Advertisement

ಅಡಿಕೆ ಉತ್ಪನ್ನಗಳ ತಯಾರಿ ಕಂಪೆನಿಗಳಿಗೆ ಪ್ರೋತ್ಸಾಹ ನೀಡಿ

11:53 PM Mar 09, 2023 | Team Udayavani |

ಪುತ್ತೂರು: ಮಲೆನಾಡು ಅಡಿಕೆ ಬೆಳೆಗಾರರ ಪ್ರಮುಖ ಪ್ರದೇಶ. ಈಚೆಗೆ ವಿಸ್ತಾರಗೊಂಡಿದೆ. ಹೀಗಾಗಿ ಅಡಿಕೆ ಬೆಳೆಯು ಈಗ ಕರ್ನಾಟಕದ ಬಹು ಪಾಲು ಪ್ರದೇಶವನ್ನು ವ್ಯಾಪಿಸಿದೆ. ಇದಕ್ಕೆ ಪ್ರಮುಖ ವಾದ ಕಾರಣ ಅಡಿಕೆ ಮಾರುಕಟ್ಟೆ, ಅಡಿಕೆ ಧಾರಣೆ. ಈಗ ಅಡಿಕೆ ಬೆಳೆಗಾರರೇ ಪ್ರಮುಖವಾಗಿ ಸರಕಾರವನ್ನು ಆಗ್ರಹಿಸಬೇಕಾದ ಕಾಲ ಬಂದಿದೆ.

Advertisement

ಈಚೆಗೆ ಅಡಿಕೆ ಬೆಳೆ ವಿಸ್ತರಣೆ ಹಾಗೂ ಅಡಿಕೆ ಮಾರುಕಟ್ಟೆಯ ಬಗ್ಗೆ ಬೆಳೆಗಾರರಲ್ಲಿ ಆತಂಕ ಇದೆ. ಹೀಗಾಗಿ ಅಡಿಕೆಯ ಬಹು ಉಪಯೋಗಿ ವಸ್ತುಗಳನ್ನು, ಔಷಧಗಳನ್ನು, ಅಡಿಕೆ ಬಣ್ಣವನ್ನು ವಿವಿಧೆಡೆ ಉಪಯೋಗ ಮಾಡಲಾಗುತ್ತಿದೆ. ಇದಕ್ಕಾಗಿ ಸರಕಾರವು ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಉತ್ಪನ್ನಗಳನ್ನು ತಯಾರು ಮಾಡುವ ಕಂಪೆನಿಗಳಿಗೆ, ಸಂಸ್ಥೆಗಳಿಗೆ ಅಥವಾ ನೂತನವಾಗಿ ಉದ್ಯಮ ಆರಂಭ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು ಹಾಗೂ ಉದ್ದಿಮೆಗಳ ಸ್ಥಾಪನೆಗೆ ಹೆಜ್ಜೆ ಇಡಬೇಕು. ಕುಮ್ಕಿ ಜಮೀನು ವರ್ಗದಾರರಿಗೆ ನೀಡುವ ಮಸೂದೆಯನ್ನು ತತ್‌ಕ್ಷಣವೇ  ಜಾರಿ ಮಾಡಬೇಕು. ರೈತರ ಹಕ್ಕಾಗಿರುವ ಕುಮ್ಕಿ ಮತ್ತೆ ರೈತರಿಗೆ ಅಧಿಕೃತವಾಗಿ ಸಿಗಬೇಕು. ಉಳಿದಂತೆ ನಮ್ಮ ಹಕ್ಕೊತ್ತಾಯಗಳು ಹೀಗಿವೆ.

– ಅಡಿಕೆ ಬೆಳೆಯ ಜತೆಗೆ ಇತರ ಬೆಳೆಗಳಿಗೂ ಆದ್ಯತೆ ನೀಡುವ ದೃಷ್ಟಿಯಿಂದ ಉಪಬೆಳೆಗಳಿಗೂ ಸೂಕ್ತ ಮಾರುಕಟ್ಟೆ ಹಾಗೂ ಬೆಳೆಯ ಮಾಹಿತಿಗಳನ್ನು ಇಲಾಖೆಗಳ ಮೂಲಕ ನೀಡುವ ವ್ಯವಸ್ಥೆ ಮಾಡಬೇಕು.

