Advertisement

Politics: ತೀರ್ಥಹಳ್ಳಿಗೆ ಆರಗ ಜ್ಞಾನೇಂದ್ರ ಶಾಸಕ ಆಗಿರುವುದು ದುರಂತ!?

02:53 PM Feb 20, 2024 | Kavyashree |

ತೀರ್ಥಹಳ್ಳಿ : ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯಶಸ್ವಿಯಾಗಿದೆ. ಗ್ಯಾರೆಂಟಿ ಯೋಜನೆಯ ಫಲನುಭವಿಗಳಿಗಾಗಿ ವಿಶೇಷ ಕಾರ್ಯಕ್ರಮ ನಡೆಸಲಿದ್ದೇವೆ. ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಫೆ. 24 ರಂದು ಕಾರ್ಯಕ್ರಮ ನಡೆಯಲಿದೆ. ಯಾರಿಗೆ ಗ್ಯಾರಂಟಿ ಯೋಜನೆ ಸರಿಯಾಗಿ ಸಿಕ್ಕಿಲ್ಲ ಅವರಿಗೂ ಅಲ್ಲಿ ಸರಿಪಡಿಸುವ ಅವಕಾಶ ಇರಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು

Advertisement

ಮಂಗಳವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಪಕ್ಷದವರು ಸುಳ್ಳು ಕಾರ್ಡ್ ಕೊಟ್ಟಿದ್ದೀವಿ ಎಂದು ಕೇಸ್ ಹಾಕಿದ್ದರು. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಗ್ಯಾರಂಟಿ ಬಗ್ಗೆ ಅಪಹಾಸ್ಯ ಮಾಡಿದ್ದರು. ಆದರೆ ಈಗ ಮೋದಿ ಕೂಡ ಗ್ಯಾರಂಟಿ ನೀಡಲು ಮುಂದಾಗಿದ್ದಾರೆ. ರಾಜಸ್ತಾನ್ ಸೇರಿ ಇತರ ಕಡೆಯಲ್ಲಿ ಬಿಜೆಪಿ ಕೂಡ ಗ್ಯಾರೆಂಟಿ ಭರವಸೆ ನೀಡಿತ್ತು ಎಂದರು.

ಕರ್ನಾಟಕ ತಂದಿರುವ ಗ್ಯಾರಂಟಿ ಯೋಜನೆ ಬಡ ವರ್ಗದವರಿಗೆ ಅನುಕೂಲ ಆಗುತ್ತಿದೆ. ಪ್ರತಿ ಕುಟುಂಬಕ್ಕೆ ಯುವ ನಿಧಿ ಯೋಜನೆ ಸೇರಿದರೆ 8 ಸಾವಿರ ರೂ. ಹಣ ತಲುಪುತ್ತದೆ. ಇಡೀ ಪ್ರಪಂಚದಲ್ಲಿ ಕರ್ನಾಟಕದ ಗ್ಯಾರಂಟಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಇದೊಂದು ಯಶಸ್ವಿ ಕಾರ್ಯಕ್ರಮ ಆಗಿದೆ. ಯಾವುದೇ ಗ್ರಾಮಪಂಚಾಯಿತಿಯಲ್ಲೂ ಅರ್ಹತೆ ಇದ್ದು ಗ್ಯಾರಂಟಿ ಸಿಗದವರು ಶಿವಮೊಗ್ಗಕ್ಕೆ ಬಂದು ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಮುಂದೆ ಒಂದು ದಿನ ಮೋದಿ ಹಿಟ್ಲರ್ ರೀತಿ ಆಗಬಹುದು. ಚಂಡಿಗಡ ರಾಜ್ಯದ 8 ಮೇಯರ್ ಮತಗಳನ್ನು ಅನರ್ಹ ಗೊಳಿಸುತ್ತಿದ್ದಾರೆ ಅಂದರೆ ಏನರ್ಥ? ಈ ವಿಷಯದಲ್ಲಿ ಮೋದಿ ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ಬಂದ ನಂತರ ರಾಜೀನಾಮೆ ನೀಡುವುದು ಸೂಕ್ತ. ಪ್ರಜಾಪ್ರಭುತ್ವದ ಕೊನೆ ಚುನಾವಣೆ ಆಗಬಹುದು ಎಂದು ಹೇಳಿದರು.

