Advertisement

ಕಲೆ-ಸಾಹಿತ್ಯ ಸಂರಕ್ಷಣೆಗೆ ದಾಖಲಾತಿ ಅಗತ್ಯ

12:09 PM Dec 14, 2018 | Team Udayavani |

ಬೀದರ: ಜನಪದ ಕಲೆ ಹಾಗೂ ಸಾಹಿತ್ಯ ಸಂರಕ್ಷಣೆಗೆ ದಾಖಲಾತಿ ಅಗತ್ಯವಾಗಿದೆ. ಜಾತಿ, ಭೇದ, ಪಂಥ ಹಾಗೂ ಪಂಗಡಗಳನ್ನು ಬದಿಗಿರಿಸಿ ಸರ್ವರನ್ನು ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕರ್ನಾಟಕ ಪಶುಪಾಲನೆ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಡಿ. ನಾರಾಯಣಸ್ವಾಮಿ ಹೇಳಿದರು.

Advertisement

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಅನುದಾನಕ್ಕೆ ಆಯ್ಕೆಯಾಗಿ ಪ್ರಕಟಗೊಂಡ ಎಸ್‌.ಬಿ. ಕುಚಬಾಳ ಅವರು
ರಚಿಸಿದ “ತಿಳಿದು ನಡೀರಿ ಇನ್ನ’ ಎಂಬ ತತ್ವಾಧಾರಿತ ಕವನ ಸಂಕಲನ ಲೋಕಾರ್ಪಣೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಸಾಹಿತ್ಯ ಇಡೀ ದೇಶಕ್ಕೆ ತನ್ನದೆ ಆದ ಕೊಡುಗೆ ನೀಡಿದೆ. ಇಲ್ಲಿ ಎಂಟು ಜನ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದರಿಂದ ಕನ್ನಡ ಅತ್ಯಂತ ಶ್ರೀಮಂತವಾಗಿದೆ ಎಂದರು.

ಇಂದು ಅನೇಕ ಸಾಹಿತ್ಯದ ತುಣುಕುಗಳನ್ನು ವಾಟ್ಸಪ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ಸಹಕಾಣುತ್ತೇವೆ. ಆದರೆ ಅದು ಉಪಯೋಗಕ್ಕಿಂತ ದುರುಪಯೋಗಕ್ಕೆ ಹೆಚ್ಚು ಇಂಬು ನೀಡುತ್ತಿದೆ. ಒಟ್ಟಾರೆ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ವ್ಯಾಪಕವಾಗಿ ಬೆಳೆಯಲು ಯುವ ಸಾಹಿತಿಗಳು ಹೆಚ್ಚೆಚ್ಚು ಹೊರ ಬರಬೇಕು ಎಂದರು.

ಅನುಭವದ ಆಧಾರದಲ್ಲಿ ಸಾಹಿತ್ಯ ರಚನೆಗೊಂಡಲ್ಲಿ ಅದು ಗಟ್ಟಿ ಸಾಹಿತ್ಯವಾಗುತ್ತದೆ. ಪ್ರತಿಯೊಬ್ಬರು ಬಾಲ್ಯದಿಂದಲೇ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು. ಭಾವಿ ಪೀಳಿಗೆಗೆ ಸಾಹಿತ್ಯದ ರುಚಿ ತೋರಲು ಅದನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸಮಾಜದಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಬೇಕು. ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಜೀವಿಸಬೇಕು. ಒಂದಲ್ಲೊಂದು ಕಲೆ ಕರಗತ ಮಾಡಿಕೊಂಡಲ್ಲಿ ಸಮಾಜಮುಖೀಯಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದರು. 

Advertisement

ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯೆ ಜಯದೇವಿ ಗಾಯಕವಾಡ “ತಿಳಿದು ನಡಿರಿ ಇನ್ನ’ ಪುಸ್ತಕ ಕುರಿತು ಮಾತನಾಡಿ, ಈ ವರ್ಷ ಕರ್ನಾಟಕ ಪುಸ್ತಕ ಪ್ರಾ ಧಿಕಾರಕ್ಕೆ ದಲಿತ ಸಾಹಿತ್ಯ ಯೋಜನೆರಯಡಿ 250 ಪುಸ್ತಕಗಳು ದಾಖಲಾಗಿದ್ದವು. ಆದರೆ ಪ್ರಾಧಿಕಾರ ಕೇವಲ 50 ಪುಸ್ತಕಗಳನ್ನು ಆಯ್ಕೆ ಮಾಡಿದೆ.

ಅದರಲ್ಲಿ 20 ಪುಸ್ತಕಗಳು ಹೈದ್ರಾಬಾದ್‌ ಕರ್ನಾಟಕಕ್ಕೆ ಸಂಬಂಧಿಸಿದ್ದಾಗಿದ್ದರಿಂದಲೇ ಈ ಭಾಗದ ಸಾಹಿತ್ಯಲೋಕ ಶ್ರೀಮಂತಗೊಳ್ಳಲು ಕಾರಣವಾಗಿದೆ. ಬೀದರ್‌ ಜಿಲ್ಲೆಯಿಂದ ಕುಚಬಾಳ ಅವರು ಬರೆದ “ತಿಳಿದು ನಡಿರಿ ಇನ್ನ’ ಹಾಗೂ ಈಶ್ವರ ತಡೋಳಾ ಅವರು ಬರೆದ “ಸಮತೆಯ ಹಾಡು’ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ತಜ್ಞ ಸಮಿತಿ ಸದಸ್ಯ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಸಾಹಿತ್ಯ ರಚನೆ ಹಾಗೂ ಪುಸ್ತಕ ಓದುವಿಕೆಯಿಂದ ಜ್ಞಾನ ವಿಕಾಸವಾಗುತ್ತದೆ. ಇಲ್ಲಿಯ ಪಶು ವಿಶ್ವವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಹಾಗೂ ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. 

ಹಿರೇಮಠ ಸಂಸ್ಥಾನದ ಡಾ| ರಾಜಶೇಖರ ಶಿವಾಚಾರ್ಯರು, ಪರಿಷತ್‌ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ, ಎಸ್‌.ಬಿ. ಕುಚಬಾಳ, ಲುಂಬಿಣಿ ಗೌತಮ, ಪ್ರೊ| ಎಸ್‌.ಬಿ. ಬಿರಾದಾರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಡಾ| ಧನಲಕ್ಷ್ಮೀ ಪಾಟೀಲ, ರಮೇಶ ಕೊಳಾರ, ಲಕ್ಷ್ಮಣರಾವ್‌ ಕಾಂಚೆ, ವೀರಣ್ಣ ಕುಂಬಾರ, ನಿಜಲಿಂಗಪ್ಪ ತಗಾರೆ, ಸುನಿತಾ ಕುಡ್ಲಿಕರ್‌, ಪ್ರಕಾಶ ಕನ್ನಾಳೆ ಇನ್ನಿತರರು ಇದ್ದರು. ಅಖೀಲ ಭಾರತ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ತು ನವದೆಹಲಿ, ಕರ್ನಾಟಕ ಸಾಹಿತ್ಯ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next