Advertisement

ಕಲೆ ಅಂತರಂಗದ ಆರೋಗ್ಯ ಕಾಪಾಡುವ ಸಾಧನ

10:16 PM Feb 05, 2020 | mahesh |

ಉಡುಪಿಯ ಯು. ರಮೇಶ್‌ರಾವ್‌ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು. ಇತ್ತೀಚೆಗೆಷ್ಟೇ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಸಂದಿರುವುದು ವಿಶೇಷ. ತಮ್ಮ ಹೊಸತನದ ತುಡಿತ ವನ್ನು ಪ್ರಯತ್ನಿಸುತ್ತಾ ಸಮಕಾಲೀನ ಕಲೆಯ ಮೂಲಕ ಗುರುತಿಸಿ ಕೊಂಡವರು. ಕಲೆಯೆಂಬುದು ಅಂತರಂಗ ವನ್ನು ಸದಾ ಆರೋಗ್ಯಕರ ವಾಗಿ ಇಟ್ಟು ಕೊಳ್ಳಲು ಇರುವ ಒಂದು ಸಾಧನ ಎಂಬುದು ಅವರ ನಂಬಿಕೆ. ಸುದಿನದ ಮಾತು ಮಂದಾರ ಅಂಕಣದೊಂದಿಗೆ ಮಾತನಾಡಿದ್ದಾರೆ ಅವರು.

Advertisement

 ಹೊಸ ಕಲಾವಿದರಿಗೆ, ಚಟುವಟಿಕೆಗಳಿಗೆ ಸ್ಪಂದನೆ ಹೇಗೆ ಇದೆ?
ಅದೂ ಸಹ ಪರವಾಗಿಲ್ಲ. 1980ರ ಬಳಿಕ ಬಹಳಷ್ಟು ಬದಲಾವಣೆಯಾಗಿದೆ. ಯಾವುದೇ ಕಲೆ ಇರಲಿ, ಅದು ಚಿತ್ರಕಲೆಯಷ್ಟೇ ಅಲ್ಲ; ಲಲಿತಕಲೆ ಇರಬಹುದು. ಅದು ಬೆಳೆಯಲು ಜನರ ಸ್ಪಂದನೆ ತೀರಾ ಅವಶ್ಯ. ನಾವೂ ಸಂಘಟನೆಗಳು ಮತ್ತು ಕಲಾವಿದರೂ ಸಹ ಎಡವುತ್ತೇವೆ. ಜನರಿಗೆ ಒಮ್ಮೆಲೆ ಕಲೆಯ ಮೇಲೆ ಆಸಕ್ತಿ ಮೂಡುವುದಿಲ್ಲ. ಹಾಗೆಯೇ ಕಲಾಸಕ್ತರೂ ಒಮ್ಮೆಲೆ ಕಲಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಒಪ್ಪಿ ಬಿಡುವುದಿಲ್ಲ. ಅಂಥ ಸಂದರ್ಭದಲ್ಲಿ ನಾವೂ ಹಲವು ಬಾರಿ ಕಲಾಸಕ್ತರನ್ನು ಭೇಟಿ ಮಾಡಿ, ಅವರಲ್ಲೂ ಒಂದು ಪ್ರೋತ್ಸಾಹಿಸುವಂಥ ಅಭಿರುಚಿಯನ್ನು ಹೆಚ್ಚಿಸಬೇಕು. ಇದರರ್ಥ ಅವರಲ್ಲಿ ಅಭಿರುಚಿಯ ಕಿಡಿ ಇರುತ್ತದೆ, ಅದನ್ನು ದೊಡ್ಡದು ಮಾಡಬೇಕು. ಅದಕ್ಕೆ ನಮಗೂ ಸಹನೆ ಇರಬೇಕು. ಸತತವಾಗಿ ಪ್ರಯತ್ನಿಸಿದರೆ ಅವರು ನಮಗೆ ಸಹಕರಿಸುತ್ತಾರೆ. ಒಮ್ಮೆ ಅವರ ಸಹಕಾರ ಆರಂಭವಾದರೆ ಮತ್ತೆ ನಿಲ್ಲುವು ದಿಲ್ಲ. ಒಬ್ಬ ಕಲಾವಿದ ಅಥವಾ ಒಂದು ಸಂಘಟನೆಯಿಂದ ಏನೂ ಆಗದು. ಕಲಾಸಕ್ತರ ಪ್ರೋತ್ಸಾಹ ಬೇಕೇ ಬೇಕು. ಇದೇ ಸಂದರ್ಭದಲ್ಲಿ ಕಲಾ ಸಂಘಟನೆ ಗಳ ಮುನ್ನಡೆಸುವವರೂ ಬೇಕು.

 ಕಲೆಯನ್ನು ಪಸರಿಸಲು ಏನುಮಾಡಬೇಕು?
ಬಹಳ ವರ್ಷಗಳಿಂದ ಆಗ್ರಹಿಸುತ್ತಿರುವಂತೆ ಕಲಾ ಶಿಕ್ಷಕರ ನೇಮಕ ಸಾಧ್ಯವಾಗಬೇಕು. ಇಂದಿಗೂ ನಮ್ಮ ಶಾಲೆಗಳಲ್ಲಿ ಕಲಾ ಶಿಕ್ಷಕರು ಇಲ್ಲ. ಎಲ್ಲೋ ಕೆಲವೆಡೆ ಇರಬಹುದು. ಅದರೆ ಎಲ್ಲಾ ಕಡೆ ಇಲ್ಲ. ಮಕ್ಕಳಿಗೆ ಕಲಾಭಿರುಚಿ ಬೆಳೆಸುವ ವಯಸ್ಸಿನಲ್ಲಿ ಏನಾದರೂ ಮಾಡಬೇಕು. ಅದು ಸಾಧ್ಯವಾಗುತ್ತಿಲ್ಲ.

