Advertisement

ನಮ್ಮ ಸಂಸ್ಕೃತಿ, ಸಂಸ್ಕಾರ ಪ್ರಜ್ವಲಿಸುತ್ತಿರಲಿ: ಮಹೇಶ್‌ ಎಸ್‌. ಶೆಟ್ಟಿ 

11:05 AM Feb 23, 2022 | Team Udayavani |

ಮುಂಬಯಿ: ಕನ್ನಡ ಸೇವಾ ಸಂಘದ ಮಹಿಳಾ ವಿಭಾಗವು ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸಂಘದ ಕಾರ್ಯಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ. ಇಂದಿನ ಕುಣಿತ ಭಜನ ಕಾರ್ಯಕ್ರಮವು ಮಹಿಳೆಯರ ಪ್ರತಿಭೆಯನ್ನು ಪ್ರೋತ್ಸಾಹಿ ಸುವ ಮಹತ್ವದ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಸದಾ ಅವರಿಗಿದೆ ಎಂದು ಕನ್ನಡ ಸೇವಾ ಸಂಘ ಪೊವಾಯಿ ಗೌರವಾಧ್ಯಕ್ಷ ಮಹೇಶ್‌ ಎಸ್‌. ಶೆಟ್ಟಿ  ತಿಳಿಸಿದರು.

Advertisement

ಪೊವಾಯಿ ಸಾಕಿನಾಕಾ ರೋಡ್‌ನ‌ಲ್ಲಿರುವ ಕನ್ನಡ ಸೇವಾ ಸಂಘದ ಕಚೇರಿಯ ವಠಾರದಲ್ಲಿ  ಫೆ. 20ರಂದು ಸಂಘದ ಮಹಿಳಾ ವಿಭಾಗ ಆಯೋಜಿಸಿದ ಅರಸಿನ ಕುಂಕುಮ, ದಾಸರ ಕುಣಿತ ಭಜನ ಸ್ಪರ್ಧೆ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ನಾಡಿನ ಸಂಸ್ಕೃತಿ, ಸಂಸ್ಕಾರಗಳು ಇದೇ ರೀತಿಯಲ್ಲಿ  ನಗರದಲ್ಲಿ  ಪ್ರಜ್ವಲಿಸುತ್ತಿರಬೇಕು. ಮಕ್ಕಳನ್ನು ಇಂತಹ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಉದ್ಘಾಟಕರಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ  ಮಾತನಾಡಿ, ಅರಸಿನ ಕುಂಕುಮದಂತಹ ಧಾರ್ಮಿಕ ಕಾರ್ಯಕ್ರಮದೊಂದಿಗೆ ಕುಣಿತ ಭಜನೆಯಂತಹ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಆಯೋಜಿಸಿ ಮಹಿಳೆಯರ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ಪೊವಾಯಿ ಕನ್ನಡ ಸೇವಾ ಸಂಘದ ಕಾರ್ಯ ಅಭಿನಂದನೀಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಶುಭಲಕ್ಷ್ಮೀ ಚಂದ್ರಹಾಸ ಶೆಟ್ಟಿ ಮಾತನಾಡಿ, ಅರಸಿನ ಕುಂಕುಮ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಇಂತಹ ಕಾರ್ಯ ಕ್ರಮವು ಎಲ್ಲರಿಗೂ ಮಾದರಿಯಾಗಿರ ಬೇಕು ಎಂದರು.

ಗೌರವ ಅತಿಥಿಯಾಗಿದ್ದ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಶಾ ಎಂ. ಹೆಗ್ಡೆ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ  ಅವರಿಗೆ ಉತ್ತಮ ಸ್ಥಾನಮಾನವಿದೆ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆಗ ಮುಂದಿನ ಜನಾಂಗ ಸುಸಂಸ್ಕೃತ ಸಮಾಜವಾಗಿ ಬೆಳೆಯಲು ಸಾಧ್ಯವಿದೆ ಎಂದರು.

