Advertisement

ರಾಯಚೂರಲ್ಲಿ ಸೇನಾ ನೇಮಕಾತಿ ರ್ಯಾಲಿ

10:42 AM Dec 11, 2018 | Team Udayavani |

ರಾಯಚೂರು: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಡಿ.11ರಿಂದ 20ರವರೆಗೆ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಗೆ ಭರದ ಸಿದ್ಧತೆ ನಡೆದಿದೆ. ಈವರೆಗೆ ಆರು ಜಿಲ್ಲೆಗಳಿಂದ 37 ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕರ್ನಲ್‌ ಗ್ರೇಡ್‌ ಮಟ್ಟದ ಅಧಿಕಾರಿಗಳಿಂದ ಹಿಡಿದು ಸೈನಿಕ ಸಿಬ್ಬಂದಿವರೆಗೆ 100 ಜನರ ತಂಡ ಈಗಾಗಲೇ ಕೃಷಿ ವಿವಿಗೆ ಬಂದಿಳಿದಿದೆ. ಅವರ ಮಾರ್ಗದರ್ಶನದ ಮೇರೆಗೆ ಜಿಲ್ಲಾಡಳಿತ ಪರೀಕ್ಷೆಗಳಿಗೆ ಬೇಕಾದ ಸಿದ್ಧತೆ ಮಾಡಿಕೊಟ್ಟಿದೆ. ಮುಖ್ಯವಾಗಿ 1,600 ಮೀಟರ್‌ ಓಟಕ್ಕೆ ಕ್ರೀಡಾಂಗಣ ಸಿದ್ಧಗೊಳಿಸಲಾಗಿದೆ. ಅದರಲ್ಲಿ 5 ನಿಮಿಷ 30 ಸೆಕೆಂಡ್‌ನ‌ಲ್ಲಿ ಓಡುವವರನ್ನು ಕೆಟಗರಿ-1 ಮತ್ತು 5 ನಿಮಿಷ 45 ಸೆಕೆಂಡ್‌ನ‌ಲ್ಲಿ ಓಡುವವರನ್ನು ಕೆಟಗರಿ-2 ಎಂದು ವಿಂಗಡಿಸಲಾಗಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮುಂದೆ ಯಾವುದೇ ಪರೀಕ್ಷೆಗೂ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ. ವೈದ್ಯಕೀಯ ಪರೀಕ್ಷೆಗೂ ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 6:00ರಿಂದಲೇ ಪರೀಕ್ಷೆ ಶುರುವಾಗಲಿದೆ.

Advertisement

ಮೂರು ಪಟ್ಟು ಜಾಸ್ತಿ: 2017ರ ಅಕ್ಟೋಬರ್‌ನಲ್ಲಿ ಕಲಬುರಗಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಸಿದಾಗ ಜಿಲ್ಲೆಯಿಂದ ಕೇವಲ 600 ಜನ ಅಭ್ಯರ್ಥಿಗಳು ನೋಂದಣಿ ಮಾಡಿದ್ದರು. ಆದರೆ, ಈ ಬಾರಿ 1700 ಅಭ್ಯರ್ಥಿಗಳು ಜಿಲ್ಲೆಯವರೇ ನೋಂದಣಿ ಮಾಡಿದ್ದಾರೆ. ಈ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಜನವರಿ, ಫೆಬ್ರವರಿಯಲ್ಲಿ ಲಿಖೀತ ಪರೀಕ್ಷೆ ನಡೆಯಲಿದೆ.

ಜಿಲ್ಲಾಡಳಿತದಿಂದ ಸಿದ್ಧತೆ: ಸೇನಾ ನೇಮಕಾತಿ ರ್ಯಾಲಿಗೆ ಬೇಕಾದ ಕ್ರೀಡಾಂಗಣ ಸಿದ್ಧತೆ, ಸಿಬ್ಬಂದಿಗೆ ವಸತಿ, ಊಟೋಪಚಾರಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿರುವ ಹಿನ್ನೆಲೆಯಲ್ಲಿ ಆದ್ಯತಾಧಾರದ ಮೇಲೆ ಪರೀಕ್ಷೆಗೆ ಅಭ್ಯರ್ಥಿಗಳನ್ನು ಕರೆಯಲಾಗುತ್ತಿದೆ. ಹೀಗಾಗಿ ನಿತ್ಯ ಮೂರರಿಂದ ಮೂರುವರೆ ಸಾವಿರ ಅಭ್ಯರ್ಥಿಗಳು ಪರೀಕ್ಷೆ ಎದುರಿಸುವ ಸಾಧ್ಯತೆಗಳಿವೆ. ಆದರೆ, ಅಭ್ಯರ್ಥಿಗಳು ಒಂದೇ ದಿನ ಬಂದು ಹೋಗುವ ಕಾರಣ ಅವರಿಗೆ ವಸತಿಗೆ ಸೌಲಭ್ಯ ಕಲ್ಪಿಸಿಲ್ಲ. ಕೇವಲ ತಾತ್ಕಾಲಿಕ ಶೌಚಗೃಹಗಳನ್ನು ಮಾತ್ರ ನಿರ್ಮಿಸಲಾಗಿದೆ.

