ಕೂ ಅವರನ್ನು ಅವಲಂಬಿಸುವುದು ಸರಿಯಲ್ಲ. ಕೆಲವು ಸಲವಂತೂ ಇದು ಮಿತಿ ಮೀರಿ ಸಣ್ಣ ಸಣ್ಣ ನಿರ್ಧಾರಗಳಿಗೂ ನೆಚ್ಚಿಕೊಂಡವರನ್ನು ಅತಿಯಾಗಿ ಅವಲಂಬಿಸಿರುತ್ತೇವೆ. ಅವರು ಹೇಳುವ ನಿರ್ಧಾರಗಳೇ ಅಂತಿಮ ಎಂಬಂತೆ ನಂಬಿರುತ್ತೇವೆ. ಇದು ಕೆಲವೊಮ್ಮೆ ಅವರಿಗೂ ಕಿರಿಕಿರಿ ಸೃಷ್ಟಿಸಬಹುದು. ನಮ್ಮವರೇ ಆಗಿದ್ದರೆ, ಅದೇನೋ ನಡೆಯುತ್ತೆ. ಆದರೆ, ಅವರೇನಾದರೂ ದೂರವಾಗಿಬಿಟ್ಟರೆ, ಸಣ್ಣ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದಿಕ್ಕೇ ತೋಚದಂತಾಗುತ್ತೆ.

ಭಾವನೆಗಳ ಮೇಲೆ ನಿಯಂತ್ರಣವಿರಲಿ…
ಮನುಷ್ಯನ ಮನಸ್ಸೇ ಹಾಗೆ. ತುಂಬಾ ಆಪ್ತರೆನಿಸಿಕೊಂಡವರಲ್ಲಿ ಪ್ರತಿಯೊಂದನ್ನೂ ಹೇಳಿಕೊಂಡು ಭಾವುಕರಾಗುತ್ತೇವೆ. ಇದನ್ನು ಆದಷ್ಟು ಕಡಿಮೆಮಾಡಿ. ನಿಜ, ಮನುಷ್ಯ ಅಂದಮೇಲೆ ಭಾವನೆಗಳನ್ನು ಹಂಚಿಕೊಳ್ಳೋದು ಸಹಜ. ಹಾಗಂದ ಮಾತ್ರಕ್ಕೆ ಎಲ್ಲವನ್ನೂ ಹೇಳಿಕೊಂಡು ಮನಸ್ಸನ್ನು ನಿರಾಳ ಮಾಡಿಕೊಳ್ಳುವುದು ಎಷ್ಟು ಸರಿ. ಈಗೇನೋ ಅವರು ನಮ್ಮ ಭಾವನೆಗಳಿಗೆ ಸ್ಪಂದಿಸಬಹುದು. ಆದರೆ, ಅವರಿಲ್ಲದೇ ಹೋದಾಗ ನಮ್ಮ ಭಾವನೆಗಳನ್ನು ಯಾರೊಂದಿಗೆ ಹೇಳಿಕೊಳ್ಳುವುದು ಎಂದು ಹಳಿದುಕೊಳ್ಳುವುದಕ್ಕಿಂತಲೂ, ಆದಷ್ಟೂ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ.

Advertisement

ಸಮಯ ತೆಗೆದುಕೊಳ್ಳಿ…
ಭಾವನೆಗಳೊಂದಿಗೆ ಜೀವಿಸುವುದು ತುಂಬಾ ಕಷ್ಟ. ಇದು ಮನಸ್ಸಿಗೆ ಸಂಬಂಧಿಸಿದ ವಿಷಯ. ಹಾಗಾಗಿ, ಇಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ನಿಷಿದ್ಧವಾದುದ್ದು. ಯಾರು ಬೇಕಾದರೂ ಇಲ್ಲಿ ಬಂದು ಸ್ಥಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಯಾರಾದರೊಬ್ಬರನ್ನು ಆಪ್ತರೆಂದು ಇಷ್ಟಪಟ್ಟು, ಅವರಲ್ಲಿ ತಮ್ಮ ಭಾವನೆಗಳನ್ನೆಲ್ಲಾ ಹೇಳಿಕೊಳ್ಳುವುದಕ್ಕೂ ಮೊದಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಿ. ಅವರಾರು? ಅವರು ನಿಮಗೆ ನೀಡಿರುವ ಸ್ಥಾನವೇನು? ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವರು ಸೂಕ್ತರೇ? ಅವರು ನಮ್ಮ ನಂಬಿಕೆಗೆ ಅರ್ಹರೇ? ಹೀಗೆ ನಿಮ್ಮನ್ನು ನೀವೇ ಕೇಳಿಕೊಳ್ಳಿ. ಉತ್ತರ ಪಾಸಿಟಿವ್‌ ಇದ್ದರಷ್ಟೇ, ಅವರನ್ನು ನಂಬಿ.

