ಹೊಸದಿಲ್ಲಿ: ದೇಶವೇ ಪುಲ್ವಾಮಾ ದಾಳಿ ಹಾಗೂ ಅನಂತರ ನಡೆದ ಪ್ರತೀಕಾರದ ದಾಳಿಯ ಬಗ್ಗೆ ಮಾತನಾಡುತ್ತಿದ್ದರೆ, ಅತ್ತ ಮ್ಯಾನ್ಮಾರ್ ಗಡಿಯಲ್ಲಿ ಭಾರತದ ಸೇನಾಪಡೆ ಇನ್ನೊಂದು ಮಹತ್ವದ ಕಾರ್ಯಾಚರಣೆ ನಡೆಸುತ್ತಿತ್ತು. ಭಾರತ- ಮ್ಯಾನ್ಮಾರ್ ಗಡಿಯಲ್ಲಿ ಮ್ಯಾನ್ಮಾರ್ ಸೇನೆಯ ನೆರವಿನಿಂದ ಹಲವು ಉಗ್ರ ಸಂಘಟನೆಗಳ ನೆಲೆಗಳನ್ನು ಧ್ವಂಸಗೊಳಿಸಲಾಗಿದ್ದು, ಈ ಕಾರ್ಯಾಚರಣೆ ಫೆ. 17ರಿಂದ ಮಾ.2ರ ವರೆಗೆ ನಡೆದಿದೆ.
ಈಶಾನ್ಯ ರಾಜ್ಯಗಳ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಈ ಉಗ್ರರಿಂದ ಆತಂಕವಿದೆ ಎಂಬ ಗುಪ್ತಚರ ಮೂಲಗಳ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು. ಕಚಿನ್ ಇಂಡಿಪೆಂಡೆನ್ಸ್ ಆರ್ಮಿ ಎಂಬ ಸಂಘಟನೆಯ ನೆರವಿನಿಂದ ಅರಕನ್ ಆರ್ಮಿ ಎಂಬ ಪಡೆಯನ್ನು ಈಗಾಗಲೇ ಉಗ್ರ ಸಂಘಟನೆ ಎಂದು ಮ್ಯಾನ್ಮಾರ್ ಗುರುತಿಸಿದ್ದು, ಈ ಪಡೆ ಭಾರತದಲ್ಲಿನ ಕಲದನ್ ಪ್ರಾಜೆಕ್ಟ್ ಮೇಲೆ ಕಣ್ಣಿಟ್ಟಿತ್ತು. ಕಲದನ್ ಯೋಜನೆಯು ಮ್ಯಾನ್ಮಾರ್ನ ಸಿತೆ ಬಂದರು ಮತ್ತು ಕೋಲ್ಕತಾವನ್ನು ಸಂಪರ್ಕಿಸುವ ಮಹತ್ವದ ಯೋಜನೆಯಾಗಿದೆ.
ಈ ಭಾಗದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ದೊಡ್ಡ ಪ್ರಮಾಣದಲ್ಲಿ ಈ ಬಾರಿ ಕಾರ್ಯಾಚರಣೆ ನಡೆಸಲಾಗಿದೆ. ಸೇನಾಪಡೆಯ ವಿಶೇಷ ತಂಡ, ಅಸ್ಸಾಂ ರೈಫಲ್ಸ್ ಮತ್ತು ಇನ್ಫಾಂಟ್ರಿ ಯೂನಿಟ್ಗಳು ಭಾಗ ವಹಿ ಸಿದ್ದವು. ಕಾಪ್ಟರುಗಳು ಮತ್ತು ಇತರ ವಿಚಕ್ಷಣಾ ಸಲಕರಣೆಗಳನ್ನು ಬಳಸಿ ಉಗ್ರರ ಚಲನ ವಲನಗಳನ್ನು ಗಮನಿಸಲಾಗಿದೆ. ಅವರ ಕ್ಯಾಂಪ್ಗಳನ್ನು ಗುರುತಿಸಲೂ ಇದು ನೆರವಾಗಿದೆ. ಭಾರತೀಯ ಸೇನೆ ನೀಡಿದ ಮಾಹಿತಿಯಂತೆ ಟಾಗಾದಲ್ಲಿರುವ ಎನ್ಎಸ್ಸಿಎನ್ಕೆ ಕೇಂದ್ರ ಕಚೇರಿಯನ್ನು ಉಡಾಯಿಸಲಾಗಿದೆ. ಈ ಕಾರ್ಯಾಚರಣೆಗೆ 2 ತಿಂಗಳಿನಿಂದ ಯೋಜನೆ ರೂಪಿಸಲಾಗುತ್ತಿತ್ತು.
ಉಗ್ರ ನೆಲೆಗಳು ಧ್ವಂಸ
ಮ್ಯಾನ್ಮಾರ್ನ ದಕ್ಷಿಣ ಮಿಜೋರಾಂ ಪ್ರಾಂತ್ಯದಲ್ಲಿ ಈ ಉಗ್ರ ಸಂಘಟನೆ ನೆಲೆ ಕಂಡುಕೊಂಡಿತ್ತು. ಮೊದಲ ಹಂತದಲ್ಲಿ ಮಿಜೋರಾಂ ಗಡಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಯಿತು. ಬಳಿಕ ನಾಗಾ ಗ್ರೂಪ್ ಎನ್ಎಸ್ ಸಿಎನ್ಕೆ ಗ್ರೂಪ್ ಮೇಲೆ ಟಾರ್ಗೆಟ್ ಮಾಡಿ ಉಗ್ರರ ಕ್ಯಾಂಪ್ಗ್ಳನ್ನು ನಾಶ ಮಾಡಲಾಗಿದೆ.