Advertisement

ಸೈಬರ್‌ ಉಗ್ರ ಗುಲಾಮಾ ಸೆರೆ

10:15 AM Jan 25, 2020 | Team Udayavani |

ಇಸ್ರೋ ಕಾರ್ಟೊಸ್ಯಾಟ್‌ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸಿದ್ದ
3000 ಬ್ಯಾಂಕ್‌ ಖಾತೆ, ಸರಕಾರದ ವಿವಿಧ ವೆಬ್‌ಸೈಟ್‌ಗಳ ವಿವರ ಪತ್ತೆ

Advertisement

ಬೆಂಗಳೂರು: ಬಾಂಬ್‌ ತಯಾರಿಕೆ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಉಗ್ರ ಸಂಘಟನೆಗಳು ಈಗ ಸೈಬರ್‌ ಕ್ರೈಂ ಮೂಲಕ ದೇಶವನ್ನು ತಮ್ಮ ಹಿಡಿತಕ್ಕೆ ಪಡೆಯಲು ಹವಣಿಸುತ್ತಿವೆ. ರೈಲ್ವೇ ಟಿಕೆಟ್‌ ವಂಚನೆ ಪ್ರಕರಣದಲ್ಲಿ ರೈಲ್ವೇ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.

ಝಾರ್ಖಂಡ್‌ ಮೂಲದ ಗುಲಾಮಾ ಮುಸ್ತಫಾ (35)ನನ್ನು ರಾಜಗೋಪಾಲನಗರ ಪೊಲೀಸರು ಹತ್ತು ದಿನಗಳ ಕಾಲ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. 2019ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ತನಿಖೆ ವೇಳೆ ಆರೋಪಿ ರೈಲ್ವೇ ಸಂರಕ್ಷಣ ಪಡೆ (ಆರ್‌ಪಿಎಫ್) ಬಲೆಗೆ ಜ.8ರಂದು ಬಿದ್ದಿದ್ದು, ಭಯೋತ್ಪಾದನೆ ಕೃತ್ಯಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ಈತನ ಡಿಜಿಟಿಲ್‌ “ಫ‌ೂಟ್‌ ಪ್ರಿಂಟ್‌’ಗಳನ್ನು ಗಮನಿಸಿದಾಗ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿರುವುದು ಗೊತ್ತಾಗಿದೆ. ಅಲ್ಲದೆ ಈತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಒಡಿಶಾದ ಕೇಂದ್ರ ಪಡಾ ಜಿಲ್ಲೆಯಲ್ಲಿರುವ ವಿಧ್ವಂಸಕ ಕೃತ್ಯ ಎಸಗುವ ಕೆಲವು ವ್ಯಕ್ತಿಗಳ ಜತೆ ನೇರ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

3,000ಕ್ಕೂ ಅಧಿಕ ಬ್ಯಾಂಕ್‌ ಖಾತೆ
ಸೈಬರ್‌ ಟೆರರಿಸಂ ಮಾತ್ರವಲ್ಲದೆ, 3,000ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ತನ್ನೊಂದಿಗೆ ಇಟ್ಟುಕೊಂಡು, ವಂಚಿಸಿದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದ. ಆದರೆ ಮೂಲ ಖಾತೆದಾರರ ಮಾಹಿತಿ ಲಭ್ಯವಾಗಿಲ್ಲ. ಇದರೊಂದಿಗೆ ಈತ ಹತ್ತಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದು, ಹವಾಲ ದಂಧೆಯಲ್ಲಿ ಭಾಗಿಯಾಗಿದ್ದಾನೆ. ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಿಸಿಕೊಂಡು, ಈ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಸಮಾಜ ಘಾತಕ ವ್ಯಕ್ತಿಗಳಿಗೆ ಹಣದ ವ್ಯವಸ್ಥೆ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸೈಬರ್‌ ಭಯೋತ್ಪಾದನೆಗೆ ಸಂಚು
“ಡಾರ್ಕ್‌ನೆಟ್‌’ ಎಂಬ ಸಾಫ್ಟ್ವೇರ್‌ ಗುಲಾಮಾ ಬಳಿಯಿತ್ತು. ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟ ವೆಬ್‌ಸೈಟ್‌ಗಳ ವಿವರ, ಬ್ಯಾಂಕ್‌ ಖಾತೆಗಳ ವಿವರ, ಹಲವಾರು ಸಾಫ್ಟ್ವೇರ್‌ಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ. ಈ ಮೂಲಕ ದೇಶ ಮತ್ತು ವಿದೇಶಗಳ ಸರಕಾರಿ ಮತ್ತು ಖಾಸಗಿ ಸಾಫ್ಟ್ವೇರ್‌ಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಯತ್ನಿಸಿ “ಸೈಬರ್‌ ಟೆರರಿಸಂ’ಗೆ ಅಡಿಪಾಯ ಹಾಕುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.