– ಶೂನ್ಯ ಬಡ್ಡಿಯಲ್ಲಿ ಕೃಷಿ ಯಂತ್ರಗಳಿಗೆ ಸಬ್ಸಿಡಿ ಬದಲಾಗಿ ಸಹಕಾರ ಸಂಘಗಳಲ್ಲಿ ಇಎಂಐ ಯೋಜನೆಯನ್ನು ತರಬೇಕು, ಈ ಮೂಲಕ ಕೃಷಿ ಯಂತ್ರೋಪಕರಣವನ್ನು ಕೃಷಿಕರಿಗೆ ಸುಲಭವಾಗಿ ಲಭ್ಯವಾಗುವ ಹಾಗೆ ಮಾಡಬೇಕು. ಆಗ ಸಬ್ಸಿಡಿ ಸೋರಿಕೆ ತಪ್ಪುತ್ತದೆ.

– ಅಡಿಕೆ ಮೌಲ್ಯವರ್ಧನೆಯಾಗಬೇಕು. ಈಗಾಗಲೇ ಅಡಿಕೆಯ ಹಲವು ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಇನ್ನೂ ಹಲವು ಉತ್ಪನ್ನಗಳು ಮಾರುಕಟ್ಟೆಗೆ ಬರಲು ಇದೆ.

Advertisement

– ಸಿಎಫ್‌ಟಿಆರ್‌ಐ ಮೂಲಕ ಪರಿಶೀಲನೆಗೊಂಡು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯಾಗಬೇಕು ಹಾಗೂ ತರಬೇತಿ ಕೇಂದ್ರಗಳು ರಚನೆಯಾಗಬೇಕು.

– ಅಡಿಕೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆಹಾರ ಸಂಸ್ಕರಣ ಘಟಕಗಳನ್ನು ಸ್ಥಾಪಿಸಬೇಕು. ಈ ಮೂಲಕ ಗುಣಮಟ್ಟದ ಉತ್ಪನ್ನಗಳನ್ನು ಮಾಡಬೇಕು. – ಅಡಿಕೆಯ ಜತೆಗೆ ಹಲವು ಇತರ ಬೆಳೆಗಳೂ ಇರುವುದರಿಂದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಅವಕಾಶವಾಗುತ್ತದೆ.

– ಸಣ್ಣ ನೀರಾವರಿಗಾಗಿ ಸಣ್ಣ ಹಳ್ಳಗಳಿಗೆ ಕಟ್ಟ ರಚನೆಗೆ ಧನ ಸಹಾಯ ಬೇಕು. ಪ್ರತೀ ಕೃಷಿಕನಿಗೂ ಇದು ನೇರವಾಗಿ ಲಭ್ಯವಾಗುವ ಹಾಗೆ ಮಾಡಬೇಕು.

– ತೆಂಗು, ಬಾಳೆ, ಗೇರು ಬೀಜ, ಹಣ್ಣು, ಹಲಸಿನ ಹಣ್ಣು ಇವುಗಳ ವಿವಿಧ ಉತ್ಪನ್ನಗಳ ಉತ್ಪಾದನ ಘಟಕ ಸ್ಥಾಪಿಸಲು ತರಬೇತಿ, ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು. ಪ್ರತೀ ಹಳ್ಳಿಯಲ್ಲಿ ಇಂಥ ಘಟಕಗಳನ್ನು ತೆರೆಯಬೇಕು.

– ಅಡಿಕೆ ಚೊಗರಿನ ಔದ್ಯಮಿಕ ಬಳಕೆಯ ಬಗ್ಗೆ ಸಂಶೋಧನೆ ನಡೆಯಬೇಕು.

– ಕರ್ನಾಟಕ ಸರಕಾರ ತುರ್ತು ಗಮನ ಹರಿಸಿ ಅಡಿಕೆ ಚೊಗರನ್ನು ಬಟ್ಟೆಯ ಬಣ್ಣ, ಗೆದ್ದಲು ನಿರೋಧಕ ಔಷಧ ಮತ್ತು ಪ್ಲೈವುಡ್‌ ಅಂಟಾಗಿ ಅಭಿವೃದ್ಧಿ ಪಡಿಸಲು ಬೇಕಾದ ಸಂಶೋಧನೆ ಮಾಡಬೇಕು.

– ಅಡಿಕೆ ಬೆಳೆಯುವ ಪ್ರದೇಶಗಳಲ್ಲಿಯೇ ಅಡಿಕೆಗೆ ಸಂಬಂಧಿಸಿದ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು. ಈ ಮೂಲಕ ಉದ್ಯೋಗ ಹಾಗೂ ಅಡಿಕೆ ಬಳಕೆಯ ಕಡೆಗೆ ಸರಕಾರವೇ ಆಸಕ್ತಿ ವಹಿಸಬೇಕು.

 ಅಶೋಕ ಕಿನಿಲ, ಅಧ್ಯಕ್ಷರು, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next