ಇವಿಎಂ ಮೆಷಿನ್ ನಿಂದ 500 ಸೀಟ್ ಕೂಡ ಇವರು ಗೆಲ್ಲುತ್ತಾರೆ. ಚುನಾವಣೆ ಆಯೋಗ, ಸಿಬಿಐ ಎಲ್ಲವನ್ನು ಕೂಡ ಅವರ ಕಡೆ ಮಾಡಿಕೊಂಡಿದ್ದಾರೆ. ನ್ಯಾಯಾಂಗದ ಒಳಗೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಮತ ಚೀಟಿಯಲ್ಲಿ ಚುನಾವಣೆ ನಡೆದರೆ ದೇಶದಲ್ಲಿ ಕಾಂಗ್ರೆಸ್ ಗೆದ್ದು ಪ್ರಧಾನಿ ಹುದ್ದೆ ಹಿಡಿಯುತ್ತೇವೆ ಆದರೆ ಇವಿಎಂ ಆದ್ರೆ ಮೋದಿ ಗೆಲ್ಲುತ್ತಾರೆ. ಚಂದ್ರಲೋಕಕ್ಕೆ ಕಳುಹಿಸಿರುವ ಲ್ಯಾನ್ಡರ್ ಬದಲಾವಣೆ ಮಾಡಬಹುದು ಆದರೆ ಇವಿಎಂ ಬದಲಾವಣೆ ಮಾಡಲು ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.

Advertisement

ಹುಟ್ಟಿನಿಂದ ನಾವು ನಮ್ಮ ಸಂಪ್ರದಾಯವನ್ನು ನಡೆದುಕೊಂಡು ಬಂದಿದ್ದೇವೆ. ನಮ್ಮ ನಂಬಿಕೆ ಬಗ್ಗೆ ಮಾತನಾಡುವುದಕ್ಕೆ ಆರಗ ಜ್ಞಾನೇಂದ್ರ ಹಾಗೂ ಸಂದೇಶ್ ಜವಳಿ ಯಾರು? ಕೋದಂಡರಾಮ ದೇವಸ್ಥಾನ ನಾವು ಅಭಿವೃದ್ಧಿ ಮಾಡಿದರೆ ಇವರಿಗೇನು ಸಮಸ್ಯೆ? ಈಗಾಗಲೇ ಮುಜರಾಯಿ ಇಲಾಖೆ ಸಚಿವರು 50 ಲಕ್ಷ ಹಣ ನೀಡಿದ್ದಾರೆ. ಈಗಾಗಲೇ ಹಲವು ದೇವಸ್ಥಾನಗಳಿಗೆ ನಾನು ಖಾಸಗಿಯಾಗಿ ಹಣ ನೀಡಿದ್ದೇನೆ ಹಾಗಾಗಿ ಎಲ್ಲಾ ದೇವಸ್ಥಾನಕ್ಕೆ ಹೋಗಿ ಕೋದಂಡ ರಾಮ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ನಡೆಸಲಿದ್ದೇವೆ. ಆರಗ ಎಷ್ಟು ಹಣ ದೇವಸ್ಥಾನಗಳಿಗೆ ನೀಡಿದ್ದಾರೆ ಎಂದು ತಿಳಿಸಲಿ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರ ಬಜೆಟ್ ಅದ್ಭುತವಾಗಿದೆ. ಜ್ಞಾನೇಂದ್ರ ಹಾಗೂ ಅವರ ಪಕ್ಷ ಬಡವರ ಪರ ನಿಂತಿದ್ದು ಯಾವಾಗ? ತೀರ್ಥಹಳ್ಳಿಗೆ ಅವರು ಶಾಸಕ ಆಗಿರುವುದು ದುರಂತ, ಶಾಸನ ಸಭೆ ನಡೆಯುತ್ತಿದ್ದರೆ ಇಲ್ಲಿ ವೈಕುಂಠ ಸಮಾರಾಧನೆಗೆ ಬರುತ್ತಾರೆ. ಇವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದೂ ಯಾವ ಕಾರಣಕ್ಕೆ?  ಜನರ ಸಮಸ್ಯೆ ಕೇಳಬೇಕಾದ ಶಾಸಕರು ಇಲ್ಲಿ ವೈಕುಂಠ ಸಮಾರಾಧನೆಗೆ ಬರುವುದು ಯಾವ ನ್ಯಾಯ? ಎಂದು ಆರಗ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ಮೂಡುಬಾ ರಾಘವೇಂದ್ರ, ಗೀತಾ ರಮೇಶ್, ರಹಮತುಲ್ಲ ಅಸಾದಿ, ಮಂಜುಳಾ ನಾಗೇಂದ್ರ, ಅಮರನಾಥ್ ಶೆಟ್ಟಿ, ಆದರ್ಶ ಹುಂಚದಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next