ರೈಲ್ವೇ ಇಲಾಖೆಗೆ ವಂಚನೆ
2017ರ ಅಕ್ಟೋಬರ್‌ನಲ್ಲಿ ರೈಲ್ವೇ ಇಲಾಖೆಯಿಂದ ಆನ್‌ಲೈನ್‌ ಮೂಲಕ ಇ-ಟಿಕೆಟ್‌ಗಳನ್ನು ಕಾಯ್ದಿರಿಸಿಕೊಂಡು ಐಆರ್‌ಸಿಟಿಸಿ ಮಧ್ಯವರ್ತಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ತನ್ನ ಸಹಚರರ ಜತೆ ಸೇರಿಕೊಂಡು ಅನಧಿಕೃತ ಮತ್ತು ಅಕ್ರಮವಾಗಿ ರೈಲ್ವೇ ಇಲಾಖೆಗೆ ಸೇರಿದ “ಎಎನ್‌ಎಂಎಸ್‌’ ಸಾಫ್ಟ್ವೇರ್‌ ಹ್ಯಾಕ್‌ ಮಾಡಿಕೊಡು, ನಕಲಿ ಹೆಸರು ಮತ್ತು ವಿಳಾಸಗಳನ್ನು ನೀಡಿ 563ಕ್ಕೂ ಅಧಿಕ ನಕಲಿ ವೈಯಕ್ತಿಕ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಈ ಮೂಲಕ ಆನ್‌ಲೈನ್‌ ರೈಲ್ವೇ ಇ-ಟಿಕೆಟ್‌ಗಳನ್ನು ಕಾಯ್ದಿರಿಸಿಕೊಂಡು ನಕಲಿ ಪ್ರತಿ ತೆಗೆದುಕೊಂಡು ಮಾರಾಟ ಮಾಡುತ್ತಿದ್ದ. ಜತೆಗೆ ಎಎನ್‌ಎಂಎಸ್‌ ಸಾಫ್ಟ್ವೇರ್‌ ಅನ್ನೇ ಬಾಡಿಗೆ ನೀಡಿ ಅಕ್ರಮ ವ್ಯವಹಾರ ನಡೆಸಿ, ರೈಲ್ವೇ ಇಲಾಖೆಗೆ ಕೋಟ್ಯಂತರ ರೂ. ವಂಚಿಸಿರುವುದು ಗೊತ್ತಾಗಿದೆ.

ಬೆಂಗಳೂರಲ್ಲಿ ಎಲ್ಲಿದ್ದ?
ಆರೋಪಿ ನಕಲಿ ಹೆಸರು ಮತ್ತು ವಿಳಾಸಗಳನ್ನು ಉಲ್ಲೇಖೀಸಿ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡಿರುವುದು, ಝಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಾಗಿ ನಿಂದ ಯಾವ ಸ್ಥಳಗಳಲ್ಲಿ ವಾಸವಿದ್ದ. ಮನೆ ಮಾಲಕರು ಮತ್ತು ಆತನಿಗೆ ನೆರವಾದವರು ಯಾರು? ಅವರೆಲ್ಲರ ವಿಚಾರಣೆ ನಡೆಯ ಬೇಕು. ಕೃತ್ಯಕ್ಕೆ ಬಳಸಿರುವ ಸಾಧನಗಳನ್ನು ಜಪ್ತಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗು ತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಟೊಸ್ಯಾಟ್‌ ಮಾಹಿತಿ
ಗುಲಾಮಾ ಮುಸ್ತಫಾ ಭಾರತ ಸರಕಾರದ ವೆಬ್‌ಸೈಟ್‌ಗಳ ವಿವರ ಮತ್ತು ಇಸ್ರೋದ ಕಾರ್ಟೊಸ್ಯಾಟ್‌ನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಂಡಿದ್ದಾನೆ. ಈ ವಿಚಾರ ಅತ್ಯಂತ ಅಪಾಯಕಾರಿಯಾಗಿದ್ದು, ಈ ಎಲ್ಲ ಬೆಳವಣಿಗೆಗಳು ಆರೋಪಿ ಉಗ್ರ ಸಂಘಟನೆಗಳು ಹಾಗೂ ಅವುಗಳ ಸದಸ್ಯರ ಜತೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂಬುದಕ್ಕೆ ಬಲವಾದ ಪುಷ್ಟಿ ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ.

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next