Advertisement

ಇಸ್ಸಾರ್‌ ಫೈನಾನ್ಶಿಯಲ್‌ ಸರ್ವಿಸಸ್‌ ಪ್ರೈ. ಲಿ.ನ ನಿರ್ದೇಶಕಿ ಅನಿತಾ ಆರ್‌. ಕೆ. ಶೆಟ್ಟಿ  ಶುಭ ಹಾರೈಸಿದರು. ಸ್ಥಳೀಯ ನಗರ ಸೇವಕಿ ಸವಿತಾ ಪವಾರ್‌ ಹಾಗೂ ಮಾಜಿ ನಗರ ಸೇವಕ ಶರದ್‌ ಪವಾರ್‌ ಮತ್ತು ಪರಿಸರದ ಇನ್ನೊಬ್ಬ ಮಾಜಿ ನಗರ ಸೇವಕ ಅಶೋಕ್‌ ಮಾಟೇಕರ್‌ ಅವರು ಸಂಸ್ಥೆಗಾಗಿ ತಮ್ಮಿಂದಾಗುವ ಎಲ್ಲ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.

ಇದೇ ಸಂದರ್ಭ ನಗರದ ಅಂತಾ ರಾಷ್ಟ್ರೀಯ ಕ್ರೀಡಾಪಟು ಜಯಂತಿ ಎಂ. ದೇವಾಡಿಗ ಅವರನ್ನು ಸಮ್ಮಾನಿಸ ಲಾಯಿತು. ಕನ್ನಡ ಸೇವಾ ಸಂಘ ಪೊವಾಯಿ ಇದರ ಹಿರಿಯ ಸದಸ್ಯರಾದ ಕುಶಲಾ ಆನಂದ್‌ ಬಂಗೇರ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಸಮ್ಮಾನಕ್ಕೆ ಉತ್ತರಿಸಿದ ಜಯಂತಿ ಎಂ. ದೇವಾಡಿಗ, ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಿಸಬೇಕು. ನಾವು ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಯಾವುದೇ ತೊಂದರೆ ಇಲ್ಲದೆ ಸಮರ್ಪಕವಾಗಿ ಮಾಡುತ್ತಿದ್ದರೆ ಅದುವೇ ನಮ್ಮ ಉತ್ತಮ ಆರೋಗ್ಯದ ಲಕ್ಷಣವಾಗಿದೆ ಎಂದರು.

ಪ್ರಾರಂಭದಲ್ಲಿ ನಡೆದ ದಾಸರ ಕುಣಿತ ಭಜನ ಸ್ಪರ್ಧೆಯಲ್ಲಿ ನಗರದ ಹಾಗೂ ಉಪನಗರಗಳ ಒಟ್ಟು 13 ತಂಡಗಳು ಭಾಗವಹಿಸಿದ್ದವು. ಕನ್ನಡ ಸೇವಾ ಸಂಘ ಪೊವಾಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ರಮೇಶ್‌ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ  ಮಹಿಳಾ ವಿಭಾಗದ ಕಾರ್ಯಚಟುವಟಿಕೆ ಗಳ ಬಗ್ಗೆ ವಿವರಿಸಿದರು.

ವಿಮಲಾ ದೇವಾಡಿಗ ಪ್ರಾರ್ಥನೆ ಗೈದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಸಭಾ ಕಾರ್ಯಕ್ರಮವನ್ನು ಶಿಕ್ಷಣ ಸಮಿತಿ ಉಪಕಾರ್ಯಾಧ್ಯಕ್ಷೆ ಯಶೋದಾ ಪೂಜಾರಿ, ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಅನಿತಾ ಶೆಟ್ಟಿ ಹಾಗೂ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಶಾಂತಿ ದಿವಾಕರ್‌  ಶೆಟ್ಟಿ  ನಿರೂಪಿಸಿದರು.