 ಬೇರೆ ಮಾರ್ಗಗಳು ಇವೆಯೇ?
ಒಂದು ಮಕ್ಕಳಿಗೆ ಕಲಾಭಿರುಚಿ ಬೆಳೆಸುವುದು. ಮತ್ತೂಂದು- ಜನರಲ್ಲಿ ಕಲಾಭಿರುಚಿ ಬೆಳೆಸಬೇಕು. ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ ಎರಡು ಕಲಾಕೃತಿಗಳು ಇಟ್ಟುಕೊಳ್ಳುವಂತಾಗಬೇಕು. ಅದು ಬರೀ ಚಿತ್ರಕೃತಿಯೆಂದೇ ಅಲ್ಲ, ಶಿಲ್ಪ ಕೃತಿ ಇರಬಹುದು..ಏನೂ ಆಗಬಹುದು. ಒಬ್ಬ ಕಲಾವಿದನ ಹೊಸ ಬೆಳಕಿನಲ್ಲಿ ಮೂಡಿದ ದೇವರ ಚಿತ್ರವೂ ಒಂದು ಕಲಾಕೃತಿ. ಅಂಥದೊಂದು ಪ್ರೇರಣೆಯನ್ನು ಮೂಡಿಸಲು ನಮ್ಮಿಂದ ಸಾಧ್ಯವಾಗಬೇಕು. ಸೌಂದರ್ಯ ಪ್ರಜೆ ಇರುವ ಪ್ರತಿಯೊಬ್ಬರ ಮನೆಯಲ್ಲೂ ಇದು ಸಾಧ್ಯ. ಅದರರ್ಥ ಸೌಂದರ್ಯ ಪ್ರಜ್ಞೆ ಕೆಲವರಿಗಷ್ಟೇ ಇರುತ್ತದೆಂದಲ್ಲ; ನಾವೂ ಎಲ್ಲರಲ್ಲೂ ಮೂಡಿಸಲು ಪ್ರಯತ್ನಿಸಬೇಕು.

 ಕಲಾಕೃತಿ ಎಂಬುದು ಯಾವಾಗ ಇಷ್ಟವಾಗುತ್ತದೆ?
ಯಾವಾಗ ಅದರಲ್ಲಿ ಹೊಸತನವಿರುತ್ತದೋ ಆಗ ಎಲ್ಲರಿಗೂ ರುಚಿಸುತ್ತದೆ. ಅದು ದೇವರ ಕಲಾಕೃತಿ ಇರಲಿ, ಪ್ರಾಣಿ ಚಿತ್ರವಿರಲಿ, ಪ್ರಕೃತಿ ಇರಲಿ..ಯಾವುದೇ ಇದ್ದರೂ ಅದರಲ್ಲಿ ಹೊಸತನ ಇರಬೇಕು. ಹೊಸ ದೃಷ್ಟಿ ಇರಬೇಕು. ಯಾರಿಗೇ ಆಗಲಿ ಕುತೂಹಲ ಮೂಡಬೇಕಾದರೆ ಹೊಸತನ ಇರಲೇಬೇಕು. ಉದಾಹರಣೆಗೆ ರವಿವರ್ಮನ ಕಲಾಕೃತಿಯನ್ನೇ ಮತ್ತೂಬ್ಬ ಬಿಡಿಸಿದರೆ ಅದರಲ್ಲಿ ಹೊಸತನ ಏನು? ಅದು ಹೇಗೆ ಹೊಸತನ? ಹಾಗಾಗಿ, ಹೊಸತನವಿದ್ದರೆ ಆ ಕಲಾಕೃತಿ ಎಲ್ಲರಿಗೂ ಇಷ್ಟವಾಗುತ್ತದೆ.

Advertisement

 ಒಂದು ಕಲಾಕೃತಿಯಲ್ಲಿ ಪರಿಪೂರ್ಣತೆ ಎಂಬುದು ಇದೆಯೇ?
ನನ್ನ ದೃಷ್ಟಿಯಲ್ಲಿ ಇಲ್ಲ. ಒಬ್ಬ ಕಲಾವಿದ ಬಿಡಿಸುವ ಚಿತ್ರ ಅದು ಅವನ ಅನುಭವದಲ್ಲಿ ಸಿಕ್ಕದ್ದರ ಅಭಿವ್ಯಕ್ತಿಯೇ ಹೊರತು ಅದು ಎಲ್ಲರ ಅಭಿವ್ಯಕ್ತಿಯಲ್ಲ. ಅವನು ಕಂಡ ಭಾವವನ್ನು ಬಿಡಿಸುತ್ತಾನೆ ; ಅದು ಉಳಿದವರಿಗೆ ಬೇರೆ ಬಗೆಯಲ್ಲೇ ತೋರಬಹುದು, ಅರ್ಥೈಸಬಹುದು. ಹಾಗಾಗಿ ಒಬ್ಬ ಕಲಾವಿದನ ಅಭಿವ್ಯಕ್ತಿ ಸಾಮೂಹಿಕ ಅಭಿವ್ಯಕ್ತಿಯಾಗದ ಕಾರಣ ಪರಿಪೂರ್ಣತೆ ಇರಲು ಸಾಧ್ಯವಿಲ್ಲ. ಜತೆಗೆ ನನ್ನ ದೃಷ್ಟಿಯಲ್ಲಿ ಪರಿಪೂರ್ಣತೆ ಎಂಬುದೂ ಇರಬಾರದು.

Advertisement

Udayavani is now on Telegram. Click here to join our channel and stay updated with the latest news.

Next