ಜಿಲ್ಲಾಡಳಿತ ನಮ್ಮ ನಿರೀಕ್ಷೆಗೆ ತಕ್ಕಂತೆ ಕ್ರೀಡಾಂಗಣ ನಿರ್ಮಿಸಿಕೊಟ್ಟಿದೆ. ಎಲ್ಲ ವ್ಯವಸ್ಥೆಗಳು ಸುಸಜ್ಜಿತ ರೀತಿಯಲ್ಲಿ ಮಾಡಲಾಗಿದೆ. ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಬೇಕು ಎಂಬ ಕಾರಣಕ್ಕೆ ಆನ್‌ಲೈನ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಕೆಲ ಮಧ್ಯವರ್ತಿಗಳು ಹಣ ಪಡೆದು ಕೆಲಸ ಮಾಡಿಕೊಡುವ ಆಮಿಷ ತೋರಿಸುತ್ತಾರೆ. ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಅಂಥ ವಂಚನೆಗೆ ಬಲಿಯಾಗಬಾರದು. ಅರ್ಹತೆ ಇದ್ದವರು ಖಂಡಿತ ಆಯ್ಕೆಯಾಗುತ್ತಾರೆ.
 ಪಿ.ದಂಗವಲ್‌, ಸೇನಾ ನೇಮಕಾತಿ ರ್ಯಾಲಿ ನಿರ್ದೇಶಕ

ಉಚಿತ ಊಟದ ವ್ಯವಸ್ಥೆ
ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ಡಿ.11ರಿಂದ 20ರವರೆಗೆ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿ ವೇಳೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಖಂಡ ಚಂದ್ರಶೇಖರ ಪಾಟೀಲ ಮಿರ್ಜಾಪುರ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನಗಳ ಕಾಲ ನಡೆಯುವ ರ್ಯಾಲಿಯಲ್ಲಿ 37 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ, ನೂರಾರು ಜನ ಸೇನಾ ಸಿಬ್ಬಂದಿ, ಜಿಲ್ಲಾಡಳಿತ ಸಿಬ್ಬಂದಿ ಕೂಡ ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಗಣೇಶ ಕಾಲೋನಿ ಹಾಗೂ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಿವೆ ಎಂದು ತಿಳಿಸಿದರು. ದೇಶ ಕಾಯುವ ಮಹತ್ತರ ಕಾರ್ಯಕ್ಕೆ ಮುಂದಾಗುತ್ತಿರುವ ಅನೇಕ ಯುವಕರಿಗೆ ನಮ್ಮಿಂದ ಚಿಕ್ಕ ನೆರವು ಮಾಡಬೇಕು ಎಂಬ ಸದುದ್ದೇಶದಿಂದ ಉಚಿತ ಊಟದ ಸೇವಾ ಕಾರ್ಯ ಕೈಗೊಂಡಿದ್ದೇವೆ. ಈಗಾಗಲೇ 20 ಕ್ವಿಂಟಲ್‌ ಅಕ್ಕಿ, ತೊಗರಿ, ಬೇಳೆ, ತರಕಾರಿ, ಎಣ್ಣೆ ಸಂಗ್ರಹಿಸಿದ್ದು, ಒಂದು ಲಕ್ಷ ರೂ. ದೇಣಿಗೆ ಕೂಡ ಸಂಗ್ರಹವಾಗಿದೆ.

Advertisement

ದಾನಿಗಳು ಅಡುಗೆಗೆ ಬೇಕಾದ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡಬಹುದು ಎಂದು ತಿಳಿಸಿದರು. ನಿತ್ಯ 3000 ಜನರಿಗೆ ಊಟ ನೀಡುವ ಉದ್ದೇಶವಿದ್ದು, 12 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಮೊದಲ ದಿನ ಮಂಗಳವಾರ ಸಿರಾ ಮತ್ತು ಪಲಾವ್‌ ಮಾಡುತ್ತಿದ್ದು, ಉಳಿದ ದಿನಗಳಲ್ಲಿ ವಿವಿಧ ಬಗೆಯ ಅಡುಗೆ ಮಾಡಲಾಗುವುದು. ಸಮಾನ ಮನಸ್ಕರೆಲ್ಲ ಸೇರಿ ಹಣ ಸಂಗ್ರಹಿಸುತ್ತಿದ್ದು, ದಾನ ನೀಡಲು ಆಸಕ್ತಿ ಉಳ್ಳವರು ಮೊ: 99862 34887, 9449800765 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ಕಲ್ಲೂರು ಬಸನಗೌಡ, ಭೀಮಾರೆಡ್ಡಿ, ಹೊಕ್ರಾಣಿ ನರೇಂದ್ರ, ಆದೋನಿ ಬಸವಂತಪ್ಪ, ಕೇದಾರನಾಥ ಸ್ವಾಮಿ, ಸಂಜೀವ ಕುಮಾರ, ಮಲ್ಲಿಕಾರ್ಜುನ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next