ಮಹಿಳಾ ವಿಭಾಗದ ಕಾರ್ಯದರ್ಶಿ ರೇಖಾ ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿ ಆಶಾ ಸತೀಶ್‌ ಶೆಟ್ಟಿ, ಸಲಹೆಗಾರರಾದ ಶೈಲಾ ಸುಭಾಷ್‌ ಶೆಟ್ಟಿ, ಜ್ಯೋತಿ ಆರ್‌. ಜಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯೆಯರಾದ ಭವಾನಿ ಎಸ್‌. ಶೆಟ್ಟಿ, ಯಶೋದಾ ಎಸ್‌. ಪೂಜಾರಿ, ಸವಿತಾ ಕೆ. ಶೆಟ್ಟಿ, ಭಾರತಿ ಬಿ. ಶೆಟ್ಟಿ, ಉಷಾ ಆರ್‌. ಸಾಲ್ಯಾನ್‌, ಇಂದಿರಾ ಎಂ. ಪೂಜಾರಿ, ಸರೋಜಿನಿ ಎಚ್‌. ಪೂಜಾರಿ, ಸುಗುಣಾ ಕೆ. ಶೆಟ್ಟಿ, ಕವಿತಾ ಪಿ. ಶೆಟ್ಟಿ, ಪದ್ಮಿನಿ ಪಿ. ಶೆಟ್ಟಿ, ಸುಚಿತ್ರಾ ಜಿ. ಶೆಟ್ಟಿ, ಅನಿತಾ ಯು. ಶೆಟ್ಟಿ, ಪ್ರಮೀಳಾ ಡಿ. ಶೆಟ್ಟಿ, ಗೀತಾ ಎಸ್‌. ಪೂಜಾರಿ, ಸುನಿತಾ ಬಿ. ಪೂಜಾರಿ, ಶಕುಂತಲಾ ಪಿ. ಶೆಟ್ಟಿ, ಅನಿತಾ ಎಸ್‌. ಶೆಟ್ಟಿ, ಅಕ್ಷಿತಾ ಜೆ. ಶೆಟ್ಟಿ, ಧನವಂತಿ ಆರ್‌. ಪೂಜಾರಿ, ವಸಂತಿ ಪೂಜಾರಿ, ಆಡಳಿತ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಬಹುಮಾನ ವಿಜೇತರು :

ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನವನ್ನು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಉತ್ಸವ ಮಹಿಳಾ ಭಜನ ಮಂಡಳಿ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಶ್ರೀ ಭ್ರಮರಾಂಬಿಕೆ ದೇವಸ್ಥಾನ ಸಾಕಿನಾಕಾ, ತೃತೀಯ ಬಹುಮಾನವನ್ನು ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ ಪಡೆದುಕೊಂಡಿತು.

ಸಂಘವು ರಜತ ಮಹೋತ್ಸವದ ಶುಭ ಸಂದರ್ಭದಲ್ಲಿದೆ. ಆ ಪ್ರಯುಕ್ತ ಈ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಮಹಿಳಾ ವಿಭಾಗದವರು ಹೆಚ್ಚಿನ ಉತ್ಸಾಹದಿಂದ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಸಂಘದ ಬೆಳವಣಿಗೆಯಲ್ಲಿ ಮಹಿಳೆಯರ ಪಾಲು ಬಹು ದೊಡ್ಡದಿದೆ. ರಕ್ತದಾನ ಶಿಬಿರ, ಶೈಕ್ಷಣಿಕ ನೆರವು ವಿವಿಧ ಕ್ಷೇತ್ರಗಳಲ್ಲಿ ಸಂಘವು ಕೆಲಸ ಮಾಡುತ್ತಿದ್ದು, ಅನಾರೋಗ್ಯ ಪೀಡಿತ ಅಸಹಾಯಕರಿಗೆ ಆರ್ಥಿಕ ನೆರವು, ಶೈಕ್ಷಣಿಕ ನೆರವನ್ನು ನೀಡುತ್ತಾ ಸಾಮಾಜಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿದೆ. ಈ ವರ್ಷ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರ ಸಂಪೂರ್ಣ ಸಹಕಾರದ ಅಗತ್ಯವಿದೆ. ನಾವೆಲ್ಲರೂ ಸೇರಿ ಸಂಘದ ರಜತ ಮಹೋತ್ಸವವನ್ನು ಯಶಸ್ವಿಗೊಳಿಸೋಣ.ನ್ಯಾಯವಾದಿ ಆರ್‌. ಜಿ. ಶೆಟ್ಟಿ , ಅಧ್ಯಕ್ಷರು, ಕನ್ನಡ ಸೇವಾ ಸಂಘ ಪೊವಾಯಿ

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next