ಅತಿಯಾದ ನಿರೀಕ್ಷೆ ಏತಕೆ?
ಯಾರೊಂದಿಗೇ ಆದರೂ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದಿರಿ. ಕಾರಣ, ಜೀವನದಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಆಪ್ತರಿರುವವರು ದೂರವಾಗಬಹುದು, ಅದೆಲ್ಲೋ ದೂರವಿದ್ದವರು ಆಪ್ತರಾಗಬಹುದು. ಯಾವಾಗಲೂ ಎಲ್ಲರೂ ಒಂದೇ ರೀತಿ ಇರಬೇಕೆಂದಿಲ್ಲ. ಹಾಗಾಗಿ, ನೀವು ಎಲ್ಲದಕ್ಕೂ ಸಿದ್ಧರಾಗಿರಿ. ಸಿಹಿ ಆಗಿರಬಹುದು ಕಹಿ ಆಗಿರಬಹುದು, ಎಲ್ಲದನ್ನೂ ಸಮಾನಮನಸ್ಕರಾಗಿ ಸ್ವೀಕರಿಸುವಂಥ ಗುಣವನ್ನು ಬೆಳೆಸಿಕೊಳ್ಳಿ.

ಆಲೋಚನೆ ಬದಲಿಸಿಕೊಳ್ಳಿ…
ಪ್ರತಿಬಾರಿಯೂ ಭಾವನೆಗಳ ಕಾರಣದಿಂದಲೇ ಅತಿಯಾಗಿ ನೋವುಂಡವರು ನೀವಾಗಿದ್ದರೆ, ಈ ಬಾರಿ ಅದಕ್ಕೊಂದು ಪೂರ್ಣ ವಿರಾಮವನ್ನಿಡಿ. ನಂತರ ಭಾವನೆಗಳ ಕುರಿತಾದ ನಿಮ್ಮ ಆಲೋಚನಾ ಲಹರಿಯನ್ನೊಮ್ಮೆ ಬದಲಾಯಿಸಿಕೊಳ್ಳಿ. ನೀವು ಎಲ್ಲೆಲ್ಲಿ ನೋವನ್ನು ಅನುಭವಿಸಿದ್ದೀರೋ ಅತ್ತ ಒಮ್ಮೆ ಮನಸ್ಸನ್ನು ಹೊರಳಿಸಿ, ಅಲ್ಲಿ ನೀವು ಮಾಡಿದ ತಪ್ಪನ್ನೊಮ್ಮೆ ತಿದ್ದಿಕೊಳ್ಳಿ. ಕಾರಣ, ಈಗ ತಪ್ಪನ್ನು ತಿದ್ದಿಕೊಂಡರೆ ಮುಂದೊಂದು ದಿನ ತಪ್ಪುಗಳೇ ಇರದು.

ಹೆಚ್ಚು ಜನರೊಂದಿಗೆ ಬೆರೆಯಿರಿ…
ಕೇವಲ ಒಬ್ಬರನ್ನಷ್ಟೇ ನೆಚ್ಚಿಕೊಂಡು ಅವರನ್ನಷ್ಟೇ ಅವಲಂಬಿಸಿದಾಗ, ನೆಮ್ಮದಿಗೆ ದಕ್ಕೆಯುಂಟಾಗುವುದು ಸಹಜ. ಇದೇ ಕಾರಣಕ್ಕಾಗಿ ಹೆಚ್ಚು ಹೆಚ್ಚು ಜನರೊಂದಿಗೆ ಸಾಮಾಜಿಕವಾಗಿ ಬೆರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ತುಂಬಾ ಜನರೊಂದಿಗೆ ಬೆರೆದಾಗ ಮನಸ್ಸು ಒಂದು ರೀತಿಯಲ್ಲಿ ಹಗುರವಾಗುತ್ತೆ. ಯಾವುದೇ ದುಃಖವೂ ಆ ಬೆರೆಯುವಿಕೆಯಲ್ಲಿ ಕರಗಿಹೋಗುತ್ತೆ.

ಆಗೋದೆಲ್ಲ ಒಳ್ಳೆಯದಕ್ಕೆ…
ಹಿರಿಯರು ಹೇಳಿದಂತೆ ಆಗಿರೋದೆಲ್ಲವೂ ಒಳ್ಳೆಯದಕ್ಕಾಗಿ, ಆಗ್ತಿರೋದೆಲ್ಲವೂ ಒಳ್ಳೆಯದಕ್ಕಾಗಿ ಮತ್ತು ಮುಂದೆ ಆಗೋದೆಲ್ಲವೂ ಒಳ್ಳೆಯದಕ್ಕಾಗಿ ಎಂಬ ಮನೋಭಾವ ಬೆಳೆಸಿಕೊಳ್ಳಿ. ಯಾವುದೇ ವಿಚಾರವಾದರೂ ಸರಿ, ಅಥವಾ ಯಾರದೇ ವಿಚಾರವಾದರೂ ಸರಿ. ಸದಾ ಧನಾತ್ಮಕವಾಗಿ ಯೋಚಿಸುವಂಥ ರೀತಿಯಲ್ಲಿ ಆಲೋಚನೆಗಳನ್ನು ಬೆಳೆಸಿಕೊಳ್ಳಿ. ಭಾವನೆಗಳನ್ನೂ ಸೇರಿಸಿ, ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಯಾರಾದರೂ ನಮ್ಮ ಜೀವನದಿಂದ ಇದ್ದಕ್ಕಿದ್ದಂತೆ ಹೋದರೆ, ಅವರಿಗಿಂತಲೂ ಒಳ್ಳೆಯವರಾರೋ ನಮ್ಮ ಬದುಕಿಗೆ ಬರಲಿದ್ದಾರೆ. ಹಾಗಾಗಿ, ಇವರು ಹೋಗಿದ್ದಾರೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಿ.

ಅಭಿಷೇಕ್‌ ಎಂ. ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next